ಕೇಂದ್ರದ ಸುತ್ತ

ಜನನದಿಂದ ಆ ಮರಣದವರೆಗೆ
ಜೀವನದ ಮಧ್ಯ ಮಹಜಾಲದುಡಿಗೆ

ಭೂಮ್ಯೋಮ ಭೂಮ ವಿನ್ಯಾಸವಿಹುದು
ಸಂಸಾರ ಮತ್ತು ಸನ್ಯಾಸವಿಹುದು

ಮನಮೊನೆಯ ಮೇಲೆ ಕುಳಿತಿಹುದು ಹರಣ
ಹಾರುವುದೆ ಅದರ ಅತ್ಯಂತ ಧ್ಯಾನ

ಹನಿಹನಿಯು ಕೂಡಿ ಹಗರಣದ ಹಣವು
ಸೋರುವುದೆ ಅದರ ಚಿರನವ್ಯ ಗುಣವು

ಚಣಚಣವು ಹರಿದು ಬಾಳಾಯ್ತು ನದಿಯು
ಕುಣಿಕುಣಿದ ಸೂತ್ರ ನಿರ್ಣಯದ ವಿಧಿಯು

ಅರಳುವುದು ಸುಮವು ತುಂಬುವುದು ಮನವು
ಹೊರಳುವುದು ನೆಲಕೆ ಅದೊ ನೋಡು ನೆನವು

ತೊಗಲುಡಿಕೆಯದಕೆ ಮಾಂಸಲದ ಜೆಲುವು
ಹಗಲುಡಿಗೆ ಕಳಚಿ ರಾತ್ರಿಯಲಿ ಎಲುವು

ಚಿರ ಯೌವನದಲಿ ಮೆರೆಯುವಳು ಮುದುಕಿ
ನವ ಭಾವದಲ್ಲಿ ಬುದ್ದಿಯನು ಮುಸುಕಿ

ನಗು ಹೂವು ನೋಡ ಅಳುದೇಟಿಗಂಟಿ
ಸುಖ ಚೆಂಗುಲಾಬಿ ನೋವಾಗೆ ಕಂಟಿ

ಬಂದಿಹುದು ಪ್ರಾಣ ಇರಲಿಕೇನಲ್ಲ
ಬಂದಿಹುದು ವಯಸು ಚಿರವಾಗಿಯಲ್ಲ

ಅಹ ಸೃಷ್ಟಿ ಮೂಲ ಬಹು ಚಿತ್ರ ಚಿತ್ರ
ನಗುತಿಹುದು ತತ್ವ ತಿಳಿದಂಥ ನೇತ್ರ

ನೆರೆದಂತೆ ಜಾತ್ರೆ ಮರುದೀನಕೆ ಬಯಲು
ಬಯಲಾಟ ರಾತ್ರಿ ಬೆಳಗಾಗೆ ಬಯಲು

ಬೀಸಿದಳು ಅಕ್ಕ ಬಯಲಿನಲಿ ಬಟ್ಟೆ
ಬಟ್ಟೆಯನು ಹಿಡಿಯೆ ಅದು ಮೂರ ಬಟ್ಟೆ

ಸೆಳೆಹುದು ಜಾಲ ಹಣ ಬೆಡಗಿನಲ್ಲಿ
ನಂದನದಿ ಬಾಲ ಬೆರಗಾಗಲಿಲ್ಲಿ

ನಗುವೇನು ಆಟ ಹರಿದಾಟಗಳಲಿ
ಚಿಗುರುವುದು ಒಗರು ಹಾರಾಟಗಳಲಿ

ಸೂತ್ರಕ್ಕೆ ಕುಣಿದು ಮೈಮೈಯ ಮಣಿದು
ಪಾತ್ರಗಳ ಬಣ್ಣ ಬಣ್ಣದಲಿ ಹೆಣೆದು

ಮಳೆ ಬಂದು ನಿಂತ ಅಡವಿಯಲಿ ಮೌನ
ಇಳೆಗಾಯ್ತು ಧನ್ಯದೋಕುಳಿಯ ಮಾನ

ಬೀಜಕ್ಕೆ ಇಳೆಗೆ ಬರುವಂಥ ತವಕ
ಬೇನೆಯಲಿ ಬಳಲಿ ಜೀವರಸ ಪಾಕ

ಆಕ್ರಂದನಕ್ಕೆ ತೊಟ್ಟಲಿನು ಕಟ್ಟಿ
ಆನಂದವೆನುತ ಹೆಸುರಿಟ್ಟು ತಟ್ಟಿ

ತಾಯ್ತನದ ಸಿರಿಯ ಹೂ ಮಾಲೆ ಮುಡಿದು
ಬೀಗುವುದು ಕಲ್ಲು ಹಿರಿತನವ ಪಡೆದು

ಅತ್ತಿತ್ತ ಕಾಲ ಲಯದಲ್ಲಿ ಹಾಕಿ
ಒಂದೆರಡು ಒಡೆದು ಒಂದಾಗಿ ಸೋಕಿ
ಕೇಂದ್ರವನೆ ಹಿಡಿದು ಸುತ್ತಲೂ ಸುತ್ತಿ
ಜೀವಾಣು ಬಹುದು ಕೇಂದ್ರಕ್ಕೆ ಒತ್ತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತಾಂತರ ತಪ್ಪೇನು?
Next post ನಗೆ ಡಂಗುರ – ೧೬೫

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…