Home / ಕವನ / ಕವಿತೆ / ರೈತಹತ್ಯಾ (ಬೀದಿ ನಾಟಕದ ಹಾಡು)

ರೈತಹತ್ಯಾ (ಬೀದಿ ನಾಟಕದ ಹಾಡು)

ಹಾಡು – ೧

ಎಲ್ಲಿಹುದೊ ಬಾಳ ಬೆಳಕು
ಅದೆಲ್ಲಿಹುದೊ ಜೀವ ತಳುಕು ||

ಜೀವ ಜಲ ಹನಿಹನಿ ರಾಶಿ
ಸುರಿಯೆ ಧಾರೆ ಹಸಿರು ಕಾಣಿ
ಹೂವರಳಿಸಿ ನಗು ಮಿಂಚಿಸಿ
ಜೀವಕೆಲ್ಲ ಚೇತನವ ಪೂಸಿ ||

ಮುಗಿಲಾಗಿರೆ ಬಟ ಬಯಲು
ನೆಲವೆಲ್ಲ ದ್ವೇಷಾಗ್ನಿ ಬುಗಿಲು
ಎಲ್ಲಿ ನಮ್ಮ ಬೆಳ್ಳಿ ಬೆಳಕು
ಅದೆಲ್ಲಿಹುದೊ ಜೀವ ತಳುಕು ||

ಹಾಡು – ೨

ಯಾರು ಕಾಯುವರಣ್ಣ
ರೈತಾಪಿ ಜನರನ್ನ ||

ತೆಂಗೀಗೆ ಜಂಗಲು ಹಿಡಿದು
ಜುಂಗು ಹತ್ತಿತು ಬದುಕು
ಮಳೆಯಿಲ್ಲ ಬೆಳೆಯಿಲ್ಲ
ದನ ಕರುಗೆ ಮೇವಿಲ್ಲ ||

ಕಣಜದೋರಿಗೆ ಕರುಣೆಯಿಲ್ಲ
ಜಣ್‌ಜಣ್ ಹಣ ಕಾಣಲಿಲ್ಲ
ಕೀಟ ಕಳೆಯ ಔಸದೀಯ
ಭಾಗ್ಯವಲ್ಲ ನಾವೆ ಕುಡಿಯೊ ||

ಹಾಡು – ೩

ದುಡ್ಡು ಕೊಡ್ತಾರೆ ಇವರು
ಜಪ್ತಿ ಮಾಡ್ತಾರೆ ||

ಸಾಲ ಮಾಡಿ ಅಂತಾರೆ
ಸಬ್ಸಿಡಿ ಮಾತ ಹೇಳ್ತಾರೆ
ಸಾಲದ ಶೂಲಕೆ ಹಾಕುತ್ತ
ನಮ್ ಗೋಣು ಮುರಿತಾರೆ ||

ಸಾಲ ಎಣಿಸಿ ಕೊಡುತಾರೆ
ಮೇಲೆ ಬಡ್ಡಿ ಹಾಕ್ತಾರೆ
ಸರ್ವಿಸ್ ಪರ್ವಿಸ್ ಚಾರ್ಜು
ಅಂತ ಟಾರ್ಚರ್‍ ಮಾಡ್ತಾರೆ ||

ಹಾಡು – ೪

ಮಾರುವಾಡಿ ಮುಂದೆ ಬಂದ
ಅಡಮಾನವೆಲ್ಲ ಹರಾಜು ಎಂದ ||

ಬೆಳ್ಳಿ ಬಂಗಾರದ ಅಂಗಡಿ
ಕಾಲೂರಲು ಜಾಗ ಒಂದಡಿ
ಬೆಳೆದ ವಾಮನ ತ್ರಿವಿಕ್ರಮ
ಹಿಡಿಯೋರ್‍ಯಾರವನ ಕ್ರಮ ||

ಬಡ್ಡಿ ಬಡ್ಡಿ ಚಕ್ರ ಬಡ್ಡಿ
ಹೊಟ್ಟೆ ಬೆಳೆದಂತೆ ಅಡ್ಡಾದಿಡ್ಡಿ
ತಕಡಿಗಾಕಿದರೆ ಬಂಗಾರ
ಬಂದಿತಲ್ಲಾ ಸಂಚಕಾರ ||

