Home / ಕವನ / ಕವಿತೆ / ನಾವು ಮನುಜರು

ನಾವು ಮನುಜರು

ನಾವು ಸಾಮಾನ್ಯರು
ಕಡಿಯುತ್ತೇವೆ ಕುಡಿಯುತ್ತೇವೆ
ತಿನ್ನುತ್ತೇವೆ ಮಲಗುತ್ತೇವೆ
ಬಾಧೆಗಳಿಂದ ಮುಲುಗುತ್ತೇವೆ
ಹಸಿಯುತ್ತೇವೆ ಹುಸಿಯುತ್ತೇವೆ
ನುಸಿಯುತ್ತೇವೆ ಮಸೆಯುತ್ತೇವೆ
ಸಂದುಗಳಲ್ಲಿ ನುಸುಳುತ್ತೇವೆ
ಸಿಕ್ಕಷ್ಟು ಕಬಳಿಸುತ್ತೇವೆ
ಸಿಗಲಾರದ್ದಕ್ಕೆ ಹಳಹಳಿಸುತ್ತೇವೆ

ಕನಸುಗಳ ಹೆಣೆಯುತ್ತೇವೆ
ನನಸಾಗದೆ ದಣಿಯುತ್ತೇವೆ
ಪರದೆಗಳಲ್ಲಿ ಕುಣಿಯುತ್ತೇವೆ
ಕಾಣದುದರ ಬೆದರಿಕೆಗೆ ಮಣಿಯುತ್ತೇವೆ

ಹೊರಗೆ ಬಂದು ಬೀದಿಗಳಲ್ಲಿ
ನಿಸೂರಾಗಿ ನಡೆಯುತ್ತೇವೆ
ಗುಂಪಿನಲ್ಲಿ ಗೋವಿಂದಾ
ಸೀದಾ ಸಾದಾ ಸಾಚಾತನಗಳಿಗೆ
ನಾವೇ ಹಕ್ಕುದಾರರು
ನ್ಯಾಯ ನೀತಿ ಧರ್ಮಗಳಿಗೆ
ನಾವೇ ವಾರಸುದಾರರು
ಪೋಜು ಕೊಡುವ ಸರದಾರರು
ಪರರನ್ನು ಹೇಸುತ್ತೇವೆ
ಅಲ್ಲಿ ಇಲ್ಲಿ ಮೂಸುತ್ತೇವೆ
ಹಣಕ್ಕೆ ಹಡದಿ ಹಾಸುತ್ತೇವೆ
ಕಂಡವರ ಬೆಳೆಯ ಮೇಸುತ್ತೇವೆ
ಕಂಡು ಕೇಳಿದರೆ ಇಲ್ಲೆಂದು ವಾದಿಸುತ್ತೇವೆ
ರುಚಿಗಳನ್ನೇ ಬಯಸುತ್ತೇವೆ

ವಾಸನೆಗಳ ಹಿಂಬಾಲಿಸುತ್ತೇವೆ
ಕಡುಕೊಂಡು ಬಿದ್ದಾಗ ಹಲ್ಲು ಕಿಸಿಯುತ್ತೇವೆ
ಹೊರಳುತ್ತೇವೆ ನರಳುತ್ತೇವೆ

ಯಾರಿಗೆ ಬೇಕು ಕಷ್ಟ ನಷ್ಟ
ಸಾವು ನೋವು ಅನಿಷ್ಟ
ಅವುಗಳಿಂದ ದೂರ ಓಡುತ್ತೇವೆ
ಮೈ ಉಳಿಸಲು ಗೊಣಗಾಡುತ್ತೇವೆ
ಜೀವ ಉಳಿಸಲು ಹೆಣಗಾಡುತ್ತೇವೆ

ಚಟ ವ್ಯಸನಗಳು ನಮ್ಮ ಜೀವ ಬಂಧುಗಳು
ಅದಕ್ಕಾಗಿ ಬಿಟ್ಟೇವು ಜೀವ
ಸೋಮಾರಿತನ ಸುಳ್ಳು ತಗುಲುಗಳು
ನಮ್ಮ ಜಾಯಮಾನ
ಅದರಲ್ಲೇ ಸಾಗುತಿದೆ ದಿನಮಾನ

ಸಣ್ಣ ಸಣ್ಣದಕೆ ಸೆಣಸುತ್ತೇವೆ
ಕಚ್ಚಾಡುತ್ತೇವೆ ಬಡಿದಾಡುತ್ತೇವೆ
ನಾಯಿಗಳೂ ನಾಚುವಂತೆ
ಪುಕ್ಕಟೆ ಸಿಕ್ಕರೆ ಮುಕ್ಕುರುತ್ತೇವೆ
ಹರಕೊಂಡು ತಿನ್ನುತ್ತೇವೆ
ಕಾಗೆಗಳೂ ಬೆದರುವಂತೆ

ಏನೇನೂ ಕಿಸಿದಿಲ್ಲವಾದರೂ
ಮಾನ ಸನ್ಮಾನ ಪದವಿ ಪ್ರಶಸ್ತಿಗಳಿಗೆ
ಕೈ ಚಾಚುತ್ತೇವೆ ಬಾಚುತ್ತೇವೆ
ಪ್ರಚಾರ ನಮಗಲ್ಲದೆ ಇನ್ನಾರಿಗೆ
ಗೆದ್ದೆತ್ತಿನ ಬಾಲ ಹಿಡಿದು ಹಾಕಿ ಜೈಕಾರ
ಬೇಳೆ ಬೇಯಿಸಿಕೊಳ್ಳುತ್ತೇವೆ
ಗಾಳಿ ಬಂದಂತೆ ತೂರಿಕೊಳುತ್ತೇವೆ

ಹೆರರ ಚಪ್ಪರ ಉರಿಸಿ
ಮೈಕೈ ಕಾಯಿಸಿಕೊಳ್ಳುತ್ತೇವೆ
ಹೇಳುತ್ತಾ ಹೋದರೆ ನಮ್ಮ ಕಥನ
ಸಣ್ಣವು ಭಾರತ ರಾಮಾಯಣ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...