Home / ಕವನ / ಕವಿತೆ / ಬಯಕೆ

ಬಯಕೆ

ಬಯಕೆಯೊಂದದು
ಮನದೊಳಂದುದು
ಎನಿತೆನಿತೊ ತವಕದಿ ಮೂಡುತೆ,
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ |

ಹೊಂಬೆಳಗಲ್ಲರಳಿ, ಸೌಗಂಧ ಸೂಸಿ
ತನಿಗಾಳಿಯೋಳ್ ಬೆರೆತು ಮಕರಂದ ನೀಡೆ
ಮಣ್ಣು – ಮುಗಿಲನೆ ಕಂಡು ದಿನವೆಲ್ಲ ಘಮಘಮಿಸಿ
ನಸುನಗುವ ನಂದನದ ಹೂವಾಗೋ ಬಯಕೆ

ಬಯಕೆಯೊಂದದು
ಮನದೊಳಂದುದು
ಎನಿತೆನಿತೊ ತವಕದಿ ಮೂಡುತೆ
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ

ಬೆಟ್ಟ ಗುಡ್ಡ ಸಾಲಲಿ ಪಯಣಿಗರ ಪಥದಲಿ
ತಣ್ಣೆಳಲನಿತ್ತು, ಸವಿ ಫಲವ ನೀಡೆ
ಕಡಿದುರಿಯೊಳಿಟ್ಟರು, ಬೆಂದುದನುಂಡವರಲಿ
ಸಂತೃಪ್ತವಾಗೋ ಗಿಡ-ಮರವಾಗುವಾ ಬಯಕೆ

ಬಯಕೆಯೊಂದದು
ಮನದೊಳಂದದು
ಎನಿತೆನಿತೊ ತವಕದಿ ಮೂಡುತೆ
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ

ಗಿರಿಶೃಂಗದಿಂದಲಿ ಧುಮ್ಮಿಕ್ಕಿ ನಲಿಯುತ
ತೊರೆ ನದಿಯಾಗಿ ಸಾಗರೆಡೆಗೆ ಓಡೆ
ಹಾದಿ ಹಾದಿಯಿಕ್ಕೆಲದ ಹಸಿರ ಹೆಸರ ಕಾಣುತ
ಜೀವದೆದೆಯ ದಾಹಕೆ ಧಾರೆಯಾಗುವ ಬಯಕೆ

ಬಯಕೆಯೊಂದದು
ಮನದೊಳಂದದು
ಎನಿತೆನಿತೊ ತವಕದಿ ಮೂಡುತೆ
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ.

ಭುವಿ ಬಾನ ಬಿತ್ತರ ಕಡಲೈಸಿರಿಯ ಚಿತ್ತರ
ಬಯಲ ಬಯಲ ಸೀಮಾ ಸೀಮೆಗಳಾಚೆ
ದಾಟಿ ದಾಟಿದ ರೆಕ್ಕೆ-ಪುಕ್ಕ ಬಲದ ಸಿಂಗರ
ಪಾರತಂತ್ರ ತೊರೆದಾ ಹಕ್ಕಿಯಾಗುವ ಬಯಕೆ

ಬಯಕೆಯೊಂದದು
ಮನದೊಳಂದದು
ಎನಿತೆನಿತೊ ತವಕದಿ ಮೂಡುತೆ
ಹಿತದ ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ

ಕಂಡ ಅಗುಳಿಗೆ ತನ್ನ ಬಳಗವ ಕೂಗಿ ಕರೆಯುವ
ಹಂಚಿಕೊಳುತ ನೇಹದ ಮಮತೆ ಮೂಡೆ
ಗೂಡ ಕಟ್ಟಿದ ಪಿಕದ ಕುಲಕೂ ಗುಟಕನೀಯುವ
ಒಲವೆದೆಯ ಗೂಡಿನ ‘ಕಾಕ’ವಾಗುವ ಬಯಕೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...