Home / ಕವನ / ಕವಿತೆ / ಎಲೆ ಸಾವೇ ನೀನೇಕೆ ಜೀವಂತ?

ಎಲೆ ಸಾವೇ ನೀನೇಕೆ ಜೀವಂತ?

ಬಿದ್ದ ಮರಗಳ ಬುಡಕ್ಕೆ ಹತ್ತಿದ ಗೆದ್ದಲು
ನಿಗಿ ನಿಗಿ ಕೆಂಡಕ್ಕೆ ಕಣ್ಣೀರು ಬಿದ್ದು ಬರಿ ಇದ್ದಿಲು
ದಾರಿ ಬದಿಯಲ್ಲಿ ದುಗುಡ ತುಂಬಿದ ಗಿಡ
ಮೇಲೆ ನೋಡಿದರೆ ನಡುಗುತ್ತಿರುವ ಮೋಡ.

ಬಿದ್ದ ಮನೆಯ ಜಂತೆಗಳಲ್ಲಿ ಕಂತೆಕಂತೆ ಕತೆಗಳು
ಸಂತೆ ಗದ್ದಲದ ನಡುವೆ ಮೌನಕವಿತೆಗಳು
ರಕ್ಕೆ ಸುಟ್ಟ ಹಕ್ಕಿಯೊಳಗೆ ನಿಂತ ನಾದಗಳು
ಬೇರಲ್ಲೇ ಬೋರಲಾಗಿ ಬಿದ್ದ ಜೀವಬಳ್ಳಿಗಳು.

ಎಲ್ಲಿ ಹೋದರು ಅವರು ಎತ್ತಿ ಆಡಿಸಿದವರು?
ತೋಳ ತುಂಬ ಭಾವ ತುಂಬಿಕೊಂಡ ಜನರು!
ಬಂದೆಯಾ ಮಗುವೆ ಈ ನೆಲದ ನಗುವೆ
ಎನ್ನುತ್ತ ಮನದುಂಬಿ ಹಾಡಾಗಿ ಮಿಡಿದವರು
ಮನೆತನವ ಮೀರಿ ಗೆಳತನದ ಹಣತೆಯಲ್ಲಿ
ಉರಿದು ಕರಕಾದ ಹಟ್ಟಿಯ ಅಜ್ಜಂದಿರು
ಮುಟ್ಟಿ ಮಲ್ಲಿಗೆ ಮಾಡಿದವರು.

ಎಲೆ ಸಾವೇ ನೀನೇಕೆ ಜೀವಂತ?
ಎಲ್ಲರ ಜೀವ ಕಳೆಯುವ ಧಾವಂತ!
ಭೂಮಿಯೊಳಗಿಂದ ಎದ್ದುಬರುವೆ
ಆಕಾಶದಿಂದ ಬಿದ್ದು ಸುರಿವೆ
ಬೆಂಕಿಯಾಗಿ ಬಿರುಗಾಳಿಯಾಗಿ
ಹರಿವ ನೀರೊಳಗಿನ ಉರಿಯಾಗಿ
ಜೀವ ಕಳೆಯುತ್ತಲೇ ಜೀವಕಳೆಯಾಗುತ್ತಿರುವೆ.

ಹೊಕ್ಕುಳಲ್ಲಿ ಹುಟ್ಟಿದ ಸಾವೇ
ಬಳ್ಳಿಗೆ ಕೊಳ್ಳಿಯಿಡುವುದು ತರವೆ?
ಮಗುವಿನ ಮೊದಲ ಅಳು
ನಗುವಾಗುವ ಮೊದಲೇ
ಸಿಡಿಯಾಗಿ ಹಿಡಿಯುವ ಉಡವೇ,
ಬೆನ್ನು ಬಿಡದ ಬಾಳ ಗಡುವೇ,
ಮಾತುಗಳನ್ನು ಮೌನದಲ್ಲಿ ಒಸಗುತ್ತೀಯ
ನಗುವನ್ನು ನಡುವಲ್ಲೇ ಕತ್ತರಿಸುತ್ತೀಯ
ಹಾವಿನ ಸೇಡಿಗೆ ಹತ್ಯೆಯಾಗುತ್ತೀಯ
ನೋವಿನ ನೇಣಿಗೆ ಆತ್ಮಹತ್ಯೆಯಾಗುತ್ತೀಯ
ಪೊಲೀಸರ ಗುಂಡಾಗುತ್ತೀಯ
ಹೆಣ್ಣಿಗೆ ಗಂಡಾಗುತ್ತೀಯ
ಕುರ್ಚಿಯಲ್ಲಿ ಕೂತ ಭರ್ಜಿಯಾಗುತ್ತೀಯ
ಎಲ್ಲರೊಳಗಿದ್ದೂ ಎದುರುಬದರಾಗುತ್ತೀಯ
ನೀನಲ್ಲವೆ ನಿಜವಾದ ಆತ್ಮ!
ಸಾವಿಲ್ಲದ ಅಂತರಾತ್ಮ!

ಸಾವು ಶಿಖರವಾಗಿ ಪರ್ವತಾರೋಹಿಗಳೇ ಎಲ್ಲ
ಆಮ್ಲಜನಕ ಯಾರ ಬಳಿಯಲ್ಲೂ ಇಲ್ಲ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...