Home / ಕವನ / ಕವಿತೆ / ಶ್ರೀ ವಿದ್ಯಾರಣ್ಯರ ಅಡಿದಾವರೆಯಲ್ಲಿ

ಶ್ರೀ ವಿದ್ಯಾರಣ್ಯರ ಅಡಿದಾವರೆಯಲ್ಲಿ

ಶ್ರೀ ಕರ್ಣಾಟಕರಾಜ್ಯ ವಾಸ್ತುಪತಿಯಂ, ನಾಸ್ತಿಕ್ಯ ರುಗ್ವೈದ್ಯನಂ,
ವೇದಾಂತಾದಿ ಗತಾಧ್ವನಂ, ನಿಗಮಧರ್ಮೋದ್ಧಾರಣಾಚಾರ್ಯನಂ,
ಮ್ಲೇಚ್ಛಾಚ್ಛಾನ್ನ ಪವಿತ್ರ ಭಾರತ ವಿಯನ್ಮಾಧ್ಯಂದಿನಾದಿತ್ಯನಂ,
ವಿದ್ಯಾರಣ್ಯ ವರೇಣ್ಯನಂ ಚತುರ ಚಾತುರ್ವೈದ್ಯನಂ ವಂದಿಪೆ ||೧||

ಯಾಜುಷ ಶಾಖೆಯ ಪ್ರಚುರ ವಿಪ್ರರ ವಂಶದಿ ಜನ್ಮಮಂತೆ, ಬೌ
ಧಾಯನ ಸೂತ್ರಮಂತೆ, ಸಿರಿ ಮಾಯಣನಾತ್ಮಜನಂತೆ, ಮೇಣ್‌ ಭರ
ದ್ವಾಜನ ಗೋತ್ರಮಂತೆ, ನಿಜಸೋದರ ಸಾಯಣನಂತೆ, ಕನ್ನಡಂ
ತಾಯ್ನುಡಿಯಂತೆ, ನೀನಖಿಲ ಕಲ್ಪಿಯ ಕಾನನಮಂತೆ, ಮಾಧವಾ ||೨||

ಶಕಸಮ ದಿಕ್ಶರದ್ವಿವಿಧು ಧಾತುವ ಮಾಧವ ಶುಕ್ಲಪಕ್ಷ ಸ
ಪ್ತಮಿ ರವಿವಾಸರಂ ಕದರಿ ಕನ್ನಡ ರಾಜ್ಯದ ಲಕ್ಷ್ಮಿ ತುಂಗಭ
ದ್ರಾತಟಕಾಚಿ ಬಂದಳೆ? ಗಡಾಕೆಯನಂದಿಗೆ ಹಿಂದುರಾಟ್‌ ಸುರ
ತ್ರಾಣನ ಗಂಡುಕೆಯ್ವಿಡಿಸುತಾದೆಯ ಕನ್ನಡ ನುಳ್ಪುರೋಹಿತಂ? ||೩||

ಕಿರುತಮ್ಮಂ ಬೆರಸೀ ಚತುಃಶ್ರುತಿಗೆ ವೇದಾರ್ಥಪ್ರಕಾಶಂ ನೆರ
ಳ್ಮರೆಯಿಂ ನೇಸರ ನೋಡುವಂತೆ ಮೆರಸಲ್‌ ಮೇಣೇಂ ಪ್ರಸಾದಂ ಚಿರಂ?
ಚತುರಾಸ್ಯಂ ಚತುರಾಸ್ಯದಿಂದೊರೆದುದನ್ನಾಸ್ಯದ್ವಯಂ ಸಾಧಿಸಲ್‌
ವಿಧಿಯೋ ವೇದವೊ ನಿಮ್ಮೂಳಂತು ನೆರೆವಂದೇಂ ಧನ್ಯಮೀ ಭಾರತಂ! ||೪||

ನಿಲಿಸಿ ಪರಾಶರಸ್ಮೃತಿಗೆ ನೀಂ ಕಲಿಕಾಲದಿ ಕೆತ್ತ ಕತ್ತಲಂ
ತೊಲಗಿಪ ಕೆಯ್ವೆಳಂಕ ಮಿರುಟೀಕೆಯ, ಮಾಣಿಸಿದೆಮ್ಮ ಮುಗ್ಗುರಂ
ಅಭಿನವ ಕಾಲಿದಾಸನೆನೆ ಶಂಕರದಿಗ್ವಿಜಯಂ ನೆಗಳ್ಚಿ, ಮೇಣ್‌
ನಿರವಿಸಿ ಧಾತುಜಾತದರಿವಂ ನುಡಿಯಾಗರವಂ ಬಿದಿರ್ಚಿದೈ! ||೫||

