Home / ಕವನ / ಕವಿತೆ / ಗರ್ದಿಗಮ್ಮತ್ತು ಮತ್ತು ಹಾಲಿವುಡ್

ಗರ್ದಿಗಮ್ಮತ್ತು ಮತ್ತು ಹಾಲಿವುಡ್

ನಡುರಾತ್ರಿ ಜೋರಾಗಿ
ಮಳೆ ಬೀಳಾಕ ಸುರುವಾಗಿತ್ತು
ಹಾಲಿವುಡ್ ಪಿಕ್ಚರ್ ಅರ್ಧನೋಡಿ
ಆ ಲೋಕದಾಗ ಇದ್ಹಾಂಗ ನಿದ್ದಿ ಹತ್ತಿತ್ತು.

ಅದರ ಕನಸು ಬಿದ್ದದ್ದು
ನಮ್ಮೂರಾಗ ಗರ್ದಿಗಮ್ಮತ್ತಿನ ಪೆಟಗಿಯೊಳಗ
ದಿಲ್ಲಿದರ್ಬಾರ್ ಕುತುಬ್‌ಮಿನಾರ್
ತಾಜಮಹಲ್ ಬಾಂಬೆ ಬಜಾರ್
ಸುರಯ್ಯಾ ನರ್ಗಿಸ್ ರಾಜಕಪೂರರ
ಪ್ರೇಮಾಲಾಪ ನೋಡಿದ್ಹಂಗ-

ನಮ್ಮೂರ ಜಾತ್ರಿಯೊಳಗ ಅಡ್ಡಾಡಿ
ಬೆಂಡು ಬೆತ್ತಾಸ ತಿಂದು ಮಿಂಚೋಬಳಿ
ಕೈ ತುಂಬಾ ಏರಿಸಿಕೊಂಡು
ಮುತ್ತಿನ ಸರಾ ಹಾಕ್ಕೊಂಡು
ಅದರೊಳಗಿನ ಪದಕಾ ಮುಟಗಿಯೊಳಗ
ಹಿಡಕೊಂಡು ಓಡೋಡಿ ಓಡೋಡಿ ಮನಿಗೆ ಬದ್ಹಂಗ-

ಚಕಡಿ ಹತ್ತಿ ಹೊಲಕ ಹೋಗಿ
ಮಾವಿನಕಾಯಿ ಪೇರಲಕಾಯಿ ತಿಂದ
ಬುತ್ತಿ ಉಂಡ ಮ್ಯಾಲ ಮಜ್ಜಿಗಿ ಕುಡದ
ಹೊಲತುಂಬ ಓಡ್ಯಾಡಿ ಕುಣಿದಾಡಿ ಕುಪ್ಪಳಿಸಿದ್ಹಂಗ-

ಜೊಕಾಲಿಯಿಂದ ಬಿದ್ದು ಕಾಲಮುರಕೊಂಡು
ಚಿಗಳಿ ತಿನ್ನೋ ಆಸೇಕ
ಕಂಚಿಗಿಡದ ಮುಳ್ಳ ಚುಚ್ಚಿಸಿಕೊಂಡು
ಬಿಕ್ಕಿಬಿಕ್ಕಿ ಬಿಕ್ಕಿಬಿಕ್ಕಿ ಅತ್ಹಂಗ –

ಮತ್ತ ನಮ್ಮ ಅಜ್ಜಿ ತನ್ನ ಎದ್ಯಾಗೆ
ನನ್ನ ಎಳಕೊಂಡು ರಮಿಸಿ
ಬಣ್ಣದ ನೀರ ಹಾಕಿದ ಬರ್ಫ
ನೀರಲಹಣ್ಣ ಬಾರಿಹಣ್ಣ ಕೊಡಿಸಿ
ಮಾರಾಂವಗ ಗುಳಬುಟ್ಟಿ ತುಂಬ
ಭತ್ತ ಕೊಟ್ಹಂಗ-
ಹಿಂಗ ಇನ್ನೂ ಕನಸಽ ಕನಸ.

ಹಾಲಿವುಡ್ ಪಿಕ್ಚರ್
ಇನ್ನೂ ಅರ್ಧ ನೋಡಬೇಕಾಗಿತ್ತು
ಬೆಳಿಗ್ಗೆ ಊರಿಂದ phoneಬಂತು
ಬಹಳ ವರ್ಷದ ಮ್ಯಾಲ ದೇವಿ ಜಾತ್ರಿ
ಊರಿಗೆ ಎಲ್ಲಾರೂ ಬರ್ರಿ.

ಹಂಗಾದ್ರ ನಾ ರಾತ್ರಿ ಕಂಡದ್ದೆಲ್ಲಾ
ಚೆಂದಾದ ಕನಸು ನನಸಾಗೋದಾದ್ರ
ಮತ್ತೊಮ್ಮೆ ನಾ ಸಣ್ಣ ಹುಡುಗಿಯಾಗಿ
ಗರ್ದಿಗಮ್ಮತ್ತ ನೋಡತೇನಿ ಅಂದ್ರ
ಜೋಕಾಲಿ, ಜಾತ್ರಿ, ಹೊಲ, ಚಕಡಿ
ಅಂತ ಓಡಾಡತೇನಿ ಅಂದ್ರ,

ಈ ಕನಸು ವಿಚಿತ್ರ ಅಲ್ಲದಽ ಮತ್ತಿನ್ನೇನು!!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...