Home / ಕವನ / ಕವಿತೆ / ಬಿಡಿ ನನ್ನ ಪಾಡಿಗೆ ನನ್ನನ್ನು

ಬಿಡಿ ನನ್ನ ಪಾಡಿಗೆ ನನ್ನನ್ನು


ನೀವು ಕೇಳಿದ್ದು ಒಳ್ಳೆಯದೆ ಆಯಿತು.
ನನಗೀಗ ಎಲ್ಲವೂ ಅರ್ಥವಾಯಿತು.
ನೋಡಿ –

ಹಿಂಡುಹಿಂಡಾಗಿ ಅಲೆಯುವ
ಮೋಡಗಳಲ್ಲೊಂದು ತುಣುಕೆಂದೊ…

ಆಕಾಶದ ಕ್ಯಾನ್‌ವಾಸಿನಲ್ಲಿ
ಬಳಿದ ಬಣ್ಣಗಳಲ್ಲೊಂದು ಎಳೆಯೆಂದೊ…

ಕಣ್ಣಾಮುಚ್ಚಾಲೆಯಾಡುವ
ಮಿಂಚಿನೊಳಗೊಂದು ಕಿಡಿಯೆಂದೊ…

ಒರಟಾಗಿ ಬೀಸುವ
ಗಾಳಿಯಲ್ಲೊಂದು ಗೆರೆಯೆಂದೊ…
ಈಗವನನ್ನು ವರ್ಣಿಸುವುದಿಲ್ಲ.


ರಕ್ತ-ಮಾಂಸ-ಮೂಳೆ ವಿರಚಿತ
ನನ್ನೆದೆಯ ಮೇಲೆ ಮಲಗಿದ್ದ.
ಯಾರು ಕರೆದರೊ ಗೊತ್ತಿಲ್ಲ.
ಯಾಕೆ ಕರೆದರೊ ಗೊತ್ತಿಲ್ಲ.
ಯಾವಾಗ ಕರೆದರೊ ಗೊತ್ತಿಲ್ಲ.
ಪ್ರೀತಿಯನ್ನು ಒದ್ದು ಹೊರಟು ಹೋದ.

ನನಗನಿಸುತ್ತದೆ
ಮಣ್ಣಿನೊಳಗೆ ಹಿಡಿಯಾಗಿ ಮಲಗಿದ್ದಾನೆ,
ನಾನವನ ಮುಟ್ಟಲಾರೆ.
ಮಣ್ಣಿನೊಳಗೆ ಮೈ ಮರೆತು ಮಲಗಿದ್ದಾನೆ,
ನಾನವನ ಎಬ್ಬಿಸಲಾರೆ.


ನಿಮ್ಮದು ಪ್ರೀತಿಯಾದರೂ ಸರಿಯೆ
ನಿಮ್ಮದು ಕರುಣೆಯಾದರೂ ಸರಿಯೆ
ಬದಲಾಯಿಸಲಾರವು ನನ್ನನ್ನು.
ನಿಮ್ಮದು ಮಾಟವಾದರೂ ಸರಿಯೆ
ನಿಮ್ಮದು ಮಾಯೆಯಾದರೂ ಸರಿಯೆ
ಒಳಗಾಗಲಾರೆ ನಾನು.

ನಾನೀಗ ಕವಯತ್ರಿ ಅಲ್ಲ
ನನ್ನಲ್ಲಿ ಕಲ್ಪನೆಗಳಿಲ್ಲ
ನನ್ನಲ್ಲಿ ಕನಸುಗಳಿಲ್ಲ
ನನ್ನಲ್ಲಿ ಕವಿತೆಗಳಿಲ್ಲ.

ಈ ಬಣ್ಣ-ಬೆಡಗು ಯಾವುದೂ
ಬದುಕ ಬೆಳಗಿಸುವುದಿಲ್ಲ.

ಅವನ ನೆನಪನ್ನು ಉಸಿರಾಡುತ್ತೇನೆ,
ಬಿಡಿ ನನ್ನ ಪಾಡಿಗೆ ನನ್ನನ್ನು.


Tagged:

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...