Home / ಕವನ / ಕವಿತೆ / ಹೆಸರಿನೊಳಗೇನಿದೆ?

ಹೆಸರಿನೊಳಗೇನಿದೆ?

ದರ್ಪ ಸೂಚನೆ ಸುಖದ ವಂಚನೆ
’ಮನು’ ಮನದ ಯಾತನೆ
ಜಾತಿ ಧರ್ಮ ಆಸ್ತಿ ಗೌರವ
ಕಾಣಲಾರವೆ ಹೆಸರೊಳಗೆ?

ಊರ ಗೌಡನ ಹೆಸರು
ಶೂದ್ರ ಸಿದ್ದನದೇನು?
ಗೌಡ ಕರೆದಂತೆ ಕರಿಸಿದ್ದನನ್ನು
ಕೂಗಬಹುದೇ ಹೊಲೆಯ ಗೌಡನನ್ನು?

ಇರಬಹುದು ಒಮ್ಮೊಮ್ಮೆ
ಹೆಸರೊಂದೆ ಈರ್ವರಿಗು
ಒಂದೇ ಮನೆಯಲಿ ಸಣ್ಣ ದೊಡ್ಡ
ಜಾತಿ ಮತಗಳ ನಡುವೆ ದೊಡ್ಡ ಗುಡ್ಡ

ಲಂಗೋಟಿ ಇರದವಗೂ
ಗೌಡನೆಂದೆ, ಸಾಮಿಯೆಂದೆ
ಧಣಿಯೆಂದೆ, ಸಾವ್ಕಾರನೆಂದೆ
ಹಾಗಲ್ಲದಿದ್ದರೆ ಅದು ಜಾತಿ ನಿಂದೆ!

ಒಲವಿತ್ತು ಬಲವಿತ್ತು
ಛಲವಿತ್ತು ಗೆಲುವಿತ್ತು
ಊರಾಚೆಯ ಕರಿಯನಿಂದೆ
ಕರೆದೆ ನೀ ನಿನ್ನದೇ ದೇವರ
’ಲೇ ಬಸ್ಯಾ, ಯಂಕ್ಯಾ, ರಾಗ್ಯಾ, ರಾಮ್ಯಾ…’
ವಕ್ರೋಕ್ರ ಪೆಕರ ಕಾಗೆ ಕರೆವಂತೆ

ಹೆಸರಿನಿಂದಲೆ ಧರ್ಮ
ಹೆಸರಿನಿಂದಲೆ ಕರ್ಮ
ಗೊತ್ತಿಲ್ಲ ಯಾರಿಗೆ ಇದರ ಮರ್ಮ?

ಅಕ್ಬರನೆಂದರೆ ಮುಸ್ಲಿಮನೆಂದೆ
ಆಚಾರಿಯೆಂದರೆ ಹಾರವನೆಂದೆ
ಡೇವಿಡ್ಡು ಆಂಥೋನಿ ಕ್ರಿಸ್ತನೆಂದೆ

ಎಂದಾದರು ಎಲ್ಲಾದರು
ಇಟ್ಟು ಕರೆದೆವೆ ಬೇರೆ ಹೆಸರು
ನಮ್ಮ ಮಕ್ಕಳಿಗೂ ಅದಲು ಬದಲು?

ಮರದ ತುಂಡು
ಕಲ್ಲು ಗುಂಡು
ಊರ ಹೊರಗಿನ ದೇವರು

ಮಾರಮ್ಮ ದುರುಗಮ್ಮ
ಸುಂಕ್ಲಮ್ಮ ಮರಿಗೆಮ್ಮ
ಎಷ್ಟು ಚಂದದ ಹೆಸರು
ಕುರಿ ಕೋಳಿ ಕ್ವಾಣ
ಉಳಿಸಿದ್ದು ಇವರ ನ್ಯಾಣ!

ಚಂದ ಚಂದದ ಮೂರ್ತಿ
ಜಗವ ತುಂಬಿದೆ ಕೀರ್ತಿ
ದೊಡ್ಡ ಮಂದಿಯ ದೇವರು
ಕೃಷ್ಣನಂತೆ ರಾಮನಂತೆ
ಎಲ್ಲಾ ಅವನ ಲೀಲೆಯಂತೆ
ಗೋವಿಂದಾ ಮಾಯೆ ನಿನ್ನ ಹೆಸರು!

ಜಾತಿ ಜಾತಿಗೂ ಒಬ್ಬ
ಧರ್ಮ ಧರ್ಮಕೂ ಮಬ್ಬ
ಸೃಷ್ಟಿಸಿದೆ ಬಲುಚತುರ ಮಾಯಕಾರ

ನಾಮ ನಾಮಗಳ ಹೊಸೆದು
ಒಂದೇ ದಾರದಿ ಬೆಸೆದು
ಜೀವ ಜೀವಕೆ ಜೀವಕೊಡುವುದ
ಬೇಕೆಂತಲೇ ಮರೆತ ಗೆಣೆಕಾರ!

ನಿನ್ನೆ ಮೊನ್ನೆಗಳಿಂದ ಕತ್ತಲೆ ಸೀಳಿ
ನಾಲ್ಕಕ್ಷರದ ಬೆಳಕು ಮೂಡಿ
ಉಟ್ಟ ವಸ್ತ್ರದ ಜೊತೆಗೇ
ಇಟ್ಟ ಹೆಸರುಗಳು ಬದಲಾಗಿ
ಸಂದಿದೆ ನಗರಜೀವನದ ಷೋಕಿ

ಹೆಸರಿನಲ್ಲೇನಿದೆ ಬರೀ ಹೆಸರು
ಲೋಕವಾದರೆ ತಾ ಒಂದೇ ಉಸಿರು

*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...