Home / ಕವನ / ಕವಿತೆ / ಒಂದು ಕಾಗದ

ಒಂದು ಕಾಗದ

ನಿಮ್ಮ ಪತ್ರ ಬಂದು ಸೇರಿ
ಎರಡು ಮೂರು ಬಾರಿಯೋದಿ
ಎಲ್ಲ ತಿಳಿದೆನು.

ನೀವು ನನಗೆ ಗಂಡನಲ್ಲ
ನಾನು ನಿಮಗೆ ಹೆಂಡಿರಲ್ಲ
ನೀವು ತಿಳಿವುದು.

ಕುಂಟು ಕಾಲು ಬಚ್ಚು ಬಾಯಿ
ಮೆಳ್ಳುಗಣ್ಣು, ನಿಮ್ಮ ಸೇವೆ
ಮಾಡಲಾರೆನು.

ಬ್ರಹ್ಮ ಹಿಂದೆ ಗಂಟು ಹಾಕಿ
ಗಂಡಹೆಂಡಿರಾದವೆಂದು
ನೀವು ಬರೆವಿರಿ.

ಬ್ರಹ್ಮಗಿಮ್ಮ ಹಾಕಲಿಲ್ಲ
ಅಪ್ಪ ತಂದು ನನಗೆ ನಿಮಗೆ
ಗಂಟುಹಾಕಿದ.

ಹೆತ್ತ ತಂದೆ ಮಾರಿಕೊಂಡು
ಮೃತ್ಯುವಾಗಿ ಕೊಲ್ಲಲಿಂತು
ಮಾಡಲೇನಿದೆ.

ಶಾಸ್ತ್ರ ಗೀಸ್ತ್ರ ತಿಳಿಯೆ ನಾನು
ಬರೆದ ಜನರು ಹೆಂಡಿರಾಗಿ
ಸೇವೆಮಾಡಲಿ.

ನೋಟ ಬೇಟ ಗಂಡಿಗೆಂದು
ಧರ್ಮಶಾಸ್ತ್ರ ಹೆಣ್ಣಿಗೆಂದು
ನುಡಿವರೆಲ್ಲರು.

ಕೋರ್ಟು ಗೀರ್ಟು ಆಡಬೇಡಿ
ಜಡ್ಜಿ ಧರ್ಮವೇನು ಬಲ್ಲ
ನಾನು ತಿಳಿಸುವೆ.

ಕುರ್ಚಿ ಮೇಲೆ ಕುಳಿತುಕೊಂಡು
ಏನೋ ಗೀಚಿ ಎದ್ದು ಬರುವ
ಮಾತಿದಲ್ಲವು.

ತನ್ನ ಮಗಳ ನಿಮಗೆ ಕೊಟ್ಟು
ತನ್ನ ಮಗನ ಎನಗೆ ಕೊಟ್ಟು
ಮದುವೆ ಮಾಡಲಿ.

ಎನ್ನ ದುಃಖ ಆರಿಗುಂಟು
ಬಾಳಬೇಕು, ಬಾಳಲಾರೆ
ಹಾಳು ಲೋಕವು.

ಬಯ್ವ ಜನರು ಜರಿವ ಜನರು
ಅವರಿಗೇನು, ಬಾಯಿ ಕೊಬ್ಬು
ನೋವು ತೆಗೆವರೆ?

ಬಲ್ಲೆನವರ ಮನದ ಭಾವ
ಇಂದು ನಾನು ಸೂಳೆಯಾಗೆ
ಸುಖಿಸರೆಲ್ಲರು.

ಭೂಮಿ ಮೇಲೆ ಇರುವಳಲ್ಲ
ಇಂದೆ ನಾನು ಕೆರೆಗೆ ಬಿದ್ದು
ಜನ್ಮ ನೀಗುವೆ.

ಶಾಸ್ತ್ರ ಧರ್ಮ ತಣ್ಣಗಾಗಿ
ಬಯ್ವ ಜನರು ಉರಿದು ಹೋಗಿ
ಲೋಕವಡಗಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...