Home / ಕವನ / ಕವಿತೆ / ಈಚಲ ಮರದಡಿ

ಈಚಲ ಮರದಡಿ

ಈಚಲ ಮರದಡಿ
ಈಶ್ವರ ಭಟ್ಟರು
ಧೋತರ ಹರಡಿ
ಕುಳಿತೇ ಬಿಟ್ಟರು

ಆಕಡೆ ನೋಡಿ
ಈಕಡೆ ನೋಡಿ
ಮೊಗೆದೇ ಬಿಟ್ಟರು
ಕುಡಿದೇ ಬಿಟ್ಟರು

ಏನದು ಗಡಿಗೆ
ಏನದರೊಳಗೆ
ಓಹೋ ಹುಳ್ಳಗೆ
ತಿಳಿಯಿತು ಮಜ್ಜಿಗೆ

ನೋಡಿದರುಂಟು
ಕೇಳಿದರುಂಟು
ಇಷ್ಟಕ್ಕೂ ಇದು
ಯಾರಪ್ಪನ ಗಂಟು
ಈಚಲ ನಂಟು
ನಮಗೂ ಉಂಟು

ಗಡ ಗಡ ಗಡಿಗೆ
ಗುಡು ಗುಡು ಗುಡುಗೆ
ಏರಿತು ಮೇಲೆ
ಇಳಿಯಿತು ಕೆಳಗೆ

ಮೆಲ್ಲನೆ ಎದ್ದರು
ಕಲ್ಲನು ಒದ್ದರು
ಬಿದ್ದರು ಎದ್ದರು
ಎಲ್ಲರ ಬಯ್ದರು

ಅಹ ತೂರಾಡಿ
ಅಹ ಹಾರಾಡಿ
ನಿಂತು ನಗಾಡಿ
ಪದಗಳ ಹಾಡಿ
ನಡೆದರು ನಿಂತರು
ಹಾಗೇ ಕುಂತರು
ತಲೆ ತಿರುಗಾಡಿ
ನೆಲ ಅದುರಾಡಿ
ಮೈ ಹೊರಳಾಡಿ
ಮಂಗ್ಳೂರ್‌ ಗಾಡಿ
ಬೆಂಗ್ಳೂರ್ ಗಾಡಿ
ಮುಂಬಯಿ ಗಾಡಿ
ಎಲ್ಲ ಲಗಾಡಿ
ತಿಕ ಮುಕ ರಾಡಿ

ತೈ ತಕ ತೈ ತಕ
ನೋಡಿತು ಲೋಕ
ತಿರುಗಿಸಿ ಮುಕ
ನಕ್ಕಿತು ಪಕ ಪಕ

ಇವರೊ! ದಿಗಂಬರ
ಕುಣಿದರು ಬಂಬರ
ಆ ಮರ ಈ ಮರ
ಈಚಲ ಮರ ಮರ

ತೈ ತಕ ತೈ ತಕ
ತದಿಗಿಣ ತೋಂ ತಕ
ತಾರಕ ತೋರಕ
ಬೆಳಗಿನ ತನಕ

ಈಚಲ ಮರವೇ
ಈಚಲ ಮರವೇ
ಈ ಛಲ ಸರಿಯೇ
ಇಂಥಾ ಮರವೇ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...