ಹಳೆ ಮಾರ್ಗಗಳು


ಕುಂಬಳೆ ಮಂಜೇಶ್ವರ ಪೆರ್ಲ ಪುತ್ತೂರು
ಬದಿಯಡ್ಕ ಕಾರಡ್ಕ ಸುಳ್ಯ ಹೀಗೆ
ಇಲ್ಲಿಗೆ ಹಲವು ಮಾರ್ಗಗಳು ಬಂದು ಸೇರಿದವು
ಮೊದಲು ಯಾರೂ ಕಡಿಯಲಿಲ್ಲ ಇವನ್ನು
ಕವಿತೆಯ ಸಾಲುಗಳಂತೆ ಹುಟ್ಟಿದವು.


ನಡೆದದ್ದೆ ಮಾರ್ಗ ಆಗ.  ಹಾಗೆ ನಡೆದೇ
ತಲಪಿದವು ಈ ಪೇಟೆಯನ್ನು ಹಳ್ಳಿಗಳಿಂದ
ಮೊಣಕಾಲೆತ್ತರಕ್ಕೆ ಎಬ್ಬಿಸಿದವು ಕೆಂಪು ಮಣ್ಣು
ಮಳೆಗೆ ತೊಳೆದುಕೊಳ್ಳುವುದಕ್ಕಷ್ಟೆ.  ಅಲ್ಲದಿದ್ದರೆ
ನೆರೆನೀರಿಗೆಲ್ಲಿಂದ ಆ ತರದ ಬಣ್ಣ?


ನಡೆದವರಿಗೆ ಮಾತ್ರ ಗೊತ್ತು ಮಾರ್ಗಗಳ ಮರ್ಮ
ಎಲ್ಲಿ ಅವು ಮಾತು ತೆಗೆಯುತ್ತವೆ ಮತ್ತು ಎಲ್ಲಿ
ಮೌನವಾಗುತ್ತವೆ ಎಂದು. ಮನುಷ್ಯ ದುಃಖದ
ಬಗ್ಗೆ ದೊಡ್ಡದಾಗಿ ಹೇಳುವ ಈಗಿನವರು
ಹಳೆಯ ಮಾರ್ಗಗಳಲ್ಲೆಂದೂ ನಡೆದಿರಲಿಕ್ಕಿಲ್ಲ.


ನಡೆದ ನೆನಪಿದೆ ನನಗೆ ಅಂಥ ಕೊರಕಲುಗಳನ್ನು
ಬರಿಗಾಲಲ್ಲಿ, ಯಾವ ವಿಷಾದವೂ ಅನಿಸದೆ.  ಮೂವತ್ತು
ವರ್ಷಗಳ ಹಿಂದೆ ಕೋಟೂರ ಚಡವಿನಲ್ಲಿ
ಒಂದು ಇದ್ದಿಲ ಬಸ್ಸು ಕಾಣಿಸಿಕೊಂಡು
ಗದ್ದೆಗಳ ಮೇಲೆ ಧೂಳು ಹಾರಿಸಿ ಹೋದ ನೆನಪೂ ಉಂಟು


ನಂತರ ಇದೆಲ್ಲ ಹೇಗೆ ಬದಲಾಯಿತೆಂದು ತಿಳಿಯದು.
ಹಳೆ ಮಾರ್ಗಗಳೀಗ ಇದ್ದಲ್ಲೆ ಬೆಳೆದಿವೆ.
ಜಲ್ಲಿ ಹಾಸಿ ದಾಮರು ಹಾಕಿದ್ದಾರೆ.  ಅನೇಕ
ಮೋಟರುಗಳು ಓಡಾಡುತ್ತಿವೆ ದಿನಕ್ಕೆ.
ದೂರವನ್ನು ಮಿನಿಟುಗಳಲ್ಲಿ ಹೇಳುತ್ತಿದ್ದಾರೆ.


ಈ ಪೇಟೆಯ ಸೆರಗಿನಲ್ಲಿ ಹಾದು ಹೋಗಿದೆ
ಒಂದು ರಾಷ್ಟ್ರೀಯ ಹೆದ್ದಾರಿ.  ನಾವೂ ಸೇರಿದ್ದೇವೆ
ದೇಶದ ಸಾರಿಗೆ ವ್ಯವಸ್ಥೆಯಲ್ಲಿ.  ಆದರೂ
ಓಡುತ್ತಿದೆ ಹಳೆ ಮಾರ್ಗಗಳ ಬೆನ್ನು ಹತ್ತಿ ಮನಸ್ಸು
ಈಗಿಲ್ಲದ ಕಾಲಸಪ್ಪಳಗಳನ್ನು ಕೇಳಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೩೮
Next post ನನಗೆ ಚೆನ್ನಾಗಿ ಗೊತ್ತು

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys