Home / ಕವನ / ನೀಳ್ಗವಿತೆ / ಇಮಾಂಬಾರಾ

ಇಮಾಂಬಾರಾ

ಅವಧವೆಂದರೆ ಅವಧ

ಅವದವೆಂದರೆ ಅವಧ
ಪ್ರತಿಯೊಬ್ಬನೂ ಬಲ್ಲ
ಅರಸನೆಂದರೆ ಅರಸ
ಆಸೀಫ್ ಉದ್‌ದೌಲ
ಅಂತೆಯೇ
“ಜಿಸ್‌ಕೊ ನ ದೇ ಮೌಲ
ಉಸ್‌ಕೊ ದೇ ಆಸೀಫ್‌ ಉದ್‌ದೌಲ”

ಕಿಸ್‌ಕೊ ದೇ
ಕಿಸ್‌ಕೊ ದೇ-ಎನ್ನದೇ
ಸಬ್‌ಕೋ ದೇ ಎಂದ
ಅಂಥ ಕ್ಷಾಮದ ಕಾಲ ಅದು
ಅನ್ನದ ಅಗತ್ಯ ಎಲ್ಲರಿಗೂ
ಹಜರತ್‌ ಇಮಾಮರಿಗು
ಮಹಲಿನಗತ್ಯ ಮನಗಂಡ

“ಆದರೆ ಮಾತ್ರ
ಹಿಂದೆಲ್ಲಿಯೂ ಇರದ ಹಾಗಿರಬೇಕು
ಮುಂದೆಯೂ
ಬರದ ಹಾಗಿರಬೇಕು! ”

ಹಿಂದಿರುವುದಿಲ್ಲ
ಮುಂದೆ ಬರುವುದು ಇಲ್ಲ
ಸುಲೆಮಾನರಿದ್ದ ಅರಮನೆಯಲ್ಲ
ಶಾಜಹಾನರ ತಾಜಮಹಲಲ್ಲ
ಕಲ್ಲಿರುವುದಿಲ್ಲ ಕಟ್ಟಿಗೆಯಿರುವುದಿಲ್ಲ
ಕಬ್ಬಿಣವಿರುವುದಿಲ್ಲ
ಬರೇ ಇಟ್ಟಿಗೆಯ ಹೊರತಾಗಿ
ಮತ್ತೇನು ಇರುವುದಿಲ್ಲ
ಆದರೂ-
ನಡೆದವರ ದಾರಿತಪ್ಪಿಸುವ
ಭೂಲ್‌ಭುಲಯ್ಯ
ಇಮಾಂಬಾರಾದೊಳಗೆ
ತೋರಿಸುವೆನೆಂದ‌
ಕೈಫಿಯತ್‌ ಉಲ್ಲ!

ನಾಳೆ ಮುಂಜಾನೆ ಮಚ್ಚೀಮಹಲಿಗೆ

ಕಟ್ಟೆಗಳ ಮೇಲೆ
ತಮಾಷೆ ಮಾತುಗಳ ಹೇಳಿ
ನಗುವವರು ನಗಲಿ !

ಅಮೀರರ ಮನೆಮುಂದೆ ಹಾಡಿ
ಕುಣಿವ ಭಾಂಡಿನವರು
ಕುಣಿಯಲಿ !

ನಗುವ ಕಾಲವಿದಲ್ಲ
ಕುಣಿವ ಕಾಲವು ಅಲ್ಲ
ಆದ್ದರಿಂದಲೆ ಪ್ರತಿಯೊಂದೂ
ದಾರುಣವಾಗುತ್ತ ಹೋಗುವುದು
ಕ್ಷಾಮದ ಹೊಡೆತ
ಸೂಳೆಯರ ಹೊಟ್ಟೆಗೂ
ತಟ್ಟಿದ ಹಾಗೆ ತೋರುವುದು

ಛದ್ಮವೇಷದಲಿ ಸುಲ್ತಾನ
ಸಕಲವ ಕಾಣುವ
ಕಣ್ಣಮುಂದೇ
ಏಳುವ ಕಟ್ಟಡ
ದುಡಿಯುವ ಜನತೆ
ಆದರೆ ಯಾರೀಕೆ
ಇಳಿ ಯೌವನದಾಕೆ
ಇವಳ ಕಣ್ಣಿನೊಳಗೇ ಬಿದ್ದು
ಮುಳುಗುವ ಹಾಗಿದೆ ಹೊತ್ತು
ಅವಧದ ವಿಧಿಯಂತೆ
ಹಿಂದುಮುಂದಣ ಯಾವತ್ತು

