Home / ಕವನ / ಕವಿತೆ / ಅಕ್ಷರ

ಅಕ್ಷರ

ನಾವಿಂದು ಬಳಸುತ್ತಿರುವ ಒಂದೊಂದು ಅಕ್ಷರದ ಹಿಂದೆ
ಹೃದಯಗಳು ಮಿಡಿಯುತಿವೆ ಅಸಂಖ್ಯ
ನಾಡಿ ತುಡಿಯುತಿವೆ ಅಸಂಖ್ಯ
ನಾದ ಮೊಳಗುತಿವೆ ಅಸಂಖ್ಯ
ಹೆಣಗಳ ಸಾಲು ಸಾಲು ಕಾಣುತ್ತಿವೆ ಅಸಂಖ್ಯ ಅಸಂಖ್ಯ

ಇವು ಬರೀ ಕರಿಬಣ್ಣದ ಅಂಕು ಡೊಂಕು ಆಕಾರಗಳೆನ್ನುವಿಯಾ?
ಸೂರ್ಯೋದಯ ಸೂರ್ಯಾಸ್ತದ ಇನಿದಾದ ಬನಿ
ಏರು ಹೊತ್ತಿನ ಪ್ರಖರ ಸಾರ ಧುನಿ
ಗುಲಾಬಿ ಗೋರಂಟಿ ತಾವರೆ ತಂಗಡಿಕೆ ಹೂಮಿಸುನಿ
ಕೋಗಿಲೆ ಕಾಗೆ ಕಾಜಾಣ ಗುಬ್ಬಿ ಗಿಳಿ ಗೊರವಂಕಗಳ ಕುಕಿಲು ದನಿ
ನದಿ ಕೊಳ್ಳ ಜಲಪಾತಗಳ ಧುಮ್ಮಿಕ್ಕುವ ಭೋರ್ಗರೆತ
ಸರಾಗ ಹರಿವ ಕಲಕಲ ಧ್ವನಿ

ಮಲೆ ಮಲೆಗಳ ಅಲೆ ಅಲೆ ಮೈನರಗಳಲೆದಾಡಿದ
ಕುಸುರು ಕಲೆಯ ಕಲರವ
ಹುಲಿ ಸಿಂಹ ಆನೆ ಕರಡಿ ಹಂದಿ ಎಮ್ಮೆ ಎತ್ತು
ಬೆಕ್ಕು ಬಾವಲಿ ಹಾವು ಮುಂಗುಸಿ ಪ್ರಾಣಿ ಬಳಗಗಳ ಜೀವ ಧ್ವನಿ
ಇದರಲ್ಲಿ ಎಲ್ಲ ಅಡಗಿವೆ
ಬಾಲ ಭಾಷೆಯ ಕಲಿಸಿವೆ
ಭಾವ ಸ್ವಭಾವಗಳ ಬಲಿಸಿವೆ

ನೆಲವನಪ್ಪುವ ಮೂಲ ಸೆಲೆಗೆ,
ಅನ್ನಮಾಂಸದಗುಳಿಗೆ
ತನ್ನತನದುಳಿವಿಗೆ ಪ್ರಾಣ ತರ್ಪಣವೂ ಹೆಚ್ಚಲ್ಲ
ಎಂಬ ಮೂಲ ಬೇರನಿಳಿಸಿವೆ ತಿಳಿಸಿವೆ.

ಲಕ್ಷ ಲಕ್ಷ ವಸಂತ ವರ್ಷ ಶಿಶಿರಗಳು
ಗುಡ್ಡ ಅಡವಿ ಗಾಳಿ ಮಲೆ ಬಿಸಿಲುಗಳೊಡನಾಡಿ ಆಡಿ
ಅ ಆ ಇ ಈ ಕಲಿತು ನನ್ನ ನಾಲಿಗೆ
ನಮ್ಮೆಲ್ಲರ ಪಾಡ ತುಂಬಿ ಹಾಡತೊಡಗಿದರೆ “ಅಕ್ಷರ” ವಾಯಿತು
ಮಾನವ ಜಾತಿಯ ಹೃದಯದಾಲಾಪ ಶ್ರವಣರೂಪ
ಎದೆ ಬಡಿತಗಳಿಗೊಂದೊಂದು ಸ್ವರ ಸಂಚಾರ

