Home / ಕವನ / ನೀಳ್ಗವಿತೆ / ಶಬರಿಯ ಬಾಳು

ಶಬರಿಯ ಬಾಳು

ಮುನ್ನುಡಿ
ರಾಮನನ್ನರಿತವರು ಶಬರಿಯನು ಅರಿತಿಹರು,
ಮಾತು ಶಬರಿಯದಲ್ಲ, ಬರವೊನಲಿದಾಕಯದು.

೧ ಬೀಡ ಬಳಿಯೊಳು ಕುಳಿತು:

“ಒಬ್ಬಳೇ ಒಬ್ಬಳೀ ಕಾಡಿನೊಳಗಿರುವೆ,
ನನ್ನ ಹುಟ್ಟನು ತಿಳಿಯೆ, ಬಳೆದ ಬಗೆಯನ್ನರಿಯೆ,
ನಾನಾರು..? ಬಂದೆನೆಲ್ಲಿಂದಿಲ್ಲಿ..? ಏತಕ್ಕೆ..?
ಹಕ್ಕಿ-ಮಿಗಗಳನೆಲ್ಲ ತಾಯಿಗಳು ಪಡೆಯುವುವು,
ನನ್ನ ಪಡೆದವರಾರು..? ಎಲ್ಲವಾ ತಾಯಿಗಳು
ತಮ್ಮ ತಮ್ಮೆಳೆಯ ಹಿಳ್ಳೆಗಳನ್ನು ಮರಿಗಳನು
ಒಲವಿನಲಿ ಮುತ್ತಿಟ್ಟು, ಮೈಮೂಸಿ ಗುಟುಕಿತ್ತು,
ಮೊಲೆಯುಣಿಸಿ ಚಳಿಗಾಳಿಗಳ ತವಿಸಿ ಸಂತವಿಸಿ,
ಬಳೆಯಿಸುವುದನ್ನು ನಾನು ದಿನದಿನವು ನೋಡುವೆನು;
ಎಳೆಯತನದಿಂದೆನ್ನ ನೊಲಿದು ಸಲಹಿದರಾರು..? ೧೦
ಬಳೆದುದೊಡ್ಡವಳಾದುದೆಂತು..? ತಿಳಿಯದಲಿಹೆನು.
ಹಸಿವಾಗೆ ಹೊಸಹಣ್ಣತಿನಲು-ಬಾಯಾರಿರಲು
ಹೊಳೆಯ ತಿಳಿನೀರ ಕುಡಿಯಲು ತಿಳಿಯಿತೆಂತೆನಗೆ..?
ಹಕ್ಕಿಗಳ ಹಿಂಡನ್ನು-ಕೊತಿಗಳ ಬಳಗವನು-
ಮಿಗದ ಜಂಗುಳಿಯನ್ನು ನೋಡಿ ನನ್ನದು ನಾನೆ
ಹಣ್ಣುಗಳ ತಿಂದು ನೀರ್‌ಕುಡಿಯಲರಿತಿಹೆನೇನೋ..!”
“ಅಡವಿಮಿಗ..ಮಂಗ-ಹಕ್ಕಿಗಳು ತಮ್ಮಂತಿರುವ
ಒಡನಾಡಿಗಳ ಬೆರತು ಆಟಗಳನಾಡುವುವು;
ಊಟವನು ಮಾಡುವುವು, ಕುಣಿದು ಕೆಲೆದಾಡುವುವು;
ನನಗೆ..! ನನ್ನಂತಿರುವ ಒಡನಾಡಿಯೇ ಇಲ್ಲ; ೨೦
ಆಡುವೆನದಾರೊಡನೆ? ಊಡುವೆನದಾರೊಡನೆ
ಕೂಡಿ ಕೆಲೆದಾಡಿ ಮಾತಾಡುವೆನದಾರೊಡನೆ..?
ಹಕ್ಕಿಗಳ ಹಾಡುಗಳನೇ ಕೇಳಿ ಹಿಗ್ಗುವೆನು;
ಕೋತಿಗಳ ಕುಣಿತದೊಡನೆಯೆ ಕುಣಿದು ತಣಿಯುವೆನು;
ಮಿಗದ ಜಂಗುಳಿಯೊಡನೆ ನಗುತೆ ನೆಗೆದಾಡುವೆನು;
ಇವರನೇ ನನ್ನ ಕೆಳೆಯರನಾಗಿ ತಿಳಿದಿಹೆನು.

