ಶಿವಮೊಗ್ಗೆಯಲ್ಲಿ ಮಳೆ – ೧೯೪೬

ಹತ್ತು ದಿನದಿಂದ ಊರಲ್ಲಿ
ರಚ್ಚಿಟ್ಟು ರಾಚುತ್ತಿದೆ ಮಳೆ
ಬಡಿದಂತೆ ನೆಲಕ್ಕೆ
ಏಕಕಾಲಕ್ಕೆ ಸಹಸ್ರಮೊಳೆ!
ಊರಿನ ಕೆನ್ನೆಗೆ ಪಟಪಟ
ಬಾರಿಸಿ
ರೇಗಿಸಿ
ಛೇಡಿಸಿ
ಕೂಗಿ ತರಿಸುತ್ತಿದೆ ಎಲ್ಲರ
ಎದೆಯಲ್ಲೂ ದಿಗಿಲು
ತಿಂಗಳ ಹಿಂದೆ
ಮಾತೇ ಬರದೆ ಉಗ್ಗುತ್ತಿದ್ದ
ಕಪ್ಪನೆ ಮುಗಿಲು!

ಕುಂಬಾರಗುಂಡಿಯ ಸಣ್ಣ ಹೊಂಡಗಳೆಲ್ಲ
ಸಾರಿನ ದೊನ್ನೆ
ಕೆಂಪನೆ ಸೊನ್ನೆ
ಪ್ರಿಯನ ಮೊದಲ ಮುತ್ತಿಗೆ ನಾಚಿದ
ಕನ್ನೆಯ ಕೆನ್ನೆ
ಒಮ್ಮೊಮ್ಮೆ ಕದಡಾರತಿಯ ನೀರು
ಜೀರಿಗೆ ಬೆಲ್ಲದ ಸಾರು
ಬಕೀಟುಗಟ್ಟಲೆ ಕುಡಿದಿವೆ
ಭತ್ತದಗದ್ದೆ ಅಡಿಕೆ, ಮಾವಿನ ಬೇರು.

ಮಳೆ ಹೊಡೆತಕ್ಕೆ ಕಂಗಾಲು
ಮುಚ್ಚಿದೆ ಮನೆ ಮನೆ ಬಾಗಿಲು,
ಸಿಳ್ಳು ಹಾಕುತ್ತ ಓಣಿಗಳಲ್ಲಿ
ಪುಂಡಗಾಳಿಯ ಇರಿಚಲು ಕಾವಲು.
ತೆರೆದಿದ್ದರೆ ಕಿಟಕಿ,
ಕೊಂಚ ಒಳಕ್ಕೆ ಹಣಿಕಿ
ಪೋಲಿ ಕೂಗುವ ತೆವಲು
ಪಡ್ಡೆಗಾಳಿಗೆ,
ಕನಸುತ್ತದೆ ಗೂಳಿ ಮನಸ್ಸು
ಕಾಮದ ಹೋಳಿಗೆ.

ನುಗ್ಗಿದೆ ದೊಡ್ಡ ಬ್ರಾಹ್ಮಣರ ಬೀದಿಗೂ
ಬೀರಿನ ಬಣ್ಣದ ನೀರು.
ಹೊಳೆ ಚರಂಡಿ ಒಂದಾಗಿ
ಗುಂಡಾಭಟ್ಟರ ಮಡಿ ಬಂದಾಗಿ
ಸ್ನಾನಕ್ಕೆ ರಜ,
ಪೂಜೆ ಸಂಧ್ಯಾವಂದನೆ ವಜ.
ಕಾಫಿ ನೀರಿಗೇ ತತ್ವಾರವಾಗಿ
ಭಟ್ಟರ ಮಡಿಯ ವ್ಯಾಖ್ಯಾನ ವಿಸ್ತಾರವಾಗಿ
ಹಿಂದೆ ತಿವಿಸಿಕೊಂಡಿದ್ದ ನಲ್ಲಿಯ ಮುಖಕ್ಕೇ ಈಗ
ಕುಂಕುಮ ಹೂವು ಏರಿಸಿ ಸತ್ಕಾರ,
ಅದು ಹರಿಸಿದ ನೀರಿನಲ್ಲೇ
ಪಾನಕ ಪನಿವಾರ.

