ದಾಸರೆಂದರೆ ಪುರಂದರ ದಾಸರಯ್ಯ

ಸ್ವಾಮಿ ಪುರಂದರರೆ
ಮಾತೆಲ್ಲ ಸ್ಫಟಿಕ ಮಣಿಮಾಲೆ ಎನ್ನಿಸುವಂತೆ
ಉಪನಿಷತ್ತಿನ ತಿರುಳೆ ಅರಳಿತೆನ್ನಿಸುವಂತೆ
ಚಳಿಯ ಕೆನ್ನೆಯ ಬಿಸಿಲು ನೇವರಿಸಿತೆಂಬಂತೆ
ನುಡಿದ ಋಷಿವರರೆ
ಎಲ್ಲಿ ಪಡೆದಿರಿ ನೀವು ಇದ್ದಕಿದ್ದಂತೆಯೇ
ನಭದೆತ್ತರಕೆ ನುಡಿವ ಇಂಥ ವರವ ?
ಹೇಗೆ ಪಡೆದಿರಿ ಸ್ವಾಮಿ ಎದೆಹುಣ್ಣ ಮಾಯಿಸಿ
ಜಗವ ಸಂತೈಸುವ ಇಂಥ ಸ್ವರವ ?
ಹೊರಳಿದ್ದು ಹೇಗೆ ನೀವು ಆಲ್ಲಿಂದ ಇಲ್ಲಿಗೆ,
ಕೋಟಿವರಹದ ಕೋಟೆಯಿಂದ ರಥಬೀದಿಗೆ?

ಎಲ್ಲಿ ಏನಾಯಿತು? ನಿಜಘಟನೆ ತಿಳಿಸಿ
ನಿಮಗೆ ಮಿಂಚಿದ ದಾರಿ ನಮಗಷ್ಟು ಉಳಿಸಿ
ನೆಚ್ಚಿದ್ದ ನಾಗನಿಧಿ ಕಚ್ಚಿ ಕೈಕೊಟ್ಟಿತೆ,
ಸುಖದ ಭ್ರಮೆಯ ಪಿಶಾಚಿ ಕೆಳಹಾಕಿ ಮೆಟ್ಟಿತೆ?
ಇರುವುದನು ಬಿಟ್ಟು ಇರದುದರೆಡೆಗೆ ತುಡಿದಿರಿ ಯಾಕೆ?
ಏನಾಯಿತು ಸ್ವಾಮಿ ಏನಾಯಿತು,
ಗಜಬಟ್ಟೆ ಹೇಗೆ ಬಾನಾಯಿತು?
ಸಿರಿಯ ಜರಿಸೆರಗ ನಾಟ್ಯಕ್ಕೆ ಕಣ್ ಕೋರೈಸಿ
ಗರಹೊಡೆದ ಹಾಗೆ ನಿಂತಿದ್ದ ನಾಯಕರೆ,
ಹೇಗೆ ಒಡೆದಿರಿ ಹರಿಗು ನಿಮಗೂ ನಡುವೆ ಇದ್ದ
ಮಣಿ ಹರಳ ಗೋಡೆಯ ?
ಹೇಗೆ ಮುರಿದಿರಿ ಹೇಳಿ ನಾನೆಂಬ ಮಾಯೆಯ
ಮದ್ದಾನೆ ದಾಡೆಯ?

ಏನೋ ವದಂತಿ ನಡುವೆ ಸಿಕ್ಕು ನಿಜಸಂಗತಿ
ದಂತಕಥೆಯಾಗಿದೆ ಸತ್ಯ ತಿಳಿಸಿ
ಏನೋ ಪವಾಡ ನಡೆದು ಬೆಚ್ಚಿ ಹರಿಚರಣಕ್ಕೆ
ಶರಣು ಹೋದಿರಿ ಎಂಬ ಸುಳ್ಳ ಅಳಿಸಿ.
ಸಲ್ಲದ ಪವಾಡಗಳ ಟೊಳ್ಳು ಚುಚ್ಚುವ ಮದ್ದು
ನಿಮ್ಮಲೆ ಇತ್ತು.
ತರ್ಕ ಶಂಕೆಗಳೆ ಗಟ್ಟಿ ವರ್ತಕನ ಗುಟ್ಟು
ಏನೋ ಸಂಕಟದ ಒಳಕೋಣೆ ಕದ ತೆರೆದು.
ಮಿಥ್ಯೆ ತನ್ನ ಕುರೂಪ ತೋರಿಸಿತ್ತೆ?
ಆ ಮುಹೂರ್ತಕ್ಕೇ ತುಡಿದು ಆಕಾಶ ಬಾಯ್ತೆರೆದು
ಗುಡುಗು ಸತ್ಯದ ದುಡಿಯ ಬಾರಿಸಿತ್ತೆ?

ಒಳ್ಳಿತೇ ಆಯಿತೆಂದಿರಿ ಆದದ್ದೆಲ್ಲ
ಆದದ್ದಾದರೂ ಏನು?
ಹಮ್ಮು ಬಿಮ್ಮನ್ನೆಲ್ಲ ಊರ ಮೋರಿಗೆ ತೂರಿ
ದಂಡಿಗೆ ಬೆತ್ತ ಹಿಡಿದದ್ದು ಹೇಗೆ?
ಸೆರಯಿಡಲು ಬಂದವರೆ ಬಿಡುಗಡೆಗೆ ಸಲಿಸಿದರೆ
ಮುಗಿಲ ಮದ್ದಲೆಗೆ ಕುಣಿದಿತ್ತೆ ಸೋಗೆ?

ಆಶ್ಚರ್ಯವೂ ಅಲ್ಲ ಆಕಸ್ಮಿಕವೂ ಅಲ್ಲ
ಆದ ರೂಪಾಂತರ
ಸಾಹಿತ್ಯ, ಸಂಗೀತ-ಒಳಗೆ ಕಡಲೆರಡೂ
ಅಪ್ಪಳಿಸಿ ದಡಕ್ಕೆ ಬಡಿದು
ಮೊರೆದಿದ್ದುವಲ್ಲವೆ?
ಬಡಿತಕ್ಕೆ ರತ್ನಪಡಿಯಂಗಡಿಯ ತಳ ಅದುರಿ
ದಡಬಡಿಸಿತ್ತಲ್ಲವೆ?
ಸರಸ್ವತೀ ಸ್ತನವೆರಡೂ ಧಾರಾಳ ಸುಧೆಯುಣಿಸಿ
ಓಲೆ, ತಂಬೂರಿ ಕರೆದಿದ್ದುವಲ್ಲವೆ?
ಹುಟ್ಟು ಪ್ರತಿಭೆ ಹೆದೆಯ ಬಿಗಿಯಲೆಂದೇ ವಂಶ
ಭಾಗವತ ದಂಡ ಕೈಗೆ ದಾಟಿಸಿತ್ತಲ್ಲವೆ?
ಹೂಡೇ ಬಿಟ್ಟಿರಿ ಹೆದೆಗೆ ಯಾವ ಎಗ್ಗಿಲ್ಲದೆ
ನಾರಾಯಣಾಸ್ತ್ರ
ಮೊದಲು ಸುಟ್ಟಿತು ಅದು ರತ್ನಪಡಿಯಂಗಡಿ
ಆಸ್ತಿ ಕ್ರಯಪತ್ರ!

ತಿರುಗಿದಿರಿ ಊರೂರು
ಮನೆಮನೆಗು ಕಲ್ಪತರು ಸಸಿಯ ಹಂಚುತ್ತ
ಹರಿನಾಮ ಹಾಡಿ ಪಡೆದನ್ನ ಭುಜಿಸುವ ನೆಪದಿ
ಭಕ್ತಿಯೋಡಿನಲಿ ‘ಅಹಂ-ಬೀಜ’ ಹುರಿಯುತ್ತ,
ಕಳಚಿದಿರಿ ಕೊರಳಿಂದ ಹೆನ್ನು ಹೊನ್ನಿನ ಕುಣಿಕೆ;
ಬಿದ್ದು ಫಟ್ಟೆಂದವು ಎಷ್ಟೋ ಜನ್ಮಗಳಿಂದ
ಹೆಗಲೇರಿಕೊಂಡಿದ್ದ ಮಣ್ಣಕುಡಿಕೆ.

ಕೆರೆಯ ನೀರನು ಕೆರೆಗೆ ಚೆಲ್ಲಿದಿರಿ, ಜೊತೆಗೇ
ವರವ ವಡೆದವದಂತೆ ಹಾಡಿದಿರಿ ಕೂಡ
ಈಸಿದಿರಿ ಇದ್ದು ಜೈಸಿದಿರಿ ಜೊತೆಗೇ
ಹರಿಭಕ್ತಿ ರಸದಲ್ಲಿ ತೊಯಿಸಿದಿರಿ ನಾಡ.
ಕಾಣಿಸದೆ ಕರೆವ ದನಿಯತ್ತ ಮುಗಿದಿರಿ ಕೈಯ
‘ದಾಸರೆಂದರೆ ಪುದಂದರ ದಾಸರಯ್ಯ’
*****

One thought on “0

  1. ನನಗೂ ತುಂಬ ಆಪ್ತರಾದ ದಾಸಕವಿವರೇಣ್ಯ ಪುರಂದರರ ವ್ಯಕ್ತಿತ್ವ ಮತ್ತು ಚರಿತ್ರೆಯ ಮಹಿಮೆಯನ್ನು ಅಷ್ಟೇ ಆಪ್ತವಾಗಿ, ಪ್ರೀತಿಪೂರ್ವಕವಾಗಿ, ಸರಳವಾಗಿ ಕಟ್ಟಿಕೊಟ್ಟಿದ್ದಾರೆ ಶ್ರೀ ಲಕ್ಷ್ಮೀನಾರಾಯಣ ಭಟ್ಟರು. ಅವರಿಗೆ ನನ್ನ ಪ್ರೀತಿಪೂರ್ವಕ ನಮನಗಳು.
    ಶಿಹೊಂ

Leave a Reply to Shivananda Hombal Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇವು ಬೆಲ್ಲ
Next post ನಮಿಸುವೆ ಶಾರದೆ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys