ದಾಸರೆಂದರೆ ಪುರಂದರ ದಾಸರಯ್ಯ

ಸ್ವಾಮಿ ಪುರಂದರರೆ
ಮಾತೆಲ್ಲ ಸ್ಫಟಿಕ ಮಣಿಮಾಲೆ ಎನ್ನಿಸುವಂತೆ
ಉಪನಿಷತ್ತಿನ ತಿರುಳೆ ಅರಳಿತೆನ್ನಿಸುವಂತೆ
ಚಳಿಯ ಕೆನ್ನೆಯ ಬಿಸಿಲು ನೇವರಿಸಿತೆಂಬಂತೆ
ನುಡಿದ ಋಷಿವರರೆ
ಎಲ್ಲಿ ಪಡೆದಿರಿ ನೀವು ಇದ್ದಕಿದ್ದಂತೆಯೇ
ನಭದೆತ್ತರಕೆ ನುಡಿವ ಇಂಥ ವರವ ?
ಹೇಗೆ ಪಡೆದಿರಿ ಸ್ವಾಮಿ ಎದೆಹುಣ್ಣ ಮಾಯಿಸಿ
ಜಗವ ಸಂತೈಸುವ ಇಂಥ ಸ್ವರವ ?
ಹೊರಳಿದ್ದು ಹೇಗೆ ನೀವು ಆಲ್ಲಿಂದ ಇಲ್ಲಿಗೆ,
ಕೋಟಿವರಹದ ಕೋಟೆಯಿಂದ ರಥಬೀದಿಗೆ?

ಎಲ್ಲಿ ಏನಾಯಿತು? ನಿಜಘಟನೆ ತಿಳಿಸಿ
ನಿಮಗೆ ಮಿಂಚಿದ ದಾರಿ ನಮಗಷ್ಟು ಉಳಿಸಿ
ನೆಚ್ಚಿದ್ದ ನಾಗನಿಧಿ ಕಚ್ಚಿ ಕೈಕೊಟ್ಟಿತೆ,
ಸುಖದ ಭ್ರಮೆಯ ಪಿಶಾಚಿ ಕೆಳಹಾಕಿ ಮೆಟ್ಟಿತೆ?
ಇರುವುದನು ಬಿಟ್ಟು ಇರದುದರೆಡೆಗೆ ತುಡಿದಿರಿ ಯಾಕೆ?
ಏನಾಯಿತು ಸ್ವಾಮಿ ಏನಾಯಿತು,
ಗಜಬಟ್ಟೆ ಹೇಗೆ ಬಾನಾಯಿತು?
ಸಿರಿಯ ಜರಿಸೆರಗ ನಾಟ್ಯಕ್ಕೆ ಕಣ್ ಕೋರೈಸಿ
ಗರಹೊಡೆದ ಹಾಗೆ ನಿಂತಿದ್ದ ನಾಯಕರೆ,
ಹೇಗೆ ಒಡೆದಿರಿ ಹರಿಗು ನಿಮಗೂ ನಡುವೆ ಇದ್ದ
ಮಣಿ ಹರಳ ಗೋಡೆಯ ?
ಹೇಗೆ ಮುರಿದಿರಿ ಹೇಳಿ ನಾನೆಂಬ ಮಾಯೆಯ
ಮದ್ದಾನೆ ದಾಡೆಯ?

ಏನೋ ವದಂತಿ ನಡುವೆ ಸಿಕ್ಕು ನಿಜಸಂಗತಿ
ದಂತಕಥೆಯಾಗಿದೆ ಸತ್ಯ ತಿಳಿಸಿ
ಏನೋ ಪವಾಡ ನಡೆದು ಬೆಚ್ಚಿ ಹರಿಚರಣಕ್ಕೆ
ಶರಣು ಹೋದಿರಿ ಎಂಬ ಸುಳ್ಳ ಅಳಿಸಿ.
ಸಲ್ಲದ ಪವಾಡಗಳ ಟೊಳ್ಳು ಚುಚ್ಚುವ ಮದ್ದು
ನಿಮ್ಮಲೆ ಇತ್ತು.
ತರ್ಕ ಶಂಕೆಗಳೆ ಗಟ್ಟಿ ವರ್ತಕನ ಗುಟ್ಟು
ಏನೋ ಸಂಕಟದ ಒಳಕೋಣೆ ಕದ ತೆರೆದು.
ಮಿಥ್ಯೆ ತನ್ನ ಕುರೂಪ ತೋರಿಸಿತ್ತೆ?
ಆ ಮುಹೂರ್ತಕ್ಕೇ ತುಡಿದು ಆಕಾಶ ಬಾಯ್ತೆರೆದು
ಗುಡುಗು ಸತ್ಯದ ದುಡಿಯ ಬಾರಿಸಿತ್ತೆ?

ಒಳ್ಳಿತೇ ಆಯಿತೆಂದಿರಿ ಆದದ್ದೆಲ್ಲ
ಆದದ್ದಾದರೂ ಏನು?
ಹಮ್ಮು ಬಿಮ್ಮನ್ನೆಲ್ಲ ಊರ ಮೋರಿಗೆ ತೂರಿ
ದಂಡಿಗೆ ಬೆತ್ತ ಹಿಡಿದದ್ದು ಹೇಗೆ?
ಸೆರಯಿಡಲು ಬಂದವರೆ ಬಿಡುಗಡೆಗೆ ಸಲಿಸಿದರೆ
ಮುಗಿಲ ಮದ್ದಲೆಗೆ ಕುಣಿದಿತ್ತೆ ಸೋಗೆ?

ಆಶ್ಚರ್ಯವೂ ಅಲ್ಲ ಆಕಸ್ಮಿಕವೂ ಅಲ್ಲ
ಆದ ರೂಪಾಂತರ
ಸಾಹಿತ್ಯ, ಸಂಗೀತ-ಒಳಗೆ ಕಡಲೆರಡೂ
ಅಪ್ಪಳಿಸಿ ದಡಕ್ಕೆ ಬಡಿದು
ಮೊರೆದಿದ್ದುವಲ್ಲವೆ?
ಬಡಿತಕ್ಕೆ ರತ್ನಪಡಿಯಂಗಡಿಯ ತಳ ಅದುರಿ
ದಡಬಡಿಸಿತ್ತಲ್ಲವೆ?
ಸರಸ್ವತೀ ಸ್ತನವೆರಡೂ ಧಾರಾಳ ಸುಧೆಯುಣಿಸಿ
ಓಲೆ, ತಂಬೂರಿ ಕರೆದಿದ್ದುವಲ್ಲವೆ?
ಹುಟ್ಟು ಪ್ರತಿಭೆ ಹೆದೆಯ ಬಿಗಿಯಲೆಂದೇ ವಂಶ
ಭಾಗವತ ದಂಡ ಕೈಗೆ ದಾಟಿಸಿತ್ತಲ್ಲವೆ?
ಹೂಡೇ ಬಿಟ್ಟಿರಿ ಹೆದೆಗೆ ಯಾವ ಎಗ್ಗಿಲ್ಲದೆ
ನಾರಾಯಣಾಸ್ತ್ರ
ಮೊದಲು ಸುಟ್ಟಿತು ಅದು ರತ್ನಪಡಿಯಂಗಡಿ
ಆಸ್ತಿ ಕ್ರಯಪತ್ರ!

ತಿರುಗಿದಿರಿ ಊರೂರು
ಮನೆಮನೆಗು ಕಲ್ಪತರು ಸಸಿಯ ಹಂಚುತ್ತ
ಹರಿನಾಮ ಹಾಡಿ ಪಡೆದನ್ನ ಭುಜಿಸುವ ನೆಪದಿ
ಭಕ್ತಿಯೋಡಿನಲಿ ‘ಅಹಂ-ಬೀಜ’ ಹುರಿಯುತ್ತ,
ಕಳಚಿದಿರಿ ಕೊರಳಿಂದ ಹೆನ್ನು ಹೊನ್ನಿನ ಕುಣಿಕೆ;
ಬಿದ್ದು ಫಟ್ಟೆಂದವು ಎಷ್ಟೋ ಜನ್ಮಗಳಿಂದ
ಹೆಗಲೇರಿಕೊಂಡಿದ್ದ ಮಣ್ಣಕುಡಿಕೆ.

ಕೆರೆಯ ನೀರನು ಕೆರೆಗೆ ಚೆಲ್ಲಿದಿರಿ, ಜೊತೆಗೇ
ವರವ ವಡೆದವದಂತೆ ಹಾಡಿದಿರಿ ಕೂಡ
ಈಸಿದಿರಿ ಇದ್ದು ಜೈಸಿದಿರಿ ಜೊತೆಗೇ
ಹರಿಭಕ್ತಿ ರಸದಲ್ಲಿ ತೊಯಿಸಿದಿರಿ ನಾಡ.
ಕಾಣಿಸದೆ ಕರೆವ ದನಿಯತ್ತ ಮುಗಿದಿರಿ ಕೈಯ
‘ದಾಸರೆಂದರೆ ಪುದಂದರ ದಾಸರಯ್ಯ’
*****

One thought on “0

  1. ನನಗೂ ತುಂಬ ಆಪ್ತರಾದ ದಾಸಕವಿವರೇಣ್ಯ ಪುರಂದರರ ವ್ಯಕ್ತಿತ್ವ ಮತ್ತು ಚರಿತ್ರೆಯ ಮಹಿಮೆಯನ್ನು ಅಷ್ಟೇ ಆಪ್ತವಾಗಿ, ಪ್ರೀತಿಪೂರ್ವಕವಾಗಿ, ಸರಳವಾಗಿ ಕಟ್ಟಿಕೊಟ್ಟಿದ್ದಾರೆ ಶ್ರೀ ಲಕ್ಷ್ಮೀನಾರಾಯಣ ಭಟ್ಟರು. ಅವರಿಗೆ ನನ್ನ ಪ್ರೀತಿಪೂರ್ವಕ ನಮನಗಳು.
    ಶಿಹೊಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇವು ಬೆಲ್ಲ
Next post ನಮಿಸುವೆ ಶಾರದೆ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…