Home / ಕವನ / ಕವಿತೆ / ಬಫೂನನ ತಲೆಯೊಳಗೆ

ಬಫೂನನ ತಲೆಯೊಳಗೆ

ಬೇಂಡು ವಾದ್ಯಗಳು ನಿಂತು
ದೀಪಗಳು ಆರಿ
ಊರವರು ಅವರವರ
ಮನೆಗಳಿಗೆ ತೆರಳಿ
ಆನೆ ಕುದುರೆಗಳನ್ನು ಲಾಯದಲಿ ಕಟ್ಟಿ
ಇಡಿಯ ಜಗತ್ತೇ ಮಲಗಿರುವ ಸಮಯ
ಅದು ಬಫೂನನ ಸಮಯ

ಕೆಂಪು ಮಣ್ಣಿನ ಗೆರೆಗಳು
ಬಿಳಿಯ ಸುಣ್ಣದ ಬೊಟ್ಟುಗಳು
ಇನ್ನೂ ಮಾಸಿಲ್ಲ
ಮೂಗಿನ ಮೇಲೆ ಮೊಂಡಗೆ
ಹತ್ತಿಯ ಉಂಡೆ
ತಳತಳಿಸುವ ಮಂಡೆ
ಮೇಲಕೆತ್ತಿದ ಹುಬ್ಬು
ಅರ್ಥವಾಗದ ಕಣ್ಣ ಮಬ್ಬು

ದಿಗ್ಗನೇಳುವನು
ಏನ ನೋಡುವನು
ರಥವೆಲ್ಲಿ ರಾಜ್ಯವೆಲ್ಲಿ ಸಿಂಹಾಸನವೆಲ್ಲಿ
ಎಲ್ಲಿ ವಂದಿ ಮಾಗಧರು
ದೀಪವನು ಹೊತ್ತವರು
ಕಾಲುಗಳನೊತ್ತುವರು
ಎಲ್ಲಿ ಮದ್ಯವು ಎಲ್ಲಿ ಪದ್ಯವು
ಎಲ್ಲಿ ಮಾಯಾಂಗನೆ

ಕಂಡಿರುವನವಳ ಯೋನಿಯನು
ಪರದೆಯ ಮರೆಯಲ್ಲಿ
ಕದ್ದು ನೋಡಿರುವನು
ಒಂಟಿ ಕಣ್ಣಿನಲಿ
ಬಿದ್ದು ಹಂಬಲಿಸಿರುವನು
ಹೊದ್ದು ಮಲಗಿರುವನು
ಎದ್ದು ನಡೆದಿರುವನು
ಬಫೂನ ಅವನು
ಮಂಗೋಲಿಯದಿಂದ ಬಂದವನೆ
ಎಲ್ಲರಿಗಿಂತ ಮೊದಲು ?

ಎಲ್ಲರಿಗಿಂತ ಮೊದಲು
ಚೆಂಗಿಸ್ ಖಾನನಿದ್ದನು
ಅವನ ನಂತರ
ಒಗ್ದಾಯಿ ಖಾನನಿದ್ದನು
ಅವನ ನಂತರ
ಕುಬ್ಲಾಯಿ ಖಾನನಿದ್ದನು
ಅವನು ಚೀನಾ ದೇಶದ ಅರಸನು
ಅವನ ನಂತರದವನು
ತೈಮೂರನೆಂಬವನು
ಎಲ್ಲಿ ನೆನಸಿಕೊಳ್ಳುವನು ಬಫೂನನು

ಆನೆಯ ಸೊಂಡಿಲಲ್ಲಿ
ಜೋಕಾಲಿ ತೂಗಿದವನು
ಸಿಂಹದ ಮೀಸೆಯನ್ನು ತಿರುವಿದವನು
ಮೃತ್ಯುಕುಂಡದಲ್ಲಿ ತಿರುಗಿದವನು
ರಾಣಿಯ ಕುಂಡೆಯನ್ನು ಬಡಿದವನು
ಸಾಯಲು ಹೆದರನು

ಮತ್ತೇಕೆ ಹೀಗೆ ಕುಳಿತಿರುವನು
ತಾಳೆಯ ಮರದ ಕೆಳಗೆ
ಏನವನ ತಲೆಯೊಳಗೆ
ಯಾವ ದೂರದ ಕಡಲು
ಗುರಿ ತಪ್ಪಿದ ಹಡಗು
ದಾರಿತೋರಿದ ನಕ್ಷತ್ರಗಳೆಲ್ಲಿ
ಮರೆಯಾಗಿವೆ ಮೋಡಗಳ ಹಿಂದೆ