ಕಾಡಿನೊಳಗಲೆದು ಓಡಾಡಿ ಬಳಲಿಕೆಯೊದವೆ
ಬೀಡಿನಲಿ ಬಂದು ಬಳಲನು ಕಳೆದುಕೊಳಲೆಂದು
ಕುಳಿತಿರುವೆ; ಇಲ್ಲದಿರೆ ಮಲಗಿರುವೆನೊಬ್ಬಳೇ;
ಬಳಿಯಲ್ಲಿ ಬೇರಾವ ಸುಳಿದಾಟವೇ ಇರದು; ೩೦
ಕಡಲಿನೊಳಗಲೆಯೆದ್ದು ಕುಣಿದಾಡುವಂತಾಗ
ಒಡಲಲ್ಲಿ ಎಂತಹದೊ ಕುಣಿದಾಟ ನಡೆದಂತೆ
ಎನಿಸುವುದು; ಬೆದರುವೆನು ‘ಇದು ಏನು’ ಎಂದೆನುತೆ.
ಇರಲಿರಲು ನನ್ನೊಡಲ ಕುಣಿದಾಟದೊಡನೆಯೇ
ಬೆರೆತು ಒಂದಾಗುವೆನು, ಹೊರಗನೇ ಮರೆಯುವೆನು;
ಬಗೆಬಗೆಯ ನೋಟಗಳ ನನ್ನೆದುರು ನೋಡುವೆನು
ಹಾಗೆಯೇ ನಾನಿರಲು ‘ನನ್ನ ನರಸುತ ನನ್ನ
ಒಡನಾಡಿ ಯಾವನೋ ಬರಲಿರುವ’ ಎಂತೆಂಬ
ಬಗೆಯೊಂದು ಹೊಳೆಯುವುದು; ಎದೆಯು ಜುಮ್ಮೆನ್ನುವುದು,
ಮೈಯ ನವಿರೇಳುವುದು, ಹಾರಿ ಬಿದ್ದೇಳುವೆನು; ೪೦
ತೆರೆದ ಕಣ್ಣುಗಳಿಂದ ಸುತ್ತಲೂ ನೋಡುವೆನು;
ನೆರೆಯೊಳೇನೂ ಇರದು; ಬೀಡ ಬಿಟ್ಟೇಳುವೆನು,
ಹೊರಹೊರಟು ಹುಬ್ಬುಗೈಯಲಿ ದೂರ ನೋಡುವೆನು;
ಸುಳಿವಾರದೂ ಸಿಕ್ಕದಿರಲಾಸೆಗುಂದುವೆನು.
ಕಳವಳದಿ ನಿಡುಸುಯಿದು ಮರಳಿ ಬೀಡನು ಸೇರಿ
ತಿಳಿಯದೇನೊಂದನೂ ಬಿದ್ದುಕೊಳ್ಳುವೆ ನಾನು.
ಏಗಲೂ ನನಗೆ ಹೀಗಾಗುತ್ತಿರುವುದದೇಕೊ..!
ಹೀಗೆಯೇ ಎನಿತು ದಿನ ಬದುಕ ನೂಕಲು ಬೇಕೋ..!

ನನ್ನವರು ಇನ್ನಾರು ಇಲ್ಲ! ನಾನಿದ ಬಲ್ಲೆ:
ಇನ್ನೊಂದನೇನ ಬಯಸದೆ ನನ್ನ ಕಾಡಿನಾ ೫೦
ಒಡನಾಡಿಗಳ ಬೆರೆತು ನಲಿಯುತಿರಬೇಕೆನುವೆ;
ಹಿಗ್ಗಿನಲ್ಲಿಯೆ ಬದುಕ ಹಾರಿಬಿಡಬೇಕೆನುವೆ;
ಆದರೇನಿದು ಆಶೆ! ಮಿಂಚಿನಂದದಿ ಮೂಡಿ
ಆಗಾಗ ಕೆಟ್ಟ ಕನಸುಗಳನ್ನು ಕಾಣಿಸುತೆ
ಇಲ್ಲದುದನಾವುದನೊ ಇದ್ದಂತೆ ತೋರಿಸುತೆ
ಬೆಲ್ಲದಂತಹ ಬಾಳ ಬೇವಾಗಿ ಮಾಡುತಿದೆ.
ಇರಬಹುದೆ ಯಾವನಾದರು ನನ್ನ ಒಡನಾಡಿ..!
ಅರಸುತಲಿ ಬರಬಹುದೆ ಆತ ನನ್ನೆಡೆಗೆ..!”

