ಗ್ರಹಣ

ಅಂಗಳಕ್ಕಿಳಿದು ತಮ್ಮಟೆ ಬಾರಿಸಿ
ಶಂಖ ಊದಿ
ದೇವರ ಬಲ ಹೆಚ್ಚಲಿ
ಹಾವಿನ ಬಲ ಕುಂದಲಿ ಹರಿಯೋ ಹರಿ
ಎನ್ನುತ್ತಾ ಸುತ್ತಿದರು
ಮುಳುಗಿ ಮಿಂದು ಉಂಡು ಮಲಗಿದರು
ಅಂದಿಗೆ ಧನ್ಯತೆ

ಫ್ಯಾಕ್ಟರಿಗಳ ಚಿಮಿಣಿಗಳ ದಟ್ಟ ನೆರಳುಗಳ
ಹಿರೋಶಿಮಾ ಅಣಬೆಗಳ ಪಾಷಾಣ ಮೋಡಗಳ
ಕೆಳಗೆ ಮಂದಿ ಮೇಲಕ್ಕೆ ನೋಡಿ
ಮಳೆ ಬೆಳೆಯ ಭವಿಷ್ಯ ಗುಣಿಸಿದರು
ಚಂದ್ರ ವರ್ಷಾಧಿಪತಿ ಶನಿ ಮಂತ್ರಾಧಿಪತಿ ಇತ್ಯಾದಿ
ಮತ್ತೆ ಈ ಸಂಕ್ರಾಂತಿ ರಕ್ತವಸ್ತ್ರಾಲಂಕೃತೆ ಶ್ವೇತಾಶ್ವವೇರಿ
ಕಂಚಿನ ಪಾತ್ರೆಯಲ್ಲಿ ಪಾಯಸ ಮೆಲ್ಲುತ್ತ
ದಕ್ಷಿಣಕ್ಕೆ ಹೋಗುತ್ತಾಳೆ.
ಬೆಲೆಗಳು ಏರುವುದುಂಟು
ರೋಗ ರುಜಿನಗಳ ಪೀಡೆಯುಂಟು
ಸರ್ವನಾಶಕ್ಕೆ ಎಡೆಯುಂಟು
ಇವರಿಗೆ ಪರಿಶಾಂತಿ ಮಂತ್ರಗಳಲ್ಲಿ ವಿಶ್ವಾಸವುಂಟು

ಕಾಲೇಜಿನ ಗಂಟೆಯ ಸದ್ದು ಅನುರಣಿಸುತ್ತದೆ
ಮನಸ್ಸಿನ ಅಗಾಧ ಜಗತ್ತಿನಲ್ಲಿ ನೋವು ಚಡಪಡಿಸುತ್ತಿದೆ
ದಿನನಿತ್ಯ ವ್ಯಾಪಾರ ವ್ಯವಹಾರ ಪ್ರವರ್ತನೆ ಆವರ್ತನೆ
ಪಾಠ ಹೇಳುವುದು
ಶಬ್ದಕ್ಕೆ ಶಬ್ದ ಜೋಡಿಸುವುದು
ಉದ್ದೇಶರಹಿತ ಮಾತು ಬೆಳೆಸುವುದು
ಹತ್ತು ಜನರಲ್ಲಿ ಬೆರೆತು ನಗುವುದು
ಗುಂಪಿನಿಂದ ತಲೆಮರೆಸಿ ಅಳುವುದು
ಕ್ಷಣಕ್ಷಣಕ್ಕೂ ಸಾಯುವುದು

ಒಂದೊಂದೇ ನಂಬಿಕೆಗಳು ಕಳೆದು
ಬಂಧಗಳು ತುಂಡಿರಿಸಿಕೊಂಡು ತಿರಸ್ಕರಿಸಿ
ಲಿಮೊಸಿನುಗಳಂತೆ ಹಾದು ಹೋದಾಗ-
ಹೇಳಿದ ಮಾತು, ಕೊಟ್ಟ ಭಾಷೆ, ಬರೆದ ಕವಿತೆ, ಚಿಂತಿಸಿದ ಮನಸ್ಸು,
ಹಿಡಿದ ಕೈ ಬಿಟ್ಟಮೇಲೆ
ಸಾವು ಬದುಕಿನ ನಡುವೆ ಯಾವುದನ್ನೂ ಆರಿಸಲಾರದೆ
ಉಳಿದಿರುವುದು ಇದು ಘೋರ

ಈ ಸಹಿಸಲಾಗದ ಯಾತನೆ ಯಾರಿಗೆ ತಾನೆ ತಲುಪುತ್ತದೆ?
ತಲುಪಿದರೂ ಅದರಿಂದ ತಾನೆ ಏನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈಡಿಪಸ್‌ಗೊಂದು ಪ್ರಶ್ನೆ
Next post ಮಂಗಳಾರುತಿ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…