“ಈಗಲೇ ಬರುವಿಯ
ನಾಳೆ ಮುಂಜಾನೆ ಬರುವಿಯ
ಮಚ್ಚೀಮಹಲಿಗೆ
ಖುದು ಸುಲ್ತಾನ ಅಸೀಫ್‌ ಉದ್‌ದೌಲರ
ಅಪ್ಪಣೆ ಮೇರೆಗೆ”

ಸುರೈಯ

ಅಂಗಳದ ತುಂಬ ಪಾರಿಜಾತದ ಹೂ-
ಅಲ್ಲವೇ
ಮನೆ ಹಜಾರದಲಿ ಹಾಡುವವರೂ
ಆಗಲೇ ಸುರುವಾಗಿತ್ತು
ಯಾವುದೋ ಖಯಾಲು.
ಹಾಡಿದುದು ಮಾತ್ರ ನಾನಲ್ಲ-
ಹಾಡಿದವಳೇ ಬೇರೆ
ನನಗೆ ಖಸಖಸೆಯ ಮೇಲೆ
ನೀರ ಸಿಂಪಡಿಸುವ ಕೆಲಸ
ಆಮೇಲೆ ಶರಬತ್ತು
ತಂದು ಕೊಟ್ಟವಳೂ ನಾನೆ.
ಹೀಗೆ ಕಳೆಯಿತು ಸಂಜೆ
ರಾತ್ರಿಯೂ ಸರಿಯಿತು
ನಿಮ್ಮ ದೃಷ್ಟಿ ನನ್ನ ಮೇಲಿತ್ತೆಂದು
ನನಗಾದರೂ ಏನು ಗೊತ್ತಿತ್ತು ?
**

ಕಾಶ್ಮೀರಿ ರೇಶಿಮೆಯ
ಹಳದಿ ದುಪ್ಪಟದಿಂದ
ಮರೆಸಿದ್ದರೂ ನಿನ್ನ ಹೆರಳು
ಇಣುಕುತಿತ್ತು ಬೆನ್ನ ಮೇಲಿಂದ
ಕಾಲ ಕಿರುಗೆಜ್ಜೆ
ಮರೆಸಿದ್ದರೂ ಲಂಗದಲಿ
ಮರೆಯಾಗಿರಲಿಲ್ಲ ಅದರ
ಆಗಾಗಿನ ಸದ್ದು
ಇರುಳು ಸರಿದಂತೆ ನಿನ್ನ
ಮೂಗಿನ ನತ್ತು
ಹೊಳೆಯತೊಡಗಿತು-ಸುರೈಯ !
ಆ ರಾತ್ರಿ ನಾನು
ಸುಮ್ಮ ಸುಮ್ಮನೆ ಕುಡಿದ
ಶರಬತ್ತಿನ ಲೋಟಕ್ಕೆ
ಲೆಕ್ಕವೇ ಇರಲಿಲ್ಲ !
**

ಆಮೇಲೆ ಬಂದಿರಿ ನೀವು
ನಮ್ಮ ಮನೆಗೇ ನೇರ
ಲೆಕ್ಕಿಸದೆ ಊರವರ
ಲೆಕ್ಕಿಸದೆ ನೆರೆಯವರ-

ಯಾರು ಏನೆಂದೆ
ನನಗೆ ಗೊತ್ತಿರಲಿಲ್ಲ
ಅರಮನೆಯ ಮುಖವನ್ನೂ
ನಾನು ಕಂಡವಳಲ್ಲ

ದುಪ್ಪಟವು ಕೆಳಬಿತ್ತು
ಹೆರಳು ಇಳಿಬಿತ್ತು
ಸಮಯವೇ ನಿಂತಹಾಗಿತ್ತು
ದೊರೆಯೇ !
**

ಸಮಯ ನಿಂತಿರಲಿಲ್ಲ
ಯಾರಿಗೂ ಕಾದಿರಲು ಇಲ್ಲ
ಅದು ಶೂಜ ಉದ್‌ದೌಲರನು
ಬಲಿತೆಗೆದುಕೊಂಡಿತು
ಆಮೇಲೆ ನಾನು
ಅವಧೇಶ್ವರನಾದೆ !
ಫೈಜಾಬಾದಿನಿಂದ
ಲಖನೋವಿಗೆ ಬಂದೆ
ಗೋಮತೀ ತೀರದಲಿ
ಆಗಾಗ ನಡೆದೆ-ಸುರೈಯ !
ಸಮಯ ಗತಿಸುತ್ತಲೇ ಇತ್ತು.
**

ಅವಧೇಶ್ವರನಿರದ ಅವಧ ಅವಧವೇ ?
ಭಣಭಣಿಸುತಿತ್ತು
ಇಡೀ ಫೈಜಾಬಾದು
ನರ್ತನವಿಲ್ಲ, ಗಾಯನವಿಲ್ಲ
ವರ್ಷ ವರ್ಷದ ಮೊಹರಮಿನ
ಉತ್ಸಾಹವಿಲ್ಲ
ಆದರೂ ಕಾದಿದ್ದ ನಾನು.
**

ಬರಗಾಲ ನಿನ್ನನೂ ಬಿಡಲಿಲ್ಲ-
ಹಜರತ್‌ ಇಮಾಮರ ದಯೆ!
ನಾಳೆ ಸಂಜೆಗೆ ನಾನು ಬರುವೆ
ಬಿಳೀ ಕುದುರೆಯ ಮೇಲೆ
ಕೈ ಹಿಡಿದು ಕೂರಿಸುವೆ ನನ್ನ ಜತೆ
ಎಲ್ಲರೆದುರೆ
ಕಾದಿರುವಿಯಲ್ಲವೆ ಸುರೈಯ
ಈ ಮೊದಲು
ಕಾದಿದ್ದ ಹಾಗೆಯೆ
ಫೈಜಾಬಾದಿನಲಿ ?

ಕನಸುಗಳ ಕೊಡುವವನ

ಅಂದಿರುಳು ಕೇಳಿದನು ಅಸೀಫ್‌ ಉದ್‌ದೌಲ
ಕನಸುಗಳ ಕೊಡುವವನ
ಈ ರಾಜ್ಯ ಈ ಕೋಠಿ-
ಹಿಂತೆಗೆದುಕೋ ಇದೆಲ್ಲವ

ಎಲ್ಲಿ ಪಾರಿಜಾತದ ಹೂವು
ಮರತುಂಬ ಬಿರಿದು
ಅಂಗಳದ ಮೇಲೆಯೂ ಚೆಲುವುದೊ
ಎಲ್ಲಿ ಇರುಳಲ್ಲಿ ಸಂಗೀತದ ಮಧ್ಯೆ
ಕಾಲ ಕಿರುಗೆಜ್ಜೆಯೂ
ಶಬ್ದಿಸುವುದೊ
ಎಲ್ಲಿ ದುಪಟ್ಟಾದ ಕೆಳಗೆ ಮೂಗಿನ ನತ್ತು
ಮಿಂಚಿ ಮೀರುವುದೊ
ಸಕಲ ದೀಪಗಳ
ಕನಸುಗಳ ಕೊಡುವವನೆ ! ನನಗಿನ್ನೇನು ಬೇಡ
ಕೊಂಡೊಯ್ದು ಅಲ್ಲಿ
ಬಿಟ್ಟು ಬಿಡು ನನ್ನ
ಯಾರು ನಕ್ಕರು ? ನಗಲಿಲ್ಲ ಯಾರೂ
ರೆಕ್ಕೆ ಬಡಿಯುತಿದೆ
ಪಂಜರದ ಹಕ್ಕಿ.
ಅಸ್ಪಷ್ಟ ನೆನಪು
ಕಾಡುತಿರುವುದೊ ಹೇಗೆ
ಈ ಇಂಥ ಜೀವಕೂ ಸಿಕ್ಕಿ

ಬಿಳಿ ಕುದುರೆ ಹತ್ತಿ

ಬಿಳಿ ಕುದುರೆ ಹತ್ತಿ ಬಂದ ಆಮೇಲೆ
ಇಮಾಂಬಾರಾ ಮುಂದೆ ನಿಂದ
ಇಮಾಂಬಾರಾ ಮುಂದೆ ನಿಂದ ಸರದಾರ
ಕುದುರೆಯಿಂದಿಳಿದು ನಡೆದ

