ಶ್ರೀರಂಗಪಟ್ಟಣವು ಕೈಸೇರಿದ ಮೇಲೆ ಒಡೆಯರ ರಾಜ್ಯವು ಕ್ರಮವಾಗಿ ಬಳೆಯಿತು; ರಾಜ್ಯವು ಹೆಚ್ಚಿದಂತೆ ವೆಚ್ಚವೂ ಹೆಚ್ಚಿತು. ರಾಜಒಡೆಯರು ಉಪಾಯದಿಂದ ನಿರ್ವಹಿಸುತ್ತಿದ್ದರು. ಕಂಠೀರವ ಒಡೆಯರು ಹಣದ ತೊಂದರೆ ಬಂದಾಗ ಒಂದು ಉಪಾಯವನ್ನು ಮಾಡಿದರು; ಧನಿಕರೆಂದು ಹೆಸರಾದವರನ್ನು ಹಿಡಿದು ಅವರಿಂದ ಹೆಚ್ಚಾದ ದ್ರವ್ಯವನ್ನು ತೆಗೆದುಕೊಳ್ಳುತ್ತಿದ್ದರು. ಅರಸರು ಬಲಿಷ್ಟರಾಗಿದ್ದುದರಿಂದ ಅವರ ವಿರೋಧವನ್ನು ಕಟ್ಟಿಕೊಳ್ಳುವುದಕ್ಕೆ ಅಂತಹವರು ಹೆದರುತ್ತಿದ್ದರು. ಚಿಕ್ಕದೇವರಾಜ ಒಡೆಯರಿಗೆ ರಾಜ-ಭಾರದಲ್ಲಿ ಬೊಕಸವನ್ನು ತುಂಬಬೇಕೆಂದು ಬಲವಾದ ಆಸೆಯಾಯಿತು.

ಕಾಲಕಳೆಯುತ್ತ ಈ ದೊರೆಗೆ ಹಣದ ಯೋಚನೆಯೇ ಬಹಳವಾಯಿತು. ರಾಜಾದಾಯ ಹೆಚ್ಚುವಂತೆ ಮೊದಲು ಈ ದೊರೆಗಳು ನೆಲಗಂದಾಯವನ್ನು ಹೆಚ್ಚಿಸಿದರು. ಆಗ ಕೆಲವು ರೈತರು “ಅರಮನೆಗೆ ಕೊಡತಕ್ಕ ಕಂದಾಯ, ವಾರದ ದವಸ ಮುಂತಾದುವನ್ನು ನಾವು ಕೊಡುವದಿಲ್ಲ. ಕಾಡಭೂಮಿಯನ್ನು ಬಸವಣ್ಣನು ಉಳುತ್ತಾನೆ. ದೇವೇಂದ್ರನು ಮಳೆಯನ್ನು ಕರೆಯುತ್ತಾನೆ, ನಾವು ಕಷ್ಟ ಪಟ್ಟು ಪೈರುಮಾಡಿ ನಿಮಗೇತಕ್ಕೆ ಕೊಡಬೇಕು” ಎನ್ನುತ್ತ ಕಂದಾಯವನ್ನು ಸಲ್ಲಿಸದೆ ದಂಗೆಯೇಳುವ ಯೋಚನೆಯಲ್ಲಿದ್ದರು. ಆಗ ಒಡೆಯರವರು ಮುಖ್ಯರಾದ ರೈತರನ್ನು ಹಿಡತರಿಸಿ ಶಿಕ್ಷೆಗೆ ಗುರಿ ಮಾಡಿಸಿದರು; ದಂಗೆಯು ಏಳುವುದಕ್ಕೆ ಮೊದಲೇ ಅಡಗಿ ಹೋಯಿತು.

ನೆಲಗಂದಾಯವೇ ಅಲ್ಲದೆ ಇತರ ಅನೇಕ ಮಾರ್ಗಗಳಲ್ಲಿ ಈ ದೊರೆಗಳು ಹಣವನ್ನು ಶೇಖರಮಾಡಿದರು. ನಿತ್ಯವೂ ೨೦೦೦ ವರಹಗಳು ನಾಮತೀರ್ಥದ ವೇಳೆಗೆ ಅರಮನೆಗೆ ಸಂದಾಯವಾಗತಕ್ಕದ್ದೆಂದು ಕಟ್ಟಳೆಮಾಡಿದ್ದರು; ಎಂದಾದರೂ ಹಣ ಬರುವುದು ಸಾವಕಾಶವಾದರೆ ದೊರೆಗಳು ರಾಮಾಯಣ ಪಾರಾಯಣದಲ್ಲಿಯೇ ಕಾಲ ಕಳೆದು ೨೦೦೦ ವರಹ ಬಂದ ಬಳಿಕ ಅವುಗಳನ್ನು ಖಾಸಾ ಬೊಕ್ಕಸಕ್ಕೆ ಕಳುಹಿಸಿ ಅನಂತರ ಆರೋಗಣೆಯನ್ನು ಒಪ್ಪಿಸಿಕೊಳ್ಳುತ್ತಿದ್ದರು.

ಇದರಿಂದ ಇವರಿಗೆ ನೆರೆನಾಡುಗಳಲ್ಲಿ ಲೋಭಿಗಳೆಂಬ ಹೆಸರು ಸಾಧಾರಣವಾಯಿತು. ಮಧುರೆಯ ರಾಜ್ಯದಲ್ಲಿ ಚಿಕ್ಕದೇವರಾಜ ಒಡೆಯರ ಹೆಸರನ್ನು ಹಂಗಿಸುವಂತಹ ಹಾಡುಗಳು ಜನರ ಬಾಯಿಗಳಲ್ಲಿ ಆಡುತ್ತಿದ್ದುವು; ಏಕೆಂದರೆ ಮಧುರೆಯಲ್ಲಿ ಅದೇ ಕಾಲದಲ್ಲಿ ಆಳುತ್ತಿದ್ದ ಮಂಗಮ್ಮನೆಂಬಾಕೆಯು ಅನೇಕ ಧರ್ಮ ಕಾರ್ಯಗಳನ್ನು ಮಾಡಿಸಿ ಔದಾರ್ಯಕ್ಕೆ ಪ್ರಸಿದ್ದಿಯಾಗಿದ್ದಳು. ಚಿಕ್ಕದೇವರಾಜ ಒಡೆಯರು ಹಣವನ್ನು ಸಂಪಾದನೆ ಮಾಡುವುದರಲ್ಲಿ ಇಂಗ್ಲೆಂಡಿನ ೭ನೆ ಹೆನ್ರಿಯಂತಿದ್ದರು. ಅವರಿಗೆ ಈ ರೀತಿ ಕೆಟ್ಟ ಹೆಸರು ಬಂದರೂ ಅವರು ಗಳಿಸಿದ ಹಣದಿಂದ ರಾಜ್ತವು ಭದ್ರವಾಯಿತು.
*****
[ವಂಶರತ್ನಾಕರ ಪುಟ ೧೨೧, ೧೨೪; ವಂಶಾವಳಿ ಪುಟ ೧೨೩, ೧೨೬; ಸತ್ಯನಾಥಯ್ಯರ್ರವರ ಮಧುರೆ ನಾಯಕರ ಚರಿತ್ರೆ ಮತ್ತು ಹೊಸ ಗೆಜಟಿಯರ್]