ಧ್ವನಿ ರಾಗ ಭಾವ ಸಾರ ಸಾರ
ನಾನು ನಾನುಗಳುದಿಸಿ
ಈ ಅಕ್ಷರದಕ್ಷಯ ಸಾಗರದಲೀಜಾಡಿ ಅಳಿದವು
ತಲೆ ತಲೆಗಳಲ್ಲಿ ಅಲೆಗೊಂಡು
ಸಾಗುತ್ತಲೇ ಮಾಗುತ್ತಲೇ
ಹಬ್ಬಿ ಹರವಾಗುತ್ತಲೇ ಬಂದ ಇದಕ್ಕೆ
ಸಾವಿಲ್ಲ-ಅದಕ್ಕೆ ಇದು ಅ-ಕ್ಷರ
ಆದರೆ….
ಹನಿ ಹನಿಯಾಗಿ ಕೂಡಿಸಿಟ್ಟ ಜೇನ,
ಕಾಳು ಕಾಳು ಕಲೆ ಹಾಕಿದ ಆಹಾರ ಕಣಜವ,
ಕಲ್ಲು ಮುಳ್ಳುಗಳ ತುಳಿದ ಹೆಜ್ಜೆ ಹೆಜ್ಜೆಗಳ
ಗೆಜ್ಜೆ ನಾದಗಳ ಪೋಣಿಸಿಟ್ಟ ಮುತ್ತು ರತ್ನಾವಳಿಯ
ನಮ್ಮೊಳಗಿನ ಕೆಲ ಕುನ್ನಿಗಳು
ಬಾಚಿ ದೋಚಿ ಬಚ್ಚಿಟ್ಟುಕೊಂಡಾಗ
ಅಕ್ಷರ ಸಂಪದವ ಕಳೆದುಕೊಂಡ
ಅಸಂಖ್ಯ ಜನ ನಾವು
ಅನಾಥರಾದೆವು ಅನೇಕ ಅನೇಕ ವರ್ಷ
ಕಪ್ಪು ಬಾವಿಯ ಕೊಳಚೆ ಕುತ್ತ ಯಾತನೆಗಳ
ನರನರದಲ್ಲಿ ತುಂಬಿ ನಾಡಿಗರ ಕಿತ್ತು ತಿನ್ನುತ್ತ ಬಂದ
ಅಕ್ಕರ ಸಂಪದ ದೋಚಿಗರ
ಭೂಪರೋ ಭೂಸುರರೋ ಎಂಬ
ನಂಬಿಗೆಯೇ ಬೆಂಬತ್ತಿ ಬಂದೆವು

ಆದರಿಂದು
ವಿಜ್ಞಾನ ರವಿ ವಿಶ್ವದಗಲಗಳ ಕತ್ತಲೆಕಳೆದು
ನಮ್ಮನ್ನು ಬಾವಿಗಳಿಂದ ಬಯಲಿಗೆ ಕರೆಯುತ್ತಿದ್ದಾನೆ
ನಾನು ಅಕ್ಷರಗಳಿಗಾಗಿ ಬೆದಕಾಡಿ ಕಾಡಿ ಬೇಡಿ
ದೊರೆತಾಗ ನೋಡಿದರೆ
ಲಕ್ಷ ಲಕ್ಷ ವರ್ಷಗಳ ಹೊಕ್ಕುಳ ಬಳ್ಳಿ ಬಂಧುತ್ವ
ಸಾವಿರಾರು ವರ್ಷಗಳ ಅಂಧತ್ವ
ಎಲ್ಲ ಕಾಣತೊಡಗಿದೆ.

೧೩-೬-೧೯೮೬

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...