Home / ಕವನ / ಕವಿತೆ / ಶ್ರೀ ಶಿವಾಪರಾಧ ಸ್ತೋತ್ರ

ಶ್ರೀ ಶಿವಾಪರಾಧ ಸ್ತೋತ್ರ

ಜಯತು ಗಣಪತಿ ಜ್ಞಾನ ದಿನಮಣಿ
ಜಯತು ಸರಸ್ವತಿ ವಾಗ್ವಿಲಾಸಿನಿ
ಜಯತು ಸದ್ಗುರು ಶ್ರುತಿ ಶಿರೋಮಣಿ ಕರುಣವಾರಿಧಿಯೇ
ಜಯತು ಕವಿವರ ವ್ಯಾಸ ಶುಕಮುನಿ
ಜಯತು ವಾಲ್ಮೀಕಿ ಋಷಿ ಕಲಾಗ್ರಣಿ
ಜಯತು ಶಂಕರಭಾರ್ತಿ ಗುರುವಿನ ಪಾದಕೆರಗುವೆ ||೧||

ಶಂಕರನ ಅವತರಿಸಿ
ಶಂಕರಾಚಾರ್ಯಾಗಿ ಬಂದನು
ಪಂಕವನು ತೊಳೆದೆಲ್ಲ ಮನಸಿನ ಬಿಂಕವನು ಬಿಡಿಸಿ |
ಕಿಂಕರವ ಪಾವನವ ಮಾಡುತ
ಶಂಕೆಯಿಲ್ಲದ ಪದದೊಳಿಟ್ಟನು
ಡೊಂಕುಹಾದಿಯ ಬಿಡಿಸಿ ಕಲಿಯುಗದಲ್ಲಿ ಗುರುವಾಗಿ || ೨ ||

ಉಣ್ಣದೂಟವನುಣಿಸಿದನು ಗುರು
ತನ್ನ ಶಿಷ್ಯರ ಗುಣವ ನೋಡದೆ
ಮನ್ನಣೆಯ ಕೊಟ್ಟವರನೀ ಭವಜಲದಿ ದಾಂಟಿಸಿದಾ |
ಇನ್ನು ಗುರುವಿಗೆ ಸರಿಯಗಾಣೆನು
ಬೆನ್ನು ಬಿದ್ದಂಥವರ ರಕ್ಷಿಪ
ಉನ್ನತೋನ್ನತ ಮಹಿಮೆ ಪಾಮರನುಡಿಯಲೆನ್ನಳವೆ || ೩ ||

ತಾನು ಶಂಕರಭಾರ್ತಿ ಗುರುವಿನ
ನಾನಾಬಗೆಯನು ತಾಪ ಲಕ್ಷಣ
ಮಾನ್ವಜನ್ಮಕೆ ಬಂದುದೆಲ್ಲವ ಭೋಗಿಸಿದ ಪರಿಯ |
ತಾನು ಬಾಲ್ಯಾವಸ್ಥೆ ಮೊದಲಾದ್ದೇನು
ವ್ಯಥೆಯಾಗುವದು ತನುವಿಗೆ
ಸ್ವಾನುಭಾವದಿ ನುಡಿಯುತಿಹ ಪರೋಪಕಾರಾಥ೯ ||೪||

ಮನುಜರಾದವರೆಲ್ಲ ಕೇಳ್ವದು
ನೆನಪಿನಲಿ ಆಪರಾಧಸ್ತೋತ್ರವ
ಅನುದಿನದಿ ಮಾಡುವದು ನಿತ್ಯಾನಿತ್ಯಾ ವಿವರವನು |
ತನುತ್ರಯಕೆ ಸಾಕ್ಷಾತ ದೇವನ
ತನುವಿನಲಿ ಕಾಣುವುದೆ ಸಾಥ೯ಕ
ಎನಗೆ ಮತಿಯಿದ್ದಷ್ಟು ಪ್ರಾಕೃತಭಾಷೆಯಲಿ ನುಡಿವೆ ||೫||

ಮೊದಲು ಮಾಡಿದ ಕಮ೯ದಿಂದಲಿ
ಒದಗಿ ಬಂದೆನು ತಾಯಿಯುದರದಲಿ
ಪುದಿದು ಮಲಮೂತ್ರದಲಿನೊಂದೆನು ಜಠರಾಗ್ನಿಯಲಿ |
ಒದರಲಿಕೆ ಶಕ್ತಿಲ್ಲ ದುಃಖದ
ಸದನದಲಿ ಮುಳುಗಿದೆನು ಶಿವ ಶಿವಾ
ಇದಕೆ ಎನ್ನಯ ತಪ್ಪು ನೋಡದೆ ಕ್ಷಮಿಸು ಮಹದೇವಾ ||೬||

