Home / ಕವನ / ಕವಿತೆ / ಹೈದರಾಬಾದಿನಲ್ಲಿ

ಹೈದರಾಬಾದಿನಲ್ಲಿ

ಮೊದಲು ಹವೆಯ ಬಗ್ಗೆ ಮಾತಾಡಿದೆವು
ಬಿಸಿಲ ಬೇಗೆ-ನೆಲದ ಧಗೆ-ಧೂಳು ಸುಳಿಗಾಳಿ
ಪಕೋಡಾ ಮಸಾಲೆ ಮೆಣಸು
ಕಾಯಿಸುವ ಹೊಗೆ
ಸೈಕಲು ರಿಕ್ಷಾಗಳ ಅಗತ್ಯ-ಅನಗತ್ಯ
ಎಮ್ಮೆಗಳ ಅಸಾಂಗತ್ಯ
ಹೈದರಾಬಾದಿನ ರಚನೆಯ ಕುರಿತು ಮಾತಾಡಿದೆವು
ವಾಸ್ತುಶಿಲ್ಪದ ಪ್ರಕಾರ
ಇದಕ್ಕೆ ಆಕಾರವಿಲ್ಲ ಆದರೆ
ನಡೆದಲ್ಲಿ ಬೆಳೆಯುವ
ನೋಡಿದಲ್ಲಿ ಏಳುವ
ಪವಾಡವಿದೆ
ನಿಜಾಮನನ್ನು ಬಯ್ದೆವು

ಒಬ್ಬರು ಹೇಳಿದರು-
ಹತ್ತು ವರ್ಷಗಳ ಕೆಳಗೆ
ನಾನೀ ನಗರವನ್ನು ಪ್ರೀತಿಸಿದ್ದೆ ಆಗ
ಗಾಳಿ ಬೆಳಕು ಮಳೆಯಿತ್ತು.  ಇಷ್ಟು ಜನ ಇರಲಿಲ್ಲ.
ಇನ್ನೊಬ್ಬರೆಂದರು-
ಹಿಂದೆ ಇದರ ಹೆಸರು ಭಾಗ್ಯನಗರ
ಒಂದು ಸಣ್ಣ ಪೇಟೆ
ಅದಕ್ಕೂ ಮೊದಲು ಇಲ್ಲಿ ಜನರೇ ಇರಲಿಲ್ಲ.
ಮೊತ್ತೊಬ್ಬರು ಕೇಳಿದರು-
ಹಾಗಾದರೆ ಈ ಶತಮಾನದ ಮೇಲೆ
ಇದರ ಅವಸ್ಥೆ ಏನು?
ಹೀಗೆ ಪ್ರಾಕ್ತನಾದ ರಹಸ್ಯ ಮತ್ತು
ಭವಿಷ್ಯದ ಆತಂಕದ ಮಧ್ಯೆ
ಹೈದರಾಬಾದಿಗಾಗಿ ನಾವು ಪರಿತಪಿಸಿದೆವು.

ನಾನೆಂದೆ-
ನನಗೆ ಈ ಹೈದರಾಬಾದು ಸುತ್ತಬೇಕು
ಇದರ ಆರಂಭ ಮತ್ತು ಅಂತ್ಯವನ್ನು ನೋಡಬೇಕು
ಇದರ ಜೋತುಬಿದ್ದ ಮಹಡಿಗಳನ್ನೂ
ಮತಾಡುತ್ತ ನಿಂತ ಮನುಷ್ಯರನ್ನೂ ದಾಟಿ
ಆಂಧ್ರಕ್ಕೆ ಆಂಧ್ರದಿಂದ ಹೊರಕ್ಕೆ
ತಲುಪುವ ದಾರಿಯನ್ನು ಕಂಡು ಹುಡುಕಬೇಕು.
ಆಚೆಗೆ ಕುಳಿತಿದ್ದ ವ್ಯಕ್ತಿಯೊಬ್ಬ ನಕ್ಕು ಹೇಳಿದ-
ಆಂಧ್ರವೆಂದರೆ ಇಂದಿರಾಗಾಂಧಿಯ ಸೀರೆ
ತೆಲಂಗಾಣ ಮಾತ್ರ ಬೇರೆ.
ನಾನು ತೆಲಂಗಾಣದ ಕವಿ.
ಯಾರೋ ಎತ್ತರದ ಧ್ವನಿಯಲ್ಲಿ ಹೇಳಿದರು-
ಎಲೆ ಕವಿ,
ನಿನಗೆ ಪ್ರಣಾಮ.  ನಿನಗಾಗಿ ನಾವು
ಎಷ್ಟು ಕಾಲದಿಂದ ಕಾಯುತ್ತಿಲ್ಲ!
ನಕ್ಸಲೀಯ,
ನಿನ್ನ ಗಡ್ಡ ಮೀಸೆಯ ಹಿಂದೆ ಮನುಷ್ಯ ಜನಾಂಗದ ಎಷ್ಟು
ಸಂಕಟವನ್ನು ಹಿಡಿದಿಟ್ಟಿದ್ದೀಯ.
ಅವನೆಂದ-
ನನ್ನ ನಕ್ಸಲೀಯ ಗೆಳೆಯನೊಬ್ಬ
ಮುಶೀರಾಬಾದ್ ಜೈಲಿನಿಲ್ಲಿದ್ದಾನೆ.
ಆತ ಕವಿತೆ ಬರೆಯಲಿಲ್ಲ.
ಆದರೂ ಕವಿಯಾಗಿದ್ದ.
ಆಮೇಲೆ ಎಲ್ಲರೂ ಕವಿತೆಯ ಬಗ್ಗೆ ಮಾತಾಡುತ್ತ ಕೂತರು.
ನಾನೆಂದೆ-
ನನಗೆ ಈ ಕೂಡಲೇ ಮುಶೀರಾಬಾದಿಗೆ ಹೋಗಬೇಕು.
ಯಾರು ಕೇಳಿಸಿಕೊಳ್ಳಲಿಲ್ಲ.

ಮತ್ತೆ ಹೊರ ಬಂದಾಗ ರಾತ್ರಿ ಬಹಳ ಸರಿದಿತ್ತು
ಅಬೀಡ್ಸಿನಿಂದ ಕೋಠಿಯ ನಡುವೆ
ಏನಿತ್ತು ಏನಿರಲಿಲ್ಲ
ಬೀದಿಯಲ್ಲಿ ಜನರಿದ್ದರೆ
ಇವರ ಕಣ್ಣುಗಳಲ್ಲಿ ಕಲ್ಲಿದ್ದಲೆ
ಯಾರೋ ನನ್ನನ್ನು ಕೂಗಿದರೆ
ನೆನಪಿಲ್ಲ
ಮಧ್ಯೆ ಒಂದೆರಡು ಬಾರಿ ಕಕ್ಕಿದ್ದು ಮಾತ್ರ ಗೊತ್ತು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...