೨ ದಾರಿಯನು ನಡೆಯುತಿರೆ:

“ಎನಿತು ಸೊಗಸಿನದು ಇಂದಿನ ದಿನವು! ಹಗಲು ಬರೆ
ಬಿರುಮುಗುಳು ಅರಳುವೊಲು ಎಡೆಬಿಡದೆ ನನ್ನೆದೆಯು ೬೦
ಅರಳುತಿದೆ; ಅಡಿಯಿಂದ ಮುಡಿವರೆಗು ಮೈಯ ನರ-
ವುಬ್ಬುತಿವೆ; ತುಂಬುದಿಂಗಳು ಮಿರುಗುವಿರುಳಲ್ಲಿ
ತೊರೆಯ ಸಿರಿಯನು ನೋಡೆ-ಸಂಜೆಯಾಗಸನೋಡೆ-
ತಳಿತ ಬನವನು ನೋಡೆ-ಅಲರ ಕಾವಣ ನೋಡೆ-
ಎನಿಸುತಿಹ ಬಗೆಯನೆಲ್ಲವ ಬೆರಸಿದರು ಇದಕೆ
ಹೊಂದಿಕೆಯೆನಿಸದಹಹ! ಇಂದಿನಂತಹ ದಿನವೆ
ಎಂದೆಂದು ಇಬ್ಬರದು ಅಂದವೆನಿತಾಗುವುದು..!”

“ನಡುವಗಲು,ಬೇಸಗೆಯ ಸುಡುವಿಸಿಲು, ನಾಬೀಡಿ-
ನೆಡೆಯಲಿಯೆ ಕುಳಿತಿದ್ದೆನಿಂದು, ಬಳಿಯನು ಸಾರಿ
ಬಂದರಿಬ್ಬರದಾರೊ ದಾರಿಗರು; ಕೇಳಿದರು: ೭೦
“ಒಂದಿನಿತು ನೆಳಲಿನಾಸರೆ ದೊರೆವುದೇನಿಲ್ಲಿ?”
ಬೆರಗುಗೊಂಡೆನು; ಆಗ ಮರುನುಡಿಯನಾಡಲಿಕೆ
ಬರಲೆ ಇಲ್ಲೆನಗೆ; ಅವರನ್ನು ನೋಡೆ ನನ್ನನೇ
ಮರೆತುಬಿಟ್ಟೆನು ನಾನು; ಎನಿತು ನಿಟ್ಟಿಸಿದರೂ
ಸಾಕೆನವು ಕಣ್ಣುಗಳು;-ಎನಿತೊ ವೇಳೆಯನಂತೆ
ನೂಕಿದೆನು-ಬಳಿಕ ನಾ ನುಡಿಯಲಿಕೆ ಹವಣಿಸಿದೆ;
ಹೊರಡಲೊಲ್ಲದು ಮಾತು ನನ್ನ ಬಾಯಿಂದೊಂದು.
ಗಕ್ಕನೇ ನಾನೆದ್ದೆ; ಅವರಲ್ಲಿ ನಸುಮುಂದೆ
ನಿಂದವನ ಕೈಹಿಡಿದೆ, ಬೀಡಿನೊಳು ಕರೆದೊಯ್ದೆ,
ಎಳದಳಿರ ಜಗುಲಿಯೊಳು ಕುಳ್ಳಿಸಿದೆ; ಹಿಂಬದಿಗ ೮೦
ನಿಂದವನು ಬೆಂಬಿಡಿದು ಬಂದ, ಬೀಡನು ಸೇರಿ
ತಳಿರ ಹಾಸಿಗೆಯ ಬಳಿ ನೆಲದಲಿಯೆ ತಾ ಕುಳಿತ;

“ಚೆನ್ನರವರಿಬ್ಬರೂ ಅಣ್ಣತಮ್ಮದಿರಂತೆ!
ಬೀಡ ಮುಂದಣ ಮರದಲಿರುವ ಮಂಗನಿಗೆ ಮರಿ
ಜೋಡಾಗಿ ಇರುವವಲೆ! ಮೊದಲು ಹುಟ್ಟಿದುದಣ್ಣ,
ಬಳಿಕಿನದದುವೆ ತಮ್ಮ; ಅದರಂತೆಯೇ ಇವರು.
ತಳಿರ ಜಗುಲಿಯಲಿ ಕುಳ್ಳಿರಿಸಿದಾತನೆ ಅಣ್ಣ,
ಕೆಳಗೆ ಕುಳಿತವ ತಮ್ಮ; ಚೆಲುವರವರಿಬ್ಬರೂ
ಅದರಲಿಯು ಅಣ್ಣನನು ನೋಡಿ ನನ್ನೆದೆಯಲ್ಲಿ
ಮಿಂಚು ಹೊಳೆದಂತಾಯ್ತು, ನನ್ನ ದಿಟ್ಟಿಗಳನ್ನು ೯೦
ಬೆಸೆದುಕೊಂಡನು ಆತನೇ ತನ್ನ ಮೈತುಂಬ;
ಇನ್ನಾವದನು ನೋಡಿಲ್ಲದಾದುವು ಕಣ್ಣು.”

