ಮೌನದೊಳಗೆ

ಮೌನದೊಳಗೆ

ಪ್ರಿಯ ಸಖಿ,

ಇದು ಮಾತಿನ ಪ್ರಪಂಚ. ಇಡೀ ವಿಶ್ವವೇ ಶಬ್ದಮಯ. ಪದಗಳನ್ನು ಸೃಷ್ಟಿಸಿ, ಭಾಷೆಯನ್ನು ರೂಢಿಸಿ, ಮಾತನಾಡಲು ಕಲಿತ ಕ್ಷಣದಿಂದ ಮನುಷ್ಯನ ಜೀವನ ಶೈಲಿಯೇ ಬದಲಾಗಿ ಹೋಯಿತೆನ್ನುತ್ತದೆ ಇತಿಹಾಸ. ಅವನ ಎಲ್ಲ ಕ್ರಿಯೆಗಳಿಗೂ ಮಾತೇ ಮೂಲಮಂತ್ರವಾಗಿ ಹೋಯಿತು. ಇಂದು ಮಾತಿಲ್ಲದ ಪ್ರಪಂಚವನ್ನೊಮ್ಮೆ ಕಲ್ಪಿಸಿಕೊಂಡರೇ ಭಯವಾಗುತ್ತದೆ. ಮಾತು ಸಂವಹನದ ಅತ್ಯುತ್ತಮ ಮಾಧ್ಯಮವೂ ಹೌದು. ಆದರೆ ಮಾತು ಸೃಷ್ಟಿಸಿರುವ ಅನರ್ಥಗಳು ಆದ ಅಪಾರ್ಥಗಳನ್ನು ಲೆಕ್ಕಿಸುತ್ತಾ ಕುಳಿತರೇ ಅದೇ ಒಂದು ದೊಡ್ಡ ಪುರಾಣವಾಗಬಹುದು.

