Home / ಕವನ / ಕವಿತೆ / ಗ್ರಹಣ

ಗ್ರಹಣ

ಅಂಗಳಕ್ಕಿಳಿದು ತಮ್ಮಟೆ ಬಾರಿಸಿ
ಶಂಖ ಊದಿ
ದೇವರ ಬಲ ಹೆಚ್ಚಲಿ
ಹಾವಿನ ಬಲ ಕುಂದಲಿ ಹರಿಯೋ ಹರಿ
ಎನ್ನುತ್ತಾ ಸುತ್ತಿದರು
ಮುಳುಗಿ ಮಿಂದು ಉಂಡು ಮಲಗಿದರು
ಅಂದಿಗೆ ಧನ್ಯತೆ

ಫ್ಯಾಕ್ಟರಿಗಳ ಚಿಮಿಣಿಗಳ ದಟ್ಟ ನೆರಳುಗಳ
ಹಿರೋಶಿಮಾ ಅಣಬೆಗಳ ಪಾಷಾಣ ಮೋಡಗಳ
ಕೆಳಗೆ ಮಂದಿ ಮೇಲಕ್ಕೆ ನೋಡಿ
ಮಳೆ ಬೆಳೆಯ ಭವಿಷ್ಯ ಗುಣಿಸಿದರು
ಚಂದ್ರ ವರ್ಷಾಧಿಪತಿ ಶನಿ ಮಂತ್ರಾಧಿಪತಿ ಇತ್ಯಾದಿ
ಮತ್ತೆ ಈ ಸಂಕ್ರಾಂತಿ ರಕ್ತವಸ್ತ್ರಾಲಂಕೃತೆ ಶ್ವೇತಾಶ್ವವೇರಿ
ಕಂಚಿನ ಪಾತ್ರೆಯಲ್ಲಿ ಪಾಯಸ ಮೆಲ್ಲುತ್ತ
ದಕ್ಷಿಣಕ್ಕೆ ಹೋಗುತ್ತಾಳೆ.
ಬೆಲೆಗಳು ಏರುವುದುಂಟು
ರೋಗ ರುಜಿನಗಳ ಪೀಡೆಯುಂಟು
ಸರ್ವನಾಶಕ್ಕೆ ಎಡೆಯುಂಟು
ಇವರಿಗೆ ಪರಿಶಾಂತಿ ಮಂತ್ರಗಳಲ್ಲಿ ವಿಶ್ವಾಸವುಂಟು

ಕಾಲೇಜಿನ ಗಂಟೆಯ ಸದ್ದು ಅನುರಣಿಸುತ್ತದೆ
ಮನಸ್ಸಿನ ಅಗಾಧ ಜಗತ್ತಿನಲ್ಲಿ ನೋವು ಚಡಪಡಿಸುತ್ತಿದೆ
ದಿನನಿತ್ಯ ವ್ಯಾಪಾರ ವ್ಯವಹಾರ ಪ್ರವರ್ತನೆ ಆವರ್ತನೆ
ಪಾಠ ಹೇಳುವುದು
ಶಬ್ದಕ್ಕೆ ಶಬ್ದ ಜೋಡಿಸುವುದು
ಉದ್ದೇಶರಹಿತ ಮಾತು ಬೆಳೆಸುವುದು
ಹತ್ತು ಜನರಲ್ಲಿ ಬೆರೆತು ನಗುವುದು
ಗುಂಪಿನಿಂದ ತಲೆಮರೆಸಿ ಅಳುವುದು
ಕ್ಷಣಕ್ಷಣಕ್ಕೂ ಸಾಯುವುದು

ಒಂದೊಂದೇ ನಂಬಿಕೆಗಳು ಕಳೆದು
ಬಂಧಗಳು ತುಂಡಿರಿಸಿಕೊಂಡು ತಿರಸ್ಕರಿಸಿ
ಲಿಮೊಸಿನುಗಳಂತೆ ಹಾದು ಹೋದಾಗ-
ಹೇಳಿದ ಮಾತು, ಕೊಟ್ಟ ಭಾಷೆ, ಬರೆದ ಕವಿತೆ, ಚಿಂತಿಸಿದ ಮನಸ್ಸು,
ಹಿಡಿದ ಕೈ ಬಿಟ್ಟಮೇಲೆ
ಸಾವು ಬದುಕಿನ ನಡುವೆ ಯಾವುದನ್ನೂ ಆರಿಸಲಾರದೆ
ಉಳಿದಿರುವುದು ಇದು ಘೋರ

ಈ ಸಹಿಸಲಾಗದ ಯಾತನೆ ಯಾರಿಗೆ ತಾನೆ ತಲುಪುತ್ತದೆ?
ತಲುಪಿದರೂ ಅದರಿಂದ ತಾನೆ ಏನು?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...