“ಕೆರೆಯ ನೀರಲಿ ನನ್ನ ಮೈನೆಳಲು ಮೂಡಿದುದ
ನಿರುಕಿಸುತ ಬಂದಿರುವೆ; ಇನಿತು ದಿನ ಈ ಬನದಿ
ನನ್ನಂತೆ ಇರುವವರನಾರನೂ ನೋಡಿಲ್ಲ!
ಇಂದೆನ್ನ ಬೀಡಿಗೈತಂದ ಅಣ್ಣನ ಮೈಯ
ಅಂದವದು ನನಗೆ ಸರಿಯೊಂದಿ ತೋರುತಲಿಹುದು;
ಕಣ್ಣಿಮೆಯ ಕದಲಿಸದೆ ಅಣ್ಣನನು ನೋಡಿದೆನು;
ನನ್ನಂತೆ ಕೈಕಾಲು, ನನ್ನ ಹಾಗೆಯೆ ಒಡಲು;
ಆದರೆಯು ನಮ್ಮಿಬ್ಬರೊಳು ನಸುವೆ ಬಿಡುವಿಹುದು. ೧೦೦
ಅರಳಿರುವ ಕನ್ನೈದಿಲೆಯ ಕಳೆಯದವನ ಮೊಗ,
ನನ್ನ ಮೊಗವಂತಿಲ್ಲ; ತಾರೆಗಳ ತೋಳಗವನ
ಕಣ್ಣೊಳಗೆ ನೆಲಸಿಹುದು, ನನಗದೇನೂ ಇರದು;
ನಗೆಯ ಮನೆ-ಮಾವಿನೆಳ ಚಿಗುರಿನೊಲು ಚೆಂದುಟಿಯು-
ಹೊಗರೊಗೆವ ಹಲ್ಲ ಸಾಲುಗಳು-ಮೇಲ್‌ದುಟಿಯಲ್ಲಿ
ಮೊಗದೋರುತಿಹ ಕರಿಯ ನವಿರು-ಆತನಿಗಿಹವು.
ಇಲ್ಲವೆನಗಾವುದೂ: ಬೇಸಗೆಯ ಬೆಳಗಿನಾ
ಬಾನ ಬಣ್ಣದ ಬೆಡಗು ಆತನೊಡಲಿಗೆ ಇಹುದು;
ಹಾಗಿರುವುದೇನೆನಗೆ..! ಎನಿತವನ ಮೈನುಣ್ಪು !
ಎನಿತು ಕರುಳಿನ ಕರ್ಪ್ಪು ! ಎನಿತು ತೋಳಿನ ಬಿಣ್ಪು ! ೧೧೦
ಕೈವಿಡಿದು ಬೀಡಿನೊಳಗುಯ್ದಾಗಿನಾ ಸೋಂಕು
ಎನಿತು ಸೊಗಸಿದ್ದಿತಹ ! ಇನ್ನು ಬೇಕೆನ್ನಿಸಿತು.
ಸುಗ್ಗಿಯಲಿ ಹಾಡುತಿಹ ಹಕ್ಕಿಗಳ ಇಂಚರವ
ಕುಗ್ಗಿಸಿಯೆ ಬಿಡುವುದಾತನದೊಂದೆ ಮೆಲುನುಡಿಯು;
ಹಣ್ಣುಗಳ ಬಯಕೆಯಲಿ ಹೊಟ್ಟೆ ಹಸಿದಿರುವ ತೆರ
ಅಣ್ಣನಿನಿನುಡಿಗಾಗಿ ನನ್ನ ಕಿವಿ ಹಸಿದಿಹವು;
ಇನ್ನು ಇನ್ನೂ ಆತನನ್ನು ನೋಡುವೆವೆಂದು
ಕಣ್ಣುಗಳು ಇದ್ದಲಿಯೆ ಇರಲೊಲ್ಲದಾಗಿಹವು.
ಅವನಾರು..? ಎಲ್ಲಿಯವ..? ಇಲ್ಲಿ ಬಂದಿಹನೇಕೆ..?