ನಿಜ ನಿಜ
ದೆಹಲಿಯೊಳಗಿದ್ದ
ಮೆಸಫೊಟೇಮಿಯದೊಳಗಿದ್ದ
ಅಲೆಕ್ಸಾಂಡ್ರಿಯಾದಲಿದ್ದ
ಕಾರಕೋರಮಿನಲ್ಲು ಇದ್ದ
ಎಲ್ಲ ದೇಶದಲು ಎಲ್ಲ ಕಾಲದಲು
ಇವನಿದ್ದನೆ ?
ಸಂತೆಯಲಿ, ಅರಮನೆಯಲಿ
ನಾಲ್ಕು ಬೀದಿಗಳು ಸೇರುವಲ್ಲಿ
ಎಲ್ಲರನು ನಗಿಸುತ್ತ
ತಿರುಗುತ್ತ ತನ್ನ ಸುತ್ತ
ದೇಶ ಕಾಲಗಳ ಜಿಗಿದನೇ
ಏನವನ ಹೆಸರು ?

ನಾಮಕರಣದ ದಿನವೆ
ಬಣ್ಣ ಬಣ್ಣದ ಅಂಗಿ
ಮುಂದಿನ ಮಹಾಲಯಕ್ಕೆ
ಬೊಳಿಸಿದರು ತಲೆಯ
ಆಗಲೆ ಬಂದಿತ್ತು ನೋಡು
ಮೋರೆಯ ಮೋಲೊಂದು
ಅಪೂರ್ವ ತೇಜಸ್ಸು
ಆದರೂ ಕಂಡವರು ಯಾರು
ಅವನ ಮನಸ್ಸು
ತಲೆಯಿತ್ತು ಒಳ್ಳೆ
ಬೂದುಗುಂಬಳದಂತೆ
ಅದರ ಏರಿಳಿತಗಳು
ಹಳ್ಳ ತಿಟ್ಟುಗಳಂತೆ

ಕೂಡುವಲ್ಲಿ ನಾಲ್ಕು ದಾರಿ
ಸೇರುವುದು ಯಾವುದು ಯಾವ ನಗರಿ
ಗೊತ್ತಿರಲಿಲ್ಲಿ ನೋಡು
ನಡೆದುದೊಂದೇ ಗೊತ್ತು
ಯಾರು ಎದುರಾದರು
ಯಾರು ಮಾತಾಡಿಸಿದರು
ಯಾವ ಗಡಿ ಯಾವ ನುಡಿ
ಕಾಲು ಕುಸಿಯುತಲಿತ್ತು
ಧೂಳು ಮುಸುಕುತಲಿತ್ತು
ಒಂದೊಂದು ಪಾದವೂ
ಭೂಮಧ್ಯರೇಖೆ ದಾಟುತಲಿತ್ತು
ಕಣ್ಣು ಹುಡುಕುತಲಿತ್ತು
ಬೆಳಕಿನ ಮಾಲೆಗಳನ್ನು
ಮುಸುಕಿದೀ ಮಬ್ಬಿನಲಿ ತೇಲಿ ತೇಲಿ

ಅದೊ ಎದ್ದೆಬಿಟ್ಟಿತಲ್ಲ ಮತ್ತೆ
ಮಾಯಾನಗರಿ !
ಎಂಥ ದೀಪಗಳು ಎಂಥ ಬೆಳಕುಗಳು
ಇದಕೆ ಎಣೆ ಬಗ್ದಾದೆ ಸರಿ
ಖರ್ಜೂರದ ಹಣ್ಣುಗಳು
ಅಂಥ ಕಣ್ಣುಗಳು
ಝರಿ ಜಲಪಾತ ಕಾಮನಬಿಲ್ಲು
ಇದುತನಕ ಯಾರೂ ಕೇಳಿರದ ಸೊಲ್ಲು
ತಮ್ಮಟೆಯೊ ಶಂಖವೊ ಜಾಗಟೆಯೊ
ಅಹಹ ಸಂಗೀತಪೂರ್ವ ಯುಗವೆ
ಅಹಹ ಶೋಕವೆ
ಅಹಹ ಬಫೂನ ಲೋಕವೆ

ಏಳಯ್ಯ ಬಫೂನನೆ
ಅದು ಮೊದಲ ದೇಖಾವೆಯ ಬೇಂಡು
ಓಡು ಎಲ್ಲ ರೆಡಿಯಾಗಿದೆಯೊ ನೋಡು
ಎಲ್ಲಿ ಆನೆಗಳು ಎಲ್ಲಿ ಕುದುರೆಗಳು
ಎಲ್ಲಿ ಸಿಂಹದ ಮರಿಗಳು
ಎಲ್ಲಿ ಕನಸಿನ ರಾಣಿ ಇನ್ನೂ ಎದ್ದಿಲ್ಲ ಕಂಡೆಯ
ಹೋಗಿ ಕರೆತರು ಅವಳ
ಕಾದಿರುವ ಮಂದಿ ಬಹಳ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...