Home / ಕವನ / ಕವಿತೆ / ಈಗಿಲ್ಲದ

ಈಗಿಲ್ಲದ


(ಈಗಿಲ್ಲದ) ಅಡಗೂಲಜ್ಜಿಯ ಮನೆಜಗಲಿಯಲ್ಲೊಬ್ಬ ಹುಡುಗ
ಮಲಗಿ ಸೊಳ್ಳೆ ಹೊಡೆಯುತ್ತ, ಆರಡಿ ದಪ್ಪ ಗಾದಿಯ ಕೆಳಗೆ
ಎಲ್ಲೋ ಸಿಕ್ಕ ಕೂದಲೆಳೆ ಕಾರಣ ನಿದ್ದೆಯಿಲ್ಲದೆ ಹೊರಳುವ
ರಾಜಕುಮಾರಿಯನ್ನು ನೆನೆಯುತ್ತ ನಿದ್ರಿಸಿದಾಗ ಕೊನೆಗೆ
ಅವನ ಮೈಮೇಲೆ ಒಂದೆರಡು ಜಿರಳೆಗಳು
ಹರಿದ ವಿರೋಧಾಭಾಸ


ಆಳೆತ್ತರ ಗಾಂಧೀಚಿತ್ರದ ಕೆಳಗೆ (ಈಗಿಲ್ಲದ) ಉಮೇಶರಾಯರು,
ಅವರ ಮುಂದೆ ಕಾಸರಗೋಡು ಚಳುವಳಿಯಲ್ಲಿ
ಧುಮುಕಲು ಹೊರಟ ನಮ್ಮ ಪ್ರತಿಜ್ಞೆ: ಸತ್ಯವನ್ನೇ ಹೇಳುವೆವು,
ಹಿಂಸೆ ಮಾಡೆವು.  ಆ ಮೇಲೆ ಸಬ್‌ಜೈಲಿನಲ್ಲಿ
ಎಷ್ಟೋ ಎತ್ತರದಲ್ಲಿದ್ದ ಬೆಳಕಿಂಡಿಯನ್ನು ನೋಡುತ್ತ
ಕಳೆದ ಒಂದು ರಾತ್ರಿ

(ಈಗಿಲ್ಲದ) ವಸಂತಭವನದ ಮಾಳಿಗೆಯಲ್ಲಿ
ಒಂದು ಕಡೆ ಬಾಣಲೆತುಂಬ ಕರಿಯುವ ಬಾಳೆಹಣ್ಣಿನ ಪೋಡಿ
ಇನ್ನೊಂದು ಕಡೆ ಈ ಊರನ್ನು ಸಾಂಸ್ಕೃತಿಕ ಕ್ರಾಂತಿಗೆ
ಬಡಿದೆಬ್ಬಿಸುತ್ತೇವೆಂದು ಒಂದೊಂದು ಬೀಡಿ
ಹಚ್ಚಿ ಸೇದುತ್ತ ಯಾವ ವಿಡಂಬನೆಯನ್ನೂ ಉದ್ದೇಶಿಸದೆ ಕಾಯುವ
ನಾಲ್ಕಾರು ಮಂದಿ ನಾವು


ಈ ಊರಿನ ಹುಡುಗಿಯರಿಗೆ ಹೊಸ ಹೊಸ ಫ್ಯಾಶನು ಕಲಿಸು
ಕಲಿಸಿ ಅವರನ್ನು ನಮ್ಮೊಂದಿಗೆ ತಿರುಗಲು ಬಿಡು
ಅದಕ್ಕೋಸ್ಕರ ನಮಗೆ ಒಂದೆರಡು ಜತೆ ಒಳ್ಳೆ ಶರ್ಟುಗಳನ್ನೂ
ಕೊಲ್ಲಾಪುರ ಚಪ್ಪಲಿಗಳನ್ನೂ ಹಾಗೆಯೆ ಸ್ವಲ್ಪ ಧೈರ್ಯವನ್ನೂ ಕೊಡು
-ಎಂದು ನಾವು ಒಳಗೊಳಗೇ ಪ್ರಾರ್ಥಿಸಿ ಖಂಡಿತಕ್ಕೂ ನಂಬಿದ
(ಈಗಿಲ್ಲದ) ದೇವರು
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...