“ಕಿರಿಯನವ ಹಿರಿಯನನು ಕರೆಯುವನದೇನೆಂದು..? ೧೨೦
‘ಸಿರಿರಾಮ ! ಸಿರಿರಾಮ !!’ ಮಾತೆನಿತು ಅಂದವಿದು!
ಮೇಯಲೆಂದೈದಿದಾ ತಾಯಿಗಳು ಬಳಿಗೆ ಬರೆ
ಮರಿಗಳವು ಹಿಗ್ಗಿ ನೆಗೆದಾಡುವುದ ನೋಡಿಹೆನು;
ಹಾಗೆಯೇ ನನ್ನ ಬಗೆಯಿಹುದಿಂದು; ಏತಕಿದು..?
ಸರಿ! ಅಹುದು! ಅವನೆನ್ನ ತಾಯಿಯೇ ಇರಬಹುದು !
ಅಲ್ಲದಿರೆ ಆಗಾಗ `ನನ್ನ ನರಸುತಲೊಬ್ಬ
ಒಡನಾಡಿ ಬರಲಿರುವ’ ಎಂದು ಹೊಳೆಯುವುದಲಾ !
ಅವನೆ ಇವನಿರಬಹುದೆ..? ಕನಸು ನನಸಾಗಿಹುದೆ..?
ಏನಾದರೂ ಇರಲಿ, ಇದುವರೆಗು ಕಾಣದುದ-
ನಿಂದು ನಾ ಕಂಡಿಹೆನು; ಕೈಗೆ ದೊರೆದೀಹಣ್ಣು ೧೩೦
ಎಂದೆಂದು ಅಗಲದೊಳು ಏನ ಮಾಡಲಿ ನಾನು..?

“ಬೀಡಿನಲ್ಲವರು ಒಳಲನು ಕಳೆದುಕೊಳುತಿಹರು;
ಅವರ ಹಸಿವನು ತಣಿಸೆ ಸವಿಸವಿಯ ಹಣ್ಣ್‌ಗಳನು
ತರಲಿಕೆಂದೀಗಿಲ್ಲಿ ಹೊರಟು ಬಂದಿಹೆ ನಾನು;
ಬಳಿಯೊಳೆಲ್ಲಿಯು ಇಲ್ಲಿ ಚೆಲುವ ಹಣ್ಣುಗಳಿಲ್ಲ,
ಹೊಳೆಯಾಚೆ ಹೆಬ್ಬೆಟ್ಟವಿರುವುದಲೆ! ಮೇಲೇರೆ
ನಡುಬೆಟ್ಟದಲ್ಲಿ ಹಣ್ಣ ಗಿಡಗಳೇ ತುಂಬಿಹವು;
ಕಡಿದು ಬಲು ಬೆಟ್ಟವದು ! ಏರಿ ಹೋಗುವುದಕ್ಕೆ
ದಾರಿಯೇ ಸರಿಯಿಲ್ಲ ! ಮುಳ್ಳು-ಕಲ್ಲುಗಳೇನು,
ಹಳ್ಳ-ತೆವರುಗಳೇನು ! ಕೋತಿಗಳಿಗಾದೊಡೆಯು ೧೪೦
ಏರಲಿಕೆ ಬಾರದದು; ಏನಿದ್ದರೂ ಇರಲಿ !
ಹೊಳೆಯೀಸಿ ನಾನೀಗ ಹೋಗಿ ಬೆಟ್ಟವನೇರಿ
ಚೆಲುಚೆಲುವ ತನಿವಣ್ಣುಗಳ ತಂದೆ ತೀರುವೆನು.”

೩ ನಡುಬೆಟ್ಟವನ್ನೇರಿ:

“ಬೆಟ್ಟವನ್ನು ಹತ್ತಿಬರಲೆಷ್ಟು ತೊಂದರೆಯಾಯ್ತು..!
ಎಡವಿ ಮುಗ್ಗರಿಸಿ ನನ್ನಡಿಯ ಬೆರಳೊಡೆದಿಹವು;
ಕುತ್ತುರೊಳು ನುಸುಳಿ ಬರುತಿರಲು ಮೊನೆಮುಳ್ಳುಗಳು
ಕಿತ್ತುಬಿಟ್ಟಿವೆ ನನ್ನ ಮೈದೊವಲನಲ್ಲಲ್ಲಿ;
ಒಂದೆಡೆಗೊ..ದಾರಿ ಬಲು ಕಡಿದಿನದು, ಬಲಗಡೆಗೆ
ಬರಿಯ ಮುಳ್ಳಿನ ಮೆಳೆಯ ಕೊಂಪೆಗಳು; ಎಡಗಡೆಗೆ
ಆಳವಾಗಿಹ ಕೊಳ್ಳ, ಅರಿತರಿತು ಅಡಿಯಿಡುತ ೧೫೦
ಬರುತಿದ್ದೆ; ಒಂದು ಸಲ ಅಡಿಬುಡದ ಕಲ್ಲು ನಸು
ಅಲುಗೆ ತಪ್ಪಿತು ತೂಕ; ಉರುಳಿ ಬೀಳುತಲಿದ್ದೆ
ಕೊಳ್ಳದಲಿ; ಅನಿತರೊಳೆ ಕೈಗೊಂದು ಮುಳ್ಳಮೆಳೆ
ದೊರೆಯಲದನೇ ಗಟ್ಟಿ ಬಿಗಿದು ಕೈಯಲ್ಲಿ ಹಿಡಿದೆ;
ಕೊಳ್ಳದಲಿ ಬೀಳುವವಳುಳಿದೆನಾದರು ಕೈಗೆ
ಮುಳ್ಳುಗಳು ಮುರಿದು ನಸು ನೋವದೇನೋ ಆಯ್ತು;
ಏರಿಬಂದಾಯ್ತಲೇ ಬೆಟ್ಟವನು ! ಸರಿ ! ಈಗ-
ಆರಿಸುವೆ ಬಗೆಬಗೆಯ ತನಿವಣ್ಣುಗಳ ಬೇಗ.”