ಬಾಲ್ಯತನದಲಿ ದುಃಖ ಬಹಳ
ಕಾಲದಲಿ ತನುವೇಳದಿರಲು
ಮೊಲೆಹಾಲು ಕುಡಿಯಲು ಶಕ್ತಿ ನಾಸ್ತಿಯು ಇಂದ್ರಿಯಂಗಳಿಗೆ |
ಮೇಲೆ ರೋಗದ ಹೇಸಿಕೆಯು
ಕಣ್ಣಾಲೆ ನೊಣಗಳು ಕಡಿಯೆರದನದಿ
ನೀಲಕಂಠನ ಸ್ಮರಣೆತಪ್ಪಿದೆ ಕ್ಷಮಿಸು ಮಹದೇವಾ ||೭||

ತನುವು ಪ್ರಾಯದ ಪಂಚವಿಷಯದ
ಮೊನೆಯ ಬಾಣವು ತಾಗಲಾಕ್ಷಣ
ನೆನಪು ಹೋದುದು ಮಾನ ಗವ೯ದ ಗಿರಿಯನಡರಿದೆನು |
ಮನಸಿನಲಿ ವಿವೇಕವಿಲ್ಲದೆ ಧನವು
ಮಕ್ಕಳು ಮಡದಿಯರ ಸವಿ
ಎನಗೆ ಹತ್ತಲು ಮರತ ತಪ್ಪನು ಕ್ಷಮಿಸು ಮಹದೇವ || ೮ ||

ಒದಗಿ ಮುಪ್ಪದು ಬರಲು ಕಾಮತಿ
ಕದಲುವವು ಬಲು ಇಂದ್ರಿಯಂಗಳು
ಚದುರವದು ಮನ ಭ್ರಾಂತಿ ಹೋಗದು ವ್ಯಾಧಿ ಸಮನಿಸಲು|
ಉದರದೊಳು ಬರೆ ಸುಳ್ಳುಮೋಹವು
ತುದಿಗೆ ದೂರ್ಜಟೆ ಧ್ಯಾನಕೊದಗ
ಇದಕೆ ಎನ್ನಯ ತಪ್ಪುನೋಡದೆ ಕ್ಷಮಿಸು ಮಹದೇವ ||೯||

ಏನು ಅರಿಯೆನು ಸ್ಮಾರ್ತಕರ್ಮದ
ಹೀನನಾದೆನು ಕುಲದ ನೀತಿಗೆ
ತಾನೆ ಘಟಿಸುವ ಪ್ರತ್ಯವಾಯದ ಸ್ಮರಣೆಯೆನಗಿಲ್ಲ |
ಜ್ಞಾನತತ್ವ ವಿಚಾರ ಬ್ರಹ್ಮದ
ಕೂನ ಹಾದಿಯ ಶ್ರವಣ ಮನನದ
ಜ್ಞಾನಶೂನ್ಯನ ತಪ್ಪನು ಸರ್ವವು ಕ್ಷಮಿಸು ಮಹದೇವ||೧೦||

ಉದಯಕಾಲದಿ ಸ್ನಾನ ಸಂಧ್ಯಾ-
ವಿಧಿಯನಲ್ಲವ ಮುಗಿಸಿ ಭಾವಧಿ
ನದಿಯ ಉದಕದಿ ಮಾಡಲಿಲ್ಲವು ಶಿವಗೆ ಮಜ್ಜನವು |
ಮುದದಿ ಪೂಜಿಸಿ ಬಿಲ್ವಪತ್ರದಿ
ಒದಗಿಸುವ ಮಲಸುಗಂಧಪುಷ್ಪವ
ಇದನೇರಿಸದಿರ್ದ ತಪ್ಪನು ಕ್ಷಮಿಸು ಮಹದೇವ ||೧೧||

ತಂದು ಮಧುಘೃತಪಯವು ಶತಘಟ
ಇಂದುಧರನಿಗೆ ಎರಿಯಲಿಲ್ಲವು
ಚಂದನವೆ ಮೊದಲಾದ ಲೇಪನ ಕನಕಭೂಷಣವ |
ಇಂದು ಪೂಜಿಸಿ ಆನ್ನ ಚತುರ್ವಿಧ-
ದಿಂದಲರ್ಪಿಸಿ ಧೂಪ ಕರ್ಪೂರ
ಚಂದದೀಪವ ಬೆಳಗದಿಹಮರೆ ಕ್ಷಮಿಸಲು ಮಹದೇವ ||೧೨||

