Home / ಕವನ / ಕವಿತೆ / ದಾಸರೆಂದರೆ ಪುರಂದರ ದಾಸರಯ್ಯ

ದಾಸರೆಂದರೆ ಪುರಂದರ ದಾಸರಯ್ಯ

ಸ್ವಾಮಿ ಪುರಂದರರೆ
ಮಾತೆಲ್ಲ ಸ್ಫಟಿಕ ಮಣಿಮಾಲೆ ಎನ್ನಿಸುವಂತೆ
ಉಪನಿಷತ್ತಿನ ತಿರುಳೆ ಅರಳಿತೆನ್ನಿಸುವಂತೆ
ಚಳಿಯ ಕೆನ್ನೆಯ ಬಿಸಿಲು ನೇವರಿಸಿತೆಂಬಂತೆ
ನುಡಿದ ಋಷಿವರರೆ
ಎಲ್ಲಿ ಪಡೆದಿರಿ ನೀವು ಇದ್ದಕಿದ್ದಂತೆಯೇ
ನಭದೆತ್ತರಕೆ ನುಡಿವ ಇಂಥ ವರವ ?
ಹೇಗೆ ಪಡೆದಿರಿ ಸ್ವಾಮಿ ಎದೆಹುಣ್ಣ ಮಾಯಿಸಿ
ಜಗವ ಸಂತೈಸುವ ಇಂಥ ಸ್ವರವ ?
ಹೊರಳಿದ್ದು ಹೇಗೆ ನೀವು ಆಲ್ಲಿಂದ ಇಲ್ಲಿಗೆ,
ಕೋಟಿವರಹದ ಕೋಟೆಯಿಂದ ರಥಬೀದಿಗೆ?

ಎಲ್ಲಿ ಏನಾಯಿತು? ನಿಜಘಟನೆ ತಿಳಿಸಿ
ನಿಮಗೆ ಮಿಂಚಿದ ದಾರಿ ನಮಗಷ್ಟು ಉಳಿಸಿ
ನೆಚ್ಚಿದ್ದ ನಾಗನಿಧಿ ಕಚ್ಚಿ ಕೈಕೊಟ್ಟಿತೆ,
ಸುಖದ ಭ್ರಮೆಯ ಪಿಶಾಚಿ ಕೆಳಹಾಕಿ ಮೆಟ್ಟಿತೆ?
ಇರುವುದನು ಬಿಟ್ಟು ಇರದುದರೆಡೆಗೆ ತುಡಿದಿರಿ ಯಾಕೆ?
ಏನಾಯಿತು ಸ್ವಾಮಿ ಏನಾಯಿತು,
ಗಜಬಟ್ಟೆ ಹೇಗೆ ಬಾನಾಯಿತು?
ಸಿರಿಯ ಜರಿಸೆರಗ ನಾಟ್ಯಕ್ಕೆ ಕಣ್ ಕೋರೈಸಿ
ಗರಹೊಡೆದ ಹಾಗೆ ನಿಂತಿದ್ದ ನಾಯಕರೆ,
ಹೇಗೆ ಒಡೆದಿರಿ ಹರಿಗು ನಿಮಗೂ ನಡುವೆ ಇದ್ದ
ಮಣಿ ಹರಳ ಗೋಡೆಯ ?
ಹೇಗೆ ಮುರಿದಿರಿ ಹೇಳಿ ನಾನೆಂಬ ಮಾಯೆಯ
ಮದ್ದಾನೆ ದಾಡೆಯ?

ಏನೋ ವದಂತಿ ನಡುವೆ ಸಿಕ್ಕು ನಿಜಸಂಗತಿ
ದಂತಕಥೆಯಾಗಿದೆ ಸತ್ಯ ತಿಳಿಸಿ
ಏನೋ ಪವಾಡ ನಡೆದು ಬೆಚ್ಚಿ ಹರಿಚರಣಕ್ಕೆ
ಶರಣು ಹೋದಿರಿ ಎಂಬ ಸುಳ್ಳ ಅಳಿಸಿ.
ಸಲ್ಲದ ಪವಾಡಗಳ ಟೊಳ್ಳು ಚುಚ್ಚುವ ಮದ್ದು
ನಿಮ್ಮಲೆ ಇತ್ತು.
ತರ್ಕ ಶಂಕೆಗಳೆ ಗಟ್ಟಿ ವರ್ತಕನ ಗುಟ್ಟು
ಏನೋ ಸಂಕಟದ ಒಳಕೋಣೆ ಕದ ತೆರೆದು.
ಮಿಥ್ಯೆ ತನ್ನ ಕುರೂಪ ತೋರಿಸಿತ್ತೆ?
ಆ ಮುಹೂರ್ತಕ್ಕೇ ತುಡಿದು ಆಕಾಶ ಬಾಯ್ತೆರೆದು
ಗುಡುಗು ಸತ್ಯದ ದುಡಿಯ ಬಾರಿಸಿತ್ತೆ?

ಒಳ್ಳಿತೇ ಆಯಿತೆಂದಿರಿ ಆದದ್ದೆಲ್ಲ
ಆದದ್ದಾದರೂ ಏನು?
ಹಮ್ಮು ಬಿಮ್ಮನ್ನೆಲ್ಲ ಊರ ಮೋರಿಗೆ ತೂರಿ
ದಂಡಿಗೆ ಬೆತ್ತ ಹಿಡಿದದ್ದು ಹೇಗೆ?
ಸೆರಯಿಡಲು ಬಂದವರೆ ಬಿಡುಗಡೆಗೆ ಸಲಿಸಿದರೆ
ಮುಗಿಲ ಮದ್ದಲೆಗೆ ಕುಣಿದಿತ್ತೆ ಸೋಗೆ?

ಆಶ್ಚರ್ಯವೂ ಅಲ್ಲ ಆಕಸ್ಮಿಕವೂ ಅಲ್ಲ
ಆದ ರೂಪಾಂತರ
ಸಾಹಿತ್ಯ, ಸಂಗೀತ-ಒಳಗೆ ಕಡಲೆರಡೂ
ಅಪ್ಪಳಿಸಿ ದಡಕ್ಕೆ ಬಡಿದು
ಮೊರೆದಿದ್ದುವಲ್ಲವೆ?
ಬಡಿತಕ್ಕೆ ರತ್ನಪಡಿಯಂಗಡಿಯ ತಳ ಅದುರಿ
ದಡಬಡಿಸಿತ್ತಲ್ಲವೆ?
ಸರಸ್ವತೀ ಸ್ತನವೆರಡೂ ಧಾರಾಳ ಸುಧೆಯುಣಿಸಿ
ಓಲೆ, ತಂಬೂರಿ ಕರೆದಿದ್ದುವಲ್ಲವೆ?
ಹುಟ್ಟು ಪ್ರತಿಭೆ ಹೆದೆಯ ಬಿಗಿಯಲೆಂದೇ ವಂಶ
ಭಾಗವತ ದಂಡ ಕೈಗೆ ದಾಟಿಸಿತ್ತಲ್ಲವೆ?
ಹೂಡೇ ಬಿಟ್ಟಿರಿ ಹೆದೆಗೆ ಯಾವ ಎಗ್ಗಿಲ್ಲದೆ
ನಾರಾಯಣಾಸ್ತ್ರ
ಮೊದಲು ಸುಟ್ಟಿತು ಅದು ರತ್ನಪಡಿಯಂಗಡಿ
ಆಸ್ತಿ ಕ್ರಯಪತ್ರ!

ತಿರುಗಿದಿರಿ ಊರೂರು
ಮನೆಮನೆಗು ಕಲ್ಪತರು ಸಸಿಯ ಹಂಚುತ್ತ
ಹರಿನಾಮ ಹಾಡಿ ಪಡೆದನ್ನ ಭುಜಿಸುವ ನೆಪದಿ
ಭಕ್ತಿಯೋಡಿನಲಿ ‘ಅಹಂ-ಬೀಜ’ ಹುರಿಯುತ್ತ,
ಕಳಚಿದಿರಿ ಕೊರಳಿಂದ ಹೆನ್ನು ಹೊನ್ನಿನ ಕುಣಿಕೆ;
ಬಿದ್ದು ಫಟ್ಟೆಂದವು ಎಷ್ಟೋ ಜನ್ಮಗಳಿಂದ
ಹೆಗಲೇರಿಕೊಂಡಿದ್ದ ಮಣ್ಣಕುಡಿಕೆ.

ಕೆರೆಯ ನೀರನು ಕೆರೆಗೆ ಚೆಲ್ಲಿದಿರಿ, ಜೊತೆಗೇ
ವರವ ವಡೆದವದಂತೆ ಹಾಡಿದಿರಿ ಕೂಡ
ಈಸಿದಿರಿ ಇದ್ದು ಜೈಸಿದಿರಿ ಜೊತೆಗೇ
ಹರಿಭಕ್ತಿ ರಸದಲ್ಲಿ ತೊಯಿಸಿದಿರಿ ನಾಡ.
ಕಾಣಿಸದೆ ಕರೆವ ದನಿಯತ್ತ ಮುಗಿದಿರಿ ಕೈಯ
‘ದಾಸರೆಂದರೆ ಪುದಂದರ ದಾಸರಯ್ಯ’
*****

Tagged:

One Comment

  • ನನಗೂ ತುಂಬ ಆಪ್ತರಾದ ದಾಸಕವಿವರೇಣ್ಯ ಪುರಂದರರ ವ್ಯಕ್ತಿತ್ವ ಮತ್ತು ಚರಿತ್ರೆಯ ಮಹಿಮೆಯನ್ನು ಅಷ್ಟೇ ಆಪ್ತವಾಗಿ, ಪ್ರೀತಿಪೂರ್ವಕವಾಗಿ, ಸರಳವಾಗಿ ಕಟ್ಟಿಕೊಟ್ಟಿದ್ದಾರೆ ಶ್ರೀ ಲಕ್ಷ್ಮೀನಾರಾಯಣ ಭಟ್ಟರು. ಅವರಿಗೆ ನನ್ನ ಪ್ರೀತಿಪೂರ್ವಕ ನಮನಗಳು.
    ಶಿಹೊಂ

Leave a Reply to Shivananda Hombal Cancel reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...