ಸರ್ವಧರ್ಮಸಮಾನದೃಷ್ಟಿಯೆ ಸರ್ವದರ್ಶನಸಂಗ್ರಹಂ
ಕಾಣಿಸಿತೆ? ವ್ಯವಹಾರ ಕಾಲಾಚಾರವಿವು ತರಿಸಂದುವೆ?
ಐತರೇಯಕೆ ತೈತ್ತಿರೀಯಕೆ ಬಾಸಣಿಸಿ ಜತೆ ಭಾಷ್ಯಮಂ,
ಜೈಮಿನೀಯಕೆ ಬಾದರಾಯಣಕಿತ್ತೆ ತಿಳಿಗನ್ನಡಿಗಳಂ ||೬||

ಕೊಂಕಣದಂಕೆಯಲ್ಲಿ ತುಡುವೊಕ್ಕ ತುರುಂಕರ ನೂಂಕಿ, ಸಪ್ತಕೋ
ಟೀಶನ ದೇಗುಲಂ ನಿಲೆ ನಿಮಿರ್ಚಿಸಿ, ಗೋವೆಯ ಗೋವನಾಗಿ, ಮಾ
ರಾಯನ ಸಮ್ಮತಂ ಬೆರಸು ಪೋಗಿ ಜಯಂತಿಯನಾಳಿ, ಮುಂತೆ ಶೃಂ
ಗೇರಿಯ ಸೇರಿ, ನೀನಪರ ಶಂಕರನಂತೆಡೆಗೊಂಡೆ ಮಾಧವಾ ||೭||

ತುರುಕರ ದಿಂಡು ಗುಂಡಿಗೆಯ ಹಿಂಡಿದ ನಿನ್ನಯ ಬಾಹು ದಂಡಮಂ
ಪೊಗಳ್ವೆನೆ ? ಹಿಂದುಮುಂದರಿವ ಹೈಂದವ ಧರ್ಮಕೆ ಶಬ್ದ ಶಿಲ್ಪದಿಂ
ನಿಗಮದ ಗಂಗೆಗಾಗಮದ ಕಟ್ಟೆಯ ಕಟ್ಟಿದ ಬುದ್ದಿ ಶಕ್ತಿಯಂ
ಪೊಗಳ್ವೆನೆ ? ಚೋದ್ಯಮೇಂ — ಬಿಗುರ ಬೀರಿದ ಬೀರಮೊ? ಬಲ್ಲ ಬಿಜ್ಜೆಯೊ? ||೮||

ಬ್ರಹ್ಮಕ್ಷತ್ರಮೆ ಸಲ್ವುದೀ ಕಲಿಯುಗಕ್ಕೆಂದೇನದಂ ತಾಳ್ದಿದೈ?-
ಬ್ರಹ್ಮಜ್ಞಾನದೆ ಕಾಯೆ ತಾಯೆಳೆಯ ಧರ್ಮಗ್ಲಾನಿಯಿಂ ಹಾನಿಯಿಂ,
ಕ್ಷತ್ರತ್ರಾಣದೆ ಕಾದೆ ಮ್ಲೇಚ್ಛದಳವಂ ಮಾರ್ಕೊಂಡವರ್ಕೊಂಡುದಂ!-
ಬ್ರಹ್ಮಕ್ಷತ್ರ ಕುರಾರರಾಮನವತಾರಂ ನಿನ್ನೊಳೇಂ ಬೆತ್ತನೆ? ||೯||

ಜ್ಞಾನಮೆ ಮಾನವೀ ತನುಮನಾಂತುದೆ? ಭಕ್ತಿಯೆ ಭಿಕ್ಷವಾದುದೆ?
ವಾಣಿಯ ಜಾಣೆ ಆಣೆರಕಗೊಂಡುದೆ? ಗೆಲ್ಲಿನ ಬಲ್ಲೆ ಮೂಡಿತೆ ?
ಕನ್ನಡ ನಾಡೆ ತನ್ನ ಮನಮೊಟ್ಟಿಸಿ ಸೃಷ್ಟಿಸೆ ಸೃಷ್ಟಗಿತ್ತುದೆ?
ಧರ್ಮಮೆ ಕರ್ಮಮಾಗಿ ನೆರವೇರಿತೆ ನಿನ್ನಲಿ? ಪೇಳ ಮಾಧವಾ ||೧೦||

ಸತ್ಯದ ಭೂಮಿ, ಧರ್ಮದಮೃತಾಂಬುಧಿ ಶುಷ್ಕ ತುರುಷ್ಕ ಕಾನನಾ
ಭೀಲ ದವಾನಲಂ, ನಿಖಿಲ ಕನ್ನಡ ನಾಡಿನ ಸೂತಿಕಾನಿಲಂ,
ಶುದ್ಧ ಚಿದಂಬರಂ, ಬೆರೆಯೆ ಪಂಚತೆಗಂದಿಗತೀತ ಪಂಚಭೂ
ತಂ ನಿನತಾತ್ಮಮೊಂದಿ ಪರಮಾತ್ಮನನಾದುದಭಿನ್ನಮದ್ವಯಂ ||೧೧||

ಕಂತಿದೆ ನೀ ದಿನಾಂತದಿನನಂತೆನೆ, ನಿನ್ನಯ ಪಿಂತೆ ಕಾಂತಿಯಂ
ಕಾಣದ ಭಾರತಂ ಬರಬರುತ್ತ ನಿಶೀಥಕೆ ಮಾಸಿ ಬಂದುದೈ;
ರಾಮನ ಸಂಕದಿಂ ಕುಳಿರ ಶೃಂಗವರಂ ನಮಗಿಂದಿಗಿಲ್ಲಿ ನಿ
ನ್ನನ್ನವನೊರ್ವನುಳ್ಳಡೆಮಗಪ್ಪುದೆ ಈ ಬಡಪಾಡು ಮಾಧವಾ? ||೧೨||

ಪರಮಾಚಾರ್ಯನೆ, ನಿನ್ನ ಪುಣ್ಯತಿಧಿಯೊಳ್ನಾನೊಂದಿದಂ ಬೇಡುವೆಂ-
ಭವದಾವಾಸದ ಬ್ರಹ್ಮಧಾಮದಲಿ ಮುನ್ನೀಂ ಪುಟ್ಟಿದೀ ಭಾರತಂ
ಮರೆಯಲ್ಬೇಡೆಮಗಾಗಿ ಬೇಡೊಡೆಯನನ್ನಮ್ಲಾನ ಭಾಗ್ಯೋದಯಂ
ಬರಿಸಲ್ನೀನೆರೆವಂದು ನೀಡದವನಿನ್ನಾರ್ಗಂ ಗಡಾ ನೀಡುವಂ? ||೧೩||

ಶ್ರೀ ಕರ್ಣಾಟಕಮೇವರಂ, ನೆನವು ನಿನ್ನಾಚಾರ್ಯ ಮುನ್ನಾವರಂ,
ಹಿಂದೂದ್ಧರ್ಮಮಿದೇವರಂ, ಯಶಸು ನಿನ್ಮಾಚಾರ್ಯ ಮುನ್ನಾವರಂ,
ನಮ್ಮೀ ಭಾರತಮೇವರಂ, ಹೆಸರು ನಿನ್ನಾಚಾರ್ಯ ಮುನ್ನಾವರಂ-
ಸೂರ್ಯಾಚಂದ್ರಮರೇವರಂ, ನಿಲುವುವಿನ್ನಾಚಾರ್ಯ ಮುನ್ನಾವರಂ! ||೧೪||

ವಿಪುಲ ಜ್ಞಾನಮನಾಂತು ಸಲ್ಲಿಸಿದ ಮೇಧಾಶಕ್ತಿಗಂ, ಮ್ಲೇಚ್ಛರಂ
ಸದೆವೊಯ್ದದ್ಭುತ ಶೌರ್ಯಶಕ್ತಿಗೆ, ತಥಾ ಕರ್ಣಾಟ ವಾಸ್ತೂತ್ಸವಂ
ಗೆಯಿದಾತ್ಮೋಪಮ ಕರ್ತೃಶಕ್ತಿಗೆ, ಧುರಂ ತಾಳ್ದಾ ಬೃಹನ್ನೀತಿ ಶ
ಕ್ತಿಗೆ, ನಿನ್ನಕ್ಕೆಮ ಸರ್ವಶಕ್ತಿಗೆ ಸದಾ ಭದ್ರಂ ಶುಭಂ ಮಂಗಳಂ ||೧೫||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...