Home / ಕವನ / ಕವಿತೆ / ಬನ್ನಿ ತಿರುವಳ್ಳುವರ್

ಬನ್ನಿ ತಿರುವಳ್ಳುವರ್

ಬನ್ನಿ ತಿರುವಳ್ಳುವರ್ ಬನ್ನಿ ವಂದನೆ ನಿಮಗೆ
ನಿಮ್ಮೊಡನೆ ನಮಗಿಲ್ಲ ಜಗಳ ಕಿತ್ತಾಟ.
ಎಲ್ಲೆ ಇದ್ದರು ನೀವು ಬೆಳಕಿನಾರಾಧಕರು?
ಪಂಪ ರನ್ನರ ಬದಿಗೆ
ನಿಮಗೂ ಇಟ್ಟಿದ್ದೇವೆ ಬೆಳ್ಳಿ ಪೀಠ
ದೂರ ಶಿಖರದಲ್ಲೆಲ್ಲೊ ನಿಂತಿದ್ದರೂ ನೀವು
ಎಲ್ಲ ಕಾಲಕ್ಕೂ
ತನ್ನೊಡಲ ಬಿಗಿದ ಕಾಮದ ಸರ್ಪಸುತ್ತಿಂದ
ಮುಕ್ತವಾಗುವುದನ್ನು ಆಡಿ ತೋರಿಸಿದ್ದೀರಿ,
ಧರ್ಮಾರ್ಥಕಾಮ ಸಂಗಮದ ಕ್ಷೇತ್ರಕ್ಕೆ ಕರೆಸಿ
ಮಿಂದು ಮಡಿಯಾಗಿ
ಎಂದು ಹರಸಿದ್ದೀರಿ.
ಭಾಷೆ ಯಾವುದೆ ಇರಲಿ, ಕಾಲ ಯಾವುದೆ ಇರಲಿ
ನೀವು ಹಚ್ಚಿದ ದೀಪ ಎಲ್ಲ ಗಡಿಯಾಚೆಗೂ
ಬೆಳಕ ಸುರಿವಂಥದು
ಕೋಟಿ ಯೋಜನದಾಚೆಯಿಂದ ಹಾಯ್ದರು ಸೂರ್ಯ-
ಕಿರಣ ಭೂಮಿಗೆ ಸೃಷ್ಟಿಶಕ್ತಿ ಕೊಡುವಂಥದು.

ನಿಮ್ಮ ಹೆಸರಲ್ಲಿ ಇಲ್ಲಿ ಏನೋ ಗದ್ದಲ ಧೂಳು ಎದ್ದದ್ದು ಕಂಡು
ನಿಮಗೆಷ್ಟು ವ್ಯಥೆಯೋ!
ತಿರುಳನೆಲ್ಲೋ ಚೆಲ್ಲಿ ಕರಟಕ್ಕೆ ಕಿತ್ತಾಟ
ನಿಮ್ಮ ಕವಿತೆಯ ಬಿಟ್ಟು ಕಲ್ಲ ಮೂರ್ತಿಯ ನಿಲ್ಲಿಸುವೆವೆಂಬ
ಮೂರ್ಖರಿಗೆ
ಏನು ಮತಿಯೋ!
ಬನ್ನಿ ತಿರುವಳ್ಳುವರ್ ನಿಮಗೆ ಪ್ರೀತಿಯ ನಮನ
ಕಲ್ಲಾಗಿ ಅಲ್ಲ ಸಿರಿಕವಿತೆಯಾಗಿ
ಯಾವ ಕಾವ್ಯಕ್ಕೆ ನಿಮ್ಮ ಸಾರವೆಲ್ಲವ ಧಾರೆಯೆರೆವಿರೋ
ಆ ಕೃತಿಯ ರೂಪವಾಗಿ.
ಬನ್ನಿ ತಿರುವಳ್ಳುವರ್, ಬನ್ನಿ ಕಾದಿದ್ದೇವೆ
ನಿಮ್ಮ ಕಾವ್ಯದ ಗಂಧಜಲದಲ್ಲಿ ಮೀಯಲು
ನಿಮ್ಮ ಲೋಕವಿವೇಕ ಪ್ರಭೆಗೆ ಮೈಯೊಡ್ಡಲು.
ಅಚ್ಚ ಕನ್ನಡದಲ್ಲಿ ಹೊಚ್ಚ ಹೊಸ ಮೈ ಪಡೆದು
ಅವತರಿಸುತಲೆ ಇರಲಿ ನಿಮ್ಮ ಕವಿತೆ,
ಕನ್ನಡದ ಕಾವ್ಯದೀಪಾವಳಿಯ ದೃಶ್ಯದಲಿ
ತಪ್ಪದೇ ಉರಿದಿರಲಿ ನಿಮ್ಮ ಹಣತೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...