Home / ಕವನ / ಕವಿತೆ / ಶಿವಮೊಗ್ಗೆಯಲ್ಲಿ ಮಳೆ – ೧೯೪೬

ಶಿವಮೊಗ್ಗೆಯಲ್ಲಿ ಮಳೆ – ೧೯೪೬

ಹತ್ತು ದಿನದಿಂದ ಊರಲ್ಲಿ
ರಚ್ಚಿಟ್ಟು ರಾಚುತ್ತಿದೆ ಮಳೆ
ಬಡಿದಂತೆ ನೆಲಕ್ಕೆ
ಏಕಕಾಲಕ್ಕೆ ಸಹಸ್ರಮೊಳೆ!
ಊರಿನ ಕೆನ್ನೆಗೆ ಪಟಪಟ
ಬಾರಿಸಿ
ರೇಗಿಸಿ
ಛೇಡಿಸಿ
ಕೂಗಿ ತರಿಸುತ್ತಿದೆ ಎಲ್ಲರ
ಎದೆಯಲ್ಲೂ ದಿಗಿಲು
ತಿಂಗಳ ಹಿಂದೆ
ಮಾತೇ ಬರದೆ ಉಗ್ಗುತ್ತಿದ್ದ
ಕಪ್ಪನೆ ಮುಗಿಲು!

ಕುಂಬಾರಗುಂಡಿಯ ಸಣ್ಣ ಹೊಂಡಗಳೆಲ್ಲ
ಸಾರಿನ ದೊನ್ನೆ
ಕೆಂಪನೆ ಸೊನ್ನೆ
ಪ್ರಿಯನ ಮೊದಲ ಮುತ್ತಿಗೆ ನಾಚಿದ
ಕನ್ನೆಯ ಕೆನ್ನೆ
ಒಮ್ಮೊಮ್ಮೆ ಕದಡಾರತಿಯ ನೀರು
ಜೀರಿಗೆ ಬೆಲ್ಲದ ಸಾರು
ಬಕೀಟುಗಟ್ಟಲೆ ಕುಡಿದಿವೆ
ಭತ್ತದಗದ್ದೆ ಅಡಿಕೆ, ಮಾವಿನ ಬೇರು.

ಮಳೆ ಹೊಡೆತಕ್ಕೆ ಕಂಗಾಲು
ಮುಚ್ಚಿದೆ ಮನೆ ಮನೆ ಬಾಗಿಲು,
ಸಿಳ್ಳು ಹಾಕುತ್ತ ಓಣಿಗಳಲ್ಲಿ
ಪುಂಡಗಾಳಿಯ ಇರಿಚಲು ಕಾವಲು.
ತೆರೆದಿದ್ದರೆ ಕಿಟಕಿ,
ಕೊಂಚ ಒಳಕ್ಕೆ ಹಣಿಕಿ
ಪೋಲಿ ಕೂಗುವ ತೆವಲು
ಪಡ್ಡೆಗಾಳಿಗೆ,
ಕನಸುತ್ತದೆ ಗೂಳಿ ಮನಸ್ಸು
ಕಾಮದ ಹೋಳಿಗೆ.

ನುಗ್ಗಿದೆ ದೊಡ್ಡ ಬ್ರಾಹ್ಮಣರ ಬೀದಿಗೂ
ಬೀರಿನ ಬಣ್ಣದ ನೀರು.
ಹೊಳೆ ಚರಂಡಿ ಒಂದಾಗಿ
ಗುಂಡಾಭಟ್ಟರ ಮಡಿ ಬಂದಾಗಿ
ಸ್ನಾನಕ್ಕೆ ರಜ,
ಪೂಜೆ ಸಂಧ್ಯಾವಂದನೆ ವಜ.
ಕಾಫಿ ನೀರಿಗೇ ತತ್ವಾರವಾಗಿ
ಭಟ್ಟರ ಮಡಿಯ ವ್ಯಾಖ್ಯಾನ ವಿಸ್ತಾರವಾಗಿ
ಹಿಂದೆ ತಿವಿಸಿಕೊಂಡಿದ್ದ ನಲ್ಲಿಯ ಮುಖಕ್ಕೇ ಈಗ
ಕುಂಕುಮ ಹೂವು ಏರಿಸಿ ಸತ್ಕಾರ,
ಅದು ಹರಿಸಿದ ನೀರಿನಲ್ಲೇ
ಪಾನಕ ಪನಿವಾರ.