“ಇದೊ ಇದೋ! ಮಾಮರವು? ಕಿರುಬೆಟ್ಟದಂತಿಹುದು.
ಅಡಿಯ ನೆಲದಲಿಯೆ ಹಣ್ಣಿಡೆಬಿಡದೆ ಬಿದ್ದಿಹವು; ೧೬೦
ಹುಡಿಗೂಡಿಹವು ಕೆಲವು ! ಕೊಳೆಯಲಾಗಿವೆ ಕೆಲವು !
ಹಕ್ಕಿ ತಿಂದುವು ಕೆಲವು ! ಬಿದ್ದ ಹಣ್ಣಿವು ಬೇಡ !
ತಲೆಯ ಸೆಳೆಕೊಂಬಿನೊಳು ತನಿವಣ್ಣು ತೂಗುತಿವೆ;
ಎಳಬಿಸಿಲ ಬಣ್ಣವನು ತಳೆದಂತೆ ತೋರುತಿವೆ.
ತರುವೆನವುಗಳನೀಗ ಸರಸರನೆ ಮರವೇರಿ!”
* * *

“ಇಲ್ಲಿಹುದು ಬೋರೆಮರ ! ಹಣ್ಣ ಹೊಳಪದು ಹಬ್ಬಿ
ಬೆಳಗಿನಾ ಮೂಡುವೆಟ್ಟದ ಕೋಡೊ! ಎನಿಸುತಿದೆ;
ಕೊಯ್ವೆನಿವುಗಳನೀಗ; ಅಯ್ಯೋ ಏನಿದು ಮರವು !
ಒಳ್ಳೆ ಹಣ್ಗಳ ಜೊತೆಗೆ ಮುಳ್ಳನೂ ಪಡೆದಿಹುದು;
ಹಣ್ಣ ಹಿಡಿಯಲು ಹೋಗೆ ಮುಳ್ಳು ಕೈಕೊರೆಯುವುದು. ೧೭೦
ಇರಲಿ ! ಕೊರೆಯಲಿ! ಹಣ್ಣು ದೊರೆತುವೆನಗಿದೆ ಸಾಕು!”
* * *

“ಇದೋ! ಇಲ್ಲಿ ನೇರಿಳೆಯ! ಅದೊ ಅಲ್ಲಿ ಪೇರಿಳೆಯು
ಹಣ್ಣುಗಳ ಹೊರೆಯಿಂದ ಹೊಂದಿಹವು ನೆಲದೆಡೆಯ;
ಹೆಚ್ಚೇನು ಬೇಡವಿವು, ತೆಗೆದುಕೊಳ್ಳುವ ಕೆಲವ!”
* * *

“ಇನ್ನು ಸಾಕಲ್ಲವೇ! ಹಿರಿದು ಹೊರೆಯಾಗುವುದು;
ಕಡಿದಾದ ದಾರಿಯಲಿ ನಡೆಯೆ ಜಡವಾಗುವುದು;
ಸಾಕಿನಿತು ! ಎಲ್ಲವನ್ನು ಸಲ್ಲಿಸುವೆನಾತನಿಗೆ;
ಇನ್ನೊಂದು ಮಾತಿಹುದು; ಹಣ್‌ಗಳಿವನೆಲ್ಲವನು
ಹೀಗೆಯೇ ಒಪ್ಪಿಸಲು ಚೆನ್ನಹುದೆ..! ಇವುಗಳಲಿ
ಕೆಲವು ಹುಳಿಯಿರಬಹುದು, ಕೆಲವು ಹುಳುಕಿರಬಹುದು,೧೮೦
ಕೆಡುಕು ಕೆಲವಿರಬಹುದು, ಇದಕೇನ ಮಾಡುವುದು..!
ಬೇರೆ ಮತ್ತಿದೆಯೇನು ! ಎಲ್ಲ ಹಣ್ಣುಗಳನೂ
ಹಲ್ಲಿಂದ ನಸುನಸುವೆ ಕಚ್ಚಿ ಸವಿನೋಡುವೆನು !
ಒಳಿತಾದುವಿರಲವಗೆ, ಹುಳಿಕೆಡುಕು ಇರಲೆನಗೆ.”
* * *

