Home / ಕವನ / ಕವಿತೆ / ಹೆಸರಿನೊಳಗೇನಿದೆ?

ಹೆಸರಿನೊಳಗೇನಿದೆ?

ದರ್ಪ ಸೂಚನೆ ಸುಖದ ವಂಚನೆ
’ಮನು’ ಮನದ ಯಾತನೆ
ಜಾತಿ ಧರ್ಮ ಆಸ್ತಿ ಗೌರವ
ಕಾಣಲಾರವೆ ಹೆಸರೊಳಗೆ?

ಊರ ಗೌಡನ ಹೆಸರು
ಶೂದ್ರ ಸಿದ್ದನದೇನು?
ಗೌಡ ಕರೆದಂತೆ ಕರಿಸಿದ್ದನನ್ನು
ಕೂಗಬಹುದೇ ಹೊಲೆಯ ಗೌಡನನ್ನು?

ಇರಬಹುದು ಒಮ್ಮೊಮ್ಮೆ
ಹೆಸರೊಂದೆ ಈರ್ವರಿಗು
ಒಂದೇ ಮನೆಯಲಿ ಸಣ್ಣ ದೊಡ್ಡ
ಜಾತಿ ಮತಗಳ ನಡುವೆ ದೊಡ್ಡ ಗುಡ್ಡ

ಲಂಗೋಟಿ ಇರದವಗೂ
ಗೌಡನೆಂದೆ, ಸಾಮಿಯೆಂದೆ
ಧಣಿಯೆಂದೆ, ಸಾವ್ಕಾರನೆಂದೆ
ಹಾಗಲ್ಲದಿದ್ದರೆ ಅದು ಜಾತಿ ನಿಂದೆ!

ಒಲವಿತ್ತು ಬಲವಿತ್ತು
ಛಲವಿತ್ತು ಗೆಲುವಿತ್ತು
ಊರಾಚೆಯ ಕರಿಯನಿಂದೆ
ಕರೆದೆ ನೀ ನಿನ್ನದೇ ದೇವರ
’ಲೇ ಬಸ್ಯಾ, ಯಂಕ್ಯಾ, ರಾಗ್ಯಾ, ರಾಮ್ಯಾ…’
ವಕ್ರೋಕ್ರ ಪೆಕರ ಕಾಗೆ ಕರೆವಂತೆ

ಹೆಸರಿನಿಂದಲೆ ಧರ್ಮ
ಹೆಸರಿನಿಂದಲೆ ಕರ್ಮ
ಗೊತ್ತಿಲ್ಲ ಯಾರಿಗೆ ಇದರ ಮರ್ಮ?

ಅಕ್ಬರನೆಂದರೆ ಮುಸ್ಲಿಮನೆಂದೆ
ಆಚಾರಿಯೆಂದರೆ ಹಾರವನೆಂದೆ
ಡೇವಿಡ್ಡು ಆಂಥೋನಿ ಕ್ರಿಸ್ತನೆಂದೆ

ಎಂದಾದರು ಎಲ್ಲಾದರು
ಇಟ್ಟು ಕರೆದೆವೆ ಬೇರೆ ಹೆಸರು
ನಮ್ಮ ಮಕ್ಕಳಿಗೂ ಅದಲು ಬದಲು?

ಮರದ ತುಂಡು
ಕಲ್ಲು ಗುಂಡು
ಊರ ಹೊರಗಿನ ದೇವರು

ಮಾರಮ್ಮ ದುರುಗಮ್ಮ
ಸುಂಕ್ಲಮ್ಮ ಮರಿಗೆಮ್ಮ
ಎಷ್ಟು ಚಂದದ ಹೆಸರು
ಕುರಿ ಕೋಳಿ ಕ್ವಾಣ
ಉಳಿಸಿದ್ದು ಇವರ ನ್ಯಾಣ!

ಚಂದ ಚಂದದ ಮೂರ್ತಿ
ಜಗವ ತುಂಬಿದೆ ಕೀರ್ತಿ
ದೊಡ್ಡ ಮಂದಿಯ ದೇವರು
ಕೃಷ್ಣನಂತೆ ರಾಮನಂತೆ
ಎಲ್ಲಾ ಅವನ ಲೀಲೆಯಂತೆ
ಗೋವಿಂದಾ ಮಾಯೆ ನಿನ್ನ ಹೆಸರು!

ಜಾತಿ ಜಾತಿಗೂ ಒಬ್ಬ
ಧರ್ಮ ಧರ್ಮಕೂ ಮಬ್ಬ
ಸೃಷ್ಟಿಸಿದೆ ಬಲುಚತುರ ಮಾಯಕಾರ

ನಾಮ ನಾಮಗಳ ಹೊಸೆದು
ಒಂದೇ ದಾರದಿ ಬೆಸೆದು
ಜೀವ ಜೀವಕೆ ಜೀವಕೊಡುವುದ
ಬೇಕೆಂತಲೇ ಮರೆತ ಗೆಣೆಕಾರ!

ನಿನ್ನೆ ಮೊನ್ನೆಗಳಿಂದ ಕತ್ತಲೆ ಸೀಳಿ
ನಾಲ್ಕಕ್ಷರದ ಬೆಳಕು ಮೂಡಿ
ಉಟ್ಟ ವಸ್ತ್ರದ ಜೊತೆಗೇ
ಇಟ್ಟ ಹೆಸರುಗಳು ಬದಲಾಗಿ
ಸಂದಿದೆ ನಗರಜೀವನದ ಷೋಕಿ

ಹೆಸರಿನಲ್ಲೇನಿದೆ ಬರೀ ಹೆಸರು
ಲೋಕವಾದರೆ ತಾ ಒಂದೇ ಉಸಿರು

*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...