Home / ಕವನ / ಕವಿತೆ / ರಾಮುಲುವೂ ಸೋಮುಲುವೂ

ರಾಮುಲುವೂ ಸೋಮುಲುವೂ

ನಿರ್ಜನವಾದ ಬಯಲು
ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ
ಒಂದಿಷ್ಟು ಇಳಿಬೆಳಕು ಮಾತ್ರ
ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ
ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ)
ರಾಮುಲುವೂ ಸೋಮುಲುವೂ
ಅನುಮಾನಿಸುತ್ತ ಅನುಮಾನಿಸುತ್ತ ಪ್ರವೇಶಿಸುವರು
ಅಂಗಿಯ ಬದಿಗೆ ಜೋತಕೈ, ಕಚ್ಚೆಯ ಕೆಳಗೆ ದೊಂಗಾಲು
ತಲೆಯಿರುವಲ್ಲಿ ಮುಂಡಾಸು-ದೂರಕ್ಕೆ ಇಷ್ಟೆ-
ಒಂದು ಕ್ಷಣ ಮುಖ ಮುಖ ನೋಡುತ್ತ ನಿಲ್ಲುವರು
ನಂತರ ಲಗುಬಗನೆ
ಚೆಂಡುಗಳನ್ನರಸುತ್ತ ಬೇರೆ ಬೇರೆ ದಿಕ್ಕುಗಳಿಗೆ ಚದುರುವರು
ಹೀಗೆ ಅರಸುತ್ತ, ಕಂಡುಹುಡುಕುತ್ತ
ಹಲವು ಕಾಲದ ಮೇಲೆ
ಪಿಚ್ಚಿನಲ್ಲಿ ಇಬ್ಬರೂ ಭೇಟಿಯಾಗುವರು
ನಂತರ ವಿಕೆಟುಗಳನ್ನು ಹೆಕ್ಕಿ ತಬ್ಬಿಕೊಂಡು
ದಾಪುಗಾಲುಗಳನ್ನು ಹಾಕುತ್ತ ನಿಷ್ಕ್ರಮಿಸುವರು


ಇಬ್ಬನಿಯಾದರೋ ನೆಲಕ್ಕೆ ತೆಳ್ಳಗಿನ ಮುಸುಕು ಹಾಕುತ್ತಿದೆ
ಆಕಾಶದಲ್ಲಿ ನಾಲ್ಕಾರು ನಕ್ಷತ್ರಗಳು ಬಿದ್ದಿವೆ
ಆಲಸಿಗಳಾದ ಕತ್ತೆಗಳು ಮಾತ್ರ ಯಾವುದನ್ನೂ ಗಮನಿಸದೆ
ನಿಶ್ಚಲವಾಗಿ ನಿಂತಿವೆ
ಅಷ್ಟರಲ್ಲಿ ರಾಮುಲುವೂ ಸೋಮುಲುವೂ
ಮತ್ತೆ ಪ್ರವೇಶಿಸುವರು
ನೆಟ್ಟದೃಷ್ಟಿಯಿಂದ ಪಿಚ್ಚಿನ ಕಡೆಗೆ ದಪದಪನೆ ಧಾವಿಸುವರು
ಅದರ ಹುರಿಹಾಸನ್ನು
ಎಡಗಡೆಯಿಂದೊಬ್ಬ, ಬಲಗಡೆಯಿಂದೊಬ್ಬ
ಎತ್ತಿ ಸುತ್ತಲು ಮನಸ್ಸು ಮಾಡುವರು
ಸುತ್ತುತ್ತ ಉರುಳುರುಳಾಗಿ ಬೆಳೆಯುತ್ತಿರುವ ಹಾಸಿನ
ಉರುಳಿಗೆ ಕೈಗಳನ್ನೂ ನೆಲಕ್ಕೆ ಕಾಲುಗಳನ್ನೂ
ಊರಿ ನೂಕಿ ಸೆಟೆದು ಮುಗ್ಗರಿಸಿ ಬೀಳುವರು
ಕೆಳಗೊಬ್ಬ, ಮೇಲೊಬ್ಬ
ಬಿದ್ದರೂ ಬಿಡದೆ, ಕೈ ಬದಲಾಯಿಸುತ್ತ, ಏದುತ್ತ
ಎತ್ತಿ ಎಳೆದು ದೂರಕ್ಕೆ ಸಾಗಿಸುವರು


ಜನವರಿಯ ಇರುಳಾದರೋ ಯಥೇಷ್ಟ ಹೆಪ್ಪುಗಟ್ಟುತ್ತಿದೆ
ಮೈದಾನು ಯಾವುದು, ಮರ ಯಾವುದು ಗೊತ್ತಾಗುವುದೆ ಕಷ್ಟ
ಅಷ್ಟರಲ್ಲಿ ರಾಮುಲುವೂ ಸೋಮುಲುವೂ
ಭಾರವಾದ ಕೂಜೆಗಳನ್ನು ಎತ್ತಿಕೊಂಡು ಬಿಡದೆ ಪ್ರವೇಶಿಸುವರು
ಕುಸಿದುಹೋಗುತ್ತಿರುವ ಕಾಲುಗಳನ್ನು ಲೆಕ್ಕಿಸದೆ
ಪಿಚ್ಚಿನ ಕಡೆಗೆ ಚುರುಕಾಗಿ ಪುಟಪುಟನೆ ಹೆಜ್ಜೆ ಹಾಕುವರು
ಬಾಯಲ್ಲಿ ಒಂದೊಂದು ಬೀಡಿ
ಜೋಡಿ ನಕ್ಷತ್ರಗಳಂತೆ ಉರಿಯುತ್ತ
ರಾಮುಲುವೂ ಸೋಮುಲುವೂ
ಧೂಳೆಬ್ಬಿಸಿ ಸುಸ್ತಾಗಿ ಮಲಗಿದ ಬಯಲ ಮೈಗೆ
ನೀರು ಸಿಂಪಡಿಸಲು ತೊಡಗುವರು
ಕ್ರಮೇಣ ದಟ್ಟವಾದ ಕತ್ತಲು ಎಲ್ಲವನ್ನೂ ಆವರಿಸುವುದು
ಸ್ವಲ್ಪ ಹೊತ್ತಿನಲ್ಲೆ ಒಂದು ಬೀಡಿ ನಂದುವುದು
ನಂತರ ಇನ್ನೊಂದು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...