Home / ಕವನ / ಕವಿತೆ / ಈಗ ಯಾರ ಕ್ಷಮಿಸಬೇಕು?

ಈಗ ಯಾರ ಕ್ಷಮಿಸಬೇಕು?

ಮೊದಮೊದಲು ಎಲ್ಲವೂ ಹೀಗಿರಲಿಲ್ಲ
ಹೌದು ಎಲ್ಲವೂ ಹೀಗಿರಲಿಲ್ಲ!

ಭಾವುಕ ಕವಿಯ ಭಾವಗೀತೆಗಳಂತೆ
ಮೊಗ್ಗೊಂದು ತನ್ನಷ್ಟಕ್ಕೇ ಬಿರಿದರಳಿದಂತೆ
ಥೇಟ್ ಮಗುವಿನ ನಗುವಂತೆ
ಉತ್ಸಾಹದಿ ನಳನಳಿಸುತ್ತಿದ್ದ ಹುಡುಗಿ
ಇದ್ದಕ್ಕಿದ್ದಂತೆ ಹೀಗೆ,
ಪ್ರೌಢ ಹೆಣ್ಣಾಗಿದ್ದು ಹೇಗೆ?

ಈರುಳ್ಳಿ ಹೆಚ್ಚುತ್ತಾ
ಈರುಳ್ಳಿಯೇ ಆಗಿ
ಘಾಟಾಗಿ ಕಣ್ಣೀರಾಗಿ
ಪಕಳೆ, ಪಕಳೆಗಳ
ಎಳೆ ಎಳೆ ಬಡಿಸಿಟ್ಟಂತೆಲ್ಲಾ
ಸರ್ವವ್ಯಾಪಿಯಾಗಿ.

ಕೆಂಪು ಮೆಣಸಿನಕಾಯಿ ಹುರಿಯುತ್ತಲೇ
ಕಪ್ಪಾಗಿ ಖಾರವಾಗಿ
ಭಾವಗಳ ಸುಟ್ಟುಕೊಳ್ಳುತ್ತಾ
ಬಾಯ್ಗೆ ಸಿಕ್ಕಾಗೊಮ್ಮೆ
ಹಾ! ಎಂದು ಚುರುಗುಟ್ಟಿಸಿ

ತನ್ನದಲ್ಲದ ತನ್ನದರ ಬಗೆಗೇ
ಬೆಚ್ಚುತ್ತಾ ಭ್ರಮೆಗೊಳ್ಳುತ್ತಾ
ಅಮೂರ್ತದ ಚಿಪ್ಪೊಳಗೆ
ಮೆಲ್ಲಗೆ ಮೂರ್ತಗೊಳ್ಳುತ್ತಾ

ತನ್ನದೇ ಕ್ರೂರ ಮೌನಗಳಿಗೆ ಹೆದರಿ
ಅರ್ಥವಿಲ್ಲದ ಮಾತಾಗುತ್ತ
ನೆನ್ನೆಗಳ ನೆನೆಸುತ್ತಾ
ನಾಳೆಗಳ ಕನಸುತ್ತಾ
ಇಂದಿನಲ್ಲಿ ಕಳೆದುಹೋದ ಹುಡುಗಿ
ಈಗ ಯಾರ ಕ್ಷಮಿಸಬೇಕು?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...