ಮಹಾಮಾತಿನ ಮನೆಯಾಗಿರುವ ಈ ಪ್ರಪಂಚದಲ್ಲಿ ಮೌನಕ್ಕೆ ಎಲ್ಲಿ ಬೆಲೆ ? ಎಲ್ಲಿ ನೆಲೆ ? ಎಂದು ಕ್ಷಣ ಹೊತ್ತು ಯೋಚಿಸಿದರೆ, ಮಾತಿಗಿಂತ ಮೌನದಿಂದಲೇ ಈ ಜಗತ್ತಿಗೆ ಆಗಿರುವ ಅನುಕೂಲಗಳು ಅಪರಿಮಿತ ಎಂದು ಗೋಚರಿಸುತ್ತಾ ಹೋಗುತ್ತದೆ. ಯೋಚಿಸಲು ಸಾಧ್ಯವಿರುವುದು, ವಿವೇಚಿಸಲು ಸಾಧ್ಯವಿರುವುದು, ಹೊಸತನ್ನ ಸೃಷ್ಟಿಸಲು ಸಾಧ್ಯವಿರುವುದು, ಉಪಕರಣಗಳು ಸೃಷ್ಟಿಯಾಗಿರುವುದು, ಕಥೆ, ಕಾವ್ಯ ಹುಟ್ಟುವುದು, ನಮನ್ನು ನಾವು ಅರಿತುಕೊಳ್ಳುವುದು, ಸಂಬಂಧಗಳನ್ನು ವಿಶ್ಲೇಷಿಸುವುದು ತನ್ನ ಹಾಗೂ ಇತರರ ಮುಖವಾಡಗಳನ್ನು ಅರ್ಥೈಸಲು ಸಾಧ್ಯವಿರುವುದು, ತಪ್ಪುಗಳಿಗೆ ಪಶ್ಚಾತ್ತಾಪ ಪಡುವುದು, ಆಂತರಿಕವಾಗಿ ಬೆಳೆಯುವುದು, ಭಾವನೆಗಳು ಮಥಿಸಿ ಮಥಿಸಿ ಗಟ್ಟಿ ಮಾತಾಗಲು ಸಿದ್ಧತೆ ನಡೆವುದು… ಇನ್ನೂ ಎಷ್ಟೆಷ್ಟೋ ಪಟ್ಟಿ ಮುಗಿಯುವುದೇ ಇಲ್ಲ. ಎಲ್ಲಾ ಸಾಧ್ಯವಾಗಿರುವುದು ಮೌನದಿಂದಲೇ ಮನುಷ್ಯನಿಗೆ ಮಾತು ಎಷ್ಟು ಮುಖ್ಯವೋ ಮೌನವೂ ಅಷ್ಟೇ ಮುಖ್ಯ. ಮಾತಿನಿಂದ ಸಾಧಿಸಲಾಗದ ಎಷ್ಟೊಂದನ್ನು ಮೌನದಿಂದ ಸಾಧಿಸಲು ಸಾಧ್ಯವಿರುವುದೇ ಮೌನದ ಮಹತ್ತಿಗೆ ಕಾರಣವಾಗಿದೆ. ಮೌನವೆಂಬುದು ಒಂದು ರೀತಿಯ ತಪಸ್ಸು. ಸದಾ ಚಂಚಲವಾಗಿರುವ ಮನಸ್ಸನ್ನು ಹಿಡಿದಿರಿಸಿ ನಮಗೆ ಬೇಕೆನಿಸುವ ಒಂದು ವಿಷಯದ ಕುರಿತು ಕೇಂದ್ರೀಕರಿಸಿ, ಹೊರಗೆ ಮೌನವಾಗಿದ್ದರೂ ಒಳಗೇ ಚಿಂತನ ಮಂಥನ ನಡೆಸುವ ಕ್ರಿಯೆಯಿಂದ ಅನೇಕ ಸೃಜನಶೀಲ ಸೃಷ್ಟಿಗಳು ಮೂಡಬಹುದು. ಆದರೆ ಇದಕ್ಕೂ ಮಿಗಿಲಾದುದು ಒಳಗಣ ಮೌನ ಆ ಹೊರಗೂ ಮೌನವಾಗುಳಿದು, ತನ್ನ ಮನಸ್ಸಿನೊಂದಿಗೂ ಮೌನವಾಗುಳಿದ ಮೌನದ ಆ ಅಲೌಕಿಕ ಹಂತವನ್ನು ಕೆಲ ಕ್ಷಣಗಳಾದರೂ ಕಂಡುಕೊಂಡವ ನಿಜವಾದ ಋಷಿ ಎನ್ನುತ್ತಾರೆ ನಮ್ಮ ದಾರ್ಶನಿಕರು. ಈ ಹಂತವನ್ನು ತಲುಪುವುದು ಎಲ್ಲರಿಗೂ ಸುಲಭ ಸಾಧ್ಯವಲ್ಲ. ಮೌನದ ಬೆಲೆಯನ್ನು ಅರಿತವನು ಮಾತಿಗಿಂತ ಹೆಚ್ಚು ಮೌನವನ್ನು ಪ್ರೀತಿಸಲಾರಂಭಿಸುತ್ತಾನೆ. ಮೌನದಲ್ಲಿಯೇ ಹೊಸತನ್ನು ಹುಡುಕಲಾರಂಭಿಸುತ್ತಾನೆ. ಮೌನದಲ್ಲಿಯೇ ಇತರರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಾನೆ. ಮಾತಿಗಿರುವ ಶಕ್ತಿಗಿಂತ ನೂರು ಪಟ್ಟು ಶಕ್ತಿ ಮೌನಕ್ಕಿರುವುದನ್ನು ಕಂಡುಕೊಳ್ಳುವವನೇ ನಿಜವಾದ ಸುಖಿ ಎಂದು ನಮ್ಮ ಹಿರಿಯರು ಹೇಳಿದ ಮಾತು ಅರ್ಥಹೀನವಾದುದೆಂದು ನಂಬುವವರಿಗೆ ತಿಳುವಳಿಕೆ ನೀಡಲು ಹೋಗುವುದಕ್ಕಿಂತ ಮೌನವಾಗಿರುವುದೇ ಜಾಣತನವಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಲಭದ್ದು
Next post ಈಚಲ ಮರದಡಿ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys