Home / ಕವನ / ನೀಳ್ಗವಿತೆ / ಫಿರ್ದೌಸಿ

ಫಿರ್ದೌಸಿ

ಘಜನಿಯ ಹಾದಿ

ಯಾರಲ್ಲಿ ನೋಡು ಹೋಗುತಿದ್ದಾರೆ-ಕುದುರೆ
ಗಾಡಿಯಲಿ ಈ ಅವೇಳೆ
ದಿನದ ಕೂನೆಬಿಸಿಲ
ಖುರಪುಟದ ಧೂಳಿ
ಶತಮಾನಗಳಾಚೆ ಹೊರಳಿ

ಝಾರತೂಷ್ಟ್ರ ನಡೆದ-ಡೇರಿಯಸ್‌ ನಡೆದ
ಖುಸ್ರು ಇಡಿ ಭೂಖಂಡವನ್ನೆ ಸದೆ
ಬಡಿದ
ಯಾಜ್ದೆಗರ್ದ್‌ ಆಹ ! ಅನ್ನ ನೀರಿರದೆ
ಗಡಿಯಿಂದ ಗಡಿಗೆ
ಓಡೋಡಿ ಮಡಿದ

ಆ ವರ್ಷ ನೆರೆ ಬಂತು
ಟೈಗ್ರಿಸ್‌ ನದಿಯಲ್ಲಿ
ಆ ವರ್ಷ ನೆರೆ ಬಂತು
ಮರು ವರ್ಷವೂ ಬಂತು
ನೆರೆಯಿಳಿದು ಕೊಚ್ಚೆ
ದಡದಲ್ಲಿ ನಿಂತು
ಮಣ್ಣಿನ ಮೂರ್ತಿಗಳ ಮಾಡಿದವರೇ
ಮನುಷ್ಯರೇ

ಆಜರ್‌ ಬೈಜಾನ್‌ನಲೊಂದು
ಅಗ್ನಿದೇವಳವಿತ್ತು
ಅಗ್ನಿದೈವವೆ ಅದನ್ನ
ನುಂಗಿಹಾಕಿತ್ತು

ಅಂಥ ಹೊತ್ತಿನಲಿ
ಇರಾಜರು ಯಾರು
ತುರುಕರು ಯಾರು
ಸಕಲರ ಮೇಲೆಯೂ
ನಾಲಿಗೆ ಚಾಚಿತ್ತು

ಕಾಲುಗಳ, ಕಣ್ಣುಗಳ, ಬೇರ್ಪಟ್ಟ
ರುಂಡಗಳ
ಎಲ್ಲರೂ ನೋಡಿದರು
ಫಿರ್ದೌಸಿ ಒಬ್ಬನೇ ಕಂಡ
ಪರ್ಶಿಯದ ಇತಿಹಾಸವ
ಅಖಂಡ!

ಒಂದು ಕಾವ್ಯದ ಬೆಲೆ

ವಜೀರನ ಕಡೆ ನೋಡಿ
ಕೇಳಿದನು ಮಹಮ್ಮದ
ವಜೀರ ಅಹಮ್ಮದ್‌ ಬಿನ್‌ ಹಸನ್‌
ಮೈಮಂದಿ ಎಂಬವ

ಅವನೆಂದ : ಅರವತ್ತು
ಸಹಸ್ರ ಪದ್ಯಗಳಲ್ಲಿ, ಜಹಂಪನ
ಮೂಡಿ ಬಂದಿದೆ ಇಲ್ಲಿ
ಪುರಾತನದ ಇರಾಣ

ರಾಜ ಮಹಾರಾಜರ
ಇತಿಹಾಸ ಶಾನಾಮ
ಕಳೆದ ಕಾಲಕ್ಕೆ
ಇಂದಿನ ಸಲಾಮ

ಒಂದು ಪದ್ಯಕ್ಕೆ
ಒಂದು ದಿರ್‍ಹಮಿನ ಹಾಗೆ
ಅರುವತ್ತು ಸಾವಿರ ; ಇಷ್ಟಾಗಿಯೂ ಕಾವ್ಯಕ್ಕೆ
ಬೆಲೆಕಟ್ಟುವುದು ಹೇಗೆ ?

ಕೆಲವರಂದರು : ಅರುವತ್ತು
ಸಾವಿರ ದಿರ್‍ಹಮು
ಎಂಥದೇ ಕಾವ್ಯ
ಹೊರಲಾರದ ಇನಾಮು

ಐವತ್ತು ಸಾವಿರ
ಕೊಟ್ಟರೂ ಕೊಡಬಹುದು
ಹಾಗೆ ನೋಡಿದರೆ
ಹೆಚ್ಚಾಯ್ತು ಅದೂ

ಇನ್ನು ಕೆಲವರು : ನಮ್ಮ
ಪಂಗಡವೇನಲ್ಲ ಫಿರ್ದೌಸಿ
ಅವ ಬಣ್ಣಸಿದ ಅರಸರೂ
ಹೆಚ್ಚಾಗಿ ಫಾರಸಿ

ನಂಬುತಿದ್ದರು ಅವರು
ಅನೇಕ ದೈವಗಳ
ಕೊಡುವುದಾದರೆ ಕೊಡಿ
ಇಪ್ಪತ್ತು ಸಹಸ್ರಗಳ

ನಿರ್ಗಮನ

ನಿಬಿಡ ಘಜನಿಯಲಿ
ಒಬ್ಬನೇ ಫಿರ್ದೌಸಿ-
ಇಡೀ ಪಟ್ಟಣದ ವಿಸ್ತಾರ
ಅಳೆವಂಥ ಹೆಜ್ಜೆ

ಆಕಾಶಕ್ಕೆ ಮಿನಾರಗಳು ಚುಚ್ಚಿ
ಅವು ನದೀ ನೀರಲ್ಲು ಹೊಳೆದು
ಅತಿ ಶುಭ್ರಶಿಲೆಯ ಪ್ರಾರ್ಥನಾಗೃಹಗಳೂ
ಎಷ್ಟೊ ರಾಜ್ಯಗಳ ಕೊಳ್ಳೆ ಹೊಡೆದು

ಉಣ್ಣೆಯಂಗಡಿ ಮಾಲು
ರತ್ನಗಂಬಳಿ ಸಾಲು
ಅಕ್ಕಸಾಲಿಗರೂ ಅಕ್ಕಪಕ್ಕ
-ತನ್ನ ಕವಿತೆಗೆ ತಾನೇ ನಕ್ಕ!

ಮೈಗೆ ಬೇಕಾದ್ದು
ಬಿಸಿನೀರ ಸ್ನಾನ
ಅಪಾರದರ್ಶಕ ಹಬೆಯ
ಕವಿಗೆ ಬೇಕಾದ್ದು
ಅಶರೀರ ಗಾನ
ಫೂಕ ಕುಡಿದಾಗಲೇ
ಹಗುರಾದ್ದು ಮನ

ಅರ್ಧ ಸ್ನಾನಕ್ಕೆ
ಅರ್ಧ ಗಾನಕ್ಕೆ
ಒಟ್ಟು ಶರಾ ಬರೆದು
ಇರುಳಿಗಿರುಳೇ ರಾಜ-
ಧಾನಿಯ ತೊರೆದು
ಕಾವ್ಯದೊಂದಿಗೆ ಕವಿಯೂ

ಶಹರಿಯಾರ್

ಶಹರಿಯಾರಿಗೂ ಒದಗಿತ್ತು
ಇತಿಹಾಸದ ಕ್ಷಣ
ಸಾಸಾನರ ದೊರೆ-ತಾನೇ
ವಂಶಾವಳಿಗೆ ಕೊನೆಯೆಂದು
ಅವನಿಗಾದರೂ
ಏನು ಗೊತ್ತಿತ್ತು ?
ಶಾನಾಮಕೆ ಖುದ್ದಾಗಿ
ಕೈಯೊಡ್ಡಿ ನಿಂತ.

ಫಿರ್ದೌಸಿ ಹೇಳಿದ :
ಸಹಸ್ರ ವರ್ಷ ಬಾಳಿದೆ
ಯುದ್ಧಗಳಲ್ಲಿ ಕಾದಿದೆ
ಮರುಭೂಮಿಗಳಲ್ಲಿ ಅಲೆದಾಡಿದೆ
ಸತ್ರಗಳಲ್ಲಿ ಮಲಗಿದೆ
ಎಲ್ಲವನ್ನೂ ಕಂಡೆ-
ಎಂದುಕೊಂಡಿದ್ದೆ.

ಈಗ ನಾ ಬರೆಯದ ಸಾಲುಗಳ
ಯಾರು ಬರೆಯುವರು ?
ತೆರದಿರಲಿ ನನ್ನ ಪುಸ್ತಕ
ಇತಿಹಾಸದ ಹಾಗೆಯೇ
ಅಪೂರ್ಣವಾಗಿ-

ಆಮೇಲೆ ಮಹಮ್ಮದ

“ಬಯಸಿದುತ್ತರ ಬಂದರೆ ಸರಿ-
ಇಲ್ಲವಾದರೆ ಇದ್ದೇ ಇದೆ
ಕತ್ತಿಗುರಾಣಿ ರಣರಂಗ
ಸಿದ್ದವಾದ ಕುದುರೆ !”

ಕೆರಳಿತ್ತು ಮಹಮ್ಮದನ
ಆದಿಮಾನವ ಪ್ರಜ್ಞೆ
“ಯಾವ ಕವಿವಾಣಿ ?”
“ಫಿರ್ದೌಸಿ !”

ಇಸ್ಫೆಹಾನ್‌ನಿಂದ ಲಾಹೋರದ ತನಕ
ಅಬೂ-ದರಿಯಾದಿಂದ ಮಕ್ರಾನವರೆವಿಗೂ
ಹಿಂದೂಸ್ತಾನವೊಂದಕೇ
ಹದಿನೇಳು ಬಾರಿ
ಮೊದಲು ಘರ್ಜಿಸ್ತಾನ,
ಆಮೇಲೆ ಖ್ವಾರಿಜಮ್‌,
ಸೈಸ್ತಾನ, ಲಾಮಘನ್‌
ಆಮೇಲೆ ಥಾನೇಸರ,
ಕನೋಜ, ಕಲಿಂಜರ್‌
ಮುಲ್ತುನದ ಮರುಭೂಮಿಯನ್ನೂ ದಾಟಿ
ಮೂರ್ತಿಭಂಜಕ ಮಹಮ್ಮದ
ಬಾರಿ ಬಾರಿ

ಸೂರ್ಯ ಪಶ್ಚಿಮಕೆ ಬೀಳುವ ಹೊತ್ತು
ತಾಳೆಗರಿಗಳ ಸಡಗರ
ಇದು ನಮಾಜಿನ ಸಮಯ
“ಘಜನಿ ತಲುಪಿದ ಕ್ಷಣ ಇನ್ನೊಮ್ಮೆ
ಈ ಸಾಲುಗಳ ನನಗೆ
ನೆನಪು ಮಾಡುವುದು…”

ಇಂಡಿಗೋ

ಇಂಡಿಗೋ
ಮೂಟೆಗಳ ಹೊತ್ತ
ಒಂಟೆಗಳ ಕರವಾನು
ಹೊರಟಿರುವುದೀಗ
ಎಲ್ಲಿಗೆ ?

ಹಗಲಿರುಳು ದಾರಿ ಸಾಗಿ
ಕರವಾನು ಬಂದಿದೆ
ಊರ ಹೆಬ್ಬಾಗಿಲಿಗೆ
ತಲುಪಿ ಅದು ಅಲ್ಲಿಗೇ

ಅಷ್ಟರಲ್ಲಿ ಆಚೆಯಿಂದ
ಸಣ್ಣದೊಂದು ಮೆರವಣಿಗೆ
ನಾಲ್ಕು ಮಂದಿ ಹೆಗಲ ಮೇಲೆ
ಹೊತ್ತ ಶವಪೆಟ್ಟಿಗೆ

ಇಂಡಿಗೋ ಮೂಟೆಗಳ
ಹೇರಿಕೊಂಡು ಕರವಾನು
ಊರೊಳಗೆ ಹೋಗುವುದು
ಕವಿಯ ಮನೆ ಹುಡುಕುವುದು

ಕವಿಯಿಲ್ಲ ಕಾಲವಿಲ್ಲ
ಎಲ್ಲ ಮರೆಯಾಯಿತು
ಒಂಟೆಗಳ ಕರವಾನು
ಬಂದಲ್ಲಿಗೇ ಮರಳಿತು

ಮಹಮ್ಮದನ ಗೋರಿ

ಘಜನಿಯಿಂದ ತುಸು ದೂರದಲ್ಲಿ
ರೌಜ್ಹಾ ಎಂಬ ಜಾಗದಲ್ಲಿ

ಅಚ್ಚ ಬಿಳೀ ಸಂಗಮರವರೀ
ಕಲ್ಲಿನದೊಂದು ಗೋರಿ

ಬಿಸಿಲಲ್ಲಿ ಧೂಳು ಕವಿದು
ಮಳೆಯಲ್ಲಿ ನೀರು ತೊಯ್ದು

ಮರದಿಂದ ಎಲೆಗಳೂ
ಆಗಾಗ ಹೂಗಳೂ

ಅದರ ಮೇಲೆ ಉದುರುತ್ತವೆ
ಗಾಳಿಯಲ್ಲಿ ಚದರುತ್ತವೆ

ಸಬುಖ್ತಿಜೀನನ ಮಗ
ಈ ಗೋರಿಯೊಳಗೆ ಇರುವ

ಅದರ ಮೇಲನೊಕ್ಕಣೆ :
“ಎಲ್ಲರ ಮೇಲೆ ಸಮನಾಗಿ ಅಲ್ಲಾನ ಕರುಣೆ”
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...