“ಅಹಹ ! ಮಾವುಗಳೆಲ್ಲ ಜೇನ ಸೊನೆಯಂತಿಹವು,
ಬೋರೆಹಣ್ಣಿನ ಸವಿಯು ಬಾಯ ತಣಿಸದೆ ಬಿಡದು,
ಎಲ್ಲವೂ ಒಳ್ಳೆಯವೆ, ಜೊಳ್ಳು ಒಂದೂ ಇಲ್ಲ!
ಸಲ್ಲಿಸುವೆನೆಲ್ಲವನ್ನವಗೆ; ಉಳಿಯವು ನನಗೆ..!
ಉಳಿಯದಿರಲದಕೇನು ! ಇಂದಿನೊಂದೇ ದಿನವು
ಒಡಲ ಹಸಿವಿನ ನೋವ ತಡೆದುಕೊಳ್ಳಲಾರೆನೇ ? ೧೯೦
ಹೊರಡುವೆನು ನಾನಿನ್ನು, ಹಗಲು ಮುಗಿಯಲಿಕಾಯ್ತು.”

೪ ಹೊಳೆಯಂಚಿನೊಳು ಕುಳಿತು:

“ಹೊರಟೆ ಹೋದನು ಆತ; ಇರು ಇಲ್ಲಿಯೇ ಎನುತ
ಎನಿತೊ ಹಂಬಲಿಸಿದೆನು ಎಣಿಕೆಗೇ ತರಲಿಲ್ಲ
ನನ್ನ ಹಂಬಲಿಕೆಯನು; ಹೊರಡಲಿಕೆ ಅನುಗೊಂಡ;
`ಇಂದೊಂದೆ ದಿನವಾದೊಡೆಯು ಇರಲು ಬಾರದೇ?’
ಎಂದು ನಾ ನುಡಿದ ಮರುಕದ ಮಾತಿಗವನೆಂದ:
‘ಬಂದೆಬರುವೆನು ಮತ್ತೆ ನಿನ್ನೆಡೆಗೆ, ಸೊಗದಲಿರು!’
ಎಂದುದಕೆ ಮರುಮಾತ ನುಡಿಯಲಾರದೆ ನಿಂತೆ,
ಬಂದವರು ಬಂದವೊಲೆ ಹೊರಟು ನಡೆದರು ಹಾಗೆ.

“ಹೊರಟಿರಲು ಹಿರಿಯಣ್ಣ ನಿರುಕಿಸಿದನಲೆ ನನ್ನ! ೨೦೦
ಎನಿತಂದವದು ನೋ! ಎದೆಯನಲುಗಾಡಿಸಿತು;
ನಿನ್ನೆಯಾ ದಿನವೆನಗೆ ಮಿಂಚಿನಂದದಿ ಮೂಡಿ
ಮರೆಯಾದ ತೆರದಿ ತೋರುತಿದೆ; ಆತನ ಬರುವು
ಕನಸಿನಲಿ ಕಂಡಿರುವ ಕಣಸೇನೊ! ಎನಿಸುತಿದೆ;
ಅನಿತು ಬೇಗನೆ ಮುಗಿಯಿತೇಕೆ ನಿನ್ನೆಯ ಹಗಲು..!”

“ಮರಳಿ ಬರುವೆನು ಎಂದು ಅರುಹಿ ಹೋಗಿರುವನವ,
ಬರುವನೋ ಬರದಿರುವನೋ ! ಅರಿವುದೆಂತೀಗ..!
ಇದ್ದುಬಿಟ್ಟಿದ್ದರೊಳ್ಳೆಯದಿದ್ದಿತವನಿಲ್ಲಿ..!
ದಿನದಿನವು ಹೋಗಿ ನಾ ತನಿವಣ್ಣ ತರುತಿದ್ದೆ;
ತಾಯಿ ತನ್ನಯ ಮರಿಗೆ ತಿನಿಸಿ ತಣಿಯುವ ತೆರದಿ ೨೧೦
ನಾನೆಯವನಿಗೆ ಹಣ್ಣತಿನಿಸಿ ಹಿಗ್ಗುತಲಿದ್ದೆ;
ಇಬ್ಬರೂ ಜೊತೆಗೂಡಿ ಹೊಳೆಯ ತಡಿಯೊಳಗಾಡಿ,
ತಿಳಿನೀರೊಳೀಸಾಡಿ, ತಳಿರ ನೆಳಲಲಿ ಕುಳಿತು,
ಬೆಳುದಿಂಗಳೊಳು ಕುಣಿದು, ತಳೆಯುತಿದ್ದೆವು ಸೊಗವ;
ಉಳಿದಿದೆಲ್ಲವನು ತೆರಳಿದನದೇತಕೊ! ತಿಳಿಯೆ.”

