Home / ಕವನ / ಕವಿತೆ / ಗೆಳತಿ, ಅತ್ತು ಬಿಡು ಒಂದು ಸಲ

ಗೆಳತಿ, ಅತ್ತು ಬಿಡು ಒಂದು ಸಲ

ಗೆಳತಿ ಅತ್ತು ಬಿಡು ಒಂದು ಸಲ
ಈ ಆಷಾಢ ಮಳೆಯ ಮುಸುಲಧಾರೆಯಂತೆ
ಗೆಳತಿ ತೂರಿ ಬಿಡು ಮನದ ಜಡಭಾವನೆಗಳನ್ನು
ಈ ಸುಂಟರಗಾಳಿಯಂತೆ,
ಗೆಳತಿ ತೇಲಿಸಿಬಿಡು ಅವರಿವರ ಮಾತುಗಳನ್ನು
ಮಹಾಪೂರದಲ್ಲಿ ಕಡ್ಡಿ ಕಸದಂತೆ
ಗೆಳತಿ, ನೇಣು ಹಾಕಿಕೊಳ್ಳಬೇಡ
ಬಾವಿ ಬೀಳಬೇಡ, ಮನೆಯವರ
ಒದೆತ ತಿನ್ನಲೂ ಬೇಡ.
ಒಳಗೊಳಗೆ ಬೆಂಕಿ ಮಂಜುಗಡ್ಡೆ ಆಗಲೂ ಬೇಡ
ಬಾ! ನೀನು ನೀನಾಗು ಬಾ
ಬೆಳಗಿನ ಎಳೆ ಬಿಸಿಲಿನಂತೆ
ನಸುಕಿನ ಹೂವಿನಂತೆ
ಕಡಲ ತೊರೆಯ ನೊರೆಯಂತೆ
ಚಿಗುರು ಹುಲ್ಲಿನಂತೆ
ಬೆಳಗಿನ ಮೃದು ಮಣ್ಣಿನಂತೆ.
ಆದರೂ ನೀನು ನೀನಾಗುತ್ತಿಲ್ಲ
ಕೊನೆಗೆ ನೀನು ನೀನಾಗಲೇ ಇಲ್ಲ.
ನಿನ್ನ ಸಹನೆಯ ರಕ್ತ
ನನ್ನಲ್ಲಿಳಿಸಿದೆ ಕಿಚ್ಚು
ಮೊಗ್ಗೆಗಳೇ ಹೂವುಗಳಾಗಿ ಯಾಕೆ ಅರಳುತ್ತೀರಿ
ಅನ್ನುತ್ತೇನೆ
ಯಾವ ಕಟುಕರು ಮುಡಿದುಕೊಳ್ಳಲು
ನೀವು ಚಿತ್ತಾರದ ರಂಗಿನ ಸೊಬಗಾಗುತ್ತೀರಿ,
ಚಿನ್ನರ ಲೋಕದ ಚೆಲುವಿನಲ್ಲಷ್ಟೇ ಖುಷಿ ನಿಮಗೆ
ಭವಿಷ್ಯದ ಭೋರ್ಗರೆವ ಹೊಡೆತಕ್ಕೆ ಸಿಗುತ್ತಿರಲ್ಲ;
ಪ್ರಕೃತಿ ಮಾತೆ
ಅದೆಷ್ಣು ಮುಗ್ಧ ಮೊಗ್ಗುಗಳಿಗೆ
ಜನ್ಮ ಕೊಟ್ಟು ಕಿಚ್ಚಿಡುವ
ನಿನ್ನ ಬಸಿರಿನ್ನೂ ಶಾಂತವಾಗಿಲ್ಲವೆ?
ಸಾಕಿನ್ನು ಬಂಜರಾಗು
ಇದ್ದ ಮೊಗ್ಗುಗಳಿಗೆ ಇದೇ ಕಡೆಯೆಂದು
ಶಾಪವೂ ಹಾಕು
ಒಮ್ಮೆ ನೀನು ಬರಡಾಗು
ಮರುಭೂಮಿಯಾಗು
ಇದ್ದ ನಾಯಿಗಳೆಲ್ಲ ಬೊಗಳಿ
ಬೊಬ್ಬೆ ಹೊಡೆದು ಬಿದ್ದುಹೋಗುವಾಗ
ನೀನು ಓಯಸಿಸ್ ಆಗು
ತುಂಬಿ ಹರಿವ ಗಂಗೆ ಮಾತ್ರ
ಎಂದೂ ಆಗಬೇಡ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...