Home / ಕವನ / ಕವಿತೆ / ಅಸ್ಪೃಶ್ಯರು

ಅಸ್ಪೃಶ್ಯರು

ನಾಯಿಗಳಿದ್ದಾವೆ! ಎಚ್ಚರಿಕೆ! ಎಂದು
ಯಾಕೆ ಬೆದರಿಸುತ್ತೀರಿ, ಫಲಕದ ಹಿಂದೆ ನಿಂದು?
ನಾವು ಬರೇ ಈ ಬೀದಿಯಲ್ಲಷ್ಟೆ ಹೋಗುತ್ತೇವೆ
ಮೌನ ಅಸಹ್ಯವಾದಾಗ ಮಾತಾಡುತ್ತೇವೆ
ಅಳದಿರುವುದಕ್ಕಾಗಿ ಒಮ್ಮೊಮ್ಮೆ ನಗುತ್ತೇವೆ

ನಾಯಿಗಳನ್ನು ಛೂ ಬಿಟ್ಟು ಬೆದರಿಸುತ್ತೀರಿ ನೀವು
ನಾಯಿಗಳಿದ್ದಾವೆ ಸ್ವಾಮಿ ಗೊತ್ತು ನಮಗೆ
ನಿಮ್ಮ ನಾಯಿಗಳಿದ್ದಾವೆ ಕಾರುಗಳಿದ್ದಾವೆ
ಪೋಷ್ ಹೊಟೇಲುಗಳಿವೆ ಕ್ಯಾಬರೆಸ್ವರ್ಗದ ದೇವರು ನೀವು
ಈಚೆಗೆ ಬೀದಿಗಳಲ್ಲಿ ನಾವೂ ಇದ್ದೇವೆ ಅಸ್ಪೃಶ್ಯ ವರ್ಗದ ಜನರು

ಅಪರಿಚಿತರಂತೆ ನೋಡುವುದೇಕೆ, ಸ್ವಾಮಿ?
ನಮಗೆ ಬಹು ಹಳೆಕಾಲದ ಪರಿಚಯವುಂಟು ಮರೆತಿರ?
ಹಿಂದೆ ಬ್ಯಾಬಿಲೋನಿನಲ್ಲಿ ನಿಮ್ಮ ಗಾಣ
ಎಳೆದವರು ನಾವು
ಮಾರುಕಟ್ಟೆಗಳಲ್ಲಿ ನಮ್ಮನ್ನು ಹರಾಜಿಗೆ
ಮಾರಿದವರು ನೀವು
ನಿಮ್ಮ ಊಳಿಗದ ಗೂನು ಈ ಬೆನ್ನ ಮೇಲುಂಟು
ನಮ್ಮ ಮಕ್ಕಳಿಗೂ ಇದರ ಹೆದರಿಕೆಯುಂಟು

ಸಂಧಾನಗಕ್ಕಾಗಿ ನೀವು ಬಂದದ್ದೇನೋ ಖರೆ
ಆದರೆ ಹೇಗೆ ಮಾತಾಡಿದರೂ
ನಮ್ಮ ಭಾಷೆ ನಿಮಗೆ ಅರ್ಥವಾಗುವುದಿಲ್ಲ
ಹಾಗೆಂದು ನಿಮ್ಮ ಅಂಬೋಣ
ಎನು ಮಾಡೋಣ, ಹೇಳಿ
ನೀವು ಪ್ರಯತ್ನಿಸದೇನೆ, ನಿಮಗಿಷ್ಟವಿಲ್ಲದೇನೆ
ಅರ್ಥವಾದೀತು ಎಂದಾದರೂ ಒಮ್ಮೆ

ಇಷ್ಟಕ್ಕೆಲ್ಲಾ ಯಾಕೆ ಹೀಗೆ ಹಿಸ್ಟೀರಿಯಾ ಬಡಿದವರಂತೆ ಕೂಗುತ್ತೀರಿ?
ಸಾಹಿತ್ಯ ಸಂಸ್ಕಾರ ಸಂಪತ್ತು ಅಧಿಕಾರ ಎಲ್ಲವೂ ನಿಮ್ಮದೇ ಸ್ವತ್ತು
ಎಂದ ಮೇಲೆ ಯಾಕೆ ಹೀಗೆ ಕೂಗಾಡುತ್ತೀರಿ?
ಕ್ರಾಂತಿಗಳು ಬಂದಿವೆ ನಿಜ
ಬಂದು ಹೊರಟುಹೋಗಿವೆ
ಅವು ಹೊರಟುಹೋದ್ದರಿಂದಲೇ ನಿಮ್ಮ ಪೀಳಿಗೆ ಬೆಳೆದಿದೆ
ಬೆಳೆಯುತ್ತಲೇ ಇದೆ
ಎಂದ ಮೇಲೆ ಸುಮ್ಮನೆ ಯಾಕೆ ಹೀಗೆ ಒದ್ದಾಡುತ್ತೀರಿ?

ಯಾಕೆಂದರೆ, ಚರಿತ್ರೆ ಆವರ್ತಿಸುವುದಿಲ್ಲ
ವರ್ತಮಾನ ಹೀಗೇ ನಿಂತಿರುವುದಿಲ್ಲ
ಏನೋ ಸಂಭವಿಸಲಿದೆ-ಎಂದೆ?
ಇದು ನಮಗೆ ಗೊತ್ತು
ನಮಗೆ ಗೊತ್ತೆಂದು ತಿಳಿದದ್ದರಿಂದಲೆ
ನಮ್ಮ ಕಂಡಾಗ ನಿಮ್ಮ ಮುಖಕ್ಕೊಂದು ಅಪೂರ್ವ
ಪ್ರೇತಕಳೆ ಬರುತ್ತದೆ: ಇದು ಸಹಜ
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...