Home / ಕವನ / ಕವಿತೆ / ಬಫೂನನ ತಲೆಯೊಳಗೆ

ಬಫೂನನ ತಲೆಯೊಳಗೆ

ಬೇಂಡು ವಾದ್ಯಗಳು ನಿಂತು
ದೀಪಗಳು ಆರಿ
ಊರವರು ಅವರವರ
ಮನೆಗಳಿಗೆ ತೆರಳಿ
ಆನೆ ಕುದುರೆಗಳನ್ನು ಲಾಯದಲಿ ಕಟ್ಟಿ
ಇಡಿಯ ಜಗತ್ತೇ ಮಲಗಿರುವ ಸಮಯ
ಅದು ಬಫೂನನ ಸಮಯ

ಕೆಂಪು ಮಣ್ಣಿನ ಗೆರೆಗಳು
ಬಿಳಿಯ ಸುಣ್ಣದ ಬೊಟ್ಟುಗಳು
ಇನ್ನೂ ಮಾಸಿಲ್ಲ
ಮೂಗಿನ ಮೇಲೆ ಮೊಂಡಗೆ
ಹತ್ತಿಯ ಉಂಡೆ
ತಳತಳಿಸುವ ಮಂಡೆ
ಮೇಲಕೆತ್ತಿದ ಹುಬ್ಬು
ಅರ್ಥವಾಗದ ಕಣ್ಣ ಮಬ್ಬು

ದಿಗ್ಗನೇಳುವನು
ಏನ ನೋಡುವನು
ರಥವೆಲ್ಲಿ ರಾಜ್ಯವೆಲ್ಲಿ ಸಿಂಹಾಸನವೆಲ್ಲಿ
ಎಲ್ಲಿ ವಂದಿ ಮಾಗಧರು
ದೀಪವನು ಹೊತ್ತವರು
ಕಾಲುಗಳನೊತ್ತುವರು
ಎಲ್ಲಿ ಮದ್ಯವು ಎಲ್ಲಿ ಪದ್ಯವು
ಎಲ್ಲಿ ಮಾಯಾಂಗನೆ

ಕಂಡಿರುವನವಳ ಯೋನಿಯನು
ಪರದೆಯ ಮರೆಯಲ್ಲಿ
ಕದ್ದು ನೋಡಿರುವನು
ಒಂಟಿ ಕಣ್ಣಿನಲಿ
ಬಿದ್ದು ಹಂಬಲಿಸಿರುವನು
ಹೊದ್ದು ಮಲಗಿರುವನು
ಎದ್ದು ನಡೆದಿರುವನು
ಬಫೂನ ಅವನು
ಮಂಗೋಲಿಯದಿಂದ ಬಂದವನೆ
ಎಲ್ಲರಿಗಿಂತ ಮೊದಲು ?

ಎಲ್ಲರಿಗಿಂತ ಮೊದಲು
ಚೆಂಗಿಸ್ ಖಾನನಿದ್ದನು
ಅವನ ನಂತರ
ಒಗ್ದಾಯಿ ಖಾನನಿದ್ದನು
ಅವನ ನಂತರ
ಕುಬ್ಲಾಯಿ ಖಾನನಿದ್ದನು
ಅವನು ಚೀನಾ ದೇಶದ ಅರಸನು
ಅವನ ನಂತರದವನು
ತೈಮೂರನೆಂಬವನು
ಎಲ್ಲಿ ನೆನಸಿಕೊಳ್ಳುವನು ಬಫೂನನು

ಆನೆಯ ಸೊಂಡಿಲಲ್ಲಿ
ಜೋಕಾಲಿ ತೂಗಿದವನು
ಸಿಂಹದ ಮೀಸೆಯನ್ನು ತಿರುವಿದವನು
ಮೃತ್ಯುಕುಂಡದಲ್ಲಿ ತಿರುಗಿದವನು
ರಾಣಿಯ ಕುಂಡೆಯನ್ನು ಬಡಿದವನು
ಸಾಯಲು ಹೆದರನು

ಮತ್ತೇಕೆ ಹೀಗೆ ಕುಳಿತಿರುವನು
ತಾಳೆಯ ಮರದ ಕೆಳಗೆ
ಏನವನ ತಲೆಯೊಳಗೆ
ಯಾವ ದೂರದ ಕಡಲು
ಗುರಿ ತಪ್ಪಿದ ಹಡಗು
ದಾರಿತೋರಿದ ನಕ್ಷತ್ರಗಳೆಲ್ಲಿ
ಮರೆಯಾಗಿವೆ ಮೋಡಗಳ ಹಿಂದೆ

ನಿಜ ನಿಜ
ದೆಹಲಿಯೊಳಗಿದ್ದ
ಮೆಸಫೊಟೇಮಿಯದೊಳಗಿದ್ದ
ಅಲೆಕ್ಸಾಂಡ್ರಿಯಾದಲಿದ್ದ
ಕಾರಕೋರಮಿನಲ್ಲು ಇದ್ದ
ಎಲ್ಲ ದೇಶದಲು ಎಲ್ಲ ಕಾಲದಲು
ಇವನಿದ್ದನೆ ?
ಸಂತೆಯಲಿ, ಅರಮನೆಯಲಿ
ನಾಲ್ಕು ಬೀದಿಗಳು ಸೇರುವಲ್ಲಿ
ಎಲ್ಲರನು ನಗಿಸುತ್ತ
ತಿರುಗುತ್ತ ತನ್ನ ಸುತ್ತ
ದೇಶ ಕಾಲಗಳ ಜಿಗಿದನೇ
ಏನವನ ಹೆಸರು ?

ನಾಮಕರಣದ ದಿನವೆ
ಬಣ್ಣ ಬಣ್ಣದ ಅಂಗಿ
ಮುಂದಿನ ಮಹಾಲಯಕ್ಕೆ
ಬೊಳಿಸಿದರು ತಲೆಯ
ಆಗಲೆ ಬಂದಿತ್ತು ನೋಡು
ಮೋರೆಯ ಮೋಲೊಂದು
ಅಪೂರ್ವ ತೇಜಸ್ಸು
ಆದರೂ ಕಂಡವರು ಯಾರು
ಅವನ ಮನಸ್ಸು
ತಲೆಯಿತ್ತು ಒಳ್ಳೆ
ಬೂದುಗುಂಬಳದಂತೆ
ಅದರ ಏರಿಳಿತಗಳು
ಹಳ್ಳ ತಿಟ್ಟುಗಳಂತೆ

ಕೂಡುವಲ್ಲಿ ನಾಲ್ಕು ದಾರಿ
ಸೇರುವುದು ಯಾವುದು ಯಾವ ನಗರಿ
ಗೊತ್ತಿರಲಿಲ್ಲಿ ನೋಡು
ನಡೆದುದೊಂದೇ ಗೊತ್ತು
ಯಾರು ಎದುರಾದರು
ಯಾರು ಮಾತಾಡಿಸಿದರು
ಯಾವ ಗಡಿ ಯಾವ ನುಡಿ
ಕಾಲು ಕುಸಿಯುತಲಿತ್ತು
ಧೂಳು ಮುಸುಕುತಲಿತ್ತು
ಒಂದೊಂದು ಪಾದವೂ
ಭೂಮಧ್ಯರೇಖೆ ದಾಟುತಲಿತ್ತು
ಕಣ್ಣು ಹುಡುಕುತಲಿತ್ತು
ಬೆಳಕಿನ ಮಾಲೆಗಳನ್ನು
ಮುಸುಕಿದೀ ಮಬ್ಬಿನಲಿ ತೇಲಿ ತೇಲಿ

ಅದೊ ಎದ್ದೆಬಿಟ್ಟಿತಲ್ಲ ಮತ್ತೆ
ಮಾಯಾನಗರಿ !
ಎಂಥ ದೀಪಗಳು ಎಂಥ ಬೆಳಕುಗಳು
ಇದಕೆ ಎಣೆ ಬಗ್ದಾದೆ ಸರಿ
ಖರ್ಜೂರದ ಹಣ್ಣುಗಳು
ಅಂಥ ಕಣ್ಣುಗಳು
ಝರಿ ಜಲಪಾತ ಕಾಮನಬಿಲ್ಲು
ಇದುತನಕ ಯಾರೂ ಕೇಳಿರದ ಸೊಲ್ಲು
ತಮ್ಮಟೆಯೊ ಶಂಖವೊ ಜಾಗಟೆಯೊ
ಅಹಹ ಸಂಗೀತಪೂರ್ವ ಯುಗವೆ
ಅಹಹ ಶೋಕವೆ
ಅಹಹ ಬಫೂನ ಲೋಕವೆ

ಏಳಯ್ಯ ಬಫೂನನೆ
ಅದು ಮೊದಲ ದೇಖಾವೆಯ ಬೇಂಡು
ಓಡು ಎಲ್ಲ ರೆಡಿಯಾಗಿದೆಯೊ ನೋಡು
ಎಲ್ಲಿ ಆನೆಗಳು ಎಲ್ಲಿ ಕುದುರೆಗಳು
ಎಲ್ಲಿ ಸಿಂಹದ ಮರಿಗಳು
ಎಲ್ಲಿ ಕನಸಿನ ರಾಣಿ ಇನ್ನೂ ಎದ್ದಿಲ್ಲ ಕಂಡೆಯ
ಹೋಗಿ ಕರೆತರು ಅವಳ
ಕಾದಿರುವ ಮಂದಿ ಬಹಳ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...