ಅಡುಗೆ ಮನೆ ಸಾಹಿತ್ಯ

ಹೌದು ಗೆಳೆಯಾ ಇದು
ಅಡುಗೆ ಮನೆ ಸಾಹಿತ್ಯವೇ!

ಒಗ್ಗರಣೆಯ ಸಾಸಿವೆ ಸಿಡಿದಾಗ
ಮನವೂ ಸಿಡಿದು ಸಾವಿರ ಹೋಳಾಗಿ
ಒಲೆಯ ಮೇಲೆ ಹುಳಿ ಕುದಿವಾಗ
ಎದೆಯೂ ಕುದ್ದು ಕುದ್ದು ಹದವಾಗಿ

ಚಾಕು ಈಳಿಗೆ ಮಣೆಗಳು ತರಕಾರಿ ಹೆಚ್ಚುವಾಗ
ಭಾವನೆಗಳ ಹದವಾಗಿ ಕತ್ತರಿಸಿ ಪದವಾಗಿ
ಉಪ್ಪು ಹುಳಿ ಕಾರಗಳ ಬೆರೆಸಿ ಸಮವಾಗಿ
ಮನದಲ್ಲೇ ಗೀಚಿದ ನಾಲ್ಕು ಸಾಲಿಗೆ
ಉಪ್ಪೊ ಹುಳಿಯೋ ಕಾರವೋ
ಹೆಚ್ಚು ಕಡಿಮೆಯಾಗಿ

ಮುಸುರೆ ತಿಕ್ಕುವಾಗಲೋ
ನೆಲ ಸಾರಿಸುವಾಗಲೋ
ಮೂಡಿದ ಎಂತದೋ ಸ್ಪೂರ್ತಿ
ಎಲ್ಲಾ ಮುಗಿಸಿಟ್ಟು
ಕೈ ಒರೆಸಿ ಬರುವಾಗ
ಮಟಾ ಮಂಗಮಾಯವಾಗಿ

ಮತ್ತೊಮ್ಮೆ ಒಂದೊಂದೇ ಪದ
ನೆನಪಿಸಿ ತಿಣುಕುವಾಗ
ಹಾಲುಕ್ಕಿ, ಮಗು ಬಿಕ್ಕಿ ಎಲ್ಲಾ
ಅಯೋಮಯವಾಗಿ
ಬರೆಯಲಾಗದೇ ಉಳಿದ ಅವ್ಯಕ್ತಗಳು
ಸದಾ ಬೆಂಬಿಡದ
ಅಡುಗೆ ಮನೆ ಕೆಲಸದಂತಾಗಿ.

ಕುದ್ದು ಸಿಡಿದು ಕತ್ತರಿಸಿ ಬಿದ್ದುಕೊಂಡಿದ್ದ
ಭಾವಗಳು ಆದಿ ಇಲ್ಲದೇ ಅಂತ್ಯವಿಲ್ಲದೇ
ಇಷ್ಟಿಷ್ಟೇ ಎಲ್ಲೆಲ್ಲೋ
ಹಾಲಿನ ಲೆಕ್ಕದ ಪುಸ್ತಕದಲ್ಲೋ
ಕ್ಯಾಲೆಂಡರಿನ ಅಂಕಿಯ ಪಕ್ಕದಲ್ಲೋ
ಸಾಮಾನಿನ ಪಟ್ಟಿಯ ಹಿಂದೆಲ್ಲೋ

ವ್ಯಕ್ತವಾದರೂ ಅನಾಥವಾಗಿ
ಉಪ್ಪು ಹುಳಿ ಕಾರಗಳ
ಹದಬೆರೆತ ಖಾದ್ಯವೆಂದು
ಎದೆ ತಟ್ಟಿ ಹೇಳಲಾಗದ
ಅಲ್ಲಿಷ್ಟು, ಇಲ್ಲಿಷ್ಟು ಭಾವೋನ್ಮಾದ
ಹರಿದು ಬಿದ್ದು
ಕಲಸುಮೇಲೋಗರವಾದ ಇದು
ಹೌದು ಗೆಳೆಯ
ಅಡುಗೆ ಮನೆ ಸೇರಿದ ಮನದ ಸಾಹಿತ್ಯವೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾಸಲೀಲೆ
Next post ಚಿಟ್ಟೆಗಳು

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…