ಹಾಡು – ೫

ಜಮೀನುದಾರ ಮುರುದಾರ
ಬಡವರ ಭೂಮಿ ಬಕಾಸುರ ||

ಬಡತನ ಭಂಗದ ಪಿತಾಮಹ
ಜೀತ ಬೆವರಿನ ರಣಪಂತ
ಹಸಿಮಾಂಸದ ನರಭಕ್ಷಕ
ಮಾಡೋರ್‍ಯಾರಿವಗೆ ಶಿಕ್ಷಾ ||

ಮೂರಕೆ ಆರು ಲೆಕ್ಕ ಬರೆದು
ಸಾಲಕೆ ಕಟ್ಟಿನ ಗೆರೆಯ ಕೊರೆದು
ಬಿಡದೆ ಮಾಡುವ ವಸೂಲಿಕೋರ
ಊರ ಜುಟ್ಟಿನ ಸೂತ್ರಧಾರ ||

ಹಾಡು – ೬

ಹರಿದೀತು ಕಣ್ಣಗಂಗೆ
ಗಂಗಮ್ಮ ತಾಯಾಗೆ
ಒಡ್ಡು ಕಟ್ಟುವರ್‍ಯಾರು
ಬೋಯಿಗಳು || ಅಣ್ಣಾ ||

ಮುದ್ದೆ ಕೂಡಿಸಲಿಕ್ಕೆ
ಹಿಟ್ಟಿಲ್ಲ ಸೊಪ್ಪಿಲ್ಲ
ಹಿಡಿ ಹಿಟ್ಟು ಆಯಿತೊ
ಹಂಬಲಿಯು || ಅಣ್ಣಾ ||

ತಿನ್ನಲಾರೆವು ಎಂದು
ಅನ್ನ ಚೆಲ್ಲುವ ಮಂದಿ
ಕೊಡಿರಯ್ಯೊ ಹಿಡಿಗೂಳು
ನಿಮ್ಮ ಧರ್ಮ || ಅಣ್ಣಾ ||

ಹಾಡು – ೭

ಕೊಳ್ಳುವಿರಾ ಅಣ್ಣಾ ಕೊಳ್ಳುವಿರಾ
ಜೀವಗಳು ಬಿಕರಿಗಿವೆ ಕೊಳ್ಳುವಿರಾ ||

ಜೀವಾವ ಕೊಂಡು ದುಡ್ಡಾ ಕೊಟ್ಟಾರೆ
ಅದೆ ನಮ್ಮ ಮನೆ ಮಂದಿ ಹೊಟ್ಟಹೊರೆ
ಜೀವ ಉಳಿಸಲು ಜೀವ ಮಾರಾಟವೆ
ಜೀವ ಕೊಂಡು ಜೀವ ಉಳಿಸಿರಣ್ಣಾ ||

ನಮ್ಮ ಹಸಿವು ದುಃಖ ನಿಮ್ಮದಾಗಲಿಲ್ಲ
ಕನಸ ಕೊಂಡು ಮಹಲಲಿ ಕುಣಿದಿರಲ್ಲ
ಹೊಟ್ಟೆ ಕೇಳಲಿಲ್ಲ ಸುಮ್ಮನಿರಲಾಗಿಲಿಲ್ಲ
ಉರಿಬೆಂದು ಬೂದಿ ಆದೆವಲ್ಲ ||

ಹಾಡು – ೮

ಸಹಾಯವ ಮಾಡೀರಣ್ಣ
ನಾವು ಸಾಯಬೇಕ್ರಣ್ಣ ||

ಇದ್ದು ನಾವು ಬದುಕಲಾರೆವು
ನಿಮಗೆ ಏನೂ ಮಾಡಲಾರೆವು
ಬದುಕಿಗಂತೂ ಏನೂ ಇಲ್ಲ
ಸಾವಿಗಾದ್ರೂ ಕೊಡ್ರಿ ಬೆಲ್ಲ ||

ನಮ್ಮ ಸಾವಿಗೆ ನೀವೇ ಸಾಕ್ಷಿ
ಅದುವೆ ಸದ್ಯ ನಮಗೆ ಮೋಕ್ಷ
ಮನಕರಗದವರ ನಡುವೆ
ಸಾವೆ ಪರಮ ಒಡವೆ ||
*****

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...