Home / ಕವನ / ಕವಿತೆ / ನೆನಪುಗಳಿವೆ… ಕೊಳ್ಳಿ!

ನೆನಪುಗಳಿವೆ… ಕೊಳ್ಳಿ!

ಪೆರ್‍ಲಾಜ್ಜ… ನೆಟ್ಟ ಆಲದ ಮರದಲಿ,
ಮೊಮ್ಮಕ್ಳು ಮರಕೋತಿ ಆಡಿದ್ದು ನೆನಪು.
ಮರಿ ಮಗಾ ಬುಗುರಿ ಕೆತ್ತಿ, ದಾರ ಸುತ್ತಿ,
‘ಗುಯ್’…ಽಽ ಎಂದು,
ಊರುಕೇರಿ ಆಲಿಸುವಂತೆ,
‘ಗುಯ್’ ಗುಟ್ಟಿಸಿದ್ದ!
ಆಕ್ಷಣ: ಏನೆಲ್ಲ ಮರೆತು,
ಬಾಲ್ಯಕೆ ಜಾರಿದ ಜನ!
ಅರಳಿ ನೆರಳಿಗೆ,
ತೊಟ್ಟಿಲ ಕಟ್ಟಿ,
ಅಳುವಾಕಂದಮ್ಮಗಳ ಹಾಕಿ…
ಕರುಳ ಬಳ್ಳಿಯ ಹಾಡು, ನಿತ್ಯ ತೂಗುತ್ತಿತು!

ಅರಳಿ ಮರದ ಕತೆ, ಆಳೆತ್ತರ ಹಬ್ಬಿ…
ಮರ ಮರದಾ ರಂಬೆ, ಕೊಂಬೆಗೆಲ್ಲ…
ಹದ್ದು, ಕಾಗೆ, ಹಾಳಾಗದ್ದ, ಗುಬ್ಬಿ, ಪಾರಿವಾಳ,
ಗಿಡುಗ, ಗಿಳಿ, ಬೆಳವಗಳೂ ಹಿಂಡು… ಹಿಂಡು!
ನಿತ್ಯ ಚಿಲಿಪಿಲಿಯ ಸುಪ್ರಭಾತ ಮುದದೀ ಕೇಳುತ್ತಿತ್ತು
ಪಡ್ಡೆ ಹುಡುಗರಿಲ್ಲಿ ಗೋಲಿ, ಗೆಜ್ಜುಗವಾಡಿ,
ನೆರಳ ಆಶ್ರಯಿಸಿ ಬಂದ್ವರಿಲ್ಲಿ…
ಚಿನ್ನಿದಾಂಡು, ಲಗೋರಿ, ಕಣ್ಣಾಮುಚ್ಚಾಲೆಯಾಟವಿಲ್ಲಿ!
ಊರುಕೇರಿ ಜಗಳ ಬಗೆಹರಿದು,
ಸಾಕ್ಷಿ ಮರವಾಗಿ, ವರವಾಗಿ, ಹಣ್ಣು, ಕಾಯಿ, ತೂಗುತ್ತಿತ್ತು!
ಆಲೆ ಹಣ್ಣಿನಾ ರುಚಿಯು ಬಲು ನೆನೆದರೇನುಂಟು?
ಸಿಹಿ ಸಿಹಿ ನೆನಪುಗಳಿವೆ ಈಗೋಕೊಳ್ಳಿ…
ತಲೆ ತಲೆ ಮಾರಿನ, ಲೆಕ್ಕವೀಗ ಇತಿಹಾಸ!

ಸುತ್ತಳ್ಳೀ ಜನ, ಅರಳಿ ಮರವನ್ನೇ…
ತಲೆದಿಂಬು ಮಾಡಿ
ಗುಡಿ, ಚರ್ಚು, ಮಸೀದಿ ಮನೆ, ಮಠಗಳ ಬಿಟ್ಟು,
ಒಟ್ಟಿಗೆ ಕುಂತು… ಹೊಟ್ಟೆ ತುಂಬಾ… ಮಂಡಾಳುಕಾರ,
ಒಬ್ಬಟ್ಟು, ಮಿರ್ಚಿಭಜೆ, ಕೆನೆಮಸ್ರು, ಖಾರದ ಹಿಂಡಿ,
ಅಕ್ಕಿಬಾನ, ಹುಣೆಸೆತೊಕ್ಕು, ಕೆತ್ತು ತಿಂದು…
ದುಂಡಗೆ ಮಾತಿನಾಮಂಟಪ ಕಟ್ಟಿ,
ಕುಣಿಕುಣಿದಾ ದೀನವೀಗಾ, ಗತ ವೈಭವವಿಲ್ಲಿ!!

ಎಲ್ಲಿ ಹೋದವೋ… ಆ ದಿನಗಳೂ?!
ಬಟ್ಟು, ದಮ್ಮಿಡಿ, ಆಣೆ, ಅರ್ಧಾಣೆ…
ಇನ್ನೆಲ್ಲಿ ಹುಡುಕಲಿನ್ನಾ…ಽಽ ಸೇರು, ಅಚ್ಫೇರು, ಗಿದ್ನಾ, ಪಾವುಗಳನ್ನಾ…
‘ಅಂಥಾ ಮುತ್ತಿನಂಥಾ ಜನಗಳನ್ನಾಽಽ…??’
ಈಗ ಪೆರ್‍ಲಾಜ್ಜನಿಲ್ಲ!… ಮರವಿಲ್ಲ!
ವರವಾಗಿ, ನೆನಪುಗಳಿವೆ ಕೊಳ್ಳಿ…!!
ಹಳ್ಳಿಯೆಂದರೆ: ಕೊಳ್ಳಿ! ಕಳ್ಳಿಯಂಗೆ ಸಿಕ್ಕಿದಂಗೆಲ್ಲ ಹಬ್ಬಿದಾ ಮಳ್ಳಿ!
ಪ್ರಗತಿಯ ಹೆಸರಲಿ:
ಹಸಿರು ಕಡಿದು, ಉಸಿರು ತಡೆದು,
ಬರ ಹಡೆದು, ಸರಣಿ ಸ್ಫೋಟಾ, ಏಡ್ಸ್, ಹಾರ್ಟು, ಸಕ್ಕರೆ, ಬೀಪಿ,-
ಒತ್ತಡಕ್ಕೆ, ಪೀಪಿ ಹರಿದಾಪಾಪಿಗಳಿಲ್ಲಿ.
ಐಟಿ; ಬೀಟಿ, ಆಧುನಿಕರಣದ ಬೇಟೆಗೆ,
‘ಕೊಳ್ಳು ಬಾಕು’ ಸಂಸ್ಕೃತಿಗೆ-
ಗರಗರನೇ, ಗಿರಗಿರನೇ… ತಿರಗುವಾ ‘ಗಿರಗಿಟ್ಟೆ’ಯಾಗಿ,
ಮನೆ ಮನೆಯೆಲ್ಲ…
ಜನಾಮನವೆಲ್ಲ…
ಹಳ್ಳಿ ಹಳ್ಳಿಯೆಲ್ಲ ಖಾಲಿ ಖಾಲಿ…
ಎಲ್ಲೆಲ್ಲೋ… ಆತಂಕದಾ ಸೀಮೆ ಜಾಲಿ…!!
ಊರು ಹಬ್ಬಕೆ- ‘ಮಾರಿ ಹಬ್ಬ’ವ ಮಾಡಿ,
ನಾರಿಯರೆಲ್ಲ… ನಾರು ಮಡೀಲೆ, ಹಸಿರು ತೋರಣ, ಸಿಂಗಾರ ಮಾಡಿ,
ಘಮ ಘಮ ‘ಸಳ್ಳೆಪಲ್ಲೆ’, ಅಕ್ಕಿದಾನ ಉಂಡು-
‘ದಢಮ್ಮ ಧಡಿಕೆ’ಯಾಡಿದ ನೆನಪೀಗ, ಹಾಳು ಹಂಪಿಯಾಗಿದೆ!
ಈ ಊರು ಕೇರಿ,
ಈ ಹಾದಿ ಬೀದಿ,
ಈ ಗಂಡು ಹೆಣ್ಣು,
ಒಟ್ಟಿಗಿದ್ದ ಆ ನಂಟೂ…
ಈಗೆಲ್ಲಿದೆ ಅಂಥಾ ಅಂಟು?!
ಹಾಲಿನಂಥಾ ನಮ್ಮೂರ, ಬೆಳದಿಂಗಳ ಬೆಳಕಲಿ,
ಇರುಳೆಲ್ಲ ‘ಬಗಾಟುಬಗ್ರಿ’ ‘ಪರಂಗಿ ಪೀಪಿ’ ಆಡಿದಾ ಅಂಗಳದಿ,
ಕಾಂಕ್ರಿಟ್ ಗೋಡೆಗಳೆದ್ದು,
ಮೈಯೆಲ್ಲ ತಂತಿ ಬೇಲಿಯಂದದಿ-
ಮೋಬೆಲ್ ಸರಪಳಿಗಳು!!
ಬೋರು ಬೋರಾಡಿ ಅತ್ತರೂ…
ಹೆಣಯೆತ್ತಲು ನಾಲ್ಕು ಜನರಿಲ್ಲ!
ಕೂಗಿ ಬೊಬ್ಬಿಟ್ಟರೂ ಕದ ತೆಗೆದು ‘ಸೊಪ್ಪೆನ್ನು’ವವರಿಲ್ಲ!
ಮನೆ ಮಂದಿಯೆಲ್ಲ, ಮಾಯಾ ಪೆಟ್ಟಿಗೆ ಮುಂದೇಮುಪ್ಪು!!
ಬದುಕೆಲ್ಲ ಮೂರು ಕಣ್ಣಿನಾ ಚಿಪ್ಪು
ಯಾರು ಅಳಲಿಲ್ಲ…?
ಯಾರು ಕೇಳರಿಲ್ಲಿ?!
ಯಾರಿಗೆ ಯಾರು?
ಮೂರು ದಿನದ ಸಂಸಾರ…
ಯಾವ ಪುರುಷಾರ್ಥಕೆ ಈ ಜನರೋ??
ಮನ ಕಲಕಿದೆ!
ದಿನವೆಲ್ಲ…!
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...