Home / ಕವನ / ಕವಿತೆ / ಸುಮ್ಮನಿರು ಸಾಕು

ಸುಮ್ಮನಿರು ಸಾಕು

ಅಂತರಂಗದ ಭಾವ ಮಸಗಿರಲಿ ಅಡಗಿರಲಿ
ಭ್ರಾಂತಿ ಇದು ಮರುಗದಿರು ಸುಮ್ಮನಿರು ತೆರೆ ಬರಲಿ!

ನಾಟಕದ ರಂಗವಿದು: ಪಾತ್ರಗಳ ವಹಿಸುತಿರು
ಶಾಂತಿಯಿಂ ನೀನೀಗ ಮೌನವನು ಅನುಸರಿಸು
ಹೆದರದಿರು ಕುದಿಯದಿರು ಹೇಡಿ ನೀನಾಗದಿರು
ಬಡಿಯುತಿಹ ಅಲೆಗಳಿಗೆ ಕಣ್ಮುಚ್ಚಿ ಸಿರಬಾಗು
ಕಡಲಿನಲೆಗಳು ನಿನ್ನನೆಲ್ಲಿಗೊಯ್ದರು ಸರಿಯೆ
ದೃಢವಾದ ಚಿತ್ತವನು ಬಿಡದೆ ಪಾಲಿಸು ನಿರುತ

ನೋಡಲ್ಲಿ ಶಿರವೆತ್ತಿ ಆಗಸವ ನೀನೊಮ್ಮೆ
ನೋಡಿದೆಯೆ ಆ ಸಿರಿಯ? ನಿಷ್ಕಲ್ಮಷದ ಪರಿಯ
ಬಾಳು ಸಾಕೆಂದಳುವ ಹೇಡಿಗಳ ಕಣ್ಣೊರಸಿ
ಅಭಯವನು ನೀಡುತಿಹ ಹಸ್ತದಂತಿದೆ ನಭವು
ಕೊನೆಯಿಲ್ಲ ಮೊದಲಿಲ್ಲ ಆಶೆಪಾಶಗಳಿಲ್ಲ
ಹರುಕಿಲ್ಲ ಮುರುಕಿಲ್ಲ ತಗ್ಗುದಿಣ್ಣೆಗಳಿಲ್ಲ
ಮಬ್ಬಿಲ್ಲ ಮಸುಕಿಲ್ಲ ನರಕಯಾತನೆ ಇಲ್ಲ
ಚಿರ ಶಾಂತಿಯಿಂ ತುಂಬಿ ತುಳುಕುತಿದೆ ಮುಗಿಲು

ಕಂಗಳಿಗೆ ಕಣ್ಣಾಗಿ ವಜ್ರಗಳ ಗಣಿಯಾಗಿ
ಜೀವನದ ಕುಸುಮದಾ ಚಂದಿರಗೆ ಮನೆಯಾಗಿ
ಪ್ರಜ್ವಲಿಸಿ ಶೋಭಿಸುವ ಭಾಸ್ಕರನ ಬೀಡಾಗಿ
ಆದರದಿ ವಿಶ್ವವನು ಪಾಲಿಸುವ ದೊರೆಯಾಗಿ
ರಸಿಕರಿಗೆ ರಸವಾಗಿ ಕವಿಗಳಿಗೆ ತವರಾಗಿ
ಮೇಘಗಳ ಧ್ವಜಪಟದಿ ಮೆರೆಯುತಿದೆ ಬಾನು

ಅದರಡಿಯೊಳಡಗಿರುವ ನಿನ್ನ ಭಾವವದೆಷ್ಟು?
ನೀನೆಷ್ಟು ಜನಕಜೇ! ಸುಮ್ಮನಿರು, ಸಾಕು ಸಾಕು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...