Home / ಕವನ / ಕವಿತೆ / ಅಣುಶಕ್ತಿ

ಅಣುಶಕ್ತಿ

ಅಂದು – ಋಷಿಗಳ್ ಯೋಗಿಗಳ ಪರಮ ದಾರ್ಶನಿಕರ್‍
ಭಕ್ತರ್‍ ವಿರಕ್ತರ್‍ ಕೀವಂದ್ರರ್‍
ದಿವ್ಯಚಕ್ಷುನಿನಿಂ
ಅಣುವನೊಡೆದರ್‍
ಕಂಡರದ್ಭುತಮಂ,
ಪೂರ್ಣ ದರ್ಶನಮಂ:
ವ್ಯೋಮ ಭೂಮಿಗಳೊಳ್

ರವಿಯಾಗಿ ಶಶಿಯಾಗಿ ತಾರಾನಿಕರಮಾಗಿ
ಸಿಡಿಲಾಗಿ ಮಿಂಚಾಗಿ ವೃಷ್ಟಿಯೆನಿಸಿ
ಕಡಲಾಗಿ ಭೂಮಿಯೊಡಲಾಗಿ
ತಾನ್ ಸರ್ವ ಸೃಷ್ಟಿಯೆನಿಸಿ
ಮೆರೆವ
ಪರಮ ತೇಜಸ್ವಿಯನ್
ಅಣುವಿಗಣುವಾದನನ್
ಮಹತೋಮಹೀಯನನ್
ಸರ್ವಶಕ್ತನನ್
ಸರ್ವಕಾರಣನನ್
ಪರಮಾತ್ಮನನ್
ಲೋಕತಾರಕನನ್.

ಇಂದು – ಹಿರಿ ವಿಜ್ಞಾನಿಗಳ್ ಪರಮ ಶಕ್ತರ್‍
ಪ್ರತ್ಯಕ್ಷತಾ ತತ್ವದತಿವೀರ ಭಕ್ತರ್‍
ಯಂತ್ರ ಚಕ್ಷುವಿನಿಂ
ಅಣುವನೊಡೆದರ್‍
ಜಗದ
ಕಟ್ಟನೊಡೆದರ್‍:
ಒಡೆದು
ಕಂಡರದ್ಭುತಮಂ,
ಖಂಡ ದರ್ಶನಮಂ:
ವ್ಯೋಮ ಜನ ಭುವಿಗಳೊಳ್
ರವಿ ಶಶಿಗಳಂ ನೊಣೆವ ರಾಹು ಸಮನಾಗಿ
ತಾರೆಗಳ ಮುಕ್ಕುಳಿಪ ತಮದ ರಕ್ಕಸನೆನಿಸಿ
ಸಿಡಿಲಾಗಿ ಸಿಡಿದು ಸೀಳ್ ಮಿಂಚಾಗಿ ಇಳಿದು
ಸುರಿದಗ್ನಿವೃಷ್ಟಿಯಾಗಿ
ಕಡಲನೇ ಕುಡಿದು ನೆಲಮೆಲ್ಲಮನ್ ಒಡೆದು
ಸೃಷ್ಟಿಸರ್ವಸ್ವಮಂ ಬಿಡದೆ ತೊಡೆದು
ಅತಿ ರೌದ್ರದೆಸಕದಿಂ
ಉರಿದು ಮಾಮಸಕದಿಂ
ಪ್ರಲಯ ರುದ್ರಂ ತಾನೆ ಎನಿಸಿ
ಮೆರೆವ
ಪರಮ ಪ್ರಕಾಶಮಂ
ಸೃಷ್ಟಿಯ ವಿನಾಶಮಂ
ಅಣುವಿನೊಳಶಕ್ತಿಯಂ
ಲೋಕ ಮಾರಕಮಂ.

ಅದು ಶಾಂತಿದರ್ಶನಂ,
ಲೋಕತಾರಕ ಶಾಂತಿ;
ಇದು ಕ್ರಾಂತಿ ದರ್ಶನಂ,
ಲೋಕಮಾರಕ ಕ್ರಾಂತಿ.

ವಿಜ್ಞಾನಿಗಳ್ ಧರ್ಮಜ್ಞಾನಿಗಳ್ ತಾವಾಗಿ
ವಿಜ್ಞಾನದ ಸಿಡಿಲ್ ಬಾನವರ ಹೂವಾಗಿ
ಮಾನವರಿಗೊಸಗೆಯಾಗೆ
ಕ್ರಾಂತಿ ‘ಸಂಕ್ರಾಂತಿ’ಯಾಗೆ
ಶುಭವರಳೆ ಕ್ರಾಂತಿಯೊಳಗೆ
ನಿಶ್ಚಯಂ ಕಾಂತಿ ಇಳೆಗೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...