Home / ಕವನ / ಕವಿತೆ / ನಾವು ಮನುಜರು

ನಾವು ಮನುಜರು

ನಾವು ಸಾಮಾನ್ಯರು
ಕಡಿಯುತ್ತೇವೆ ಕುಡಿಯುತ್ತೇವೆ
ತಿನ್ನುತ್ತೇವೆ ಮಲಗುತ್ತೇವೆ
ಬಾಧೆಗಳಿಂದ ಮುಲುಗುತ್ತೇವೆ
ಹಸಿಯುತ್ತೇವೆ ಹುಸಿಯುತ್ತೇವೆ
ನುಸಿಯುತ್ತೇವೆ ಮಸೆಯುತ್ತೇವೆ
ಸಂದುಗಳಲ್ಲಿ ನುಸುಳುತ್ತೇವೆ
ಸಿಕ್ಕಷ್ಟು ಕಬಳಿಸುತ್ತೇವೆ
ಸಿಗಲಾರದ್ದಕ್ಕೆ ಹಳಹಳಿಸುತ್ತೇವೆ

ಕನಸುಗಳ ಹೆಣೆಯುತ್ತೇವೆ
ನನಸಾಗದೆ ದಣಿಯುತ್ತೇವೆ
ಪರದೆಗಳಲ್ಲಿ ಕುಣಿಯುತ್ತೇವೆ
ಕಾಣದುದರ ಬೆದರಿಕೆಗೆ ಮಣಿಯುತ್ತೇವೆ

ಹೊರಗೆ ಬಂದು ಬೀದಿಗಳಲ್ಲಿ
ನಿಸೂರಾಗಿ ನಡೆಯುತ್ತೇವೆ
ಗುಂಪಿನಲ್ಲಿ ಗೋವಿಂದಾ
ಸೀದಾ ಸಾದಾ ಸಾಚಾತನಗಳಿಗೆ
ನಾವೇ ಹಕ್ಕುದಾರರು
ನ್ಯಾಯ ನೀತಿ ಧರ್ಮಗಳಿಗೆ
ನಾವೇ ವಾರಸುದಾರರು
ಪೋಜು ಕೊಡುವ ಸರದಾರರು
ಪರರನ್ನು ಹೇಸುತ್ತೇವೆ
ಅಲ್ಲಿ ಇಲ್ಲಿ ಮೂಸುತ್ತೇವೆ
ಹಣಕ್ಕೆ ಹಡದಿ ಹಾಸುತ್ತೇವೆ
ಕಂಡವರ ಬೆಳೆಯ ಮೇಸುತ್ತೇವೆ
ಕಂಡು ಕೇಳಿದರೆ ಇಲ್ಲೆಂದು ವಾದಿಸುತ್ತೇವೆ
ರುಚಿಗಳನ್ನೇ ಬಯಸುತ್ತೇವೆ

ವಾಸನೆಗಳ ಹಿಂಬಾಲಿಸುತ್ತೇವೆ
ಕಡುಕೊಂಡು ಬಿದ್ದಾಗ ಹಲ್ಲು ಕಿಸಿಯುತ್ತೇವೆ
ಹೊರಳುತ್ತೇವೆ ನರಳುತ್ತೇವೆ

ಯಾರಿಗೆ ಬೇಕು ಕಷ್ಟ ನಷ್ಟ
ಸಾವು ನೋವು ಅನಿಷ್ಟ
ಅವುಗಳಿಂದ ದೂರ ಓಡುತ್ತೇವೆ
ಮೈ ಉಳಿಸಲು ಗೊಣಗಾಡುತ್ತೇವೆ
ಜೀವ ಉಳಿಸಲು ಹೆಣಗಾಡುತ್ತೇವೆ

ಚಟ ವ್ಯಸನಗಳು ನಮ್ಮ ಜೀವ ಬಂಧುಗಳು
ಅದಕ್ಕಾಗಿ ಬಿಟ್ಟೇವು ಜೀವ
ಸೋಮಾರಿತನ ಸುಳ್ಳು ತಗುಲುಗಳು
ನಮ್ಮ ಜಾಯಮಾನ
ಅದರಲ್ಲೇ ಸಾಗುತಿದೆ ದಿನಮಾನ

ಸಣ್ಣ ಸಣ್ಣದಕೆ ಸೆಣಸುತ್ತೇವೆ
ಕಚ್ಚಾಡುತ್ತೇವೆ ಬಡಿದಾಡುತ್ತೇವೆ
ನಾಯಿಗಳೂ ನಾಚುವಂತೆ
ಪುಕ್ಕಟೆ ಸಿಕ್ಕರೆ ಮುಕ್ಕುರುತ್ತೇವೆ
ಹರಕೊಂಡು ತಿನ್ನುತ್ತೇವೆ
ಕಾಗೆಗಳೂ ಬೆದರುವಂತೆ

ಏನೇನೂ ಕಿಸಿದಿಲ್ಲವಾದರೂ
ಮಾನ ಸನ್ಮಾನ ಪದವಿ ಪ್ರಶಸ್ತಿಗಳಿಗೆ
ಕೈ ಚಾಚುತ್ತೇವೆ ಬಾಚುತ್ತೇವೆ
ಪ್ರಚಾರ ನಮಗಲ್ಲದೆ ಇನ್ನಾರಿಗೆ
ಗೆದ್ದೆತ್ತಿನ ಬಾಲ ಹಿಡಿದು ಹಾಕಿ ಜೈಕಾರ
ಬೇಳೆ ಬೇಯಿಸಿಕೊಳ್ಳುತ್ತೇವೆ
ಗಾಳಿ ಬಂದಂತೆ ತೂರಿಕೊಳುತ್ತೇವೆ

ಹೆರರ ಚಪ್ಪರ ಉರಿಸಿ
ಮೈಕೈ ಕಾಯಿಸಿಕೊಳ್ಳುತ್ತೇವೆ
ಹೇಳುತ್ತಾ ಹೋದರೆ ನಮ್ಮ ಕಥನ
ಸಣ್ಣವು ಭಾರತ ರಾಮಾಯಣ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...