ಜಾತ್ರೆಯಲ್ಲಿ ಶಿವ


ಅದೇ ಆ ಶಿವನ ವೇಷಧಾರಿ
ನಾನಿದ್ದ ಬಸ್ಸಿನಲ್ಲಿಯೇ ಇದ್ದ
ನನ್ನೊಂದಿಗೆ ಬಸ್ಸಿನಿಂದಿಳಿದ

ತೇಗದ ಮರದ ಹಾಗೆ
ಉದ್ದಕೆ ಸಪೂರ
ಮೋಡದ ಮೈ ಬಣ್ಣ, ಮಿಂಚಿನ ನಗು
ಮುಡಿಗೆ ತಗಡಿನ ಚಂದ್ರನನು ಮುಡಿದಿದ್ದ
ತೋಳಿಗೆ ಕಣಗಿಲೆಯ ಹೂವು
ಕೊರಳಲ್ಲಿ ಪ್ಲಾಸ್ಟಿಕ್ ಹಾವು
ಹುಲಿ ಚರ್ಮದ ಚಿತ್ರವಿರುವ
ಮಾಸಿದ ಹಳದಿ ಬಣ್ಣದ ಅರ್ಧ ಲುಂಗಿ
ಹವಾಯಿ ಚಪ್ಪಲಿ ಧರಿಸಿದ್ದ…

ನನ್ನ ಬೆರಗಿಗೆ ಉತ್ತರ
ನೀಡುವವನಂತೆ
ಡಮರುಗ ನುಡಿಸಿ
ತ್ರಿಶೂಲ ಆಡಿಸಿ
ಕಾಲ್ಗೆಜ್ಜೆ ಗಲಗಲ ಕುಣಿಸಿ
ನ…ಶಿವ ಎಂದ


ನಾ…ಮುಂದೆ ಅವ…ಹಿಂದೆ
ಜಾತ್ರೆಯ ಕೌಂಟರಿನಲ್ಲಿ
ಟಿಕೀಟು ಕೊಳ್ಳುವಾಗಲೂ
ಬೆನ್ನ ಹಿಂದೆಯೇ ಇದ್ದ
ಗಿಲೀಟು ಒಡವೆಯಂಗಡಿಯಲ್ಲಿ

ಕಣ್ಣ ಮುಂದೆಯೇ ಬಂದ
ಫಳಫಳ ಹೊಳೆಯುವ
ಮೂಗುತಿಯನು ಅಂಗೈಯೊಳಗೆ
ಹೊರಳಾಡಿಸಿ
ಈ ವಜ್ರಕ್ಕೆಷ್ಟಪ್ಪಾ ಬೆಲೆ
ಎಂದು ಅಂಗಡಿಯಾತನ ಛೇಡಿಸಿದ

ಪುಗ್ಗೆಯಂಗಡಿಯಲ್ಲಿ ಒಂದೊಂದೂ
ಪುಗ್ಗೆಯ ಮೇಲೂ ಮೃದುವಾಗಿ ಕೈಯಾಡಿಸಿ
ಪರಪರ ಶಬ್ದಕ್ಕೆ ಕಿವಿಯಾನಿಸಿ
ಬಾಗಿಲು ದಾಟುವುದರೊಳಗೆ
ಠುಸ್ಸೆನ್ನುವುದೀ ಪುಗ್ಗೆ, ಜೊತೆಗೆ
ಹಿಗ್ಗಿನ ಬಗ್ಗೆ ಎಂದು ಅಲ್ಲೇ ಪದ ಕಟ್ಟಿ ಹಾಡಿ
ಒಂದು ಪೀಪಿ, ಒಂದು ವಾಚು ಪುಕ್ಕಟೆ ಪಡೆದ