ತುಂಗೆಗೆ ಗಂಗೆಯಾಗುವ ಮನ

ಭಾಗೀರಥೀ ಹಬ್ಬದ ದಿನ.
ಹೊಳೆ ಮೆಟ್ಟಿಲಲ್ಲಿ,
ರಾಮಣ್ಣ ಶೆಟ್ಟಿ ಪಾರ್ಕಿನ ಇಳಿ ಘಟ್ಟದಲ್ಲಿ
ನೂಕು ನುಗ್ಗಲು ಜನ.
ತುಂಗೆಯ ಸರ್ಕಸ್ಸು ಅವರೆದುರಿಗೆ :
ಪ್ರಶಾಂತಲಯದ ಬ್ಯಾಂಡು ನಡಿಗೆ ಈ ಗಳಿಗೆ,
ಹೆಡಿಗೆ ಮುಚ್ಚಳ ಸರಿಸಿ
ಸರಸರನೆ ನೆಲಕ್ಕೆ ಹರಿವ
ಸರ್ಪಗತಿ ತೆರೆಗೆ
ಮರುಗಳಿಗೆ;
ಹೆಡೆಯೆತ್ತಿ
ರಪ್ಪನೆ ಬಡಿದು ದಡಕ್ಕೆ,
ಸರಿ ದೂರ ಎನ್ನುವ ರೋಷ ;
ನಿಮಿಷಕ್ಕೊಂದು ಮೆಟ್ಟಲ ಮುಳುಗು
ಜಲಕ್ಕೆ ನೆಲ ನುಂಗುವ ಆವೇಶ!

ಇಂಥ ನೆರೆಯಲ್ಲೂ
ಸುರಿಯುವ ಮಳೆಯಲ್ಲೂ
ಜೀವದ ಜೊತೆ ಅಂಬಿಗರ ಹುಚ್ಚಾಟ,
ತೇಲುವ ಕಳ್ಳನಾಟಾ ಹಿಡಿಯಲು
ಹೊಳೆಗಿಳಿದಾನೆಗಳ ಮೋಜಿನ ನೀರಾಟ.
ಆಡುವ ಆನೆ ಒಮ್ಮೊಮ್ಮೆ ಗಾಢ, ನಿಶ್ಚಲ
ಮುಳುಗದ ಬೆನ್ನು, ತಲೆ. ಮೇಲೆ ಕೂಗುವ ಕಾಗೆ
ಆನೆಯೋ ಬಂಡೆಯೋ ?
ಬೆರಗಿನ
ಆನೆಬಂಡೆ ಕಾಗೆಬಂಡೆ ಪದಕ್ಕೆ
ಹೊಸ ಅರ್ಥಸ್ಪರ್ಶ!

ಎಸೆಯುತ್ತಾರೆ ಜನ ಕೈ ಮುಗಿದು ತಾಯ ಒಡಲಿಗೆ
ಹೂವು ಅಕ್ಷತೆ ಕಾಸು,
ಹಚ್ಚಿಡುತ್ತಾರೆ ಧೂಪ.
ತೇಲಿಬಿಡುತ್ತಾರೆ ಹೆಂಗಳೆಯರು
ನೂರಾರು ದೊನ್ನೆದೀಪ,
ಹಾಡುವ ನೀರಲ್ಲಿ ಆಡುವ ಬೆಂಕಿಯ ಪುಟಾಣಿಪಾಪ!
ನೋಡುವ ಭಾವುಕರಿಗೆ ಕವಿಸುತ್ತ ಬೆರಗು
ದೂರ ಕಡಲಲ್ಲಿ ಯುದ್ಧಕ್ಕೆ ಹೊರಟಿವೆ
ಪಂಜುಬೆಳಕಿನ ಸಾಲುಹಡಗು.

ಸಂಜೆ ರಸ್ತೆಯ ತುಂಬ
ಅರಳಿದ ಛತ್ರಿಗಳ ವಾಕಿಂಗು,
ಕೆಸರು ರಸ್ತೆಯಲ್ಲಿ ಎಂಕ ಸೀನರಿಗೆ ಸ್ಕೇಟಿಂಗು!
ಚಿಕ್ಕೆಯ ಬೆಳಕೂ ಇಲ್ಲದ ಕಕ್ಕಾಬಿಕ್ಕಿರಾತ್ರಿ,
ಊಟದ ಹೊತ್ತಿಗೇ ಕರೆಂಟು ಹೋಗುವುದು ಖಾತ್ರಿ.

ಬುಡ್ಡಿ ಬೆಳಕಿನಲ್ಲಿ ಬೆಚ್ಚನೆ ಊಟ
ಎಲ್ಲಿಲ್ಲದ ಸ್ನೇಹ
ಹಬೆ ಅನ್ನಕ್ಕೆ ಹಾಗಲಗೊಜ್ಜಿಗೆ.
ಇದ್ದರೆ ಒಂದೆರಡು ಮೆಣಸಿನ ಬಜ್ಜಿಗೆ,
ನಲಿಯುತ್ತದೆ ಕಿವಿ
ಹಪ್ಪಳ ಬಾಳಕ ಮುರಿಯುವ ಸದ್ದಿಗೆ!

ಆಹಾ :
ಎಲ್ಲಪ್ಪಾ ಸುರಿದೀತು ಇನ್ನೊಮ್ಮೆ ಅಂಥ ಮಳೆ
ಆಹಾ,
ಎಲ್ಲಪ್ಪಾ ಹರಿದೀತು ಇನ್ನೊಮ್ಮೆ ಹಾಗೆ ಹೊಳೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೧೬
Next post ದಾರಿ ತಪ್ಪಿಸುವ ಶ್ಲೋಕ – ಒಂದು ಚಿಂತನೆ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys