Home / ಬಾಲ ಚಿಲುಮೆ / ಕವಿತೆ / ಕಿಟ್ಟು ಮತ್ತು ಬಿರ್ಜು

ಕಿಟ್ಟು ಮತ್ತು ಬಿರ್ಜು

ಒಂದು ದಿನ ಕಿಟ್ಟು ಮನೆಯಲ್ಲೆ ಕೂತಿದ್ದ,
ಮನೆಬೆಕ್ಕು ಬಿರ್ಜುವಿನ ತಲೆ ಸವರುತಿದ್ದ
ತನ್ನ ಕಷ್ಟವ ನೆನೆದು ಅವನಿಗಳು ಬಂತು
“ಯಾಕಳುವೆ ಕಿಟ್ಟು?” ಅಂತ ಬಿರ್ಜು ಕೇಳ್ತು

“ಬಿರ್ಜು ನೀ ಎಷ್ಟೊಂದು ಅದೃಷ್ಟವಂತ!
ಗೊತ್ತಿಲ್ಲ ನಿನಗೆ ಸ್ಕೂಲೆಂದರೇನಂತ,
ನಾನು ದಿನವೂ ಸ್ಕೂಲಿಗ್ಹೋಗಲೇಬೇಕು.
ಮನೆಯಲ್ಲಿ ಹೋಂ ವರ್ಕ್ ಮಾಡಲೇಬೇಕು”.

ಈ ಮಾತನೊಪ್ಪದೆ ಬಿರ್ಜು ಹೀಗಂತು:

“ಕಿಟ್ಟು ನಿಂಗೊತ್ತಿಲ್ಲ ನಾ ಪಡುವ ಕಷ್ಟ,
ಯಾರು ಕೇಳುವರು ನನ್ನಂಥವರ ಇಷ್ಟ?
ನಿನಗೊ ಬಣ್ಣದ ಅಂಗಿ, ಚಡ್ಡಿ, ಗರಿಟೋಪಿ
ಕಾಚ ಕೂಡ ಇಲ್ಲ ನಾನೆಂಥ ಪಾಪಿ!”

ಬಿರ್ಜು ಮಾತಿಗೆ ತಿರುಗಿ ಹೇಳಿದನು ಕಿಟ್ಟು:

“ಅಂಗಡಿಗೆ ಹೋಗಿ ಬಾ ಅಂತಾರೆ ಅಮ್ಮ,
ಹೋಗಲ್ಲ ಅಂದರೆ ಒದಿತಾರೆ ಅಣ್ಣ;
ಆಟಕ್ಕೆ ಎಷ್ಟೂನು ಪುರಸೊತ್ತೆ ಇಲ್ಲ,
ನಿನಗೊ ಕೇಳುವರಿಲ್ಲ ಇಡಿಯ ದಿನವೆಲ್ಲ”.

ನಕ್ಕು ಹೇಳಿತು ಬಿರ್ಜು ಕಿಟ್ಟು ಕಡೆ ತಿರುಗಿ:

“ನನಗೆ ಎಲ್ಲಿದ್ದಾರೆ ಪ್ರೀತಿಸುವ ಅಮ್ಮ,
ಒದ್ದರೂ ಚಿಂತಿಲ್ಲ, ಇರಬೇಕು ಅಣ್ಣ;
ಓದಿ ನೀ ಮುಂದಕ್ಕೆ ಆಫೀಸರಾಗ್ತಿ
ನನಗೊ ಬಾಳೆಲ್ಲ ಇಲಿ ಹಿಡಿಯುವುದೆ ಪ್ರಾಪ್ತಿ!

ಈಗೇನೊ ನನ್ನ ಜೊತೆ ಆಟವಾಡ್ತೀಯ,
ನನ್ನ ಬಿರ್ಜೂ ಅಂತ ಮುದ್ದು ಮಾಡ್ತೀಯ;
ನಿನ್ನ ಹಾಸಿಗೆಯಲ್ಲೆ ಎಳೆದಪ್ಪಿಕೊಂಡು
ಮೈಯ ಸವರುತ್ತಲೇ ನಿದ್ದೆ ಮಾಡ್ತೀಯ

ಮುಂದೆ ದೊಡ್ಡವನಾಗ್ತಿ, ಇಂಗ್ಲೀಷು ಓದಿ
ಕಾರನ್ನು ನಡೆಸೊ ಸಾಹೇಬನಾಗ್ತೀಯ;
ಮನೆಗೆ ಬಂದಾಗ ನಾ ಓಡೋಡಿ ಬಂದ್ರೆ
ಅಡ್ಡ ಬರ್‍ತೀಯ ಶನಿ ಅಂತ ಒದಿತೀಯ”

ಬಿರ್ಜು ಮಾತನು ಕೇಳಿ ಅಳು ಬಂದು ಕಿಟ್ಟು
ಬಾಚಿ ಮುದ್ದಿಸಿ ನುಡಿದ “ಇಲ್ಲ ಕಣೊ ಪುಟ್ಟು,
ನಿನ್ನ ನಾ ಎಂದೂನು ಒದಿಯೋಲ್ಲ ಬಿರ್ಜು
ಕಡೆತನಕ ನನ್ನ ಜೊತೆ ಇದ್ದು ಬಿಡು ಮುದ್ದು.”
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...