ಏಕೀಕರಣದ ಪೂರ್ವದಲ್ಲಿ ಬರೆದ ಕವನ


ಒಂದಿರುಳ ಕನಸಿನಲಿ
ಕನ್ನಡಮ್ಮನ ಕೇಳಿದೆನು
‘ಬೇಕು ನಿನಗೇನು ಎಂದೂ’


ಪೌರ್ಣಿಮೆಯ ಚಂದ್ರನಿಗೆ
ಕಲೆಯ ತೆರದೀ ನನಗೆ
ಒಡೆದ ಕರ್ನಾಟಕದ ಕುಂದು ಎಂದೂ


ಕೋಡಿಯೊಡೆದಿಹ ಕಣ್ಣೀರು
ಹೊಳೆಯಾಗಿ ಬಿಡದೆ ಸುರಿಸಿ
ಮನಬಿಚ್ಚಿ ಮೊರೆಬಿದ್ದಳೆನಗೆ


ಹುಲಿಯ ಬಾಯಿಗೆ ಬಿದ್ದು
ಕೊರಗಿ ಕಿರುಚುತಲಿರುವ
ಕರುವಿನಾ ತೆರದಿ ಕೂಗಿದಳೆನಗೆ


‘ಸುತ್ತೆಲ್ಲಾ ಸವಿಹಣ್ಣು
ತುಂಬಿ ತುಳುಕಿದರೇನು?
ಹೊನ್ನಿನಾ ಸಂಕಲೆಯು ಸುತ್ತಿಹುದೆಂದೂ


ನನಗೊಂದೇ ವಚನವು ಬೇಕು
ಏಕೀಕರಣವು ಬೇಕು
ನಿಮ್ಮೆಲ್ಲರ ತ್ಯಾಗ ಸಾಹಸ ಬೇಕು
*****