Home / ಕವನ / ಕವಿತೆ / ಅಕ್ಷರ

ಅಕ್ಷರ

ನಾವಿಂದು ಬಳಸುತ್ತಿರುವ ಒಂದೊಂದು ಅಕ್ಷರದ ಹಿಂದೆ
ಹೃದಯಗಳು ಮಿಡಿಯುತಿವೆ ಅಸಂಖ್ಯ
ನಾಡಿ ತುಡಿಯುತಿವೆ ಅಸಂಖ್ಯ
ನಾದ ಮೊಳಗುತಿವೆ ಅಸಂಖ್ಯ
ಹೆಣಗಳ ಸಾಲು ಸಾಲು ಕಾಣುತ್ತಿವೆ ಅಸಂಖ್ಯ ಅಸಂಖ್ಯ

ಇವು ಬರೀ ಕರಿಬಣ್ಣದ ಅಂಕು ಡೊಂಕು ಆಕಾರಗಳೆನ್ನುವಿಯಾ?
ಸೂರ್ಯೋದಯ ಸೂರ್ಯಾಸ್ತದ ಇನಿದಾದ ಬನಿ
ಏರು ಹೊತ್ತಿನ ಪ್ರಖರ ಸಾರ ಧುನಿ
ಗುಲಾಬಿ ಗೋರಂಟಿ ತಾವರೆ ತಂಗಡಿಕೆ ಹೂಮಿಸುನಿ
ಕೋಗಿಲೆ ಕಾಗೆ ಕಾಜಾಣ ಗುಬ್ಬಿ ಗಿಳಿ ಗೊರವಂಕಗಳ ಕುಕಿಲು ದನಿ
ನದಿ ಕೊಳ್ಳ ಜಲಪಾತಗಳ ಧುಮ್ಮಿಕ್ಕುವ ಭೋರ್ಗರೆತ
ಸರಾಗ ಹರಿವ ಕಲಕಲ ಧ್ವನಿ

ಮಲೆ ಮಲೆಗಳ ಅಲೆ ಅಲೆ ಮೈನರಗಳಲೆದಾಡಿದ
ಕುಸುರು ಕಲೆಯ ಕಲರವ
ಹುಲಿ ಸಿಂಹ ಆನೆ ಕರಡಿ ಹಂದಿ ಎಮ್ಮೆ ಎತ್ತು
ಬೆಕ್ಕು ಬಾವಲಿ ಹಾವು ಮುಂಗುಸಿ ಪ್ರಾಣಿ ಬಳಗಗಳ ಜೀವ ಧ್ವನಿ
ಇದರಲ್ಲಿ ಎಲ್ಲ ಅಡಗಿವೆ
ಬಾಲ ಭಾಷೆಯ ಕಲಿಸಿವೆ
ಭಾವ ಸ್ವಭಾವಗಳ ಬಲಿಸಿವೆ

ನೆಲವನಪ್ಪುವ ಮೂಲ ಸೆಲೆಗೆ,
ಅನ್ನಮಾಂಸದಗುಳಿಗೆ
ತನ್ನತನದುಳಿವಿಗೆ ಪ್ರಾಣ ತರ್ಪಣವೂ ಹೆಚ್ಚಲ್ಲ
ಎಂಬ ಮೂಲ ಬೇರನಿಳಿಸಿವೆ ತಿಳಿಸಿವೆ.

ಲಕ್ಷ ಲಕ್ಷ ವಸಂತ ವರ್ಷ ಶಿಶಿರಗಳು
ಗುಡ್ಡ ಅಡವಿ ಗಾಳಿ ಮಲೆ ಬಿಸಿಲುಗಳೊಡನಾಡಿ ಆಡಿ
ಅ ಆ ಇ ಈ ಕಲಿತು ನನ್ನ ನಾಲಿಗೆ
ನಮ್ಮೆಲ್ಲರ ಪಾಡ ತುಂಬಿ ಹಾಡತೊಡಗಿದರೆ “ಅಕ್ಷರ” ವಾಯಿತು
ಮಾನವ ಜಾತಿಯ ಹೃದಯದಾಲಾಪ ಶ್ರವಣರೂಪ
ಎದೆ ಬಡಿತಗಳಿಗೊಂದೊಂದು ಸ್ವರ ಸಂಚಾರ

