ಜಾತಿ ಗೀತಿ ಎಂಬುದೆಲ್ಲ
ಸುಳ್ಳು, ಕಂದ ಸುಳ್ಳು.
ಮೇಲು ಕೀಳು ಎಂಬ ಮಾತು
ವಿಷ ಸವರಿದ ಮುಳ್ಳು.
ನೀತಿ ನಡತೆ ಹೃದಯ ಇರುವ
ಮಾನವನೇ ಹಿರಿಯ,
ನಂಬಬೇಡ ಭೇದದ ವಿಷ
ಕುಡಿಸುವಂಥ ನರಿಯ!
ಸುತ್ತ ಇರುವ ಸಸ್ಯ ಪ್ರಾಣಿ
ನಮ್ಮಂತೇ ಅಂದುಕೊ
ನಮ್ಮ ಹಾಗೆ ಅವಕೂ ಸಹ
ಜೀವ ಉಂಟು, ತಿಳಕೊ.
ಒಬ್ಬೊಬ್ಬರ ಬಾಳೂವೆಯೂ
ಹೊರಗೆ ಬೇರೆ ರೀತಿ
ಒಳಗೆ ಒಂದೇ, ಅದು ತಿಳಿವುದು
ನಮಗಿದ್ದರೆ ಪ್ರೀತಿ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.