Home / ಕವನ / ಕವಿತೆ / ಮಾತಿನವರು

ಮಾತಿನವರು

ಬರಿ ಗಂಗೆ ಗೌರೀಶಂಕರ
ರಾವಣಾಸುರ ಮಥನ ದಿವ್ಯನಡತೆಯ ಕಥನ
ಹಗಲಲ್ಲಿ
ಹತ್ತು ಜನರೆದುರಲ್ಲಿ
ಸತ್ತರೂ ನಿಲ್ಲುವ ಶಾಸನದಲ್ಲಿ;
ಕೊಳೆವ ಗದ್ದಲದ ವಠಾರ
ನಿಂತ ನೀರ ಗಬ್ಬುಗಟಾರ
ಬಾಗಿದವನ ಬೆನ್ನ ಕುತಾರ
ಹಿತ್ತಿಲಲ್ಲಿ
ಗುಪ್ತಚಾರರ ಜೊತೆ ಕತ್ತಲಲ್ಲಿ
ಗಾಳಿ ಹಾರಿಸಿಬಿಡುವ ಮಾತಿನಲ್ಲಿ
ಕೈಹಿಡಿದ ಬರೆಹಕ್ಕೆ ಕಣುತಪ್ಪಿಸಿ ಇವರ
ನಾಲಿಗೆಯ ಹೆರಿಗೆ.
ನ್ಯಾಯ ಒಪ್ಪಿಸಿ ಎಂದು ಕೇಳುವಂತಿಲ್ಲ,
ದಾಖಲೆ ಸುಟ್ಬು ಕೋರ್ಟಿನ ಕಣ್ಣು ತಪ್ಪಿಸುವ ಜೋಕೆ
ಬೇಕಾದಷ್ಟಿದೆ ಈ ಮಳ್ಳರಿಗೆ.

ಯಾವುದರ ದರಕಾರ ಹೊಣೆ ಹೊರೆ ಇರದ ಧಣಿಗೆ?
ಮಾತಿಗೆ ತೊಡಗಿದರೆ ಕೂತವರಿಗೆ ಕಾಣದೆ
ಹಿಗ್ಗತೊಡಗುತ್ತದೆ ಸುತ್ತಲ ಬೇಲಿ
ಬೆಚ್ಚಗಾಗುತ್ತದೆ ಕೈ ಬೆಚ್ಚಗಾಗುತ್ತದೆ ಎದೆ
ಸ್ವಿಚ್ಚು ಒತ್ತಿ ಬಿಡುತ್ತದೆ ನಾಲಿಗೆ, ಕೂಡಲೆ
ಮುಳ್ಳು ಸುರಿಸತೊಡಗುತ್ತದೆ ನಿಂತ ನೆಲಕ್ಕೆ ಜಾಲಿ.
ಆಡುತ್ತ ಆಡುತ್ತ ಮೂಡಿನಲ್ಲಿ ಮಾತು ಕೊಂಕುತ್ತದೆ
ಕೊಂಕುತ್ತ ಕೊಂಕುತ್ತ ಯಾವುದೊ ತಿರುವಿನಲ್ಲಿ ಬೊಂಕುತ್ತದೆ.

ಆಡಿದ್ದೆಲ್ಲ ಹಾಡಾಗಿ
ಹಾಡಿಗೆ ಹಾವು ಹೆಡೆತೂಗಿ
ಗೆದ್ದಿಲ ಸದ್ದಿಲ್ಲದೆ ಕಲೆ ಯಮದೂತನ ಬೀಡಾಗುತ್ತದೆ.
ಅರವತ್ತರ ಎಚ್ಚರಕ್ಕೆ
ಇಪ್ಪತ್ತರ ಪರವಶತೆ
ಸರಿಬೆಸ ಕೇಳುತ್ತದೆ
ರೂಪ ರುಚಿ ರಸದಲ್ಲಿ ಸತ್ಯ ಸಾಯುತ್ತದೆ.

ಬೆತ್ತಲೆ ಬುದ್ಧಿಗೆ ಮಾರಕ ಹಿತ್ತಾಳೆ ಕಿವಿ
ಆಗ ತತ್ವಕ್ಕೆ ಮುತ್ತಿಡುತ್ತದೆ ತುಟಿ, ಮನಸ್ಸು ಶುದ್ಧ ಭವಿ,
ಮುತ್ತೈದೆ ನಾಲಿಗೆಮುಡಿಗೆ
ಸೂಳೆ ಮನಸ್ಸಿನ ತೊಡೆಗೆ
ನಿತ್ಯ ನಿತ್ಯ ನಡೆಯುತ್ತದೆ ಭಾರಿ ಹಣಾಹಣಿ
ಎಲ್ಲ ಒಳಗೊಳಗೆ.
ಬೆರಳು ಚೀಪುವ ‘ಘ’ಗಳೆದುರಿಗೆ
ನೀರಿಗೆ ಬಿದ್ದ ಎಣ್ಣೆಹನಿ,
ಎಲ್ಲ ಅಪ್ಪಿಯೂ ಎಲ್ಲೂ ತಪ್ಪದ
‘ಪದ್ಮಪತ್ರಮಿವಾಂಭಸ’ರ ದನಿ

ಇವರ ಕೋರೆಮಾತಿನ ಹಾರೆಯೇಟಿಗೆ
ಮುರಿದು ಬೀಳದೆ ಮನೆ
ಮುರಿದು ಬೀಳದೆ ಕೊನೆ
ಸುರಿದು ಹೋಗದೆ ತೊಟ್ಟುಮುರಿದು
ಕಾಯ ಬಾಯಿಂದ ಹಾಲು ಸೊನೆ?
ಬಿದ್ದ ಕೊನೆಯಲ್ಲಿ ಬಾಡುಮೈಯಾಗಿ
ಹಾಡದೆ ಸಂಧ್ಯಾರಾಗವ ಇನ್ನೂ
ಮಧ್ಯಾಹ್ನದ ಅರೆಬಿರಿದ ಮೊಗ್ಗುನನೆ?

ಚಟಕ್ಕೆ ಮಾತು ಹುಟ್ಟಿಸಿ ಹಟಕ್ಕೆ ಸಾಕುವುದ?
ರಂಗಿನ ಅಂಗಿ ತೊಡಿಸಿ ಸಿಂಗರಿಸಿ ಮರೆಸುವುದ?
ಹಣ್ಣಿನ ಬಳ್ಳಿಯ ಮೇಲೆ ಮಿಣ್ಣಗೆ ಮುಳ್ಳು ಹಬ್ಬಿಸಿ
ಸುಳ್ಳೇ ಅದರ ಬಾಳಿಗೆ ಎಳ್ಳು ನೀರು ಬಿಡುವುದ?

ಸದಾ ಇದೊಂದೆ ಬೆರಗು ನನಗೆ
ಬೆರಗಿನೊಡನೆ ಕೊರಗು ಮರೆಗೆ
ಹೇಗೆ ತಿಳಿದೇನು ಇವರ ಮಾತಿನ
ತಳಾತಳದ ಸುಳಿಯ?
ಹೇಗೆ ಹೊಡೆದೇನು ಇವರ ನಾಲಿಗೆ ಹಾವು ನುಗ್ಗಿದ
ಮನೆ ಬಿಲಕ್ಕೆ ಬೆಣೆಯ?
ಹಿಡಿದೇನು ಹೇಗೆ ಪೊದೆ ಮರೆಯಲ್ಲಿ ಅಡಗಿದ
ಪಳಗಿದ ನರಿಯ
ಈ ನಾಟಕಕಾರರ ಕೃಷ್ಣವೇಷದ ನಿಜವ
ತಿಳಿವೆನೆಂದರೆ ಅವನ
ಕುಚೇಲರಷ್ಟೆ ಬಲ್ಲರು ಗೆಳೆಯ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...