Home / ಕವನ / ಹಾಯ್ಕು / ಬುದ್ಧನ ಹಯವೇ! ನಿನಗೆ ವಂದನೆ!

ಬುದ್ಧನ ಹಯವೇ! ನಿನಗೆ ವಂದನೆ!

ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ
ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು?
ಹದವರಿಯಲು ಹುಡುಕುತಲಿರುವೆ
ಎಲ್ಲಿಯೂ ನೀ ಕಾಣದೆ ಇರುವೆ.

ಮನ ಲಾಯಕೆ ಬಾ ಹಯವೆ
ಹೃದಯ ಹುಲ್ಲುಗಾವಲ ಮೇಯಲು,
ಕಾಡುತಿದೆ ಭವದ ಭಯವು
ಭವ ಸಾಗರದಲಿ ಹೃದಯ ಲಹರಿ
ಹುಡುಕುತಿದೆ ಬುದ್ಧನ ಬೆಳಕಿನ ಕಣ್ಣು
ಭವಕ್ಕೆ ಬೇಕು ಬುದ್ಧತ್ವದ ಹಣ್ಣು.

ಭೋಧಿ ವೃಕ್ಷದ ಎಲೆ ಎಲೆಯಲ್ಲಿ
ಬುದ್ಧನ ಅಭಯಹಸ್ತ ಸೆಲೆ ಸೆಲೆಯಲ್ಲಿ
ಶಾಖೆ ಶಾಖೆಯಲಿ ಬುದ್ಧನ ತೋಳತೆಕ್ಕೆ
ನೆರಳಲ್ಲಿ ನೆಲೆನಿಂತು ಕರೆಯುತ್ತಿದೆ
ಬುದ್ಧನೆದೆಯ ಪರಮಶಾಂತಿ ಮೆರೆಯುತಿದೆ.

ತೆರದ ಹೆಬ್ಬಾಗಿಲಲಿ ಉರಿಯುತಿದೆ
ಜಗವೆಲ್ಲ ಬೆಳಗುವ ದೀಪ
ಹಯವೆ ಛಂಗನೆ ಹಾರು ಭವದ ಕೂಪ
ಹಚ್ಚಬೇಕು ಜನ್ಮ ಮುಕ್ತಿಗೆ ಧೂಪ
ಎದೆಯಲಿ ಮೊಳಗುತ್ತಿದೆ ಬೌದ್ಧ ಆಲಾಪ.

ನಿಬಿಡವನ ಕಾಡುಗಳಲಿ
ವಕ್ರ ದಾರಿಗಳ ಚಕ್ರ ತಿರುವಿನಲಿ
ನಿಲ್ಲದ ನದಿಯ ಸಾಗರ ಮಿಲನದಲಿ
ತಲ್ಲಣಿಸುತಿದೆ ಎದೆ ಬುದ್ಧತ್ವದ
ಚರಮ ಸೀಮೆಗೆ, ಹಯವೆ! ನಡೆ ಮುಂದೆ.

ಹಯವೆ! ನೀ ಕಂಡಿರುವೆ
ಬುದ್ಧನ ಯಾನ ತಾಣ
ಬುದ್ಧನ ತ್ರಾಣ ಪ್ರಾಣ
ಪಂಚಪ್ರಾಣ ಹೊತ್ತ ನೀ
ಬುದ್ಧನೆದೆಯ ಭ್ರೂಣ.

ಸಿದ್ಧ ಬುದ್ಧನಾಗೆ ಆಗಸದ ರವಿಯಾದ
ಗೆದ್ದಮನದಲಿ ಕಾವ್ಯತುಂಬಿ ಕವಿಯಾದ
ಸರಹದ್ದಿಲ್ಲದೆ ಹಯವೆ ನೀ ಸಾಗೆ
ಬುದ್ಧ, ಜಗಕೆ ತಮವ ಕಳೆದು ಬೆಳಕಾದ.

ಹಯವದನ! ತೋರು ಬುದ್ಧನ ಸದನ
ಬಾಳ ಕದನದಲಿ ಶೋಧನ, ವೇದನ
ತಾಳ್ಮೆಯಲಿ ಮಾಡಿಸು ಬುದ್ಧನ ಸಾಧನ
ಇದು ಆಂತರ್ಯದ ಅನಂತ ನಿವೇದನ.

ಬುದ್ಧನ ವಸಂತ ತಾಣವ ನೀ ಕಂಡಿರುವೆ
ಸಿದ್ಧನ ಬೆಳದಿಂಗಳ ಚೇತನವ ನೀ ಉಂಡಿರುವೆ
ಬುದ್ಧನ ಜೊತೆಯಲ್ಲಿ ಎದ್ದು ಓಡಿದವ ನೀನು
ಸದ್ದು ಗದ್ದಲವಿಲ್ಲದೆ ಅನಂತಕ್ಕೆ ದಾರಿ ತೋರಿರುವೆ
ಬುದ್ಧನ ರಥದ ಮನೋರಥವು ನೀನಾಗಿರುವೆ.
ಹೆಜ್ಞೆ ಹೆಜ್ಞೆಗೆ ಮಂತ್ರ, ಹೆಜ್ಞೆ ಹೆಜ್ಞೆಗೆ
ಬುದ್ಧನ ನಲ್ಮೆ ನುಡಿ, ನಿನ್ನ ಕಿವಿ ತುಂಬಿರಬೇಕು.
ಬುದ್ಧನ ಮಂದಸ್ಮಿತದ ಸರಕು ತುಂಬಿ ಬಾ
ಜಗದ ಖಾಲಿ ಹೃದಯಗಳ ತುಂಬ ಬಾ.

ಸಿದ್ಧರ್ಥ ನಿನ್ನ ಬೆನ್ನೇರಿದಾಗ
ಬಾನೆಲ್ಲಾ ಕಾಂತಿ ಪಥವಾಗಿತ್ತು
ಭೂಮಿ ಕ್ರಾಂತಿ ಪಥದಲ್ಲಿತ್ತು
ಶಾಂತಿ ನಾಂದಿಯಾಗಿತ್ತು
ಭ್ರಾಂತಿ ತುಂಬಿದ ಹೃದಯಕ್ಕೆ
ಹಯದ ಬೆನ್ನೇರಿ ಬಂದಿತ್ತು ಉದಯ.

ಬುವಿ ನಡೆದಿತ್ತು ನಿನ್ನ ಕಾಲೊರಸ ಸದ್ದಿನಲಿ
ಬಾನ ಬೆಳದಿತ್ತು ನಿನ್ನ ತಾಳ ವೇಗಕ್ಕೆ
ಬೆಟ್ಟ ಅದರಿತ್ತು, ’ವೃಕ್ಷ ಕಂಪಿಸಿತ್ತು’
ನದಿ ತುಂಬಿ ಹರಿದಿತ್ತು ಬುದ್ಧತ್ವದಿಂದ.

ಜಗದಲ್ಲಿ ಬಿತ್ತಿದ ನಿನ್ನ ಹೆಜ್ಞೆಯಲಿ
ಬೌದ್ಧಬೀಜವ ಬಿತ್ತಿದೆ, ಮಾನವರ ಎತ್ತಿದೆ
ಅತ್ತು ಸೋಲುವ ಹೃದಯದ ಎತ್ತರಕೆ ಒಯ್ದೆ.

ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ ಎಂಬ ತ್ರಿಗುಳ ಬಂಧಿಯಲಿ
ನಡೆ ಮುಂದೆ ನಡೆ ಮುಂದೆ ವಿಶ್ವ ಕಲ್ಯಾಣಕ್ಕೆ.

******

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...