ನೆನಪುಗಳಿವೆ… ಕೊಳ್ಳಿ!

ಪೆರ್‍ಲಾಜ್ಜ… ನೆಟ್ಟ ಆಲದ ಮರದಲಿ,
ಮೊಮ್ಮಕ್ಳು ಮರಕೋತಿ ಆಡಿದ್ದು ನೆನಪು.
ಮರಿ ಮಗಾ ಬುಗುರಿ ಕೆತ್ತಿ, ದಾರ ಸುತ್ತಿ,
‘ಗುಯ್’…ಽಽ ಎಂದು,
ಊರುಕೇರಿ ಆಲಿಸುವಂತೆ,
‘ಗುಯ್’ ಗುಟ್ಟಿಸಿದ್ದ!
ಆಕ್ಷಣ: ಏನೆಲ್ಲ ಮರೆತು,
ಬಾಲ್ಯಕೆ ಜಾರಿದ ಜನ!
ಅರಳಿ ನೆರಳಿಗೆ,
ತೊಟ್ಟಿಲ ಕಟ್ಟಿ,
ಅಳುವಾಕಂದಮ್ಮಗಳ ಹಾಕಿ…
ಕರುಳ ಬಳ್ಳಿಯ ಹಾಡು, ನಿತ್ಯ ತೂಗುತ್ತಿತು!

ಅರಳಿ ಮರದ ಕತೆ, ಆಳೆತ್ತರ ಹಬ್ಬಿ…
ಮರ ಮರದಾ ರಂಬೆ, ಕೊಂಬೆಗೆಲ್ಲ…
ಹದ್ದು, ಕಾಗೆ, ಹಾಳಾಗದ್ದ, ಗುಬ್ಬಿ, ಪಾರಿವಾಳ,
ಗಿಡುಗ, ಗಿಳಿ, ಬೆಳವಗಳೂ ಹಿಂಡು… ಹಿಂಡು!
ನಿತ್ಯ ಚಿಲಿಪಿಲಿಯ ಸುಪ್ರಭಾತ ಮುದದೀ ಕೇಳುತ್ತಿತ್ತು
ಪಡ್ಡೆ ಹುಡುಗರಿಲ್ಲಿ ಗೋಲಿ, ಗೆಜ್ಜುಗವಾಡಿ,
ನೆರಳ ಆಶ್ರಯಿಸಿ ಬಂದ್ವರಿಲ್ಲಿ…
ಚಿನ್ನಿದಾಂಡು, ಲಗೋರಿ, ಕಣ್ಣಾಮುಚ್ಚಾಲೆಯಾಟವಿಲ್ಲಿ!
ಊರುಕೇರಿ ಜಗಳ ಬಗೆಹರಿದು,
ಸಾಕ್ಷಿ ಮರವಾಗಿ, ವರವಾಗಿ, ಹಣ್ಣು, ಕಾಯಿ, ತೂಗುತ್ತಿತ್ತು!
ಆಲೆ ಹಣ್ಣಿನಾ ರುಚಿಯು ಬಲು ನೆನೆದರೇನುಂಟು?
ಸಿಹಿ ಸಿಹಿ ನೆನಪುಗಳಿವೆ ಈಗೋಕೊಳ್ಳಿ…
ತಲೆ ತಲೆ ಮಾರಿನ, ಲೆಕ್ಕವೀಗ ಇತಿಹಾಸ!

ಸುತ್ತಳ್ಳೀ ಜನ, ಅರಳಿ ಮರವನ್ನೇ…
ತಲೆದಿಂಬು ಮಾಡಿ
ಗುಡಿ, ಚರ್ಚು, ಮಸೀದಿ ಮನೆ, ಮಠಗಳ ಬಿಟ್ಟು,
ಒಟ್ಟಿಗೆ ಕುಂತು… ಹೊಟ್ಟೆ ತುಂಬಾ… ಮಂಡಾಳುಕಾರ,
ಒಬ್ಬಟ್ಟು, ಮಿರ್ಚಿಭಜೆ, ಕೆನೆಮಸ್ರು, ಖಾರದ ಹಿಂಡಿ,
ಅಕ್ಕಿಬಾನ, ಹುಣೆಸೆತೊಕ್ಕು, ಕೆತ್ತು ತಿಂದು…
ದುಂಡಗೆ ಮಾತಿನಾಮಂಟಪ ಕಟ್ಟಿ,
ಕುಣಿಕುಣಿದಾ ದೀನವೀಗಾ, ಗತ ವೈಭವವಿಲ್ಲಿ!!

