ಬರಹವೆಂಬ ಮುತ್ತು

ಪ್ರಿಯ ಸಖಿ,
ವ್ಯವಹಾರದ ಈ ಜಗತ್ತಿನಲ್ಲಿ ಸಾಹಿತ್ಯವೂ ವ್ಯಾಪಾರವಾಗುತ್ತಿರುವುದನ್ನು ನೋಡುತ್ತಿದ್ದೇವೆ. ತಾನು ಬರೆದ ಸಾಹಿತ್ಯದಿಂದ ತನಗೆ ಸಿಗುವ ಆತ್ಮತೃಪ್ತಿಗಿಂತ, ತನಗೆ ಸಿಗುವ ಹಣ, ಕೀರ್ತಿಯೇ ಮಾನದಂಡವೆನ್ನುವ ಸಾಹಿತಿಗಳನೇಕರು ಇದ್ದಾರೆ. ಇಂತಹವರನ್ನು ಕಂಡಾಗ ಧುತ್ತನೆ ನನ್ನನ್ನೊಂದು ಗೊಂದಲ ಕಾಡಲಾರಂಭಿಸುತ್ತದೆ. ಬರವಣಿಗೆ ಒಂದು ಹೊರಹಾಕುವ ತುರ್ತೋ ಅಥವಾ ಮಾರಾಟಕ್ಕಿಡುವ ಕಲೆಯೋ?

ಭಾವೋತ್ಕರ್ಷದ ತುರ್ತನ್ನು ಹೊರಹಾಕಲೊಂದು ಮಾರ್ಗ ಬರವಣಿಗೆ. ಆದರೆ ಆ ಪ್ರಾಮಾಣಿಕ ಪರಿಪಕ್ವತೆಗಾಗಿ ಕಾಯುವವರೆಷ್ಟು ಮಂದಿ? ಹಸಿಬಿಸಿ ಬೆಂದ ಭಾವಗಳನ್ನೇ ಹಾಳೆಯಲ್ಲಿ ಮೂಡಿಸಿ ಬರೆಯಲೇಬೇಕು ಬರೆದು ಕೀರ್ತಿ, ಹೆಸರು ಸಂಪಾದಿಸಬೇಕು. ಹಣ ಮಾಡಬೇಕು ಎಂಬ ವ್ಯಾವಹಾರಿಕ ಕಾರಣದಿಂದಲೇ ಬರೆಯುವವರು ಹಲವು ಮಂದಿ. ಎಲ್ಲರಿಗೂ ಬರೆವ ಕಲೆ ಸಿದ್ಧಿಸುವುದಿಲ್ಲವಾದರೂ ಸ್ಪಲ್ಪಮಟ್ಟಿನ ಪ್ರಯತ್ನದಿಂದ ಏನೋ ಒಂದು ಬರೆಯಬಹುದು. ‘ಪ್ರತಿಭೆ ಇದ್ದವರು, ಯಾವುದಕ್ಕೂ ಕಾಯಬೇಕಿಲ್ಲ ಬರೆದು ಬಿಸಾಡಿದರೆ ಸಾಕು’ ಎಂಬ ವಿತಂಡವಾದ ಬೇರೆ. ಇಂತಹ ಕಳಪೆ ಸಾಹಿತ್ಯದ ನಡುವೆಯೂ ಬಲವಂತಕ್ಕೆ ಹೊರಹೊಮ್ಮಿಸದ, ತಂತಾನೇ ಹೊರಹೊಮ್ಮಿದ ಶುದ್ಧ ಸಾಹಿತ್ಯ ‘ಸೃಜನಶೀಲ ಬರಹಗಳು’ ಮೂಡುತ್ತಲೇ ಇರುತ್ತವೆ. ಇವು ಕಳಪೆ ಸಾಹಿತ್ಯದಂತೆ ಕ್ಷಣಕಾಲವಷ್ಟೇ ಇದ್ದು ಮರೆಯಾಗದೇ ವರ್ಷಗಳು ಕಳೆದರೂ ನೆನಪಿನಲ್ಲಿ ಉಳಿಯುತ್ತವೆ. ಹಾಗೆಂದೇ ಶೇಕ್ಸ್‍ಪಿಯರ್, ಎಲಿಯಟ್, ಪಂಪ, ಕುವೆಂಪು, ಬೇಂದ್ರೆ, ಮುಂತಾದ ಗಟ್ಟಿ ಸಾಹಿತಿಗಳು ತಾವಳಿದಿದ್ದರೂ ತಮ್ಮ ಸಾಹಿತ್ಯದಿಂದ ನಮ್ಮಲ್ಲಿ ಹಸುರಾಗಿಯೇ ಇದ್ದಾರೆ.

ಹಾಗಿದ್ದರೆ ನಿಜವಾದ ಸಾಹಿತ್ಯದ ಉದಯ ಹೇಗಾಗುತ್ತದೆ ಎಂಬುದನ್ನು ಕವಿ ಜಿ. ಎಸ್. ಶಿವರುದ್ರಪ್ಪನವರು ತಮ್ಮ ‘ಕಾವ್ಯೋದಯ’ ಎಂಬ ಕವನದ ಕೊನೆಯ ಸಾಲುಗಳಲ್ಲಿ ಹೀಗೆ ಹೇಳಿದ್ದಾರೆ. ಇಲ್ಲವರು ಕಾವ್ಯವನ್ನು ಕುರಿತು ಹೇಳಿದ್ದರೂ ಎಲ್ಲ ಬರಹಗಳಿಗೂ ಈ ಮಾತು ಅನ್ವಯಿಸಬಹುದು.

ಕೊತ ಕೊತ ಕುದಿವ ಹುಡುಕಾಟಗಳ ನಡುವೆ
ಮಾತಿರದ ಮೌನದೊಳ
ಗಸ್ತವ್ಯಸ್ತವಾಗಿ ತೊಳಲಿದ್ದ ಅಶರೀರಭಾವ
ನಿಧಾನಕ್ಕೆ ಪಾಕವಾಗುತ್ತ
ಶಬ್ದಾರ್ಥ ಸಂಪುಟದೊಳಗೆ ಮೊಳೆವ ಮುತ್ತಾಗಿ
ಮಿನುಗುತಿದೆಯಲ್ಲ

ಹೀಗೆ ಶುದ್ಧ ಭಾವಗಳನ್ನು ಅಭಿವ್ಯಕ್ತಿಸಿ, ಗಟ್ಟಿಗೊಳಿಸಿ, ಹರಳಾಗಿಸಿ ಒಂದು ಮುತ್ತು ಮಾಡಿದರೆ ಸಾಕು. ಅದಲ್ಲದೇ ಹಣ, ಕೀರ್ತಿ, ಪ್ರತಿಷ್ಠೆಗಾಗಿ ಮತ್ತೇನೋ ಕ್ಷುಲ್ಲಕ ಕಾರಣಕ್ಕಾಗಿ ಬಲವಂತಕ್ಕೆ ಬರೆದ ಬರಹಕ್ಕೆ ಏನು ಬೆಲೆ? ಹೇಳುವೆಯಾ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೈ ಕೈ ಎಲ್ಹೋಯ್ತು?
Next post ದೇವ ನೀನೈತಂದೆ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…