ಪ್ರೀತಿಯ ದೀಪವ ಎದೆಯಲಿ ಬೆಳಗಿ
ಮರೆಗೆ ಸರಿದೆಯೇನು?
ಅರಿಯದ ಹೆಣ್ಣ ಉರಿಸುವೆಯಲ್ಲ
ಎಂಥ ಕಟುಕ ನೀನು!
ನೀನಿಲ್ಲದೆ ನಾ ಹೇಗಿರಲಿ – ಶಶಿ
ಹರಸದ ನಭದಂತೆ,
ಮಿಡುಕುತ್ತಿರುವ ನೀರಿನಲಿ
ಉಸಿರು ಕಟ್ಟಿದಂತೆ.
ದಾರಿದಾರಿಯ ಅಲೆಯುವೆ ನಿನ್ನ
ಹೆಸರನೆ ಕೂಗುತ್ತ.
ಹುಚ್ಚಿಯ ಹಾಗೆ ತಿರುಗುವ ನಿನ್ನ
ಪ್ರೀತಿಯ ಹಾಡುತ್ತ.
ನೋಡೋ ಗಿರಿಧರ ನೀನೇ – ನಿನ್ನ
ನಂಬಿದ ಫಲವನ್ನ!
ಏತಕೆ ಈ ಥರ ಕಾಡುವಯೋ
ಧೀನ ಮೀರಳನ್ನ?
***
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.