Home / ಕವನ / ಕವಿತೆ / ಬಫೂನನ ತಲೆಯೊಳಗೆ

ಬಫೂನನ ತಲೆಯೊಳಗೆ

ಬೇಂಡು ವಾದ್ಯಗಳು ನಿಂತು
ದೀಪಗಳು ಆರಿ
ಊರವರು ಅವರವರ
ಮನೆಗಳಿಗೆ ತೆರಳಿ
ಆನೆ ಕುದುರೆಗಳನ್ನು ಲಾಯದಲಿ ಕಟ್ಟಿ
ಇಡಿಯ ಜಗತ್ತೇ ಮಲಗಿರುವ ಸಮಯ
ಅದು ಬಫೂನನ ಸಮಯ

ಕೆಂಪು ಮಣ್ಣಿನ ಗೆರೆಗಳು
ಬಿಳಿಯ ಸುಣ್ಣದ ಬೊಟ್ಟುಗಳು
ಇನ್ನೂ ಮಾಸಿಲ್ಲ
ಮೂಗಿನ ಮೇಲೆ ಮೊಂಡಗೆ
ಹತ್ತಿಯ ಉಂಡೆ
ತಳತಳಿಸುವ ಮಂಡೆ
ಮೇಲಕೆತ್ತಿದ ಹುಬ್ಬು
ಅರ್ಥವಾಗದ ಕಣ್ಣ ಮಬ್ಬು

ದಿಗ್ಗನೇಳುವನು
ಏನ ನೋಡುವನು
ರಥವೆಲ್ಲಿ ರಾಜ್ಯವೆಲ್ಲಿ ಸಿಂಹಾಸನವೆಲ್ಲಿ
ಎಲ್ಲಿ ವಂದಿ ಮಾಗಧರು
ದೀಪವನು ಹೊತ್ತವರು
ಕಾಲುಗಳನೊತ್ತುವರು
ಎಲ್ಲಿ ಮದ್ಯವು ಎಲ್ಲಿ ಪದ್ಯವು
ಎಲ್ಲಿ ಮಾಯಾಂಗನೆ

ಕಂಡಿರುವನವಳ ಯೋನಿಯನು
ಪರದೆಯ ಮರೆಯಲ್ಲಿ
ಕದ್ದು ನೋಡಿರುವನು
ಒಂಟಿ ಕಣ್ಣಿನಲಿ
ಬಿದ್ದು ಹಂಬಲಿಸಿರುವನು
ಹೊದ್ದು ಮಲಗಿರುವನು
ಎದ್ದು ನಡೆದಿರುವನು
ಬಫೂನ ಅವನು
ಮಂಗೋಲಿಯದಿಂದ ಬಂದವನೆ
ಎಲ್ಲರಿಗಿಂತ ಮೊದಲು ?

ಎಲ್ಲರಿಗಿಂತ ಮೊದಲು
ಚೆಂಗಿಸ್ ಖಾನನಿದ್ದನು
ಅವನ ನಂತರ
ಒಗ್ದಾಯಿ ಖಾನನಿದ್ದನು
ಅವನ ನಂತರ
ಕುಬ್ಲಾಯಿ ಖಾನನಿದ್ದನು
ಅವನು ಚೀನಾ ದೇಶದ ಅರಸನು
ಅವನ ನಂತರದವನು
ತೈಮೂರನೆಂಬವನು
ಎಲ್ಲಿ ನೆನಸಿಕೊಳ್ಳುವನು ಬಫೂನನು

ಆನೆಯ ಸೊಂಡಿಲಲ್ಲಿ
ಜೋಕಾಲಿ ತೂಗಿದವನು
ಸಿಂಹದ ಮೀಸೆಯನ್ನು ತಿರುವಿದವನು
ಮೃತ್ಯುಕುಂಡದಲ್ಲಿ ತಿರುಗಿದವನು
ರಾಣಿಯ ಕುಂಡೆಯನ್ನು ಬಡಿದವನು
ಸಾಯಲು ಹೆದರನು

ಮತ್ತೇಕೆ ಹೀಗೆ ಕುಳಿತಿರುವನು
ತಾಳೆಯ ಮರದ ಕೆಳಗೆ
ಏನವನ ತಲೆಯೊಳಗೆ
ಯಾವ ದೂರದ ಕಡಲು
ಗುರಿ ತಪ್ಪಿದ ಹಡಗು
ದಾರಿತೋರಿದ ನಕ್ಷತ್ರಗಳೆಲ್ಲಿ
ಮರೆಯಾಗಿವೆ ಮೋಡಗಳ ಹಿಂದೆ