ಚಿತ್ತದಲಿ ಶಿವಧ್ಯಾನ ಮಾಡೆನು
ಮತ್ತೆ ನೀಡೆನು ಧನವ ದ್ವಿಜನರಿಗೆ
ಹೊತ್ತಿದಗ್ನಿಗೆ ಹವನ ಅರ್ಪಿಸಿ ಬೀಜಮಂತ್ರದಲಿ |
ನಿತ್ಯ ಗಂಗಾವಾಸದಲಿರೆ
ಉತ್ತಮದ ವೃತ ರುದ್ರಜಪವನು
ಸತ್ಯದಲಿ ಸಾಧಿಸಿದ ತಪ್ಪನು ಕ್ಷಮಿಸು ಮಹದೇವ ||೧೩||

ಸಂಗ ವಿರಹಿತನಾಗಿ ಗುಣಗಳ
ಹಿಂಗಿ ಮೋಹವ ಕಳಿಯ ಕತ್ತಲೆ
ಕಂಗಳಿಂದಲೆ ನಾಸಿಕಾಗ್ರವ ನೋಡಿ ವಾಸನೆಯ |

ನುಂಗಿದ್ಯೆತ್ಯವ ಉನ್ಮನಿಂದಲಿ
ಅಂಗದೊಳಗಿನ ಮಲಿನ ಕಳೆಯಲು
ಮಂಗಳಾತ್ಮನ ಸ್ಮರಣೆ ತಪ್ಪಿದೆ ಕ್ಷಮಿಸು ಮಹದೇವ ||೧೪||

ಕುಳಿತು ಸ್ವಸ್ಥಾನದಲ್ಲಿ ತನ್ನೊಳು
ಸುಳಿವ ಗಾಳಿಯ ಸೂಕ್ಷ್ಮಮಾರ್ಗಕೆ
ಎಳೆದು ಈಡಾಪಿಂಗಳೆರಡು ಸುಷುಮ್ನ ಮಾರ್ಗದಲಿ |
ಹೊಳೆವ ಪ್ರಣವಜ್ಯೋತಿ ರೂಪ
ಒಳಗೆ ಬ್ರಹ್ಮಾರಂದ್ರದಲಿ ಮನ
ಮುಳುಗಿಸಿದ ಆಪರಾಧಯೆನ್ನದು ಕ್ಷಮಿಸು ಮಹದೇವ ||೧೫||

ಶಿರಸದಲಿ ಚಂದ್ರಮನ ಸ್ಮರರಿಪು
ಪರಮಪಾವನ ಗಂಗೆ ಜಡೆಯಲಿ
ಉರಗಭೂಷಣ ಕಟಕ ಕಿವಿಯಲಿ ನೇತೃದಲಿ ಆಗ್ನಿ |
ಧರಿಸಿಹನು ಕರಿಚರ್ಮದಂಬರ
ನಿರುಪಮನೆ ತ್ರೈಲೋಕ್ಯಶೋಭಿಪ
ಸ್ಮರಿಸುವೆನೂ ಮೋಕ್ಷಾರ್ಥಲೋಸುಗ ಕರ್ಮಭಯದಿಂದಾ ||೧೬||

ತನಗೆ ದನ-ಕರವು ಇದ್ದರೇನವು
ತನಗ ಹಯಕರಿ ಇದ್ದರೇನವು
ತನಗೆ ರಾಜ್ಯವು ಪುತ್ರ ಮಿತ್ರ ಕಳತ್ರವಿರಲೇನ |
ತನಗೆ ಧನವದು ಇದ್ದರೇನವು
ಕ್ಷಣವು ಸ್ಥಿರವಲ್ಲವೆಂದು ಜರಿಯುತ
ಮನದೊಳಗೆ ಗುರುವಾಖ್ಯದಿಂದಿಲಿ ಭಜಿಸುವೆನು ಶಿವನ ||೧೭||

ದಿನದಿನಕೆ ಆಯುಷ್ಯ ಕ್ಷೀಣವು
ತನಗೆ ಪ್ರಾಯವು ಹೋಗುವದು ನಿಜ
ತನುವ ಭಕ್ಷಿಪ ಕಾಲನಾಕ್ಷಣ ಲಕ್ಷ್ಮಿ ಸ್ಥಿರವಲ್ಲಾ |
ಇನಿತು ತೋಯತರಂಗ ಪರಿಯಲಿ
ಎನಗೆ ತೋರಿತು ಮಿಂಚಿನಂದದಿ
ನಿನಗೆ ಶರಣನು ಬಂದೆ ರಕ್ಷಸು ಜೀವಭ್ರಮೆ ಬಿಡಿಸಿ ||೧೮||

