Home / ಕವನ / ಕವಿತೆ / ಅಡವಿಟ್ಟ ಸ್ವಾತಂತ್ರ್ಯ

ಅಡವಿಟ್ಟ ಸ್ವಾತಂತ್ರ್ಯ

ಒಣಗಿದ ನನ್ನವ್ವನ ಎದೆಯಿಂದ
ಝಲ್ಲೆಂಬ ಜೀವರಸ ಬತ್ತಿ
ಎಂದಿಗೂ ಬಾಯಿ ತುಂಬಾ ಗುಟುಕು
ಎಟುಕಲಿಲ್ಲ ನನ್ನ ಬಾಯಿಗೆ.
ಏಕೆಂದರೆ ನನ್ನಪ್ಪನ ಕಷ್ಟಗಳು
ಅವಳಿಗೆ ಹೊಟ್ಟೆ ತುಂಬಿಸಲಿಲ್ಲ.
ಬಡತನದ ಬೇಗೆಯಿಂದ ಬೇಸತ್ತು
ನನ್ನಪ್ಪ – ನನ್ನವ್ವನಿಗೆ ಅಡವಿಟ್ಟ ಒಂದು ದಿನ
ತಾಯಿ – ಕಂದನ ಬೇರೆ ಮಾಡಿದ್ದನು.
ನನ್ನವ್ವನಿಗೆ ಬಿಗಿದಿರುವ
ಗುಲಾಮಗಿರಿಯ ಸಂಕೋಲೆ
ಪ್ರಶ್ನೆ ಮಾಡಿದ್ದಕ್ಕೆ ನಾನು
ದೇಶದ್ರೋಹಿ ಎನಿಸಿಕೊಂಡೆ
ಈ ತಾಯಿ, ಮಾತೃಭೂಮಿ
ಸರಹದ್ದುಗಳಲ್ಲಿ ಸೈನಿಕರು
ತಾಯ್ ಸೆರೆಯ ಬಿಡಿಸಲು
ಪ್ರಾಣಗಳ ಬಲಿಗಳು
ಹೋರಾಟದ ಆರ್ಭಟದಲಿ
ಮಾರಾಟದ ಒಪ್ಪಂದಗಳನ್ನು
ಕುದುರಿಸಿದವರು ನೀವು
ಸಾಮ್ರಾಜ್ಯಶಾಹಿಗಳಿಗೆ ಕುರ್ಚಿ
ಆಸನಗಳ ಒದಗಿಸಿದ ಕುತಂತ್ರಿಗಳೇ
ಎಚ್ಚರ!
ನನ್ನವ್ವನ ಒಡಲ ಕಿಚ್ಚಿನಿಂದ
ಹೊರಬಿದ್ದ ಅವಳ ನಿಟ್ಟುಸಿರಿನಿಂದ
ನಿಮ್ಮ ಒಪ್ಪಂದಗಳು ಸದ್ದಿಲ್ಲದೆ
ಸುಟ್ಟು ಬೂದಿಯಾದಾವು.
ಹಸಿದ ಅವಳ ಕಂದಮ್ಮಗಳ
ಸಿಟ್ಟು ತಿರುಗಿ ಬಿದ್ದರೆ ನಿಮ್ಮ
ಒಪ್ಪಂದಗಳು ಹರಿದು ಚಿಂದಿಯಾದಾವು.
ನನ್ನ ಹಡೆದವ್ವನ ನೋವುಗಳು,
ಅವಳ ಕಣ್ಣೀರಿನಲಿ ತೋಯ್ದು,
ಶೃಂಖಲೆಯ ಗುಲಾಮಿ ಚರಿತ್ರೆಯನು
ಅಳಿಸಿ ಹಾಕಿ – ಹೊಸ ಚರಿತ್ರೆ
ರಚಿಸಿಯಾಳು ಅವಳ ರಕ್ತದಿಂದ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...