ಹಳೆ ಮಾರ್ಗಗಳು


ಕುಂಬಳೆ ಮಂಜೇಶ್ವರ ಪೆರ್ಲ ಪುತ್ತೂರು
ಬದಿಯಡ್ಕ ಕಾರಡ್ಕ ಸುಳ್ಯ ಹೀಗೆ
ಇಲ್ಲಿಗೆ ಹಲವು ಮಾರ್ಗಗಳು ಬಂದು ಸೇರಿದವು
ಮೊದಲು ಯಾರೂ ಕಡಿಯಲಿಲ್ಲ ಇವನ್ನು
ಕವಿತೆಯ ಸಾಲುಗಳಂತೆ ಹುಟ್ಟಿದವು.


ನಡೆದದ್ದೆ ಮಾರ್ಗ ಆಗ.  ಹಾಗೆ ನಡೆದೇ
ತಲಪಿದವು ಈ ಪೇಟೆಯನ್ನು ಹಳ್ಳಿಗಳಿಂದ
ಮೊಣಕಾಲೆತ್ತರಕ್ಕೆ ಎಬ್ಬಿಸಿದವು ಕೆಂಪು ಮಣ್ಣು
ಮಳೆಗೆ ತೊಳೆದುಕೊಳ್ಳುವುದಕ್ಕಷ್ಟೆ.  ಅಲ್ಲದಿದ್ದರೆ
ನೆರೆನೀರಿಗೆಲ್ಲಿಂದ ಆ ತರದ ಬಣ್ಣ?


ನಡೆದವರಿಗೆ ಮಾತ್ರ ಗೊತ್ತು ಮಾರ್ಗಗಳ ಮರ್ಮ
ಎಲ್ಲಿ ಅವು ಮಾತು ತೆಗೆಯುತ್ತವೆ ಮತ್ತು ಎಲ್ಲಿ
ಮೌನವಾಗುತ್ತವೆ ಎಂದು. ಮನುಷ್ಯ ದುಃಖದ
ಬಗ್ಗೆ ದೊಡ್ಡದಾಗಿ ಹೇಳುವ ಈಗಿನವರು
ಹಳೆಯ ಮಾರ್ಗಗಳಲ್ಲೆಂದೂ ನಡೆದಿರಲಿಕ್ಕಿಲ್ಲ.


ನಡೆದ ನೆನಪಿದೆ ನನಗೆ ಅಂಥ ಕೊರಕಲುಗಳನ್ನು
ಬರಿಗಾಲಲ್ಲಿ, ಯಾವ ವಿಷಾದವೂ ಅನಿಸದೆ.  ಮೂವತ್ತು
ವರ್ಷಗಳ ಹಿಂದೆ ಕೋಟೂರ ಚಡವಿನಲ್ಲಿ
ಒಂದು ಇದ್ದಿಲ ಬಸ್ಸು ಕಾಣಿಸಿಕೊಂಡು
ಗದ್ದೆಗಳ ಮೇಲೆ ಧೂಳು ಹಾರಿಸಿ ಹೋದ ನೆನಪೂ ಉಂಟು


ನಂತರ ಇದೆಲ್ಲ ಹೇಗೆ ಬದಲಾಯಿತೆಂದು ತಿಳಿಯದು.
ಹಳೆ ಮಾರ್ಗಗಳೀಗ ಇದ್ದಲ್ಲೆ ಬೆಳೆದಿವೆ.
ಜಲ್ಲಿ ಹಾಸಿ ದಾಮರು ಹಾಕಿದ್ದಾರೆ.  ಅನೇಕ
ಮೋಟರುಗಳು ಓಡಾಡುತ್ತಿವೆ ದಿನಕ್ಕೆ.
ದೂರವನ್ನು ಮಿನಿಟುಗಳಲ್ಲಿ ಹೇಳುತ್ತಿದ್ದಾರೆ.


ಈ ಪೇಟೆಯ ಸೆರಗಿನಲ್ಲಿ ಹಾದು ಹೋಗಿದೆ
ಒಂದು ರಾಷ್ಟ್ರೀಯ ಹೆದ್ದಾರಿ.  ನಾವೂ ಸೇರಿದ್ದೇವೆ
ದೇಶದ ಸಾರಿಗೆ ವ್ಯವಸ್ಥೆಯಲ್ಲಿ.  ಆದರೂ
ಓಡುತ್ತಿದೆ ಹಳೆ ಮಾರ್ಗಗಳ ಬೆನ್ನು ಹತ್ತಿ ಮನಸ್ಸು
ಈಗಿಲ್ಲದ ಕಾಲಸಪ್ಪಳಗಳನ್ನು ಕೇಳಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೩೮
Next post ನನಗೆ ಚೆನ್ನಾಗಿ ಗೊತ್ತು

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…