ಕರಚರಣ ಕಿವಿ ವಾಕ್ಕು ಜಿಂಹ್ವೆಯು
ಹರಿವ ನಯನವು ಮತ್ತೆ ಮನಸಿನ
ಪರಿಪರಿಯ ಅಪರಾಧ ವಿಹಿತಾ ವಿಹಿತವೆಲ್ಲವನು |
ತ್ವರಿತದಿಂದಲಿ ಕ್ಷಮಿಸು ಸರ್ವವು
ಹರನೆ ಜಯ ಜಯ ಕರುಣಸಾಗರ
ನಿರುಪಮನೆ ನಿಜಲಿಂಗ ದೇವರದೇವ ಮಹದೇವ ||೧೯||

ಇಂತು ಶಂಕರಭಾರ್ತಿ ಗುರುವಿನ
ಅಂತರಂಗದ ತಾಪಲಕ್ಷಣ
ಎಂತು ಪೇಳಲುಬಹುದು ಜಗದೋದ್ಧಾರಗೋಸುಗುವ |
ಅಂತಿದೆಲ್ಲವ ತೋರಿದನ: ಗುರು
ಭ್ರಾಂತಿ ತೊರೆದನು ಬ್ರಹ್ಮ ಭಾವದಿ
ಚಿಂತಿಯಿಲ್ಲದ ಮನೆಯ ಹೊಗಿಸಿದ ಮೂಢ ಪಾಮರನ ||೨೦||

ಮನಸು ಒಗಡುಸುತನಕ ವಿಷಯದ
ಮನವು ಉನ್ಮನವಾಗಬಲ್ಲುದೆ
ಮನವು ಉನ್ಮನವಾಗೋತನಕ ಘನವು ದೊರಕುವುದೇ |
ಘನವು ದೊರಕದೆ ಶಾಂತಿಬಾರದು
ಜನನ ಮರಣವು ಹಿಂಗಲರಿಯೆವು
ತನುವು ಜಡವಿದು ಹೊತ್ತು ಬಂದುದರಿಂದ ಫಲವೇನು ||೨೧||

ಜರಿದು ಮನಸಿನ ಪಂಚವಿಷಯವ
ಹರಿದು ಗುರುವಿನ ಪಾದಕಮಲಕೆ
ಬೆರೆದು ಹೋಗುವೆನೆಂದು ಯೋಚಿಸಿ ಬರಲು ಸನ್ನಿಧಿಗೆ |
ಕರೆದು ತನ್ನಯ ಮುಂದೆ ಎನ್ನಯ
ಶಿರದಲಿಟ್ಟನು ಅಭಯಹಸ್ತವ
ಒರೆದನಾಗಳೆ ತತ್ವಮಸಿ ಮಹವಾಕ್ಯದುಪದೇಶ ||೨೨||

ಕಡಿದುಹೋಯಿತು ಮನದ ತಾಪವು
ಒಡಿಯ ಗುರುವಿನ ವಾಖ್ಯದಿಂದಲಿ
ಜಡಿದುಹೋದೆನು ಪಾದಕಮಲಕೆ ಎರಕದಿಂದಲಿ |
ಬಿಡದು ಗುರುವಿನ ಮೋಹವೆಂದಿಗು
ಸಡಗರವ ನಾನೆಷ್ಟು ಹೇಳಲಿ
ಮೃಡನೆ ಬಲ್ಲನು ಸುಖದ ಬಗೆಯನು ಅಂತರಂಗದಲಿ ||೨೩||

ಪರುಷ ಕಬ್ಬಿಣ ಸೋಂಕಿದಾಗಲೆ
ತ್ವರಿತದಲಿ ಹೇಮಾಗಿ ನಿಲ್ವದು
ಸ್ಪರ್ಶವಾಗಲು ಗುರುಕೃಪಾಕರ ಜೀವ ಬ್ರಹ್ಮಾದ |
ನಿರಸವಾಗದು ಎಂದಿಗಾಸುಖ
ಬೆರಸಿದನು ಗುರು ತನ್ನ ಪದದಲಿ
ಹರುಷವಿಡಿಯಲು ಗಗನವದು ಪರಬ್ರಹ್ಮಮಯವಾಯ್ತು || ೨೪||

ಒಂದು ಶ್ಲೋಕಕೆ ಒಂದು ಪದವನು
ತಂದೆ ಗುರುಗೋವಿಂದನಾಜ್ಞದಿ
ಕಂದ ಪೇಳಿದ ಜ್ಞಾನಬೋಧೆಯ ಸ್ತೋತ್ರವಪರಾಧ |
ಕುಂದು ಹೆಚ್ಚನು ಏನು ನೋಡದೆ
ಮಂದಮತಿ ಹೇಳಿಹನು ಜ್ಞಾನಿ-
ವೃಂದ ಕೇಳ್ವದು ಸಾಧುಸಂತರು ಪರಮ ಕರುಣದಲಿ || ೨೫ ||
*****

 

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...