ಬಣ್ಣ ಬಣ್ಣದ ಪರಕಾರಗಳ ತೆಗೆಸಿ
ಪೂರ ಅಂಗಡಿಯನೆ ಎಳೆದಾಡಿಸಿ
ಚೌಕಾಸಿ ಬೆಲೆಯಲ್ಲೇ
ಒಂದು ಗಜ ರವಿಕೆಯ ಬಟ್ಟೆ ಕೊಂಡ

ಕೆಂಪು ನೀರಿನ ಶರಬತ್ತಿನಂಗಡಿಯಲ್ಲಿ
ಗಿಣಿ ಶಾಸ್ತ್ರದವನೊಡನೆ ಹರಕು
ಛತ್ರಿಯ ಅಡಿಯಲ್ಲಿ…
ಕರಡಿ ಮಜಲು ಕುಣಿತದ
ಕರಡಿಯಾಸದವನೊಡನೆ
ಅಲ್ಲಿ…ಇಲ್ಲಿ…ಇಲ್ಲಿ…ಅಲ್ಲಿ
ಜಾತ್ರೆಯ ಉದ್ದಗಲ ಹಬ್ಬಿ ನಿಂತವನು
ಮೋಟು ಬೀಡಿಯ ಸೇದುತ್ತ
ಕಡಲೆಯ-ಪುರಿಯ
ಗುಡ್ಡವ ದಾಟಿ ಹೋದ


ಹೋದ ಎನ್ನುವಷ್ಟರಲ್ಲಿಯೇ
ಬತ್ತಾಸಿನ ಅಂಗಡಿಯಲ್ಲಿ
ಪರಿಚಿತ ನಗೆಯೊಡನೆ ಪ್ರತ್ಯಕ್ಷ!

ಮೆಲ್ಲನೆ ಬಳಿ ಸರಿ ಗೋಣ ಬಗ್ಗಿಸಿ
ಮಗ ಹಸಿದಿದ್ದಾನೆ-
ಹೆಂಡತಿಗೆ ಕಾಯಿಲೆ ಅಂದ
ಬಾಡಿದ ಮುಖ, ಬಸಿದಿತ್ತು ದುಃಖ

ಗಣಪ ಹಸಿದಿದ್ದಾನೆ
ಗಿರಿಜೆಗೆ ಕಾಯಿಲೆ…
ಹೆಂಡತಿ-ಮಕ್ಕಳಿಗಾಗಿ
ಶಿವನಲ್ಲದೆ ಭವಿ ಅಳುವನೆ?!

ಪುಟ್ಟ ಪರ್ಸಿನ ಮೂಲೆ ಮೂಲೆಯನು ತಡವಿ
ರುದ್ರನೊಡ್ಡಿದ ಬೊಗಸೆಗೆ
ಐದರ ನೋಟಿರಿಸಿ ಇಷ್ಟೇ ಅಂದೆ!

ಮಿಂಚಂತ ಹೊಳೆದು
ತಳಾಂಗು ತದಿಗಿಣ ತೋಂ ಎಂದು
ನಾಟ್ಯದ ಮಟ್ಟಿನಲಿ ಕುಣಿದು
ಅರ್ಧ ನಿಮೀಲಿತ ನೇತ್ರವಾಗಿ
ನಟರಾಜನ ಭಂಗಿಯಲ್ಲಿ ನಿಂತುಬಿಟ್ಟ!

ಬಿಟ್ಟ ಬಾಯಿ ಬಿಟ್ಟಂತೆಯೇ
ನೆಟ್ಟ ಕಣ್ಣು ನೆಟ್ಟಂತೆಯೇ
ಎರಡೂ ಕೈ ಜೋಡಿಸಿ
ಮೈದುಂಬಿ ನುಡಿದು ಬಿಟ್ಟೆ…

ಸಾಕ್ಷಾತ್ ಶಿವ…
ಸಾಕ್ಷಾತ್ ಶಿವ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವಿಲುಗರಿ – ೧೨
Next post ಸಾರ್‍ಥಕತೆ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys