Home / ಕಥೆ / ಸಣ್ಣ ಕಥೆ / ಬೋಳತಲೆ ಒಡೆಯರು

ಬೋಳತಲೆ ಒಡೆಯರು

ದೊರೆಗಳಾಗಿದ್ದ ಚಾಮರಾಜ ಒಡೆಯರವರು ಬಹಳ ಭಕ್ತರಾಗಿದ್ದರು. ಮನೆ ದೇವತೆಯಾದ ಚಾಮುಂಡೇಶ್ವರಿಯಲ್ಲಂತೂ ಅವರಿಗೆ ಅತಿಶಯವಾದ ಭಕ್ತಿಯಿತ್ತು. ಪಟ್ಟವನ್ನೇರಿದ ಮೇಲೆ ಒಡೆಯರು ಒಂದು ಅಮಾವಾಸ್ಯೆಯ ರಾತ್ರಿ ಅಮ್ಮನವರ ಪೂಜೆಗೆಂದು ಪರಿವಾರದೊಡನೆ ಮಡಿಯುಟ್ಟು ಬೆಟ್ಟಕ್ಕೆ ಹೊರಟರು. ಗಾಢಾಂಧಕಾರ; ಪಂಜುಗಳನ್ನು ಹಿಡಿಸಿಕೊಂಡು ದಾರಿಯನ್ನು ಕಳೆದು ಬೆಟ್ಟವನ್ನು ಹತ್ತಲು ದೊರೆಗಳು ಮೊದಲಿಟ್ಟರು. ಅದೇ ವೇಳೆಗೆ ಸರಿಯಾಗಿ ಆಕಾಶದಲ್ಲಿ ಕಾರ್ಮೋಡಗಳು ಕವಿದುಕೊಂಡು ಗುಡುಗು ಮಿಂಚೂ ಮೊದಲಾಯಿತು. ಬೆಟ್ಟವನ್ನು ಹತ್ತುತ್ತ ಗುಡುಗು ಇನ್ನೂ ಹೆಚ್ಚಾಯಿತು. ಕಿಬ್ಬಿಯು ಭಯಂಕರವಾಗಿತ್ತು. ಇದ್ದಕ್ಕಿದ್ದ ಹಾಗೆಯೇ ಗಗನವನ್ನು ಭೇದಿಸಿಕೊಂಡು ಪ್ರಳಯ ಕಾಲದಲ್ಲಿ ನಡೆಯುವಂತೆ ಬರಸಿಡಿಲು, ರಾಜರ ಸಮೀಪದಲ್ಲಿಯೇ ಬಿತ್ತು. ಎಲ್ಲಿದ್ದವರು ಅಲ್ಲಿಯೇ ನೆಲಕ್ಕೆ ಬಿದ್ದುಬಿಟ್ಟರು; ಅನೇಕರು ಮೂರ್ಛಿತರಾದರು; ಸಿಡಿಲು ಬಿದ್ದುದು, ಹೋದುದು ಯಾರಿಗೂ ತಿಳಿಯಲಿಲ್ಲ. ಎಲ್ಲರೂ ನಿಶ್ಚೇಷ್ಟಿತರಾಗಿದ್ದರು ಎರಡು ತಾಸುಗಳ ಕಾಲ. ತರುವಾಯ ದೊರೆಗಳೆದ್ದು ಕುಳಿತು ಸುತ್ತಲೂ ನೋಡಿದರು. ಆಕಾಶವೇನೊ ಸ್ತಬ್ಧವಾಗಿತ್ತು; ಕಗ್ಗತ್ತಲು; ಮಳೆ ಯಿಲ್ಲ; ಆದ ಗಿಡಬಳ್ಳಿಗಳು ಗಾಳಿಗೆ ಸಿಕ್ಕಿ ಸುಯ್ಸುಯ್ ಎಂದು ನಿಟ್ಟುಸಿರುಬಿಡುತ್ತಿದ್ದಂತಿದ್ದವು. ರಾಜರೆದ್ದು ಪಕ್ಕದಲ್ಲಿ ಬಿದ್ದಿದ್ದವನನ್ನು ಎಚ್ಚರಿಸಲು ಪ್ರಯತ್ನಿಸಿದರು. ಪ್ರಾಣವೇ ಇಲ್ಲ; ಒಬ್ಬೊರನ್ನಾಗಿ ನೋಡುತ್ತಿರಲು ಕಡೆಗೆ ಒಬ್ಬನು ಮೂರ್ಛೆ ತಿಳಿದೆದ್ದು ಕುಳಿತು ಸ್ವಲ್ಪ ಕಾಲ ಬೆಪ್ಪಾಗಿ ನೋಡುತ್ತಲಿದ್ದು ಆಮೇಲೆ ಪಂಜನ್ನು ಹೊತ್ತಿಸಿ ರಾಜರನ್ನು ಗುರುತಿಸಿ ಅಳುತ್ತ “ಏನಾಯಿತು! ಮಹಾಸ್ವಾಮೀ! ಏನಾಯಿತು!!” ಎಂದು ಗದ್ಗದ ಸ್ವರದಿಂದ ಕೇಳಿದನು. ದೂರೆಗಳಿಗೆ ತಿಳಿಯಲಿಲ್ಲ; ಇವನು ಹೆದರಿದ್ದಾನೆಂದು “ಭಯಪಡಬೇಡವಯ್ಯ; ಇದು ದುರ್ಗಿಯ ಆಟ ಮಾತ್ರ! ಎಲ್ಲವೂ ಶಾಂತವಾಯಿತು. ಇನ್ನೇಕೆ ಅಳುಕು? ” ಎಂದು ಸಮಾಧಾನ ಪಡಿಸಿದರು. ಅದಕ್ಕೆ ಅವನು ಹೆದರಿಕೆಯಿಲ್ಲ, ಪ್ರಭು, ಅದರೆ ತಮ್ಮ…. ಜುಟ್ಟು, ಜುಟ್ಟು!” ಎಂದನು. ದೊರೆಗಳು ಆಗ ತಲೆಯನ್ನು ಸವರಿಕೊಂಡು ನೋಡಿಕೊಂಡರು-ತಲೆಯ ಕೂದಲೆಲ್ಲಾ ಉದುರಿಹೋಗಿ ಬೋಳಾಗಿಬಿಟ್ಟಿತ್ತು.

ಆಗ ರಾಜರು “ಇದಕ್ಕೇ ನಿನಗೆ ದುಃಖ! ಹೋಗಲಿ ಬಿಡು ಅಮ್ಮನವರಿಗೆ ಇಷ್ಟಕ್ಕೆ ತೃಪ್ತಿಯಾಯಿತು! ಪ್ರಾಣಕ್ಕೆ ಹಾನಿಯಲ್ಲವಲ್ಲ” ಎಂದರು. ತರುವಾಯ ಇಬ್ಬರೂ ಪೂಜೆ ಮುಗಿಸಿಕೊಂಡು ಅನುಚರರೊಡನೆ ಹಿಂತಿರುಗಿದರು.
*****
[ವಂಶರತ್ನಾಕರ, ಪುಟ ೨೦ ; ವಂಶಾವಳಿ, ಪುಟ ೧೭]

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...