ಯಾರ ಬಳಸಿ ನಿಂತಿರುವನೊ
ನನ್ನ ಹೆಸರಿನಲ್ಲಿ
ಅಳುತಿರುವನು ಸಿಲುಕಿ ಅವನು
ಈ ಕೂಪದಲ್ಲಿ
ಹಗಲಿರುಳೂ ಮನಸುರಿದು
ಗೋಡೆಯೊಂದ ಸುತ್ತಲೂ
ಕಟ್ಟುತಿರುವ ಚಕ್ರಬಂಧ
ಮುಟ್ಟುತ್ತಿದೆ ಮುಗಿಲು
ಗೋಡೆ ನಡುವೆ ತರೆಯುತಿರುವ
ಕಾಳತಿಮಿರ ಕೂಪ
ಮೆಲು ಮೆಲ್ಲನೆ ನುಂಗುತ್ತಿದೆ
ನನ್ನ ನೈಜರೂಪ
ಈ ಎಚ್ಚರ ಇಷ್ಟು ಶ್ರಮಕೆ
ಪಡದುದೇನು ಕಡೆಗೆ?
ಸರಿಯುತಿದೆ ನನ್ನ ನೈಜ
ಬಿಂಬ ಕಣ್ಣಮರೆಗೆ!
* ರವೀಂದ್ರನಾಥ ಟಾಗೋರರ ಗೀತಾಂಜಲಿಯ ಭಾಗವೊಂದರ ಅನುವಾದ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.