ಎಲ್ಲಿ ಹೋದವೋ… ಆ ದಿನಗಳೂ?!
ಬಟ್ಟು, ದಮ್ಮಿಡಿ, ಆಣೆ, ಅರ್ಧಾಣೆ…
ಇನ್ನೆಲ್ಲಿ ಹುಡುಕಲಿನ್ನಾ…ಽಽ ಸೇರು, ಅಚ್ಫೇರು, ಗಿದ್ನಾ, ಪಾವುಗಳನ್ನಾ…
‘ಅಂಥಾ ಮುತ್ತಿನಂಥಾ ಜನಗಳನ್ನಾಽಽ…??’
ಈಗ ಪೆರ್‍ಲಾಜ್ಜನಿಲ್ಲ!… ಮರವಿಲ್ಲ!
ವರವಾಗಿ, ನೆನಪುಗಳಿವೆ ಕೊಳ್ಳಿ…!!
ಹಳ್ಳಿಯೆಂದರೆ: ಕೊಳ್ಳಿ! ಕಳ್ಳಿಯಂಗೆ ಸಿಕ್ಕಿದಂಗೆಲ್ಲ ಹಬ್ಬಿದಾ ಮಳ್ಳಿ!
ಪ್ರಗತಿಯ ಹೆಸರಲಿ:
ಹಸಿರು ಕಡಿದು, ಉಸಿರು ತಡೆದು,
ಬರ ಹಡೆದು, ಸರಣಿ ಸ್ಫೋಟಾ, ಏಡ್ಸ್, ಹಾರ್ಟು, ಸಕ್ಕರೆ, ಬೀಪಿ,-
ಒತ್ತಡಕ್ಕೆ, ಪೀಪಿ ಹರಿದಾಪಾಪಿಗಳಿಲ್ಲಿ.
ಐಟಿ; ಬೀಟಿ, ಆಧುನಿಕರಣದ ಬೇಟೆಗೆ,
‘ಕೊಳ್ಳು ಬಾಕು’ ಸಂಸ್ಕೃತಿಗೆ-
ಗರಗರನೇ, ಗಿರಗಿರನೇ… ತಿರಗುವಾ ‘ಗಿರಗಿಟ್ಟೆ’ಯಾಗಿ,
ಮನೆ ಮನೆಯೆಲ್ಲ…
ಜನಾಮನವೆಲ್ಲ…
ಹಳ್ಳಿ ಹಳ್ಳಿಯೆಲ್ಲ ಖಾಲಿ ಖಾಲಿ…
ಎಲ್ಲೆಲ್ಲೋ… ಆತಂಕದಾ ಸೀಮೆ ಜಾಲಿ…!!
ಊರು ಹಬ್ಬಕೆ- ‘ಮಾರಿ ಹಬ್ಬ’ವ ಮಾಡಿ,
ನಾರಿಯರೆಲ್ಲ… ನಾರು ಮಡೀಲೆ, ಹಸಿರು ತೋರಣ, ಸಿಂಗಾರ ಮಾಡಿ,
ಘಮ ಘಮ ‘ಸಳ್ಳೆಪಲ್ಲೆ’, ಅಕ್ಕಿದಾನ ಉಂಡು-
‘ದಢಮ್ಮ ಧಡಿಕೆ’ಯಾಡಿದ ನೆನಪೀಗ, ಹಾಳು ಹಂಪಿಯಾಗಿದೆ!
ಈ ಊರು ಕೇರಿ,
ಈ ಹಾದಿ ಬೀದಿ,
ಈ ಗಂಡು ಹೆಣ್ಣು,
ಒಟ್ಟಿಗಿದ್ದ ಆ ನಂಟೂ…
ಈಗೆಲ್ಲಿದೆ ಅಂಥಾ ಅಂಟು?!
ಹಾಲಿನಂಥಾ ನಮ್ಮೂರ, ಬೆಳದಿಂಗಳ ಬೆಳಕಲಿ,
ಇರುಳೆಲ್ಲ ‘ಬಗಾಟುಬಗ್ರಿ’ ‘ಪರಂಗಿ ಪೀಪಿ’ ಆಡಿದಾ ಅಂಗಳದಿ,
ಕಾಂಕ್ರಿಟ್ ಗೋಡೆಗಳೆದ್ದು,
ಮೈಯೆಲ್ಲ ತಂತಿ ಬೇಲಿಯಂದದಿ-
ಮೋಬೆಲ್ ಸರಪಳಿಗಳು!!
ಬೋರು ಬೋರಾಡಿ ಅತ್ತರೂ…
ಹೆಣಯೆತ್ತಲು ನಾಲ್ಕು ಜನರಿಲ್ಲ!
ಕೂಗಿ ಬೊಬ್ಬಿಟ್ಟರೂ ಕದ ತೆಗೆದು ‘ಸೊಪ್ಪೆನ್ನು’ವವರಿಲ್ಲ!
ಮನೆ ಮಂದಿಯೆಲ್ಲ, ಮಾಯಾ ಪೆಟ್ಟಿಗೆ ಮುಂದೇಮುಪ್ಪು!!
ಬದುಕೆಲ್ಲ ಮೂರು ಕಣ್ಣಿನಾ ಚಿಪ್ಪು
ಯಾರು ಅಳಲಿಲ್ಲ…?
ಯಾರು ಕೇಳರಿಲ್ಲಿ?!
ಯಾರಿಗೆ ಯಾರು?
ಮೂರು ದಿನದ ಸಂಸಾರ…
ಯಾವ ಪುರುಷಾರ್ಥಕೆ ಈ ಜನರೋ??
ಮನ ಕಲಕಿದೆ!
ದಿನವೆಲ್ಲ…!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಸ್ತಿನ ಸಿಪಾಯಿ
Next post ಒಂದು ಕಾಗದ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…