Home / ಕವನ / ಹಾಯ್ಕು / ಬುದ್ಧನ ಹಯವೇ! ನಿನಗೆ ವಂದನೆ!

ಬುದ್ಧನ ಹಯವೇ! ನಿನಗೆ ವಂದನೆ!

ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ
ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು?
ಹದವರಿಯಲು ಹುಡುಕುತಲಿರುವೆ
ಎಲ್ಲಿಯೂ ನೀ ಕಾಣದೆ ಇರುವೆ.

ಮನ ಲಾಯಕೆ ಬಾ ಹಯವೆ
ಹೃದಯ ಹುಲ್ಲುಗಾವಲ ಮೇಯಲು,
ಕಾಡುತಿದೆ ಭವದ ಭಯವು
ಭವ ಸಾಗರದಲಿ ಹೃದಯ ಲಹರಿ
ಹುಡುಕುತಿದೆ ಬುದ್ಧನ ಬೆಳಕಿನ ಕಣ್ಣು
ಭವಕ್ಕೆ ಬೇಕು ಬುದ್ಧತ್ವದ ಹಣ್ಣು.

ಭೋಧಿ ವೃಕ್ಷದ ಎಲೆ ಎಲೆಯಲ್ಲಿ
ಬುದ್ಧನ ಅಭಯಹಸ್ತ ಸೆಲೆ ಸೆಲೆಯಲ್ಲಿ
ಶಾಖೆ ಶಾಖೆಯಲಿ ಬುದ್ಧನ ತೋಳತೆಕ್ಕೆ
ನೆರಳಲ್ಲಿ ನೆಲೆನಿಂತು ಕರೆಯುತ್ತಿದೆ
ಬುದ್ಧನೆದೆಯ ಪರಮಶಾಂತಿ ಮೆರೆಯುತಿದೆ.

ತೆರದ ಹೆಬ್ಬಾಗಿಲಲಿ ಉರಿಯುತಿದೆ
ಜಗವೆಲ್ಲ ಬೆಳಗುವ ದೀಪ
ಹಯವೆ ಛಂಗನೆ ಹಾರು ಭವದ ಕೂಪ
ಹಚ್ಚಬೇಕು ಜನ್ಮ ಮುಕ್ತಿಗೆ ಧೂಪ
ಎದೆಯಲಿ ಮೊಳಗುತ್ತಿದೆ ಬೌದ್ಧ ಆಲಾಪ.

ನಿಬಿಡವನ ಕಾಡುಗಳಲಿ
ವಕ್ರ ದಾರಿಗಳ ಚಕ್ರ ತಿರುವಿನಲಿ
ನಿಲ್ಲದ ನದಿಯ ಸಾಗರ ಮಿಲನದಲಿ
ತಲ್ಲಣಿಸುತಿದೆ ಎದೆ ಬುದ್ಧತ್ವದ
ಚರಮ ಸೀಮೆಗೆ, ಹಯವೆ! ನಡೆ ಮುಂದೆ.

ಹಯವೆ! ನೀ ಕಂಡಿರುವೆ
ಬುದ್ಧನ ಯಾನ ತಾಣ
ಬುದ್ಧನ ತ್ರಾಣ ಪ್ರಾಣ
ಪಂಚಪ್ರಾಣ ಹೊತ್ತ ನೀ
ಬುದ್ಧನೆದೆಯ ಭ್ರೂಣ.

ಸಿದ್ಧ ಬುದ್ಧನಾಗೆ ಆಗಸದ ರವಿಯಾದ
ಗೆದ್ದಮನದಲಿ ಕಾವ್ಯತುಂಬಿ ಕವಿಯಾದ
ಸರಹದ್ದಿಲ್ಲದೆ ಹಯವೆ ನೀ ಸಾಗೆ
ಬುದ್ಧ, ಜಗಕೆ ತಮವ ಕಳೆದು ಬೆಳಕಾದ.

ಹಯವದನ! ತೋರು ಬುದ್ಧನ ಸದನ
ಬಾಳ ಕದನದಲಿ ಶೋಧನ, ವೇದನ
ತಾಳ್ಮೆಯಲಿ ಮಾಡಿಸು ಬುದ್ಧನ ಸಾಧನ
ಇದು ಆಂತರ್ಯದ ಅನಂತ ನಿವೇದನ.

ಬುದ್ಧನ ವಸಂತ ತಾಣವ ನೀ ಕಂಡಿರುವೆ
ಸಿದ್ಧನ ಬೆಳದಿಂಗಳ ಚೇತನವ ನೀ ಉಂಡಿರುವೆ
ಬುದ್ಧನ ಜೊತೆಯಲ್ಲಿ ಎದ್ದು ಓಡಿದವ ನೀನು
ಸದ್ದು ಗದ್ದಲವಿಲ್ಲದೆ ಅನಂತಕ್ಕೆ ದಾರಿ ತೋರಿರುವೆ
ಬುದ್ಧನ ರಥದ ಮನೋರಥವು ನೀನಾಗಿರುವೆ.
ಹೆಜ್ಞೆ ಹೆಜ್ಞೆಗೆ ಮಂತ್ರ, ಹೆಜ್ಞೆ ಹೆಜ್ಞೆಗೆ
ಬುದ್ಧನ ನಲ್ಮೆ ನುಡಿ, ನಿನ್ನ ಕಿವಿ ತುಂಬಿರಬೇಕು.
ಬುದ್ಧನ ಮಂದಸ್ಮಿತದ ಸರಕು ತುಂಬಿ ಬಾ
ಜಗದ ಖಾಲಿ ಹೃದಯಗಳ ತುಂಬ ಬಾ.

ಸಿದ್ಧರ್ಥ ನಿನ್ನ ಬೆನ್ನೇರಿದಾಗ
ಬಾನೆಲ್ಲಾ ಕಾಂತಿ ಪಥವಾಗಿತ್ತು
ಭೂಮಿ ಕ್ರಾಂತಿ ಪಥದಲ್ಲಿತ್ತು
ಶಾಂತಿ ನಾಂದಿಯಾಗಿತ್ತು
ಭ್ರಾಂತಿ ತುಂಬಿದ ಹೃದಯಕ್ಕೆ
ಹಯದ ಬೆನ್ನೇರಿ ಬಂದಿತ್ತು ಉದಯ.

ಬುವಿ ನಡೆದಿತ್ತು ನಿನ್ನ ಕಾಲೊರಸ ಸದ್ದಿನಲಿ
ಬಾನ ಬೆಳದಿತ್ತು ನಿನ್ನ ತಾಳ ವೇಗಕ್ಕೆ
ಬೆಟ್ಟ ಅದರಿತ್ತು, ’ವೃಕ್ಷ ಕಂಪಿಸಿತ್ತು’
ನದಿ ತುಂಬಿ ಹರಿದಿತ್ತು ಬುದ್ಧತ್ವದಿಂದ.

ಜಗದಲ್ಲಿ ಬಿತ್ತಿದ ನಿನ್ನ ಹೆಜ್ಞೆಯಲಿ
ಬೌದ್ಧಬೀಜವ ಬಿತ್ತಿದೆ, ಮಾನವರ ಎತ್ತಿದೆ
ಅತ್ತು ಸೋಲುವ ಹೃದಯದ ಎತ್ತರಕೆ ಒಯ್ದೆ.

ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ ಎಂಬ ತ್ರಿಗುಳ ಬಂಧಿಯಲಿ
ನಡೆ ಮುಂದೆ ನಡೆ ಮುಂದೆ ವಿಶ್ವ ಕಲ್ಯಾಣಕ್ಕೆ.

******

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...