“ಈ ಬನವು ಈ ಬೆಟ್ಟ- ಈ ಹೊಳೆಯ ತಿಳಿವೊನಲು-
ಎಂದಿನವೆ ಇರುವುವಲೆ! ಅಂದು ನೋಡಿದ ಚೆಲುವು
ಇಂದಿಲ್ಲ, ಏತಕಿದು..! ಬಂದಿದ್ದ ಚೆಲುವನವ
ಅಂದಿನಾ ಅಂದಚೆಂದವನೆಲ್ಲ ತನ್ನೊಡನೆ
ಎತ್ತಿಕೊಂಡೊಯ್ದಿಹನೊ..! ತಿಳಿಯೆನೀ ಹೊಲಬನ್ನು; ೨೨೦
ಬೇಸರೊದವಿರಲು ನಾನೀಯೆಡೆಯೊಳೈತಂದು,
ಹೊಳೆಯ ತಿಳಿನೀರಿನಲ್ಲಿ ಕಾಲಿಟ್ಟು ಕುಳಿತಿದ್ದು,
ಬಳಿಯ ನೀರ್ವಕ್ಕಿಗಳ ಬೆಡಗಿನಲಿ ಕಣ್ಣಿಟ್ಟು,
ತಡಿಯ ತೋಪಿನ ಹಕ್ಕಿ ಕಲಕಲಿಸೆ ಕಿವಿಗೊಟ್ಟು,
ಹೊಡೆದು ಹಾಕುತಲಿದ್ದೆ ಬಲುಬೇಸರೆಲ್ಲವನು;
ಇಲ್ಲಿಯೂ ಸೊಗಸನಿಸದಿಹುದಿಂದು..! ಏನು ಇದು!”

“ಹಸಿವು ಬಾಯಾರಿಕೆಯ ಹೆಸರನೇ ಮರೆತಿರುವೆ;
ದಿನದಿನವು ತಿನುವ ಇನಿವಣ್ಣ ಬಯಸದು ಬಗೆಯು;
ಹಸಿವಿನಾ ನೋವಿನಿಂದೆನಿತೊ ಹಿರಿದಾಗಿರುವ
ನೋವದಾವುದೊ ಕರುಳ ತುಳಿತುಳಿದು ಮೆಟ್ಟುತಿದೆ; ೨೩೦
ಬಿಸಿಲ ಬೇಗೆಯೊಲೇನೊ ಬಸಿರಿನಲಿ ಬೇಯುತಿದೆ;
ಆತನಲ್ಲದಲೆ ಇನ್ನೇತರದು ನೆನಹಿರದು;
ಬರುವುದೆಂದೋ ಮುರಳಿಯವನು..! ಮಾಡುವುದೇನು..!

ಸರಿ! ಅರಿತೆ! ಅಹುದಹುದು! ಇನಿತು ಮಾಡುವೆನಿನ್ನು;
ಕಣ್ಣೆದುರು ಕಟ್ಟಿಹುದು ಅವನ ಚೆಲುವಿನ ರೂಪು;
ಅದು ಕದಲಿ ಅಳಿಸಲು ಕಣ್ಣೆರಡನೂ ಮುಗಿದು
ನಿಲಿಸಿಕೊಳುವೆನು ಹಾಗೆ! ಅವನ ಸವಿನುಡಿಯಿಂಪು
ಕಿವಿಗಳಲಿ ತುಂಬಿಹುದು; ಹೊರಗೆಯದು ಹೋಗದೊಲು
ಕಿವಿಗಳನ್ನು ಮುಚ್ಚಿ ಎಡೆಬಿಡದೆ ಕೇಳುವೆನಿನ್ನ!
ಕಿರಿಯನವ ಹಿರಿಯನನು ಕರೆಯುತಿಹ ತೆರದಿಂದೆ ೨೪೦
`ಸಿರಿರಾಮ ! ಸಿರಿರಾಮ !’ ಎಂದು ಕರೆಯುತಲಿರುವೆ!
ನಿನ್ನೆ ಕಂಡುಂಡ ಹಿಗ್ಗಿನ ಬಗೆಯನೇಗಲೂ
ತಂದುಕೊಳಲೆಂದು ಹವಣಿಸುತ ಬದುಕನು ಕಳೆವೆ.
ಬಂದೆ ಬಹೆನೆಂದಿಹನು, ಎಂದು ಬರುವನೊ ಬರಲಿ!”
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...