Home / ಕವನ / ಕವಿತೆ / ಬಫೂನನ ತಲೆಯೊಳಗೆ

ಬಫೂನನ ತಲೆಯೊಳಗೆ

ಬೇಂಡು ವಾದ್ಯಗಳು ನಿಂತು
ದೀಪಗಳು ಆರಿ
ಊರವರು ಅವರವರ
ಮನೆಗಳಿಗೆ ತೆರಳಿ
ಆನೆ ಕುದುರೆಗಳನ್ನು ಲಾಯದಲಿ ಕಟ್ಟಿ
ಇಡಿಯ ಜಗತ್ತೇ ಮಲಗಿರುವ ಸಮಯ
ಅದು ಬಫೂನನ ಸಮಯ

ಕೆಂಪು ಮಣ್ಣಿನ ಗೆರೆಗಳು
ಬಿಳಿಯ ಸುಣ್ಣದ ಬೊಟ್ಟುಗಳು
ಇನ್ನೂ ಮಾಸಿಲ್ಲ
ಮೂಗಿನ ಮೇಲೆ ಮೊಂಡಗೆ
ಹತ್ತಿಯ ಉಂಡೆ
ತಳತಳಿಸುವ ಮಂಡೆ
ಮೇಲಕೆತ್ತಿದ ಹುಬ್ಬು
ಅರ್ಥವಾಗದ ಕಣ್ಣ ಮಬ್ಬು

ದಿಗ್ಗನೇಳುವನು
ಏನ ನೋಡುವನು
ರಥವೆಲ್ಲಿ ರಾಜ್ಯವೆಲ್ಲಿ ಸಿಂಹಾಸನವೆಲ್ಲಿ
ಎಲ್ಲಿ ವಂದಿ ಮಾಗಧರು
ದೀಪವನು ಹೊತ್ತವರು
ಕಾಲುಗಳನೊತ್ತುವರು
ಎಲ್ಲಿ ಮದ್ಯವು ಎಲ್ಲಿ ಪದ್ಯವು
ಎಲ್ಲಿ ಮಾಯಾಂಗನೆ

ಕಂಡಿರುವನವಳ ಯೋನಿಯನು
ಪರದೆಯ ಮರೆಯಲ್ಲಿ
ಕದ್ದು ನೋಡಿರುವನು
ಒಂಟಿ ಕಣ್ಣಿನಲಿ
ಬಿದ್ದು ಹಂಬಲಿಸಿರುವನು
ಹೊದ್ದು ಮಲಗಿರುವನು
ಎದ್ದು ನಡೆದಿರುವನು
ಬಫೂನ ಅವನು
ಮಂಗೋಲಿಯದಿಂದ ಬಂದವನೆ
ಎಲ್ಲರಿಗಿಂತ ಮೊದಲು ?

ಎಲ್ಲರಿಗಿಂತ ಮೊದಲು
ಚೆಂಗಿಸ್ ಖಾನನಿದ್ದನು
ಅವನ ನಂತರ
ಒಗ್ದಾಯಿ ಖಾನನಿದ್ದನು
ಅವನ ನಂತರ
ಕುಬ್ಲಾಯಿ ಖಾನನಿದ್ದನು
ಅವನು ಚೀನಾ ದೇಶದ ಅರಸನು
ಅವನ ನಂತರದವನು
ತೈಮೂರನೆಂಬವನು
ಎಲ್ಲಿ ನೆನಸಿಕೊಳ್ಳುವನು ಬಫೂನನು

ಆನೆಯ ಸೊಂಡಿಲಲ್ಲಿ
ಜೋಕಾಲಿ ತೂಗಿದವನು
ಸಿಂಹದ ಮೀಸೆಯನ್ನು ತಿರುವಿದವನು
ಮೃತ್ಯುಕುಂಡದಲ್ಲಿ ತಿರುಗಿದವನು
ರಾಣಿಯ ಕುಂಡೆಯನ್ನು ಬಡಿದವನು
ಸಾಯಲು ಹೆದರನು

ಮತ್ತೇಕೆ ಹೀಗೆ ಕುಳಿತಿರುವನು
ತಾಳೆಯ ಮರದ ಕೆಳಗೆ
ಏನವನ ತಲೆಯೊಳಗೆ
ಯಾವ ದೂರದ ಕಡಲು
ಗುರಿ ತಪ್ಪಿದ ಹಡಗು
ದಾರಿತೋರಿದ ನಕ್ಷತ್ರಗಳೆಲ್ಲಿ
ಮರೆಯಾಗಿವೆ ಮೋಡಗಳ ಹಿಂದೆ

ನಿಜ ನಿಜ
ದೆಹಲಿಯೊಳಗಿದ್ದ
ಮೆಸಫೊಟೇಮಿಯದೊಳಗಿದ್ದ
ಅಲೆಕ್ಸಾಂಡ್ರಿಯಾದಲಿದ್ದ
ಕಾರಕೋರಮಿನಲ್ಲು ಇದ್ದ
ಎಲ್ಲ ದೇಶದಲು ಎಲ್ಲ ಕಾಲದಲು
ಇವನಿದ್ದನೆ ?
ಸಂತೆಯಲಿ, ಅರಮನೆಯಲಿ
ನಾಲ್ಕು ಬೀದಿಗಳು ಸೇರುವಲ್ಲಿ
ಎಲ್ಲರನು ನಗಿಸುತ್ತ
ತಿರುಗುತ್ತ ತನ್ನ ಸುತ್ತ
ದೇಶ ಕಾಲಗಳ ಜಿಗಿದನೇ
ಏನವನ ಹೆಸರು ?

ನಾಮಕರಣದ ದಿನವೆ
ಬಣ್ಣ ಬಣ್ಣದ ಅಂಗಿ
ಮುಂದಿನ ಮಹಾಲಯಕ್ಕೆ
ಬೊಳಿಸಿದರು ತಲೆಯ
ಆಗಲೆ ಬಂದಿತ್ತು ನೋಡು
ಮೋರೆಯ ಮೋಲೊಂದು
ಅಪೂರ್ವ ತೇಜಸ್ಸು
ಆದರೂ ಕಂಡವರು ಯಾರು
ಅವನ ಮನಸ್ಸು
ತಲೆಯಿತ್ತು ಒಳ್ಳೆ
ಬೂದುಗುಂಬಳದಂತೆ
ಅದರ ಏರಿಳಿತಗಳು
ಹಳ್ಳ ತಿಟ್ಟುಗಳಂತೆ

ಕೂಡುವಲ್ಲಿ ನಾಲ್ಕು ದಾರಿ
ಸೇರುವುದು ಯಾವುದು ಯಾವ ನಗರಿ
ಗೊತ್ತಿರಲಿಲ್ಲಿ ನೋಡು
ನಡೆದುದೊಂದೇ ಗೊತ್ತು
ಯಾರು ಎದುರಾದರು
ಯಾರು ಮಾತಾಡಿಸಿದರು
ಯಾವ ಗಡಿ ಯಾವ ನುಡಿ
ಕಾಲು ಕುಸಿಯುತಲಿತ್ತು
ಧೂಳು ಮುಸುಕುತಲಿತ್ತು
ಒಂದೊಂದು ಪಾದವೂ
ಭೂಮಧ್ಯರೇಖೆ ದಾಟುತಲಿತ್ತು
ಕಣ್ಣು ಹುಡುಕುತಲಿತ್ತು
ಬೆಳಕಿನ ಮಾಲೆಗಳನ್ನು
ಮುಸುಕಿದೀ ಮಬ್ಬಿನಲಿ ತೇಲಿ ತೇಲಿ

ಅದೊ ಎದ್ದೆಬಿಟ್ಟಿತಲ್ಲ ಮತ್ತೆ
ಮಾಯಾನಗರಿ !
ಎಂಥ ದೀಪಗಳು ಎಂಥ ಬೆಳಕುಗಳು
ಇದಕೆ ಎಣೆ ಬಗ್ದಾದೆ ಸರಿ
ಖರ್ಜೂರದ ಹಣ್ಣುಗಳು
ಅಂಥ ಕಣ್ಣುಗಳು
ಝರಿ ಜಲಪಾತ ಕಾಮನಬಿಲ್ಲು
ಇದುತನಕ ಯಾರೂ ಕೇಳಿರದ ಸೊಲ್ಲು
ತಮ್ಮಟೆಯೊ ಶಂಖವೊ ಜಾಗಟೆಯೊ
ಅಹಹ ಸಂಗೀತಪೂರ್ವ ಯುಗವೆ
ಅಹಹ ಶೋಕವೆ
ಅಹಹ ಬಫೂನ ಲೋಕವೆ

ಏಳಯ್ಯ ಬಫೂನನೆ
ಅದು ಮೊದಲ ದೇಖಾವೆಯ ಬೇಂಡು
ಓಡು ಎಲ್ಲ ರೆಡಿಯಾಗಿದೆಯೊ ನೋಡು
ಎಲ್ಲಿ ಆನೆಗಳು ಎಲ್ಲಿ ಕುದುರೆಗಳು
ಎಲ್ಲಿ ಸಿಂಹದ ಮರಿಗಳು
ಎಲ್ಲಿ ಕನಸಿನ ರಾಣಿ ಇನ್ನೂ ಎದ್ದಿಲ್ಲ ಕಂಡೆಯ
ಹೋಗಿ ಕರೆತರು ಅವಳ
ಕಾದಿರುವ ಮಂದಿ ಬಹಳ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...