ಕಾಲಾತೀತ ತಲಬು

ಇದ್ದ ಬಿದ್ದ ಶಕ್ತಿಯನ್ನೆಲ್ಲಾ ಇಡಿಯಾಗಿಸಿ
ಕೊಂಡು ಹೊರಟೆ, ಉನ್ಮಾದ ತಡೆಯಲಾರದೇ
ಬಾಯಿ ತೆರೆದುಕೊಂಡೆ.
ಈಗ ಮೆಲ್ಲಲೇಬೇಕು ಕವಳ.
ಚಟ ಎಷ್ಟೆಂದರೂ ಚಟವೇ:
ಹುಡುಕಿದರೂ ಸಿಗಲಿಲ್ಲ ಸಂಚಿಯಲ್ಲಿ ನಾಲ್ಕಾಣೆ
ಹಂಗೆಲ್ಲ ಸಿಕ್ಕುವ ಸರಕಲ್ಲ.
ಎದುರಿಗೆ ಅದೇ ಹಳೆಯ ಶತ್ರು
ಹಲ್ಲುಗಿಂಜುತ್ತ
ಧನದ ಥಾಲಿ ಹಿಡಿದ ಕೋರೆದಂತಗಳ ಧನಿಕ.

ಹಂಬಲಿಸಿ ಲೇಪಿಸಿದ ಲಿಪಸ್ಟಿಕ್ಕು,
ಕ್ರೀಮು, ಮುಖಬಣ್ಣಗಳು
ಸೋತು ಸುಣ್ಣವಾಗಿವೆ.
ಒತ್ತಿ ಕುಳಿತುಕೊಳ್ಳಲಾಗದೇ ಶತ್ರುವಿನಂತೆ.
ಕಾಲನ ಕೈಯಲ್ಲಿ ಸಿಕ್ಕು ತರಗೆಲೆಗಳಂತೆ
ಮುದುಡಿ,
ತುಪ್ಪೆಯಾಗಿರುವ ಚರ್ಮದ
ಸುಕ್ಕು ನೋಡಿ ಮುಸಿ ಮುಸಿ ನಗುತ್ತ,
ಲೇವಡಿ ಮಾಡುತ್ತಿವೆ ಶತ್ರುವಿನಂತೆ

ಈಗಷ್ಟೇ ಬಿಚ್ಚಿಟ್ಟ ಬಳೆ ಮಂಗಮಾಯವಾದಂತೆ.
ಹುಡುಕಿ ಹುಡುಕಿ ಸಾಕಾಗಿ
ಪ್ರಾಯ ದಕ್ಕಿಸಿಕೊಟ್ಟ ಶತ್ರುವಿಗೆ ಹಿಡಿಶಾಪ ಹಾಕುತ್ತ
ಕೈ ನೋಡಿಕೊಂಡೆ.
ಅರೇ ಯಾವಾಗ ಕೈ ಸೇರಿತು,
ಮಂದಿ ಮಗಂದು?
ಜಿಗುಪ್ಸೆಯಾದರೂ ಚಿನ್ನಚಿನ್ನವೇ?
ಶತ್ರುವಾದರೇನು?

ಮೇಲಿನ ಕೇರಿ ಮಾಯಣ್ಣನ ಮಗಳು
ಮೈನೆರೆದಾಳಂತೆ. ದೇವರಿಗೆ ಬಿಡ್ತಾರಂತೆ.
ಅದಕ್ಕೆ ಬಳೆ ನೆನಪಾಯ್ತು.
“ಹೀರೇಕಿ ನೀನು, ನಿತ್ಯ ಸುಮಂಗಲಿ.
ಹರಸಿ ಹೋಗು ಬಾ.” ಎಂದಿದ್ದ.
ಯಾವ ಕಾಲದಲ್ಲಿದ್ದಾನೆ ಮಾಯಣ್ಣ.
ಕಾಲ ಯಾವುದಾದ್ರೇನೂ ಈಗೆಲ್ಲ
ಹೈಟೆಕ್ಕು ಕಾಲವಂತೆ.
ಹೊಸ ನಮೂನೆ ದಂಧೆಗಳು.

ಗೊನೆ ಕಡಿದ ಬಾಳೆಹಂಗೆ ಬದುಕು.
ಹರಕು ಚಾಪೆ ಹಂಗೆ ದೇಹ
ಆಗುತ್ತೆ ಅಂತ ಗೊತ್ತಿಲ್ಲೇನು?
ಕಟಕಟ ಹಲ್ಲುಕಡಿಯೋದ ಬಿಟ್ಟು
ಬೇರೇನೂ ಮಾಡೋಕಾಗಲ್ಲ.
ಹರಕು ಕಚ್ಚೆ ಧಣಿಗೂ
ಮೆಳ್ಳೆಗಣ್ಣ ಪೂಜಾರಿಗೂ ಬೆಂಕಿ ಹಾಕ.
ಅರೇ ಶತ್ರು ಅಂದ್ರೆ ಯಾರು?
ಈ ಕವಳದ ತಲುಬಿಗಿಷ್ಟು
ಹೊಗೆ ಹಾಕ. ತೂ.. ತೂ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೬
Next post ಮುಸ್ಸಂಜೆಯ ಮಿಂಚು – ೧೪

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…