ತುಂಗೆಗೆ ಗಂಗೆಯಾಗುವ ಮನ

ಭಾಗೀರಥೀ ಹಬ್ಬದ ದಿನ.
ಹೊಳೆ ಮೆಟ್ಟಿಲಲ್ಲಿ,
ರಾಮಣ್ಣ ಶೆಟ್ಟಿ ಪಾರ್ಕಿನ ಇಳಿ ಘಟ್ಟದಲ್ಲಿ
ನೂಕು ನುಗ್ಗಲು ಜನ.
ತುಂಗೆಯ ಸರ್ಕಸ್ಸು ಅವರೆದುರಿಗೆ :
ಪ್ರಶಾಂತಲಯದ ಬ್ಯಾಂಡು ನಡಿಗೆ ಈ ಗಳಿಗೆ,
ಹೆಡಿಗೆ ಮುಚ್ಚಳ ಸರಿಸಿ
ಸರಸರನೆ ನೆಲಕ್ಕೆ ಹರಿವ
ಸರ್ಪಗತಿ ತೆರೆಗೆ
ಮರುಗಳಿಗೆ;
ಹೆಡೆಯೆತ್ತಿ
ರಪ್ಪನೆ ಬಡಿದು ದಡಕ್ಕೆ,
ಸರಿ ದೂರ ಎನ್ನುವ ರೋಷ ;
ನಿಮಿಷಕ್ಕೊಂದು ಮೆಟ್ಟಲ ಮುಳುಗು
ಜಲಕ್ಕೆ ನೆಲ ನುಂಗುವ ಆವೇಶ!

ಇಂಥ ನೆರೆಯಲ್ಲೂ
ಸುರಿಯುವ ಮಳೆಯಲ್ಲೂ
ಜೀವದ ಜೊತೆ ಅಂಬಿಗರ ಹುಚ್ಚಾಟ,
ತೇಲುವ ಕಳ್ಳನಾಟಾ ಹಿಡಿಯಲು
ಹೊಳೆಗಿಳಿದಾನೆಗಳ ಮೋಜಿನ ನೀರಾಟ.
ಆಡುವ ಆನೆ ಒಮ್ಮೊಮ್ಮೆ ಗಾಢ, ನಿಶ್ಚಲ
ಮುಳುಗದ ಬೆನ್ನು, ತಲೆ. ಮೇಲೆ ಕೂಗುವ ಕಾಗೆ
ಆನೆಯೋ ಬಂಡೆಯೋ ?
ಬೆರಗಿನ
ಆನೆಬಂಡೆ ಕಾಗೆಬಂಡೆ ಪದಕ್ಕೆ
ಹೊಸ ಅರ್ಥಸ್ಪರ್ಶ!

ಎಸೆಯುತ್ತಾರೆ ಜನ ಕೈ ಮುಗಿದು ತಾಯ ಒಡಲಿಗೆ
ಹೂವು ಅಕ್ಷತೆ ಕಾಸು,
ಹಚ್ಚಿಡುತ್ತಾರೆ ಧೂಪ.
ತೇಲಿಬಿಡುತ್ತಾರೆ ಹೆಂಗಳೆಯರು
ನೂರಾರು ದೊನ್ನೆದೀಪ,
ಹಾಡುವ ನೀರಲ್ಲಿ ಆಡುವ ಬೆಂಕಿಯ ಪುಟಾಣಿಪಾಪ!
ನೋಡುವ ಭಾವುಕರಿಗೆ ಕವಿಸುತ್ತ ಬೆರಗು
ದೂರ ಕಡಲಲ್ಲಿ ಯುದ್ಧಕ್ಕೆ ಹೊರಟಿವೆ
ಪಂಜುಬೆಳಕಿನ ಸಾಲುಹಡಗು.

ಸಂಜೆ ರಸ್ತೆಯ ತುಂಬ
ಅರಳಿದ ಛತ್ರಿಗಳ ವಾಕಿಂಗು,
ಕೆಸರು ರಸ್ತೆಯಲ್ಲಿ ಎಂಕ ಸೀನರಿಗೆ ಸ್ಕೇಟಿಂಗು!
ಚಿಕ್ಕೆಯ ಬೆಳಕೂ ಇಲ್ಲದ ಕಕ್ಕಾಬಿಕ್ಕಿರಾತ್ರಿ,
ಊಟದ ಹೊತ್ತಿಗೇ ಕರೆಂಟು ಹೋಗುವುದು ಖಾತ್ರಿ.

ಬುಡ್ಡಿ ಬೆಳಕಿನಲ್ಲಿ ಬೆಚ್ಚನೆ ಊಟ
ಎಲ್ಲಿಲ್ಲದ ಸ್ನೇಹ
ಹಬೆ ಅನ್ನಕ್ಕೆ ಹಾಗಲಗೊಜ್ಜಿಗೆ.
ಇದ್ದರೆ ಒಂದೆರಡು ಮೆಣಸಿನ ಬಜ್ಜಿಗೆ,
ನಲಿಯುತ್ತದೆ ಕಿವಿ
ಹಪ್ಪಳ ಬಾಳಕ ಮುರಿಯುವ ಸದ್ದಿಗೆ!

ಆಹಾ :
ಎಲ್ಲಪ್ಪಾ ಸುರಿದೀತು ಇನ್ನೊಮ್ಮೆ ಅಂಥ ಮಳೆ
ಆಹಾ,
ಎಲ್ಲಪ್ಪಾ ಹರಿದೀತು ಇನ್ನೊಮ್ಮೆ ಹಾಗೆ ಹೊಳೆ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...