ನಿಜ ನಿಜ
ದೆಹಲಿಯೊಳಗಿದ್ದ
ಮೆಸಫೊಟೇಮಿಯದೊಳಗಿದ್ದ
ಅಲೆಕ್ಸಾಂಡ್ರಿಯಾದಲಿದ್ದ
ಕಾರಕೋರಮಿನಲ್ಲು ಇದ್ದ
ಎಲ್ಲ ದೇಶದಲು ಎಲ್ಲ ಕಾಲದಲು
ಇವನಿದ್ದನೆ ?
ಸಂತೆಯಲಿ, ಅರಮನೆಯಲಿ
ನಾಲ್ಕು ಬೀದಿಗಳು ಸೇರುವಲ್ಲಿ
ಎಲ್ಲರನು ನಗಿಸುತ್ತ
ತಿರುಗುತ್ತ ತನ್ನ ಸುತ್ತ
ದೇಶ ಕಾಲಗಳ ಜಿಗಿದನೇ
ಏನವನ ಹೆಸರು ?

ನಾಮಕರಣದ ದಿನವೆ
ಬಣ್ಣ ಬಣ್ಣದ ಅಂಗಿ
ಮುಂದಿನ ಮಹಾಲಯಕ್ಕೆ
ಬೊಳಿಸಿದರು ತಲೆಯ
ಆಗಲೆ ಬಂದಿತ್ತು ನೋಡು
ಮೋರೆಯ ಮೋಲೊಂದು
ಅಪೂರ್ವ ತೇಜಸ್ಸು
ಆದರೂ ಕಂಡವರು ಯಾರು
ಅವನ ಮನಸ್ಸು
ತಲೆಯಿತ್ತು ಒಳ್ಳೆ
ಬೂದುಗುಂಬಳದಂತೆ
ಅದರ ಏರಿಳಿತಗಳು
ಹಳ್ಳ ತಿಟ್ಟುಗಳಂತೆ

ಕೂಡುವಲ್ಲಿ ನಾಲ್ಕು ದಾರಿ
ಸೇರುವುದು ಯಾವುದು ಯಾವ ನಗರಿ
ಗೊತ್ತಿರಲಿಲ್ಲಿ ನೋಡು
ನಡೆದುದೊಂದೇ ಗೊತ್ತು
ಯಾರು ಎದುರಾದರು
ಯಾರು ಮಾತಾಡಿಸಿದರು
ಯಾವ ಗಡಿ ಯಾವ ನುಡಿ
ಕಾಲು ಕುಸಿಯುತಲಿತ್ತು
ಧೂಳು ಮುಸುಕುತಲಿತ್ತು
ಒಂದೊಂದು ಪಾದವೂ
ಭೂಮಧ್ಯರೇಖೆ ದಾಟುತಲಿತ್ತು
ಕಣ್ಣು ಹುಡುಕುತಲಿತ್ತು
ಬೆಳಕಿನ ಮಾಲೆಗಳನ್ನು
ಮುಸುಕಿದೀ ಮಬ್ಬಿನಲಿ ತೇಲಿ ತೇಲಿ

ಅದೊ ಎದ್ದೆಬಿಟ್ಟಿತಲ್ಲ ಮತ್ತೆ
ಮಾಯಾನಗರಿ !
ಎಂಥ ದೀಪಗಳು ಎಂಥ ಬೆಳಕುಗಳು
ಇದಕೆ ಎಣೆ ಬಗ್ದಾದೆ ಸರಿ
ಖರ್ಜೂರದ ಹಣ್ಣುಗಳು
ಅಂಥ ಕಣ್ಣುಗಳು
ಝರಿ ಜಲಪಾತ ಕಾಮನಬಿಲ್ಲು
ಇದುತನಕ ಯಾರೂ ಕೇಳಿರದ ಸೊಲ್ಲು
ತಮ್ಮಟೆಯೊ ಶಂಖವೊ ಜಾಗಟೆಯೊ
ಅಹಹ ಸಂಗೀತಪೂರ್ವ ಯುಗವೆ
ಅಹಹ ಶೋಕವೆ
ಅಹಹ ಬಫೂನ ಲೋಕವೆ

ಏಳಯ್ಯ ಬಫೂನನೆ
ಅದು ಮೊದಲ ದೇಖಾವೆಯ ಬೇಂಡು
ಓಡು ಎಲ್ಲ ರೆಡಿಯಾಗಿದೆಯೊ ನೋಡು
ಎಲ್ಲಿ ಆನೆಗಳು ಎಲ್ಲಿ ಕುದುರೆಗಳು
ಎಲ್ಲಿ ಸಿಂಹದ ಮರಿಗಳು
ಎಲ್ಲಿ ಕನಸಿನ ರಾಣಿ ಇನ್ನೂ ಎದ್ದಿಲ್ಲ ಕಂಡೆಯ
ಹೋಗಿ ಕರೆತರು ಅವಳ
ಕಾದಿರುವ ಮಂದಿ ಬಹಳ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...