ನಮಿಸುವೆ ಈ ಚೋದ್ಯಕೆ
ನಮಿಸುವೆ ಅಭೇದ್ಯ,
ಮರಣ ಹರಣ ಚಕ್ರದಲ್ಲಿ
ಸರಿವ ಕಿರಣಸಾರಕೆ.
ಆಳ ನೆಲದ ಮರೆಯಲಿ
ಹೆಳಲ ಬಿಚ್ಚಿ ಹುಡಿಯಲಿ,
ಸಾರ ಹೀರಿ ಹೂವಿಗೆ
ಕಳಿಸಿಕೊಡುವ ಬೇರಿಗೆ!
ಮಳೆಯ ಇಳಿಸಿ ಮಣ್ಣಿಗೆ
ಸವಿಯ ಮೊಳೆಸಿ ಹಣ್ಣಿಗೆ
ನದಿಗಳನ್ನ ಕುಡಿಸಿಯೊ
ಕಡಲ ತಡೆವ ಕಣ್ಣಿಗೆ
ಹಸಿರ ಉಸಿರೆ ಇಲ್ಲದ
ಜಲದ ಹೆಸರೆ ಸಲ್ಲದ
ಮರುಧರೆಯನೂ ಸೀಳಿ ಬರುವ
ಜೀವಜಲದ ಕರುಣೆಗೆ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.