ಹೆಸರಿನೊಳಗೇನಿದೆ?

ದರ್ಪ ಸೂಚನೆ ಸುಖದ ವಂಚನೆ
’ಮನು’ ಮನದ ಯಾತನೆ
ಜಾತಿ ಧರ್ಮ ಆಸ್ತಿ ಗೌರವ
ಕಾಣಲಾರವೆ ಹೆಸರೊಳಗೆ?

ಊರ ಗೌಡನ ಹೆಸರು
ಶೂದ್ರ ಸಿದ್ದನದೇನು?
ಗೌಡ ಕರೆದಂತೆ ಕರಿಸಿದ್ದನನ್ನು
ಕೂಗಬಹುದೇ ಹೊಲೆಯ ಗೌಡನನ್ನು?

ಇರಬಹುದು ಒಮ್ಮೊಮ್ಮೆ
ಹೆಸರೊಂದೆ ಈರ್ವರಿಗು
ಒಂದೇ ಮನೆಯಲಿ ಸಣ್ಣ ದೊಡ್ಡ
ಜಾತಿ ಮತಗಳ ನಡುವೆ ದೊಡ್ಡ ಗುಡ್ಡ

ಲಂಗೋಟಿ ಇರದವಗೂ
ಗೌಡನೆಂದೆ, ಸಾಮಿಯೆಂದೆ
ಧಣಿಯೆಂದೆ, ಸಾವ್ಕಾರನೆಂದೆ
ಹಾಗಲ್ಲದಿದ್ದರೆ ಅದು ಜಾತಿ ನಿಂದೆ!

ಒಲವಿತ್ತು ಬಲವಿತ್ತು
ಛಲವಿತ್ತು ಗೆಲುವಿತ್ತು
ಊರಾಚೆಯ ಕರಿಯನಿಂದೆ
ಕರೆದೆ ನೀ ನಿನ್ನದೇ ದೇವರ
’ಲೇ ಬಸ್ಯಾ, ಯಂಕ್ಯಾ, ರಾಗ್ಯಾ, ರಾಮ್ಯಾ…’
ವಕ್ರೋಕ್ರ ಪೆಕರ ಕಾಗೆ ಕರೆವಂತೆ

ಹೆಸರಿನಿಂದಲೆ ಧರ್ಮ
ಹೆಸರಿನಿಂದಲೆ ಕರ್ಮ
ಗೊತ್ತಿಲ್ಲ ಯಾರಿಗೆ ಇದರ ಮರ್ಮ?

ಅಕ್ಬರನೆಂದರೆ ಮುಸ್ಲಿಮನೆಂದೆ
ಆಚಾರಿಯೆಂದರೆ ಹಾರವನೆಂದೆ
ಡೇವಿಡ್ಡು ಆಂಥೋನಿ ಕ್ರಿಸ್ತನೆಂದೆ

ಎಂದಾದರು ಎಲ್ಲಾದರು
ಇಟ್ಟು ಕರೆದೆವೆ ಬೇರೆ ಹೆಸರು
ನಮ್ಮ ಮಕ್ಕಳಿಗೂ ಅದಲು ಬದಲು?

ಮರದ ತುಂಡು
ಕಲ್ಲು ಗುಂಡು
ಊರ ಹೊರಗಿನ ದೇವರು

ಮಾರಮ್ಮ ದುರುಗಮ್ಮ
ಸುಂಕ್ಲಮ್ಮ ಮರಿಗೆಮ್ಮ
ಎಷ್ಟು ಚಂದದ ಹೆಸರು
ಕುರಿ ಕೋಳಿ ಕ್ವಾಣ
ಉಳಿಸಿದ್ದು ಇವರ ನ್ಯಾಣ!

ಚಂದ ಚಂದದ ಮೂರ್ತಿ
ಜಗವ ತುಂಬಿದೆ ಕೀರ್ತಿ
ದೊಡ್ಡ ಮಂದಿಯ ದೇವರು
ಕೃಷ್ಣನಂತೆ ರಾಮನಂತೆ
ಎಲ್ಲಾ ಅವನ ಲೀಲೆಯಂತೆ
ಗೋವಿಂದಾ ಮಾಯೆ ನಿನ್ನ ಹೆಸರು!

ಜಾತಿ ಜಾತಿಗೂ ಒಬ್ಬ
ಧರ್ಮ ಧರ್ಮಕೂ ಮಬ್ಬ
ಸೃಷ್ಟಿಸಿದೆ ಬಲುಚತುರ ಮಾಯಕಾರ

ನಾಮ ನಾಮಗಳ ಹೊಸೆದು
ಒಂದೇ ದಾರದಿ ಬೆಸೆದು
ಜೀವ ಜೀವಕೆ ಜೀವಕೊಡುವುದ
ಬೇಕೆಂತಲೇ ಮರೆತ ಗೆಣೆಕಾರ!

ನಿನ್ನೆ ಮೊನ್ನೆಗಳಿಂದ ಕತ್ತಲೆ ಸೀಳಿ
ನಾಲ್ಕಕ್ಷರದ ಬೆಳಕು ಮೂಡಿ
ಉಟ್ಟ ವಸ್ತ್ರದ ಜೊತೆಗೇ
ಇಟ್ಟ ಹೆಸರುಗಳು ಬದಲಾಗಿ
ಸಂದಿದೆ ನಗರಜೀವನದ ಷೋಕಿ

ಹೆಸರಿನಲ್ಲೇನಿದೆ ಬರೀ ಹೆಸರು
ಲೋಕವಾದರೆ ತಾ ಒಂದೇ ಉಸಿರು

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮಿಸುವೆ ಈ ಚೋದ್ಯಕೆ
Next post ವೈಣಿಕ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…