Home / ಕವನ / ಕವಿತೆ / ಹಳೆ ಮಾರ್ಗಗಳು

ಹಳೆ ಮಾರ್ಗಗಳು


ಕುಂಬಳೆ ಮಂಜೇಶ್ವರ ಪೆರ್ಲ ಪುತ್ತೂರು
ಬದಿಯಡ್ಕ ಕಾರಡ್ಕ ಸುಳ್ಯ ಹೀಗೆ
ಇಲ್ಲಿಗೆ ಹಲವು ಮಾರ್ಗಗಳು ಬಂದು ಸೇರಿದವು
ಮೊದಲು ಯಾರೂ ಕಡಿಯಲಿಲ್ಲ ಇವನ್ನು
ಕವಿತೆಯ ಸಾಲುಗಳಂತೆ ಹುಟ್ಟಿದವು.


ನಡೆದದ್ದೆ ಮಾರ್ಗ ಆಗ.  ಹಾಗೆ ನಡೆದೇ
ತಲಪಿದವು ಈ ಪೇಟೆಯನ್ನು ಹಳ್ಳಿಗಳಿಂದ
ಮೊಣಕಾಲೆತ್ತರಕ್ಕೆ ಎಬ್ಬಿಸಿದವು ಕೆಂಪು ಮಣ್ಣು
ಮಳೆಗೆ ತೊಳೆದುಕೊಳ್ಳುವುದಕ್ಕಷ್ಟೆ.  ಅಲ್ಲದಿದ್ದರೆ
ನೆರೆನೀರಿಗೆಲ್ಲಿಂದ ಆ ತರದ ಬಣ್ಣ?


ನಡೆದವರಿಗೆ ಮಾತ್ರ ಗೊತ್ತು ಮಾರ್ಗಗಳ ಮರ್ಮ
ಎಲ್ಲಿ ಅವು ಮಾತು ತೆಗೆಯುತ್ತವೆ ಮತ್ತು ಎಲ್ಲಿ
ಮೌನವಾಗುತ್ತವೆ ಎಂದು. ಮನುಷ್ಯ ದುಃಖದ
ಬಗ್ಗೆ ದೊಡ್ಡದಾಗಿ ಹೇಳುವ ಈಗಿನವರು
ಹಳೆಯ ಮಾರ್ಗಗಳಲ್ಲೆಂದೂ ನಡೆದಿರಲಿಕ್ಕಿಲ್ಲ.


ನಡೆದ ನೆನಪಿದೆ ನನಗೆ ಅಂಥ ಕೊರಕಲುಗಳನ್ನು
ಬರಿಗಾಲಲ್ಲಿ, ಯಾವ ವಿಷಾದವೂ ಅನಿಸದೆ.  ಮೂವತ್ತು
ವರ್ಷಗಳ ಹಿಂದೆ ಕೋಟೂರ ಚಡವಿನಲ್ಲಿ
ಒಂದು ಇದ್ದಿಲ ಬಸ್ಸು ಕಾಣಿಸಿಕೊಂಡು
ಗದ್ದೆಗಳ ಮೇಲೆ ಧೂಳು ಹಾರಿಸಿ ಹೋದ ನೆನಪೂ ಉಂಟು


ನಂತರ ಇದೆಲ್ಲ ಹೇಗೆ ಬದಲಾಯಿತೆಂದು ತಿಳಿಯದು.
ಹಳೆ ಮಾರ್ಗಗಳೀಗ ಇದ್ದಲ್ಲೆ ಬೆಳೆದಿವೆ.
ಜಲ್ಲಿ ಹಾಸಿ ದಾಮರು ಹಾಕಿದ್ದಾರೆ.  ಅನೇಕ
ಮೋಟರುಗಳು ಓಡಾಡುತ್ತಿವೆ ದಿನಕ್ಕೆ.
ದೂರವನ್ನು ಮಿನಿಟುಗಳಲ್ಲಿ ಹೇಳುತ್ತಿದ್ದಾರೆ.


ಈ ಪೇಟೆಯ ಸೆರಗಿನಲ್ಲಿ ಹಾದು ಹೋಗಿದೆ
ಒಂದು ರಾಷ್ಟ್ರೀಯ ಹೆದ್ದಾರಿ.  ನಾವೂ ಸೇರಿದ್ದೇವೆ
ದೇಶದ ಸಾರಿಗೆ ವ್ಯವಸ್ಥೆಯಲ್ಲಿ.  ಆದರೂ
ಓಡುತ್ತಿದೆ ಹಳೆ ಮಾರ್ಗಗಳ ಬೆನ್ನು ಹತ್ತಿ ಮನಸ್ಸು
ಈಗಿಲ್ಲದ ಕಾಲಸಪ್ಪಳಗಳನ್ನು ಕೇಳಲು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...