Home / ಕವನ / ಕವಿತೆ / ಜಗದಂಬೆ

ಜಗದಂಬೆ

ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ
ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ ||

ನಿನ್ನ ನಾಮ ನೂರಾರು ಕೋಟಿ ಕರೆಕರೆದು ಸಾಲದಮ್ಮ
ನಿನ್ನ ರೂಪ ಕೋಟ್ಯಾನುಕೋಟಿ ಎಣಿಸಲಿಕೆ ಬಾರದಮ್ಮ || ೨ ||

ಗರ್ಭದಿಂದ ಹೊರಬಂದು ಕೂಸು ತೆರಿತಾದೆ ಬಾಯಿ ಅಮ್ಮಾ
ನೋವು ಬೇವುಗಳ ಸಾವು ಕೊನೆಗೆ ತಾ ಕರೀತಾದೆ ಅಮ್ಮಾ || ೩ ||

ಹಡೆದ ತಾಯಿ ಹಾಲುಣಿಸಿ ಬೆಳೆಸಿ ಮುದ್ದನ್ನೆ ಹೊದಿಸುವಾಕಿ
ಕರುಳು ಕುಡಿಯ ಎಳೆ ಸೋಕದಂತೆ ಬೆಳೆಸೀಯಿ ಅನ್ನ ಹಾಕಿ|| ೪ ||

ವಿಶ್ವವನ್ನೆ ನೀ ಆಡಿಸುತ್ತ ಜೋಗುಳದ ಗಾನದಲ್ಲಿ
ಪ್ರೀತಿ ತೊಟ್ಟಿಲಲಿ ತೂಗುತಿರುವೆ ಹಗಲಿರುಳು ಜೋಕೆಯಲ್ಲಿ|| ೫ ||

ತಾಯಿ ತಾಯಿ ಎಲ್ಲೆಲ್ಲು ತಾಯಿ ಮರಗಿಡದಿ ತಾಯಿ ದೇವಿ
ಜೀವ ಜೀವ ಉಸಿರಾಡುವೆಲ್ಲ ತಾಯಿಯದೆ ಒಲುಮೆ ದೇವಿ|| ೬ ||

ನೀರು ನೆಲವು ಆ ಬಾನುಗಳನು ಜೀವಿಗಳು ತುಂಬ ಹರಡಿ
ಪ್ರಾಣದೆಲ್ಲ ನಲಿದಾಟ ಲೀಲೆ ತಾಯಮ್ಮ ಹಡೆದ ಮೋಡಿ|| ೭ ||

ಪಂಚ ಪ್ರಾಣ ನೀ ಪಂಚಭೂತಗಳ ಐದು ಮುಖವ ತಾಳಿ
ಪ್ರಾಣಿ ಪ್ರಾಣಿಗಳ ಸೃಪ್ಪಿಗೊಳಿಸಿ ಅನಂತ ರೂಪಗಳಲಿ|| ೮ ||

ಗಾಳಿಯಾಗಿ ಎದೆಯುಸಿರು ಉಸಿರು ಓಡಾಡೊ ಸೂತ್ರ ನೀನೆ
ನೀರು ರಕ್ತ ಹರಿಹರಿದು ರಸದ ಜೇಂಗಡಲ ಒಡಲು ನೀನೆ|| ೯ ||

ಬೆಂಕಿಯಾಗಿ ಉರಿ ಉರಿದು ಚೈತನ್ಯದಗ್ನಿ ನೀನೆ
ಮಣ್ಣಿನಲ್ಲಿ ಧಾತುಗಳ ಸತ್ವ ಬೇರಿಳಿವ ತತ್ವ ನೀನೆ|| ೧೦ ||

ಗಗನದಲ್ಲಿ ಬಯಲಾದ ಶೂನ್ಯ ತೆರೆ ಬಾಗಿಲಾಚೆ ನೀನು
ಸೊಗದ ರಾಣಿ ಸೃಪ್ಪಿಯಲಿ ಚೆಲುವು ದಿನದಿನವು ಹೊಸತು ನೀನು|| ೧೧ ||

ಅನ್ನ ಧಾನ್ಯಗಳ ಹೂವು ಹಣ್ಣುಗಳ ಮಡಿಲ ಸಸ್ಯರಾಶಿ
ಗಿರಿಯ ಸಾನುಗಳ ವನದ ಸೀಮೆಗಳ ಹಸಿರವುಡಿಗೆಯರಸಿ|| ೧೨ ||

ಸ್ವರಗಳಲ್ಲಿ ಸಾವಿರದ ಭೇದ ಓಂಕಾರ ನಾದ ಮೂಲ
ವರ್ಣಗಳಲಿ ಅಗಣಿತ ಭೇದ ನಿರ್ವರ್ಣ ವರ್ಣ ಮೂಲ || ೧೩ ||

ಹುಟ್ಟಿ ಸತ್ತು ಹುಟ್ಟಿರುವ ಕ್ಷರಗಳಲಿ ಅಕ್ಷರಾಂಬೆ ನೀನು
ಏಳು ಬೀಳು ಅಲೆ ಲೀಲೆ ಕೆಳಗೆ ಅವಿನಾಶಿ ಕಡಲು ನೀನು || ೧೪ ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...