ಧ್ವನಿ ರಾಗ ಭಾವ ಸಾರ ಸಾರ
ನಾನು ನಾನುಗಳುದಿಸಿ
ಈ ಅಕ್ಷರದಕ್ಷಯ ಸಾಗರದಲೀಜಾಡಿ ಅಳಿದವು
ತಲೆ ತಲೆಗಳಲ್ಲಿ ಅಲೆಗೊಂಡು
ಸಾಗುತ್ತಲೇ ಮಾಗುತ್ತಲೇ
ಹಬ್ಬಿ ಹರವಾಗುತ್ತಲೇ ಬಂದ ಇದಕ್ಕೆ
ಸಾವಿಲ್ಲ-ಅದಕ್ಕೆ ಇದು ಅ-ಕ್ಷರ
ಆದರೆ….
ಹನಿ ಹನಿಯಾಗಿ ಕೂಡಿಸಿಟ್ಟ ಜೇನ,
ಕಾಳು ಕಾಳು ಕಲೆ ಹಾಕಿದ ಆಹಾರ ಕಣಜವ,
ಕಲ್ಲು ಮುಳ್ಳುಗಳ ತುಳಿದ ಹೆಜ್ಜೆ ಹೆಜ್ಜೆಗಳ
ಗೆಜ್ಜೆ ನಾದಗಳ ಪೋಣಿಸಿಟ್ಟ ಮುತ್ತು ರತ್ನಾವಳಿಯ
ನಮ್ಮೊಳಗಿನ ಕೆಲ ಕುನ್ನಿಗಳು
ಬಾಚಿ ದೋಚಿ ಬಚ್ಚಿಟ್ಟುಕೊಂಡಾಗ
ಅಕ್ಷರ ಸಂಪದವ ಕಳೆದುಕೊಂಡ
ಅಸಂಖ್ಯ ಜನ ನಾವು
ಅನಾಥರಾದೆವು ಅನೇಕ ಅನೇಕ ವರ್ಷ
ಕಪ್ಪು ಬಾವಿಯ ಕೊಳಚೆ ಕುತ್ತ ಯಾತನೆಗಳ
ನರನರದಲ್ಲಿ ತುಂಬಿ ನಾಡಿಗರ ಕಿತ್ತು ತಿನ್ನುತ್ತ ಬಂದ
ಅಕ್ಕರ ಸಂಪದ ದೋಚಿಗರ
ಭೂಪರೋ ಭೂಸುರರೋ ಎಂಬ
ನಂಬಿಗೆಯೇ ಬೆಂಬತ್ತಿ ಬಂದೆವು

ಆದರಿಂದು
ವಿಜ್ಞಾನ ರವಿ ವಿಶ್ವದಗಲಗಳ ಕತ್ತಲೆಕಳೆದು
ನಮ್ಮನ್ನು ಬಾವಿಗಳಿಂದ ಬಯಲಿಗೆ ಕರೆಯುತ್ತಿದ್ದಾನೆ
ನಾನು ಅಕ್ಷರಗಳಿಗಾಗಿ ಬೆದಕಾಡಿ ಕಾಡಿ ಬೇಡಿ
ದೊರೆತಾಗ ನೋಡಿದರೆ
ಲಕ್ಷ ಲಕ್ಷ ವರ್ಷಗಳ ಹೊಕ್ಕುಳ ಬಳ್ಳಿ ಬಂಧುತ್ವ
ಸಾವಿರಾರು ವರ್ಷಗಳ ಅಂಧತ್ವ
ಎಲ್ಲ ಕಾಣತೊಡಗಿದೆ.

೧೩-೬-೧೯೮೬

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...