Home / ಕವನ / ಕವಿತೆ / ಗಿಳಿ ಮತ್ತು ಸೀತೆ

ಗಿಳಿ ಮತ್ತು ಸೀತೆ

ಹೇಳು ಗಿಳಿಯೆ ಹೇಳು ಇಂದೇಕೆ ನೀ ಮೌನ
ಕಣ್ಣೀರ ಸುರಿಸುತ್ತಾ ಕೊರಗುವೇಕೆ!
ಇಷ್ಟು ವರ್ಷಗಳಿಂದ ಜೊತೆ ಗೆಳತಿಯಾಗಿದ್ದ
ಸೀತೆ ಮಿಥಿಲೆ ತೊರೆದು ಹೋಗುವಳೆಂದೆ!

ಸೀತೆ ಮನ ತುಂಬಿದವ ಶ್ರೀರಾಮ
ಶ್ರೀರಾಮ ವರಿಸಿದ ಹೆಣ್ಣು ಸೀತೆ
ಇಬ್ಬರಾಸೆಗಳಿಂದು ಕೈಗೂಡಿ ಅವರಿಂದು
ಸತಿಪತಿಗಳಾಗಿಹುದು ದೈವಲೀಲೆ |

ಇಂದು ಮಿಥಿಲಾಪುರವೂ ವೈಭವದಿ ಮಿಂಚಿಹುದು
ಅರಮನೆಯ ತುಂಬೆಲ್ಲಾ ಜನಸಾಗರ
ಜನಕರಾಜನ ಕಣ್ಣು ತುಂಬಿ ನಿಂತಿದೆ ಇಂದು
ಸಂತೋಷದಲಿ ದುಃಖ ಕೂಡಿಕೊಂಡು |

ನೋಡು ಗಿಳಿಯೆ ನಿನ್ನ ಆ ಗೆಳತಿ ಸೀತೆಯನು
ಹಿರಿಯ ಸಂತಸದಲ್ಲು ದುಃಖಭಾವ
ಚಿಗುರು ಬೆರಳುಗಳಿಂದ ತಂದೆ ಕಣ್ಣೀರನ್ನು
ಒರೆಸಿ ನಗಿಸುತಲಿಹುದು ಕಾಣದೇನು!

ಸಲಹಿದಪ್ಪನ ಹೊರತು ಆತ್ಮೀಯರಾರಿಹರು!
ನೀನಲ್ಲವೇ ಅವಳ ಪ್ರೀತಿ ಗೆಳತಿ!
ನಿನ್ನ ಮರೆಯುವಳೇನೇ, ನಿನ್ನ ಬಿಟ್ಹೋಗುವಳೆ!
ತವರು ನೆನಪಿನ ಒಡವೆ ನೀನೆ ತಾನೆ!

ನೋಡು ಅರಮನೆ ಮುಂದೆ ಕನಕರಥ ನಿಂತಿಹುದು
ಶ್ರೀರಾಮ ಅದರಲ್ಲಿ ಕುಳಿತಿಹನು
ಕಣ್ಣ ಕುಡಿ ನೋಟದಲೆ ರಾಮ, ಸೀತೆಯ ಕರೆವ
ನಿನಗೆ ಆಯಿತೆ ಲಜ್ಜೆ! ಘಾಟಿ ನೀನು|
ನಿನ್ನ ಇನಿದನಿ ನಿನ್ನ ಇಂಪಾದ ಸವಿನುಡಿಯ
ಎಲ್ಲೂ ಕೇಳದೆ ಸೀತೆ ಹುಡುಕುತಿಹಳು
ಬಾ ನನ್ನ ತೊಡೆವೇರು ಎನುತ ಕರೆಯುತಿಹಳು
ಪಿಸುಮಾತು ಮೆಲು ದನಿಯ ದಾಟಿಯಲ್ಲಿ|

ನವ ದಂಪತಿಗಳ ನಡುವೆ ನನ್ನ ಇರುವಿಕೆ ಸರಿಯೇ
ಎಂದೇಕೆ ಬೇಸರ ಪಡುತಲಿರುವೆ ||
ಸೀತೆ ಪ್ರತಿರೂಪದಲಿ ಆ ರಥದ ಕೆಳೆಯು ನೀನು
ಪಯಣಿಸಮ್ಮ ಗಿಳಿಯೆ ಮುಂದೆ ನೀನು !
ಬಾ ಗಿಳಿಯೆ ರಥವೇರು ಸೀತೆ ಕರೆಯುತಲಿಹಳು
ಹೊತ್ತಾಯ್ತು ಇನ್ನೇಕೆ ಚಿಂತೆ ನಿನಗೆ!
ಮೌನ ಬಿಡು ಸುತ್ತೆಲ್ಲ ಚೈತ್ರ ಚೆಲುವಿದೆ ನೋಡು
ಹಾಡುತ್ತ ನೀ ಸಾಗು ಹೆಮ್ಮೆಯಿಂದ |
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...