ರಾಮುಲುವೂ ಸೋಮುಲುವೂ

ನಿರ್ಜನವಾದ ಬಯಲು
ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ
ಒಂದಿಷ್ಟು ಇಳಿಬೆಳಕು ಮಾತ್ರ
ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ
ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ)
ರಾಮುಲುವೂ ಸೋಮುಲುವೂ
ಅನುಮಾನಿಸುತ್ತ ಅನುಮಾನಿಸುತ್ತ ಪ್ರವೇಶಿಸುವರು
ಅಂಗಿಯ ಬದಿಗೆ ಜೋತಕೈ, ಕಚ್ಚೆಯ ಕೆಳಗೆ ದೊಂಗಾಲು
ತಲೆಯಿರುವಲ್ಲಿ ಮುಂಡಾಸು-ದೂರಕ್ಕೆ ಇಷ್ಟೆ-
ಒಂದು ಕ್ಷಣ ಮುಖ ಮುಖ ನೋಡುತ್ತ ನಿಲ್ಲುವರು
ನಂತರ ಲಗುಬಗನೆ
ಚೆಂಡುಗಳನ್ನರಸುತ್ತ ಬೇರೆ ಬೇರೆ ದಿಕ್ಕುಗಳಿಗೆ ಚದುರುವರು
ಹೀಗೆ ಅರಸುತ್ತ, ಕಂಡುಹುಡುಕುತ್ತ
ಹಲವು ಕಾಲದ ಮೇಲೆ
ಪಿಚ್ಚಿನಲ್ಲಿ ಇಬ್ಬರೂ ಭೇಟಿಯಾಗುವರು
ನಂತರ ವಿಕೆಟುಗಳನ್ನು ಹೆಕ್ಕಿ ತಬ್ಬಿಕೊಂಡು
ದಾಪುಗಾಲುಗಳನ್ನು ಹಾಕುತ್ತ ನಿಷ್ಕ್ರಮಿಸುವರು


ಇಬ್ಬನಿಯಾದರೋ ನೆಲಕ್ಕೆ ತೆಳ್ಳಗಿನ ಮುಸುಕು ಹಾಕುತ್ತಿದೆ
ಆಕಾಶದಲ್ಲಿ ನಾಲ್ಕಾರು ನಕ್ಷತ್ರಗಳು ಬಿದ್ದಿವೆ
ಆಲಸಿಗಳಾದ ಕತ್ತೆಗಳು ಮಾತ್ರ ಯಾವುದನ್ನೂ ಗಮನಿಸದೆ
ನಿಶ್ಚಲವಾಗಿ ನಿಂತಿವೆ
ಅಷ್ಟರಲ್ಲಿ ರಾಮುಲುವೂ ಸೋಮುಲುವೂ
ಮತ್ತೆ ಪ್ರವೇಶಿಸುವರು
ನೆಟ್ಟದೃಷ್ಟಿಯಿಂದ ಪಿಚ್ಚಿನ ಕಡೆಗೆ ದಪದಪನೆ ಧಾವಿಸುವರು
ಅದರ ಹುರಿಹಾಸನ್ನು
ಎಡಗಡೆಯಿಂದೊಬ್ಬ, ಬಲಗಡೆಯಿಂದೊಬ್ಬ
ಎತ್ತಿ ಸುತ್ತಲು ಮನಸ್ಸು ಮಾಡುವರು
ಸುತ್ತುತ್ತ ಉರುಳುರುಳಾಗಿ ಬೆಳೆಯುತ್ತಿರುವ ಹಾಸಿನ
ಉರುಳಿಗೆ ಕೈಗಳನ್ನೂ ನೆಲಕ್ಕೆ ಕಾಲುಗಳನ್ನೂ
ಊರಿ ನೂಕಿ ಸೆಟೆದು ಮುಗ್ಗರಿಸಿ ಬೀಳುವರು
ಕೆಳಗೊಬ್ಬ, ಮೇಲೊಬ್ಬ
ಬಿದ್ದರೂ ಬಿಡದೆ, ಕೈ ಬದಲಾಯಿಸುತ್ತ, ಏದುತ್ತ
ಎತ್ತಿ ಎಳೆದು ದೂರಕ್ಕೆ ಸಾಗಿಸುವರು


ಜನವರಿಯ ಇರುಳಾದರೋ ಯಥೇಷ್ಟ ಹೆಪ್ಪುಗಟ್ಟುತ್ತಿದೆ
ಮೈದಾನು ಯಾವುದು, ಮರ ಯಾವುದು ಗೊತ್ತಾಗುವುದೆ ಕಷ್ಟ
ಅಷ್ಟರಲ್ಲಿ ರಾಮುಲುವೂ ಸೋಮುಲುವೂ
ಭಾರವಾದ ಕೂಜೆಗಳನ್ನು ಎತ್ತಿಕೊಂಡು ಬಿಡದೆ ಪ್ರವೇಶಿಸುವರು
ಕುಸಿದುಹೋಗುತ್ತಿರುವ ಕಾಲುಗಳನ್ನು ಲೆಕ್ಕಿಸದೆ
ಪಿಚ್ಚಿನ ಕಡೆಗೆ ಚುರುಕಾಗಿ ಪುಟಪುಟನೆ ಹೆಜ್ಜೆ ಹಾಕುವರು
ಬಾಯಲ್ಲಿ ಒಂದೊಂದು ಬೀಡಿ
ಜೋಡಿ ನಕ್ಷತ್ರಗಳಂತೆ ಉರಿಯುತ್ತ
ರಾಮುಲುವೂ ಸೋಮುಲುವೂ
ಧೂಳೆಬ್ಬಿಸಿ ಸುಸ್ತಾಗಿ ಮಲಗಿದ ಬಯಲ ಮೈಗೆ
ನೀರು ಸಿಂಪಡಿಸಲು ತೊಡಗುವರು
ಕ್ರಮೇಣ ದಟ್ಟವಾದ ಕತ್ತಲು ಎಲ್ಲವನ್ನೂ ಆವರಿಸುವುದು
ಸ್ವಲ್ಪ ಹೊತ್ತಿನಲ್ಲೆ ಒಂದು ಬೀಡಿ ನಂದುವುದು
ನಂತರ ಇನ್ನೊಂದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಡೋದೇನು
Next post ಕನ್ನಡಮ್ಮ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys