ಒಣಗಿದ ನನ್ನವ್ವನ ಎದೆಯಿಂದ
ಝಲ್ಲೆಂಬ ಜೀವರಸ ಬತ್ತಿ
ಎಂದಿಗೂ ಬಾಯಿ ತುಂಬಾ ಗುಟುಕು
ಎಟುಕಲಿಲ್ಲ ನನ್ನ ಬಾಯಿಗೆ.
ಏಕೆಂದರೆ ನನ್ನಪ್ಪನ ಕಷ್ಟಗಳು
ಅವಳಿಗೆ ಹೊಟ್ಟೆ ತುಂಬಿಸಲಿಲ್ಲ.
ಬಡತನದ ಬೇಗೆಯಿಂದ ಬೇಸತ್ತು
ನನ್ನಪ್ಪ – ನನ್ನವ್ವನಿಗೆ ಅಡವಿಟ್ಟ ಒಂದು ದಿನ
ತಾಯಿ – ಕಂದನ ಬೇರೆ ಮಾಡಿದ್ದನು.
ನನ್ನವ್ವನಿಗೆ ಬಿಗಿದಿರುವ
ಗುಲಾಮಗಿರಿಯ ಸಂಕೋಲೆ
ಪ್ರಶ್ನೆ ಮಾಡಿದ್ದಕ್ಕೆ ನಾನು
ದೇಶದ್ರೋಹಿ ಎನಿಸಿಕೊಂಡೆ
ಈ ತಾಯಿ, ಮಾತೃಭೂಮಿ
ಸರಹದ್ದುಗಳಲ್ಲಿ ಸೈನಿಕರು
ತಾಯ್ ಸೆರೆಯ ಬಿಡಿಸಲು
ಪ್ರಾಣಗಳ ಬಲಿಗಳು
ಹೋರಾಟದ ಆರ್ಭಟದಲಿ
ಮಾರಾಟದ ಒಪ್ಪಂದಗಳನ್ನು
ಕುದುರಿಸಿದವರು ನೀವು
ಸಾಮ್ರಾಜ್ಯಶಾಹಿಗಳಿಗೆ ಕುರ್ಚಿ
ಆಸನಗಳ ಒದಗಿಸಿದ ಕುತಂತ್ರಿಗಳೇ
ಎಚ್ಚರ!
ನನ್ನವ್ವನ ಒಡಲ ಕಿಚ್ಚಿನಿಂದ
ಹೊರಬಿದ್ದ ಅವಳ ನಿಟ್ಟುಸಿರಿನಿಂದ
ನಿಮ್ಮ ಒಪ್ಪಂದಗಳು ಸದ್ದಿಲ್ಲದೆ
ಸುಟ್ಟು ಬೂದಿಯಾದಾವು.
ಹಸಿದ ಅವಳ ಕಂದಮ್ಮಗಳ
ಸಿಟ್ಟು ತಿರುಗಿ ಬಿದ್ದರೆ ನಿಮ್ಮ
ಒಪ್ಪಂದಗಳು ಹರಿದು ಚಿಂದಿಯಾದಾವು.
ನನ್ನ ಹಡೆದವ್ವನ ನೋವುಗಳು,
ಅವಳ ಕಣ್ಣೀರಿನಲಿ ತೋಯ್ದು,
ಶೃಂಖಲೆಯ ಗುಲಾಮಿ ಚರಿತ್ರೆಯನು
ಅಳಿಸಿ ಹಾಕಿ – ಹೊಸ ಚರಿತ್ರೆ
ರಚಿಸಿಯಾಳು ಅವಳ ರಕ್ತದಿಂದ.
*****