Home / ಕವನ / ಕವಿತೆ / ಮಾತಿನವರು

ಮಾತಿನವರು

ಬರಿ ಗಂಗೆ ಗೌರೀಶಂಕರ
ರಾವಣಾಸುರ ಮಥನ ದಿವ್ಯನಡತೆಯ ಕಥನ
ಹಗಲಲ್ಲಿ
ಹತ್ತು ಜನರೆದುರಲ್ಲಿ
ಸತ್ತರೂ ನಿಲ್ಲುವ ಶಾಸನದಲ್ಲಿ;
ಕೊಳೆವ ಗದ್ದಲದ ವಠಾರ
ನಿಂತ ನೀರ ಗಬ್ಬುಗಟಾರ
ಬಾಗಿದವನ ಬೆನ್ನ ಕುತಾರ
ಹಿತ್ತಿಲಲ್ಲಿ
ಗುಪ್ತಚಾರರ ಜೊತೆ ಕತ್ತಲಲ್ಲಿ
ಗಾಳಿ ಹಾರಿಸಿಬಿಡುವ ಮಾತಿನಲ್ಲಿ
ಕೈಹಿಡಿದ ಬರೆಹಕ್ಕೆ ಕಣುತಪ್ಪಿಸಿ ಇವರ
ನಾಲಿಗೆಯ ಹೆರಿಗೆ.
ನ್ಯಾಯ ಒಪ್ಪಿಸಿ ಎಂದು ಕೇಳುವಂತಿಲ್ಲ,
ದಾಖಲೆ ಸುಟ್ಬು ಕೋರ್ಟಿನ ಕಣ್ಣು ತಪ್ಪಿಸುವ ಜೋಕೆ
ಬೇಕಾದಷ್ಟಿದೆ ಈ ಮಳ್ಳರಿಗೆ.

ಯಾವುದರ ದರಕಾರ ಹೊಣೆ ಹೊರೆ ಇರದ ಧಣಿಗೆ?
ಮಾತಿಗೆ ತೊಡಗಿದರೆ ಕೂತವರಿಗೆ ಕಾಣದೆ
ಹಿಗ್ಗತೊಡಗುತ್ತದೆ ಸುತ್ತಲ ಬೇಲಿ
ಬೆಚ್ಚಗಾಗುತ್ತದೆ ಕೈ ಬೆಚ್ಚಗಾಗುತ್ತದೆ ಎದೆ
ಸ್ವಿಚ್ಚು ಒತ್ತಿ ಬಿಡುತ್ತದೆ ನಾಲಿಗೆ, ಕೂಡಲೆ
ಮುಳ್ಳು ಸುರಿಸತೊಡಗುತ್ತದೆ ನಿಂತ ನೆಲಕ್ಕೆ ಜಾಲಿ.
ಆಡುತ್ತ ಆಡುತ್ತ ಮೂಡಿನಲ್ಲಿ ಮಾತು ಕೊಂಕುತ್ತದೆ
ಕೊಂಕುತ್ತ ಕೊಂಕುತ್ತ ಯಾವುದೊ ತಿರುವಿನಲ್ಲಿ ಬೊಂಕುತ್ತದೆ.

ಆಡಿದ್ದೆಲ್ಲ ಹಾಡಾಗಿ
ಹಾಡಿಗೆ ಹಾವು ಹೆಡೆತೂಗಿ
ಗೆದ್ದಿಲ ಸದ್ದಿಲ್ಲದೆ ಕಲೆ ಯಮದೂತನ ಬೀಡಾಗುತ್ತದೆ.
ಅರವತ್ತರ ಎಚ್ಚರಕ್ಕೆ
ಇಪ್ಪತ್ತರ ಪರವಶತೆ
ಸರಿಬೆಸ ಕೇಳುತ್ತದೆ
ರೂಪ ರುಚಿ ರಸದಲ್ಲಿ ಸತ್ಯ ಸಾಯುತ್ತದೆ.

ಬೆತ್ತಲೆ ಬುದ್ಧಿಗೆ ಮಾರಕ ಹಿತ್ತಾಳೆ ಕಿವಿ
ಆಗ ತತ್ವಕ್ಕೆ ಮುತ್ತಿಡುತ್ತದೆ ತುಟಿ, ಮನಸ್ಸು ಶುದ್ಧ ಭವಿ,
ಮುತ್ತೈದೆ ನಾಲಿಗೆಮುಡಿಗೆ
ಸೂಳೆ ಮನಸ್ಸಿನ ತೊಡೆಗೆ
ನಿತ್ಯ ನಿತ್ಯ ನಡೆಯುತ್ತದೆ ಭಾರಿ ಹಣಾಹಣಿ
ಎಲ್ಲ ಒಳಗೊಳಗೆ.
ಬೆರಳು ಚೀಪುವ ‘ಘ’ಗಳೆದುರಿಗೆ
ನೀರಿಗೆ ಬಿದ್ದ ಎಣ್ಣೆಹನಿ,
ಎಲ್ಲ ಅಪ್ಪಿಯೂ ಎಲ್ಲೂ ತಪ್ಪದ
‘ಪದ್ಮಪತ್ರಮಿವಾಂಭಸ’ರ ದನಿ

ಇವರ ಕೋರೆಮಾತಿನ ಹಾರೆಯೇಟಿಗೆ
ಮುರಿದು ಬೀಳದೆ ಮನೆ
ಮುರಿದು ಬೀಳದೆ ಕೊನೆ
ಸುರಿದು ಹೋಗದೆ ತೊಟ್ಟುಮುರಿದು
ಕಾಯ ಬಾಯಿಂದ ಹಾಲು ಸೊನೆ?
ಬಿದ್ದ ಕೊನೆಯಲ್ಲಿ ಬಾಡುಮೈಯಾಗಿ
ಹಾಡದೆ ಸಂಧ್ಯಾರಾಗವ ಇನ್ನೂ
ಮಧ್ಯಾಹ್ನದ ಅರೆಬಿರಿದ ಮೊಗ್ಗುನನೆ?

ಚಟಕ್ಕೆ ಮಾತು ಹುಟ್ಟಿಸಿ ಹಟಕ್ಕೆ ಸಾಕುವುದ?
ರಂಗಿನ ಅಂಗಿ ತೊಡಿಸಿ ಸಿಂಗರಿಸಿ ಮರೆಸುವುದ?
ಹಣ್ಣಿನ ಬಳ್ಳಿಯ ಮೇಲೆ ಮಿಣ್ಣಗೆ ಮುಳ್ಳು ಹಬ್ಬಿಸಿ
ಸುಳ್ಳೇ ಅದರ ಬಾಳಿಗೆ ಎಳ್ಳು ನೀರು ಬಿಡುವುದ?

ಸದಾ ಇದೊಂದೆ ಬೆರಗು ನನಗೆ
ಬೆರಗಿನೊಡನೆ ಕೊರಗು ಮರೆಗೆ
ಹೇಗೆ ತಿಳಿದೇನು ಇವರ ಮಾತಿನ
ತಳಾತಳದ ಸುಳಿಯ?
ಹೇಗೆ ಹೊಡೆದೇನು ಇವರ ನಾಲಿಗೆ ಹಾವು ನುಗ್ಗಿದ
ಮನೆ ಬಿಲಕ್ಕೆ ಬೆಣೆಯ?
ಹಿಡಿದೇನು ಹೇಗೆ ಪೊದೆ ಮರೆಯಲ್ಲಿ ಅಡಗಿದ
ಪಳಗಿದ ನರಿಯ
ಈ ನಾಟಕಕಾರರ ಕೃಷ್ಣವೇಷದ ನಿಜವ
ತಿಳಿವೆನೆಂದರೆ ಅವನ
ಕುಚೇಲರಷ್ಟೆ ಬಲ್ಲರು ಗೆಳೆಯ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...