ಎಡಗಡೆ ಅವಳಿಲ್ಲ ಬಲಗಡೆ ಅವಳಿಲ್ಲ
ಹಿಂದುಗಡೆ ಇಲ್ಲ ಮುಂದುಗಡೆ ಇಲ್ಲ
ಹಿಂದಂಗಡೆ ಇಲ್ಲ ಮುಂದುಗಡೆ ಇಲ್ಲ ಸರದಾರ
ಯಾವ ಕಡೆ ನೋಡಿದರು ಇಲ್ಲ

ಅವರ ಕೇಳುವ ಇವರ ಕೇಳುವ
ಹೆಸರಿಡಿದು ನೆಟ್ಟಗೆ ಕೂಗುವ
ಹೆಸರಿಡಿದು ನೆಟ್ಟಗೆ ಕೂಗುವ ಸರದಾರ
ಎಲ್ಲಿ ಸುರೈಯಾ ಓಗೊಡುವ

ಬಿಳಿಕುದುರೆ ಹತ್ತಿ ಹೊರಟ ಆಮೇಲೆ
ಊರೂರು ಸುತ್ತಿ ನಡೆವ
ಊರೂರು ಸುತ್ತಿ ನಡೆವ ಸರದಾರ
ದಾರಿ ಸೆರಾಯಿಯಲಿ ಕಳೆವ

ಮೊಹರಮಿನ ಸಮಯ ! ಓ ಮೊಹರಮಿನ ಸಮಯ !
ಮಾರ್ಸಿಯಾ ಹಾಡಿ ನಡೆವವರೇ
ಮಾರ್ಸಿಯಾ ಹಾಡಿ ನಡೆವವರೇ ಸರದಾರ
ಮುಡಿ ಬಿಚ್ಚಿ ಹಾಕಿದ ಹೆಂಗಸರೇ

ಹಜರತ್‌ ಇಮಾಮರ ಗೋರಿಯ ಮುಂದೆ
ಎಲ್ಲಾ ತಲೆಬಾಗಿ ನಿತ್ತವರೇ
ಎಲ್ಲಾ ತಲೆಬಾಗಿ ನಿತ್ತವರೇ ಸರದಾರ
ಅವರವರ ಕರ್ಬಾಲ ಹೊತ್ತವರೇ

ಸೋಜ್ ಖ್ವಾನಿ

ಹಾಽ ಎಲ್ಲಾ ಎಲ್ಲಾ ಎಲ್ಲಾಽ
ಎಲ್ಲಾಽವ ಕಳಽಕೊಂಡು
ಹಾಽ ಎಲ್ಲಾಽವ ಕಳಽಕೊಂಡು

ಮದೀನಾದ ಕಾರವಾನ
ಶಾಮಾಕ್ಕೆ ಬಂದಿತ್ತು
ಹಽ ಶಾಮಾಕ್ಕೆ ಬಂದಿತ್ತು

ಶಾಮಾಕ್ಕೆ ಬಂದಾಗ
ಮೊದಲಲ್ಲೆ ಇತ್ತಲ್ಲ
ಹಾಽ ಮೊದಲಲ್ಲೆ ಇತ್ತಲ್ಲ

ಮೊದಲಲ್ಲೆ ಇತ್ತಲ್ಲ
ಹುಸೇನರ ರುಂಡ
ಹ್ಯಾಽ ಹುಸೇನರ ರುಂಡ

ಭರ್ಚಿಯ ಮೇಲದರ
ಹಾ ! ಎಂಥ ಛಂದ
ಹಾ ಎಂಥ ಛಂದ

ಒಟ್ಟಿಗೆ ಬಂದರು
ಬರಿತಲೆ ಹೆಂಗಸರು
ಹಾಽ ಬರಿತಲೆ ಹೆಂಗಸರು

ಬರಿತಲೆ ಹೆಂಗಸರು
ಎದೆ ಎದೆ ಬಡಕೊಂಡು
ಹಾಽ ಎದೆ ಎದೆ ಬಡಕೊಂಡು

ಹಾಽ ಎಲ್ಲಾ ಎಲ್ಲಾ ಎಲ್ಲಾಽ
ಎಲ್ಲಾಽವ ಕಳಕೊಂಡು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...